ಎರಡು ಕರ್ನಾಟಕದ ಬಗ್ಗೆ ಮೇಲಿಂದ ಮೇಲೆ ಒಡಕಿನ ಧ್ವನಿಯನ್ನು ಕೆಲವರು ಎತ್ತುತ್ತಿದ್ದಾರೆ.ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿರುವ ಕನ್ನಡ ಪರ ಸಂಘಟನೆಗಳು ಈ ಒಡಕಿನ ಧ್ವನಿಯನ್ನು ತೀವ್ರವಾಗಿ ವಿರೋಧಿಸುತ್ತವೆ. ಅಲ್ಲದೇ ದಕ್ಷಿಣ ಮತ್ತು ಉತ್ತರ ಕರ್ನಾಟಕಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತವೆ. ಅಖಂಡ ಕರ್ನಾಟಕವಾಗಿಯೇ ಉಳಿಯಲು, ಯಾವದೇ ಹೋರಾಟಕ್ಕೂ ಸಿದ್ಧವಾಗಿಯೇ ಇವೆ ಎಂದು ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ.
ನಿನ್ನೆ ಶುಕ್ರವಾರ ಜುಲೈ 15 ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಕುರಿತ ಪುಸ್ತಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಮ್ಮ ಹಿರಿಯರು ಅರ್ಧ ಶತಮಾನ ಕಾಲ ಹೋರಾಡಿ ಆಲೂರು ವೆಂಕಟರಾಯರ ಕನಸನ್ನು ನನಸು ಮಾಡಿದ್ದಾರೆ. 1953 ರಲ್ಲಿ ಅದರಗುಂಚಿ ಶಂಕರಗೌಡರು 23 ದಿನಗಳ ಕಾಲ ಆಮರಣ ಉಪವಾಸ ನಡೆಸಿದಾಗ ಹುಬ್ಬಳ್ಳಿಯಲ್ಲಿ ದಂಗೆ ಹಿಂಸಾಚಾರ ನಡೆದು ಕೊನೆಗೂ ಕೇಂದ್ರ ಸರಕಾರ ಕರ್ನಾಟಕದ ಏಕೀಕರಣಕ್ಕೆ ಒಪ್ಪಿ ನ್ಯಾ.ಮೂ.ಫಜಲ್ ಅಲಿ ನೇತೃತ್ವದ ಆಯೋಗ ನೇಮಿಸಿತು. 1956 ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣವಾಯಿತು ಇಂಥ ಹಿನ್ನೆಲೆಯ ಏಕೀಕರಣದ ಕರ್ನಾಟಕವನ್ನು ಒಡೆದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗಿನ ಹಿನ್ನೆಲೆಯಲ್ಲಿ ರಾಜಕೀಯ ಅಧಿಕಾರದ ದುರಾಶೆಯಿದೆ. ಇದನ್ನು ನಾಡಿನ ಕನ್ನಡ ಸಂಘಟನೆಗಳು ನಖಶಿಖಾಂತವಾಗಿ ವಿರೋಧಿಸುತ್ತಲೇ ಬಂದಿವೆ. ಮುಂದೆಯೂ ಇದೇ ದೃಢ ನಿಲುವಿನಿಂದಲೇ ವಿರೋಧಿಸುತ್ತವೆ ಎಂದು ಅಶೋಕ ಚಂದರಗಿ ಘೋಷಿಸಿದರು.
ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರವು ಪ್ರಕಟಿಸಿರುವ ಪುಸ್ತಿಕೆಯನ್ನು ಬೆಳಗಾವಿಯ ಹಿರಿಯ ಸಾಹಿತಿ ಯ.ರು.ಪಾಟೀಲ ಅವರು ಬರೆದಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಹುಚ್ಚಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.