ಇಸ್ರೇಲ್ ಮೂಲದ ಮಿಲಿಟರಿ ಗ್ರೇಡ್ ಸ್ಪೈವೇರ್ ಸಂಸ್ಥೆ NSO Group ಪತ್ರಕರ್ತರು, ಹೋರಾಟಗಾರರು ಸೇರಿದಂತೆ ಭಾರತದ ಒಟ್ಟು 300 ಕ್ಕೂ ಅಧಿಕ ಮಂದಿಯ ಫೋನ್ ಕದ್ದಾಲಿಕೆ ಮಾಡುತ್ತಿದೆಯೆಂಬ ಆಘಾತಕಾರಿ ಅಂಶ ʼ17 ಮಾಧ್ಯಮ ಸಂಸ್ಥೆಗಳುʼ ಸೇರಿ ಮಾಡಿರುವ ತನಿಖಾ ವರದಿಯಿಂದ ಬಹಿರಂಗಗೊಂಡಿದೆ.
ಕೇಂದ್ರ ಸರ್ಕಾರದ ಇಬ್ಬರು ಸಚಿವರು, ಮೂವರು ವಿರೋಧ ಪಕ್ಷದ ನಾಯಕರು, ಒಬ್ಬ ನ್ಯಾಯಾಂಗ ಸಂಸ್ಥೆಯ ವ್ಯಕ್ತಿ, 40 ಕ್ಕೂ ಹೆಚ್ಚು ಪತ್ರಕರ್ತರು, ವಿಜ್ಞಾನಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ಹಲವು ಉದ್ಯಮಿಗಳ ಫೋನ್ಗಳಿಗೆ ಅನಧಿಕೃತವಾಗಿ ವೈರಸ್ ಇನ್ಸ್ಟಾಲ್ ಹ್ಯಾಕ್ ಮಾಡಲಾಗಿದೆ ಎಂದು ತನಿಖಾ ವರದಿ ಹೇಳಿದೆ.
ಹಲವು ರಾಷ್ಟ್ರಗಳು NSO Group ನ ಸೇವೆಯನ್ನು ಪಡೆಯುತ್ತಿರುವುದಾಗಿ ವರದಿಯು ಹೇಳಿದೆ. ಜಾಗತಿಕವಾಗಿ 50,000 ಕ್ಕೂ ಹೆಚ್ಚು ಮಂದಿಯ ಫೋನ್ಗಳನ್ನು ಈ ಸಂಸ್ಥೆ ಹ್ಯಾಕ್ ಮಾಡಿದೆ ಎನ್ನಲಾಗಿದ್ದು, ಆಯಾ ದೇಶಗಳ ಸರ್ಕಾರಗಳು ಕೋರಿಕೆಯ ಮೇರೆಗೆ NSO Group ಈ ಅನಧಿಕೃತ ಹ್ಯಾಕಿಂಗ್ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ಯಾರಿಸ್ ಮೂಲದ ಫಾರ್ಬಿಡನ್ ಸ್ಟೋರೀಸ್ ಹಾಗೂ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯು ಈ ತನಿಖಾ ವರದಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಭಾರತೀಯ ಸುದ್ದಿ ಸಂಸ್ಥೆ ದಿ ವೈರ್ ಕೂಡಾ ತನಿಖಾ ತಂಡದಲ್ಲಿತ್ತು. ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಸೆಕ್ಯುರಿಟಿ ಲ್ಯಾಬಿನಲ್ಲಿ ಹ್ಯಾಕ್ ಮಾಡಲಾಗಿದೆ ಎನ್ನಲಾದ 67 ಸ್ಮಾರ್ಟ್ಫೋನ್ಗಳನ್ನು ಪರೀಕ್ಷಿಸಿದ್ದು, ಅದರಲ್ಲಿ 23 ಪೋನ್ಗಳಲ್ಲಿ ಕಣ್ಗಾವಲು ವೈರಸ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿತ್ತು ಹಾಗೂ 14 ಫೋನ್ಗಳಲ್ಲಿ ಈ ವೈರಸ್ ಇನ್ಸಟಾಲ್ಗೆ ಪ್ರಯತ್ನಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಉಳಿದ 30 ಫೋನ್ಗಳ ಬಳಕೆದಾರರು ಪದೇ ಪದೇ ಫೋನ್ ಬದಲಾಯಿಸಿದ್ದರಿಂದ ವೈರಸ್ ಅಟ್ಯಾಕ್ನ ಫಲಿತಾಂಶಗಳು ಅನಿರ್ದಿಷ್ಟವಾಗಿದೆ.
ತನಿಖೆಯ ಭಾಗವಾಗಿದ್ದ ದಿ ವೈರ್ ಪ್ರಕಾರ, ಈ ಪಟ್ಟಿಯಲ್ಲಿ ಸಚಿವರು, ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಕಾನೂನು ತಜ್ಞರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಇತರರ 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ದೂರವಾಣಿ ಸಂಖ್ಯೆಗಳಿವೆ.
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಾದ 12 ಹೋರಾಟಗಾರರ ಫೋನ್ಗಳನ್ನು ಹ್ಯಾಕ್ ಮಾಡಲಾಗಿದ್ದು ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ತನಿಖಾ ವರದಿಯು ಹೇಳಿದೆ. ಫೋನ್ ಹ್ಯಾಕ್ ಮಾಡಲಾಗಿರುವ ಭಾರತೀಯ ಪತ್ರಕರ್ತರಲ್ಲಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್, ಶಿಶಿರ್ ಗುಪ್ತಾ, ರಿತಿಕಾ ಚೋಪ್ರಾ, ಪ್ರಶಾಂತ್ ಝಾ, ಪ್ರೇಮ್ ಶಂಕರ್ ಝಾ, ಸ್ವಾತಿ ಚತುರ್ವೇದಿ, ರಾಹುಲ್ ಸಿಂಗ್, ಮುಜಮ್ಮಿಲ್ ಜಲೀಲ್, ಇಫ್ತಿಕಾರ್ ಗೀಲಾನಿ, ಸಂದೀಪ್ ಉನ್ನಿತಾನ್, ದಿ ವೈರ್ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಮುಂತಾದವರು ಸೇರಿದ್ದಾರೆ.
ಕುತಂತ್ರಾಂಶದ ಮೂಲಕ ಖಾಸಗಿ ಮಾಹಿತಿಗಳನ್ನು ಹ್ಯಾಕ್ ಮಾಡಿ ದುರುಪಯೋಗಪಡಿಸಿಕೊಂಡಿದ್ದು, ಡಿಜಿಟಲ್ ಯುಗದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಕಳವಳಕಾರಿಯೆನಿಸಿದೆ. ಇದು ಜಾಗತಿಕ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತನಿಖಾ ವರದಿಯು ಅಭಿಪ್ರಾಯಪಟ್ಟಿದೆ.
ತನಿಖಾ ವರದಿಯನ್ನು ನಿರಾಕರಿಸಿದ NSO
ಅದಾಗ್ಯೂ, ಸುದ್ದಿ ಸಂಸ್ಥೆಗಳು ನಡೆಸಿದ ತನಿಖಾ ವರದಿಯನ್ನು NSO ಹಾಗೂ ಭಾರತ ಸರ್ಕಾರ ನಿರಾಕರಿಸಿದೆ.ತನಿಖೆಯ ಆವಿಷ್ಕಾರಗಳನ್ನು ಉತ್ಪ್ರೇಕ್ಷಿತ ಮತ್ತು ಆಧಾರರಹಿತವೆಂದು ಎನ್ಎಸ್ಒ ಹೇಳಿದೆ. ತನಿಖಾ ವರದಿಯಲ್ಲಿ “ಯಾವುದೇ ಒಳನೋಟಗಳು ಇಲ್ಲ ” ಎಂದು ಅದು ಹೇಳಿದೆ.
ಜಾಗತಿಕವಾಗಿ 40 ದೇಶಗಳಲ್ಲಿ 60 ಗುಪ್ತಚರ, ಮಿಲಿಟರಿ ಮತ್ತು ಕಾನೂನು ಸಂಸ್ಥೆಗಳು NSO ಸೇವೆ ಪಡೆಯುತ್ತಿದ್ದು, ಯಾವ ಯಾವ ದೇಶಗಳು ಮತ್ತು ಗುಪ್ತಚರ ಇಲಾಖೆಗಳು ಈ ಸಂಸ್ಥೆಯ ಗ್ರಾಹಕರಾಗಿದ್ದಾರೆ ಎನ್ನುವುದನ್ನು ಸಂಸ್ಥೆಯು ಬಹಿರಂಗಪಡಿಸಿಲ್ಲ. ತನ್ನ ಗ್ರಾಹಕರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಸಂಸ್ಥೆ ಬಿಟ್ಟುಕೊಡುತ್ತಿಲ್ಲ. ಈ ಸಂಸ್ಥೆಯಿಂದ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವೂ ಗ್ರಾಹಕರಾಗಿರಬೇಕೆಂಬ ಅನುಮಾನಗಳು ವ್ಯಕ್ತವಾಗಿದ್ದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವ, ವಿರೋಧಿಸುವ ವ್ಯಕ್ತಿಗಳ ಫೋನ್ ಹ್ಯಾಕ್ ಆಗಿರುವುದು ಈ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.
ಭಾರತ ಸರ್ಕಾರದ ಪ್ರತಿಕ್ರಿಯೆ
ಭಾರತೀಯ ಮೂಲದ ವ್ಯಕ್ತಿಗಳ ಫೋನ್ ಕದ್ದಾಲಿಕೆಯ ಹಿಂದೆ ಭಾರತ ಸರ್ಕಾರ ಇದೆಯೆಂಬ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಇದನ್ನು ನಿರಾಕರಿಸಿದೆ.
‘ಇದರಲ್ಲಿ ಸತ್ಯಾಂಶವಿಲ್ಲ, ನಿರಾಧಾರ’ ಎಂದು ಹೇಳಿದೆ. “2019 ರಲ್ಲಿ ಕೂಡಾ ಇದೇ ರೀತಿಯ ವರದಿ ಪ್ರಕಟವಾಗಿತ್ತು, ಈಗಿನ ಸುದ್ದಿ ಅದರ ಮುಂದುವರಿದ ಭಾಗ ಇದ್ದಂತೆ ಇದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳಿಗೆ ತೊಡಕು ಮಾಡುವ ಯತ್ನವಾಗಿದೆ” ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.