ರಸ್ತೆ ಗುಂಡಿಗಳಿಂದ ಸಾಲು ಸಾಲಾಗಿ ಛೀಮಾರಿ ಬಿದ್ದ ಬಳಿಕ ಪಾಲಿಕೆ ಎಚ್ಚೆತ್ತುಕೊಂಡಂತಿದೆ. ಬಿಬಿಎಂಪಿ ನಗರ ಸೇರಿದಂತೆ ತನ್ನ ವ್ಯಾಪ್ತಿಯಲ್ಲಿ ಬರುವ ಹಳ್ಳಿ ಪ್ರದೇಶಗಳ ರಸ್ತೆ ದುರಸ್ತಿ ಬಗ್ಗೆಯೂ ಗಮನ ಹರಿಸಿದೆ. ಈ ಹಿನ್ನೆಲೆ ಇಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ವರ್ಚುವಲ್ ಸಭೆ ಮಾಡಲಾಗಿದ್ದು ವಾರ್ಡ್ ಮಟ್ಟದ ಅಧಿಕಾರಿಗಳಿಗೆ ದುರಸ್ತಿ ನಡೆಸುವ ಬಗ್ಗೆ ಸಲಹೆ ಸೂಚನೆ ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ಜಲಂಡಳಿಯಿಂದ ಸಂಪೂರ್ಣ ಕಾಮಗಾರಿ ಮುಗಿದ ಕಡೆ ರಸ್ತೆ ಅಗೆಯಲಾಗಿರುವ ರಸ್ತೆ ಭಾಗಗಳ ದರಸ್ತಿ ಕೆಲಸಗಳು ಆದಷ್ಟು ವ್ಯವಸ್ಥಿತ ರೀತಿಯಲ್ಲಿ, ದೀರ್ಘ ಬಾಳಿಕೆ ಬರುವ ರೀತಿಯಲ್ಲಿ ಆಗಬೇಕು ಎಂದು ಮಾನ್ಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಜಲಮಂಡಳಿಯಿಂದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಗೆದಿರುವ ರಸ್ತೆಗಳ ಪೈಕಿ ಎಲ್ಲೆಲ್ಲಿ ಕೆಲಸ ಪೂರ್ಣಗೊಂಡಿದೆಯೋ ಅಂತಹ ರಸ್ತೆಗಳನ್ನು ಸುಗಮ ಓಡಾಟಕ್ಕೆ ಹಾಗೂ ಚರಂಡಿಗಳ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಲಮಂಡಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಗಳಿದ್ದರೂ ಅದನ್ನು ಮುಖ್ಯ ಎಂಜಿನಿಯರ್ ಗಮನಕ್ಕೆ ತರಬೇಕು, ಬಗೆಹರಿಯದಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಅಗೆಯಲಾಗಿರುವ ರಸ್ತೆ ಭಾಗಗಳ ಪುನರ್ ಸ್ಥಾಪನೆ ಕೆಲಸಗಳು ಶೀಘ್ರವಾಗಿ, ಮಳೆಗಾಲ ಆರಂಭಕ್ಕೂ ಮುನ್ನ ವ್ಯವಸ್ಥಿತವಾಗಿ ಆಗಬೇಕು. ರಸ್ತೆ ದುರಸ್ತಿಯಿರುವ ಕಡೆ ವಾಹನಗಳ ಓಡಾಟಕ್ಕೆ ಅನುವಾಗುವಂತಿರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿಗದಿತ ಸಮಯದಲ್ಲಿ ಕೆಲವನ್ನು ಪೂರ್ಣಗೊಳಿಸಬೇಕು ಸಭೆಯ ನಂತ ಮಾಧ್ಯಮಗಳಿಗೆ ಹೇಳಿದರು.
ಎರಡು ತಿಂಗಳೊಳಗಾಗಿ ಕಾಮಗಾರಿ ಮುಗಿಸಲು ಸೂಚನೆ
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ರಸ್ತೆ ಪುನರ್ ಸ್ಥಾಪನೆಯ ಸಂಪೂರ್ಣ ಕಾಮಗಾರಿಯನ್ನು ಎರಡು ತಿಂಗಳೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ರಸ್ತೆ ಡಾಂಬರೀಕರಣದ ಕೆಲಸವಾಗುತ್ತಿದೆ ಎಂಬ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ಪಾಲಿಕೆ ಕೇಂದ್ರ ಕಛೇರಿಗೆ ಸಲ್ಲಿಸಲು ಹೇಳಲಾಗಿದೆ. ಜೊತೆಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿಭಾಯಿಸಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಶೀಘ್ರವೇ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಸಂಬಂಧಿಸಿದ ರಸ್ತೆಗಳ ನಿರ್ವಹಣೆಯು ಸರಿಯಾಗಿ ಆಗಬೇಕು. ಈ ಸಂಬಂಧ ಕಾರ್ಯಪಾಲಕ ಇಂಜಿನಿಯರ್ ಗಳು ರಸ್ತೆಗಳ ಮೇಲ್ವಿಚಾರಣೆ ನಡೆಸಿ ಉತ್ತಮ ಗುಣಮಟ್ಟದ ರೀತಿಯಲ್ಲಿ ರಸ್ತೆಗಳಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೂಲಭೂತ ಸೌಕರ್ಯ ವಿಭಾಗಕ್ಕೆ ಸಂಬಂಧಿಸಿದಂತೆ 183.38 ಕಿ.ಮೀ ಉದ್ದದ 139 ರಸ್ತೆಗಳ ಪೈಕಿ 84.14 ಕಿ.ಮೀ ಉದ್ದದ 72 ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, 99.24 ಕಿ.ಮೀ ಉದ್ದದ 67 ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರ ಡಾಂಬರೀಕರಣ ಆಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಅಡಿ 113 ಕಿ.ಮೀ ರಾಜಕಾಲುವೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರಲ್ಲಿ ಈಗಾಗಲೇ 96 ಕಿ.ಮೀ ಉದ್ದದ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ 17 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಒಟ್ಟಾರೆ ರಸ್ತೆ ದುರಸ್ತಿ ಬಗ್ಗೆ ಹೈ ಕೋರ್ಟ್ ಬೀಸಿದ ಚಾಟಿಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ತ್ವರಿತಗತಿಯಲ್ಲಿ ಕೆಲಸ ಮುಗಿಸಲು ಪಣತೊಟ್ಟಿದೆ.