ಯಾವುದೇ ಸಮಾಜದ ಸಾರ್ವಜನಿಕ ಬದುಕಿನಲ್ಲಿ (Public life) ಕಂಡುಬರುವ ಬೌದ್ಧಿಕ ಸಂಘರ್ಷದಲ್ಲಿ ಎರಡು ಧೃವಗಳನ್ನು ಗುರುತಿಸಬಹುದು. ಸ್ಥಾಪಿತ ವ್ಯವಸ್ಥೆಯನ್ನು ಸಂರಕ್ಷಿಸುವ ಮತ್ತು ಮತ್ತಷ್ಟು ಬಲಪಡಿಸುವ ಶಕ್ತಿಗಳು ಆಳುವ ವರ್ಗಗಳ ಪಕ್ಷಪಾತಿಯಾಗಿ, ಸಾಂಪ್ರದಾಯಿಕ ಸಮಾಜದ (Traditional society) ಎಲ್ಲ ನೆಲೆಗಳನ್ನೂ ವಿಸ್ತರಿಸುತ್ತಲೇ ಹೋಗುತ್ತವೆ. ಜಾತಿ-ಮತ, ಧರ್ಮ ಮತ್ತು ಜನಾಂಗೀಯ ಅಸ್ಮಿತೆಗಳನ್ನೇ ಆಧರಿಸಿ ಈ ಶಕ್ತಿಗಳು ಸಮಾಜದೊಳಗಿನ ಮನುಕುಲ ವಿರೋಧಿ ಆಲೋಚನೆಗಳಿಗೂ ತಾತ್ವಿಕ ನೆಲೆಯನ್ನು ಒದಗಿಸುತ್ತಲೇ, ಸಾಂಪ್ರದಾಯಿಕ ಸಮಾಜದ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಯತ್ನಿಸುತ್ತಿರುತ್ತವೆ. ಒಂದೆಡೆ ಆಧುನಿಕತೆಯನ್ನು ಒಪ್ಪಿಕೊಳ್ಳುತ್ತಲೇ ಬಂಡವಾಳಶಾಹಿ ಸಮಾಜದ (Capitalist society) ಶೋಷಕ ನಿಯಮಗಳನ್ನೂ ಸ್ವೀಕರಿಸುವ ಈ ಆಲೋಚನಾ ವಾಹಿನಿಯಲ್ಲಿ ಪ್ರತಿಗಾಮಿ ಶಕ್ತಿಗಳು ತಮ್ಮ ಭದ್ರ ನೆಲೆಯನ್ನು ಕಂಡುಕೊಳ್ಳಲಾರಂಭಿಸುತ್ತವೆ. ಶೋಷಣೆಯನ್ನು ಸಾಮಾಜಿಕ ವಾಸ್ತವಗಳಿಂದ ಹೊರಗಿಟ್ಟು ವ್ಯಾಖ್ಯಾನಿಸುವ ಮೂಲಕ ಈ ಪ್ರತಿಗಾಮಿ ಶಕ್ತಿಗಳು ಮೂಲತಃ ಆಳುವ ವರ್ಗಗಳ ಆಧಿಪತ್ಯದೊಡನೆ ರಾಜಿ ಮಾಡಿಕೊಳ್ಳುತ್ತಲೇ ತಮ್ಮ ಸಾಂಸ್ಥಿಕ ಸ್ವರೂಪವನ್ನು ಉಳಿಸಿಕೊಳ್ಳಲು ಹವಣಿಸುತ್ತವೆ.
ಇದಕ್ಕೆ ಪ್ರತಿಯಾಗಿ ರೂಪುಗೊಳ್ಳುವ ಸಮಾಜದ ಒಂದು ವರ್ಗ ತನ್ನೊಳಗಿನ ವೈರುಧ್ಯಗಳನ್ನು ಸರಿಪಡಿಸಿಕೊಳ್ಳುವುದೇ ಅಲ್ಲದೆ ಸ್ಥಾಪಿತ ವ್ಯವಸ್ಥೆಯೊಳಗಿನ ಶೋಷಣೆ (Exploitation) ಮತ್ತು ದೌರ್ಜನ್ಯಗಳನ್ನು ವಿರೋಧಿಸುತ್ತಲೇ ಒಂದು ಸಮಾನತೆಯ ಸಮಾಜವನ್ನು (Equality Society) ರೂಪಿಸಲು ಪ್ರಯತ್ನಿಸುತ್ತಿರುತ್ತದೆ. ಶೋಷಣೆ, ದೌರ್ಜನ್ಯ, ತಾರತಮ್ಯ ಮತ್ತು ನಿತ್ಯ ದಬ್ಬಾಳಿಕೆಗೊಳಗಾಗುವ ಒಂದು ಬೃಹತ್ ಜನಸಮುದಾಯವನ್ನು ಪ್ರತಿನಿಧಿಸುವ ಈ ವರ್ಗದಲ್ಲಿ ಶೋಷಣೆ-ದೌರ್ಜನ್ಯ ರಹಿತ ಸಮಾಜವನ್ನು ನಿರ್ಮಿಸುವ ಒಂದು ಹಂಬಲ, ಹಪಹಪಿ ಸಹಜವಾಗಿಯೇ ಇರುತ್ತದೆ. ಸಾಂಪ್ರದಾಯಿಕ ಸಮಾಜದ ವಿರುದ್ಧ ಹೊರಮೂಡುವ ಯಾವುದೇ ಪ್ರತಿರೋಧದ ದನಿಗೆ ಇದು ವೇದಿಕೆಯನ್ನೊದಗಿಸುತ್ತದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಗುಪ್ತವಾಹಿನಿಯಂತೆ ಹರಿಯುವ ಶೋಷಿತ ಸಮುದಾಯಗಳ ಅಸಮಧಾನ ಮತ್ತು ಆಕ್ರೋಶಗಳಿಗೆ ಈ ವರ್ಗ ಒಂದು ತಾತ್ವಿಕ ನೆಲೆಯನ್ನು ಒದಗಿಸುತ್ತದೆ.
ಇಂದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ “ಪ್ರಗತಿಪರತೆ”ಯನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಿದೆ. ಪ್ರತಿರೋಧದ ದನಿಗೂ, ವ್ಯವಸ್ಥೆಯ ವಿರುದ್ಧ ಕಂಡುಬರುವ ಆಕ್ರೋಶದ ದನಿಗಳಿಗೂ ಹಾಗೂ ಪ್ರಗತಿಪರ ಧೋರಣೆಗೂ ಒಂದು ಕೂದಲೆಳೆಯ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸಿದಲ್ಲಿ, ಪ್ರತಿಗಾಮಿ ಪ್ರತಿರೋಧಕ್ಕೂ , ಪುರೋಗಾಮಿ ಪ್ರತಿರೋಧಕ್ಕೂ ಇರುವ ವ್ಯತ್ಯಾಸವನ್ನೂ ಗ್ರಹಿಸುವುದು ಸುಲಭವಾಗುತ್ತದೆ. ಚಾಲನೆಯಲ್ಲಿರುವ ವ್ಯವಸ್ಥೆಯ ವಿರುದ್ಧ ಮೂಡುವ ಜನಧ್ವನಿಗಳಲ್ಲಿ ಕಂಡುಬರುವ ಪ್ರತಿಗಾಮಿ ಚಿಂತನಾವಾಹಿನಿಗಳು ಸಮಾಜವನ್ನು ಪ್ರಾಚೀನತೆಯೆಡೆಗೆ, ಸಾಂಪ್ರದಾಯಿಕತೆಯೆಡೆಗೆ ಕೊಂಡೊಯ್ಯುವ ಉದ್ದೇಶ ಹೊಂದಿರುತ್ತವೆ. ಈ ಪ್ರತಿಗಾಮಿ ಶಕ್ತಿಗಳಿಗೆ ಜಾತಿ, ಮತ, ಧರ್ಮ ಅಥವಾ ಭಾಷಿಕ ಅಸ್ಮಿತೆಗಳು ತಾತ್ವಿಕ ನೆಲೆಗಳನ್ನು ಸುಲಭವಾಗಿ ಒದಗಿಸುತ್ತವೆ. ತಮ್ಮ ತಮ್ಮ ಅಸ್ಮಿತೆಗಳ ಚೌಕಟ್ಟಿನಲ್ಲೇ ಸೀಮಿತ ಸಮಾನತೆಯನ್ನು ಬಯಸುವ ಮೂಲಕ, ಸಮಷ್ಟಿ ಪ್ರಜ್ಞೆಯನ್ನು ಸಂಕುಚಿತಗೊಳಿಸುವ ಪ್ರಯತ್ನಗಳನ್ನು ಮತೀಯ ಹಾಗೂ ಜಾತಿ ಸಂಘಟನೆಗಳು ಮಾಡುತ್ತಲೇ ಇರುತ್ತವೆ.
ಇದಕ್ಕೆ ವಿರುದ್ಧವಾಗಿ ಸಮ ಸಮಾಜದ ಕನಸು ಹೊತ್ತ, ಸಮಷ್ಟಿ ಪ್ರಜ್ಞೆಯನ್ನಾಧರಿಸಿ ಸರ್ವರ ಸಮನ್ವಯ ಸಾಧಿಸಲು ಯತ್ನಿಸುವ, ಸಾಮಾಜಿಕಾರ್ಥಿಕ, ಸಾಂಸ್ಕೃತಿಕ ಸಮಾನತೆ ಮತ್ತು ಭ್ರಾತೃತ್ವವನ್ನು ಬೆಳೆಸಲು ಶ್ರಮಿಸುವ ಪುರೋಗಾಮಿ ವರ್ಗವೊಂದು ಎಲ್ಲ ಸಮಾಜಗಳಲ್ಲೂ ಜಾಗೃತಾವಸ್ಥೆಯಲ್ಲಿರುತ್ತದೆ. ಪುರೋಗಾಮಿ ಚಿಂತನಾವಾಹಿನಿಯನ್ನು ಪ್ರತಿನಿಧಿಸುವ ಈ ವರ್ಗವನ್ನು ಮೂಲತಃ ಶೋಷಿತ, ತುಳಿತಕ್ಕೊಳಗಾದ, ಅವಕಾಶವಂಚಿತ ಜನಸಮುದಾಯಗಳು ಪ್ರತಿನಿಧಿಸುತ್ತವೆ. ಜಾತಿ, ಮತ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳನ್ನು ಮೀರಿ ಒಂದು ಬಹುತ್ವ ಸಂಸ್ಕೃತಿಯನ್ನು ಪೋಷಿಸುವ ಕನಸು ಈ ಪುರೋಗಾಮಿ ವರ್ಗದಲ್ಲಿ ಕಾಣುತ್ತದೆ. ಸಮಾಜದ ಅಂತಃಸತ್ವವನ್ನು ಅರಿತು, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹರಿಯುತ್ತಿರುವ ಅಂತಃಪ್ರವೃತ್ತಿಯನ್ನು ಮತ್ತು ಅದರೊಳಗಿನ ಒಳಬಿರುಕುಗಳನ್ನೂ ಸಮರ್ಪಕವಾಗಿ ಗ್ರಹಿಸಿ, ಸಮಾಜವನ್ನು ಸಮಾನತೆಯತ್ತ ಕೊಂಡೊಯ್ಯುವ ಗುರುತರ ಹೊಣೆಗಾರಿಕೆ ಈ ವರ್ಗದ ಮೇಲಿರುತ್ತದೆ. ಜನಸಮುದಾಯಗಳಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ ಅಂತರ್ಗತವಾಗಿಲ್ಲದೆ ಹೋದಲ್ಲಿ ಈ ಪುರೋಗಾಮಿ ಚಿಂತನೆಗಳು ಕ್ರಮೇಣ ನಿಷ್ಕ್ರಿಯವಾಗುತ್ತಲೇ ಹೋಗುತ್ತವೆ. ಈ ನಿಷ್ಕ್ರಿಯತೆಯನ್ನು ತಡೆಗಟ್ಟಿ ಸಮಾಜದಲ್ಲಿ ವೈಜ್ಞಾನಿಕ ಧೋರಣೆ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಹೊಣೆ “ ಪ್ರಗತಿಪರ ” ಎನ್ನಬಹುದಾದ ವರ್ಗದ ಮೇಲಿರುತ್ತದೆ.
ಭಾರತದ ಸಂದರ್ಭದಲ್ಲಿ ನೋಡುವುದಾದರೆ ನಮ್ಮ ಸಮಾಜವನ್ನು ಎರಡು ವೈಪರೀತ್ಯಗಳು ಸದಾ ಕಾಡುತ್ತಲೇ ಇರುತ್ತದೆ. ಹಿಂದೂ ಎನ್ನಲಾಗುವ ಮತೀಯ ನೆಲೆಯಲ್ಲಿ ಕಾಡುವ ಶ್ರೇಣೀಕೃತ ಜಾತಿವ್ಯವಸ್ಥೆ ಮತ್ತು ಬಾಹ್ಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಧಾರ್ಮಿಕ ಅಸ್ಮಿತೆಗಳು. ಪಾಶ್ಚಿಮಾತ್ಯ ಪರಿಕಲ್ಪನೆಯ ಸೆಕ್ಯುಲರ್ ತತ್ವಗಳನ್ನೂ ದೇಸೀಕರಣಗೊಳಿಸುವ ಮೂಲಕ ಭಾರತದ ಸಂವಿಧಾನದಲ್ಲಿ “ ಸರ್ವಧರ್ಮ ಸಮಭಾವ ”ತತ್ವವನ್ನೇ ಪ್ರಧಾನವಾಗಿ ಅಳವಡಿಸಿಕೊಳ್ಳಲಾಗಿದೆ. ಮತ ನಿರಪೇಕ್ಷತೆಯನ್ನು ಆಡಳಿತಾತ್ಮಕವಾಗಿ ಅನುಮೋದಿಸಲಾಗಿದ್ದರೂ, ಸರ್ವಧರ್ಮ ಸಮಭಾವದ ಚೌಕಟ್ಟಿನಲ್ಲಿ ಆಳುವ ವರ್ಗಗಳು ಎಲ್ಲ ಧಾರ್ಮಿಕ ನಂಬಿಕೆಗಳನ್ನೂ ಪುಷ್ಟೀಕರಿಸುತ್ತಲೇ ಬಹುತ್ವ ಭಾರತವನ್ನು ರೂಪಿಸಲು ಯತ್ನಿಸುತ್ತಾ ಬಂದಿವೆ. ಈ ದ್ವಂದ್ವವೇ ಹಿಜಾಬ್ನಂತಹ ವಿವಾದಗಳ ಮೂಲವೂ ಆಗಿದೆ. ಎಲ್ಲ ರೀತಿಯ ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳನ್ನೂ ಸಮಾನವಾಗಿ ಕಾಣುವ ಧೋರಣೆ ಒಂದೆಡೆಯಾದರೆ ಮತ್ತೊಂದೆಡೆ ಪ್ರಭುತ್ವವು ವಿಭಿನ್ನ ಮತಗಳ ಧಾರ್ಮಿಕ ಆಚರಣೆಗಳನ್ನು ನಿರ್ಬಂಧಿಸುವ/ಪ್ರಚೋದಿಸುವ ಮೂಲಕ ಮತನಿರಪೇಕ್ಷತೆಯನ್ನು ಪ್ರತಿಪಾದಿಸುತ್ತಾ ಬಂದಿದೆ.
ಹಾಗಾಗಿ ಭಾರತದಲ್ಲಿ ಪ್ರಗತಿಪರತೆ ಎಂಬ ಪರಿಕಲ್ಪನೆಯನ್ನು ನಿಷ್ಕರ್ಷೆಗೊಳಪಡಿಸುವಾಗ ಈ ಎರಡೂ ವೈಪರೀತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತ ಮತಗಳ ಅನುಯಾಯಿಗಳಲ್ಲಿ ಆಳವಾಗಿ ಬೇರೂರಿರಬಹುದಾದ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ಬಹುತ್ವ ಸಂಸ್ಕೃತಿಯನ್ನು ವಿಸ್ತರಿಸಲು ನೆರವಾಗಬೇಕಾದರೆ ಈ ಆಚರಣೆಗಳು ವ್ಯಕ್ತಿಗತ ನೆಲೆಯಲ್ಲಿ ಮಾತ್ರವೇ ಇರಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿ, ಸಾಂವಿಧಾನಿಕ ಸಂಸ್ಥೆಗಳಲ್ಲಿ ಮತ್ತು ಸಾರ್ವತ್ರಿಕ ಎಡೆಗಳಲ್ಲಿ ಜಾತಿ, ಮತ, ಧರ್ಮ ಮತ್ತು ಇವುಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಆಚರಣೆಗಳನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಆಗಕೂಡದು. ಇಂತಹ ಯಾವುದೇ ಪ್ರಯತ್ನಗಳನ್ನು ವಿರೋಧಿಸುವುದು ಪ್ರಗತಿಪರರ ಮುಖ್ಯ ಧೋರಣೆಯಾಗಿರಬೇಕಾಗುತ್ತದೆ.
ವ್ಯಕ್ತಿಗತ ನೆಲೆಯಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪೋಷಿಸದೆ ಹೋದಲ್ಲಿ ಯಾವುದೇ ಸಮಾಜವೂ ಈ ಜಾತಿ-ಮತ-ಧರ್ಮಗಳ ಹಿಡಿತದಿಂದ ಹೊರಬರುವುದು ಸಾಧ್ಯವಾಗುವುದಿಲ್ಲ. ದೈವತ್ವದ ನಿರಾಕರಣೆ ಅಲ್ಲದಿದ್ದರೂ, ಆರಾಧನಾ ಸಂಸ್ಕೃತಿಯಿಂದ ವಿಮುಖವಾದ, ಅಂಧಶ್ರದ್ಧೆಯಿಂದ, ಮೌಢ್ಯಗಳಿಂದ ಮುಕ್ತವಾದ ಮನೋಭಾವವನ್ನು ಸಮಾಜದಲ್ಲಿ ಮೂಡಿಸುವ ಮೂಲಕವೇ ಜಾತಿ ಕೇಂದ್ರಿತ ಅಥವಾ ಮತ ಕೇಂದ್ರಿತ ಧಾರ್ಮಿಕ-ಸಾಂಸ್ಕೃತಿಕ ಅತಿರೇಕಗಳನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ. ಈ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವೇ “ ಪ್ರಗತಿಪರ ” ಎಂಬ ಪರಿಕಲ್ಪನೆಯಲ್ಲಿ ಒಂದು ಸ್ಪಷ್ಟ ರೂಪ ಪಡೆದುಕೊಳ್ಳಬೇಕಿದೆ. ಎಲ್ಲ ರೀತಿಯ ಮೌಢ್ಯಗಳನ್ನು ಮತ್ತು ಸಾಂಪ್ರದಾಯಿಕತೆಯನ್ನು, ಶೋಷಣೆಗೊಳಪಡಿಸುವ ಸಂಪ್ರದಾಯಗಳನ್ನು, ಮಹಿಳಾ ಸ್ವಾತಂತ್ರ್ಯಕ್ಕೆ ಚ್ಯುತಿ ಉಂಟುಮಾಡುವ ಆಚರಣೆಗಳನ್ನು ಮತ್ತು ಶೋಷಕ ವ್ಯವಸ್ಥೆಯನ್ನು ಬಲಪಡಿಸುವ ಧೋರಣೆಯನ್ನು ವಿರೋಧಿಸುವ ವೈಚಾರಿಕ ನೆಲೆಯಲ್ಲಿ “ ಪ್ರಗತಿಪರತೆ ” ಬೆಳೆಯಬೇಕಿದೆ.
ರಾಜಕೀಯ ನೆಲೆಯಲ್ಲಿ ವ್ಯಕ್ತವಾಗುವ ಅಥವಾ ಬಲಪಂಥೀಯ ರಾಜಕಾರಣದ ವಿರುದ್ಧ ಪ್ರಕಟಗೊಳ್ಳುವ ಎಲ್ಲ ಧ್ವನಿಗಳನ್ನೂ “ ಪ್ರಗತಿಪರ ” ಎನ್ನುವ ಚೌಕಟ್ಟಿನಲ್ಲಿ ಅಳವಡಿಸಲು ಮುಂದಾದಾಗ ನಮಗೆ ಈ ವೈರುಧ್ಯಗಳೂ ಎದುರಾಗುತ್ತವೆ. ಹಿಂದುತ್ವ ವಿರೋಧಿ ಧ್ವನಿಗಳೆಲ್ಲವೂ ಪ್ರಗತಿಪರ ಎನಿಸಿಕೊಳ್ಳಬೇಕಾದರೆ, ಈ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಧೋರಣೆ ಮುಖ್ಯವಾಗಿರಬೇಕಾಗುತ್ತದೆ. ಪ್ರಗತಿಪರತೆಯನ್ನು ಸಂದರ್ಭಾನುಸಾರವಾಗಿ ಪುನರ್ ವ್ಯಾಖ್ಯಾನಕ್ಕೊಳಪಡಿಸಲು ಸಾಧ್ಯವಾಗಬಹುದಾದರೂ, ಅದರ ಹಿಂದಿನ ವೈಚಾರಿಕ ನೆಲೆಗಳನ್ನು ಸ್ಪಷ್ಟವಾಗಿ ಗ್ರಹಿಸದೆ ಹೋದಲ್ಲಿ, ಪುರೋಗಾಮಿ ಜನಾಂದೋಲನಗಳ ನಡುವೆಯೇ ಪ್ರತಿಗಾಮಿ ಚಿಂತನಾವಾಹಿನಿಗಳೂ ನುಸುಳಿಕೊಂಡು ಬರಲಾರಂಭಿಸುತ್ತವೆ. ಗುಪ್ತಗಾಮಿನಿಯಂತೆ ಸಾಮಾಜಿಕ ಚೌಕಟ್ಟಿನೊಳಗೇ ಹರಿಯುವ ಈ ಪ್ರತಿಗಾಮಿ ಆಲೋಚನಾ ಕ್ರಮಗಳು, ಇಡೀ ಸಮಾಜವನ್ನು ಅಥವಾ ಸಮಾಜದ ಒಂದು ವರ್ಗವನ್ನು ಮತ್ತಷ್ಟು ಹಿಂದಕ್ಕೆ, ಸಾಂಪ್ರದಾಯಿಕತೆಯೆಡೆಗೆ ಕೊಂಡೊಯ್ಯುವ ಅಪಾಯವನ್ನು ಮನಗಾಣಬೇಕಿದೆ.
ಈ ನೆಲೆಗಟ್ಟಿನಲ್ಲೇ ಇಂದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಧಾರ್ಮಿಕ ಚಿಹ್ನೆ, ಲಾಂಛನ ಮತ್ತು ಅಸ್ಮಿತೆಗಳನ್ನೂ, ಇತರ ಧಾರ್ಮಿಕ ಮೌಢ್ಯಾಚರಣೆಗಳನ್ನೂ, ಹಿಂದುತ್ವ ಪ್ರತಿಪಾದಿಸುತ್ತಿರುವ ಸಾಂಪ್ರದಾಯಿಕತೆಯನ್ನೂ ವ್ಯಾಖ್ಯಾನಿಸಬೇಕಿದೆ. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವದಿಂದ ಹೊರತಾದ “ಪ್ರಗತಿಪರತೆ” ಸಾಂದರ್ಭಿಕ ಪ್ರತಿರೋಧದ ಅಸ್ತ್ರವಾಗಿ ಕಾಣಬಹುದೇ ಹೊರತು, ಒಂದು ಪ್ರಬುದ್ಧ ಸಮಾಜದ ನಿರ್ಮಾಣಕ್ಕೆ ಪೂರಕವಾಗುವುದಿಲ್ಲ.