ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಕಾವೇರಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ತುಳು ಭಾಷೆಯಲ್ಲಿರುವ “ಕರ್ನಾಟಕ ಸಿಎಂ ಬದಲಾವಣೆಯಾಗಲಿದ್ದಾರೆ” ಎಂಬ ಆಡಿಯೋ ಒಂದು ಭಾರೀ ವೈರಲ್ ಆಗಿದ್ದು, ರಾಜಕೀಯ ರಂಗದಲ್ಲಿ ಪ್ರಸ್ತುತ ಇರುವ ಚರ್ಚೆಗಳಿಗೆ ಇನ್ನಷ್ಟು ಪುಷ್ಟಿ ಒದಗಿಸಿದೆ.
ವೈರಲ್ ಆಗುತ್ತಿರುವ ಕಟೀಲ್ ರವರ ತುಳು ಭಾಷೆಯ ಆಡಿಯೋದಲ್ಲಿ “ಯಾರಿಗೂ ಹೇಳೋಕೆ ಹೋಗಬೇಡಿ, ಈಶ್ವರಪ್ಪ ಜಗದೀಶ್ ಶೆಟ್ಟರ್ ತಂಡವನ್ನೇ ತೆಗೆಯುತ್ತೇವೆ. ಎಲ್ಲ ಹೊಸ ತಂಡ ಮಾಡುತ್ತಿದ್ದೇವೆ. ಯಾರಲ್ಲೂ ಹೇಳಲು ಹೋಗಬೇಡಿ, ಏನು ತೊಂದರೆ ಇಲ್ಲ, ಹೆದರಬೇಡಿ ನಾವಿದ್ದೇವೆ, ಇನ್ನು ಯಾರಾದರೂ.. ನಮ್ಮ ಕೈಯಲ್ಲೇ ಎಲ್ಲಾ. ಸದ್ಯ ಮೂರು ಹೆಸರು ಇದೆ, ಅದರಲ್ಲಿ ಯಾವುದಾದರೂ ಆಗುವ ಸಾಧ್ಯತೆ ಇದೆ. ಇಲ್ಲಿಯವರನ್ನು ಯಾರನ್ನು ಮಾಡೋದಿಲ್ಲ. ದೆಹಲಿಯಿಂದಲೇ ಆಯ್ಕೆ ಮಾಡುತ್ತಾರೆ” ಎಂದು ಹೇಳಲಾಗಿದೆ.
ಕರ್ನಾಟಕದ ಹೊಸ ಸಿಎಂ ದೆಹಲಿಯಿಂದ ಬರುತ್ತಾರೆ ಎಂದು ಆಡಿಯೋದಲ್ಲಿ ಹೇಳಿರುವುದರಿಂದ ಅವರು ಯಾರು ಎಂಬ ಪ್ರಶ್ನೆ ಸುಳಿದಾಡುತ್ತಿದೆ. ಅದಾಗ್ಯೂ, ‘ಆಡಿಯೋ ನಕಲಿಯಾಗಿದ್ದು,. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಟೀಲ್ ಅವರು ಆಡಿಯೋದ ಸತ್ಯಾ ಸತ್ಯತೆಯನ್ನು ನಿರಾಕರಿಸಿದ್ದಾರೆ.

ಆಡಿಯೋ ಹರಿದಾಡಿದ 2 ಗಂಟೆ ಬಳಿಕ ರಾತ್ರಿ 11.20 ಕ್ಕೆ ತಡರಾತ್ರಿ ಸ್ಪಷ್ಟೀಕರಣ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ʼಆಡಿಯೋ ಖಂಡಿತವಾಗಿಯೂ ನನ್ನದಲ್ಲ. ಅದು ನಕಲಿ ಆಡಿಯೋ. ಇದರ ಮೂಲಕ ಕಳಂಕ ತರುವ ಕೆಲಸ ನಡೆದಿದೆ ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮಾತನಾಡುತ್ತೇನೆ, ಎಂದು ಹೇಳಿದ್ದಾರೆ.
‘ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೊವನ್ನುಯಾರೋ ಕಿಡಿಗೇಡಿಗಳು ವಾಟ್ಸ್ ಆ್ಯಪ್ನಲ್ಲಿ ಹರಿ ಬಿಟ್ಟಿದ್ದು, ಇದರ ಸತ್ಯಾಸತ್ಯತೆ ತನಿಖೆ ಆಗಬೇಕು. ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆಡಿಯೊ ಹರಿಬಿಡಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಬೇಕು’ ಎಂದು ಯಡಿಯೂರಪ್ಪ ಅವರಲ್ಲಿ ಕಟೀಲ್ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಈ ಆಡಿಯೋ ಸಂಚಲನ ಸೃಷ್ಟಿಸಿದೆ. ಆಡಿಯೋ ನಕಲಿಯೋ ಅಸಲಿಯೋ ಎಂಬುವುದು ಇನ್ನು ದೃಢಪಟ್ಟಿಲ್ಲ. ಆದರೆ ಅಲ್ಲಿ ಉಲ್ಲೇಖವಾಗಿರುವ ವಿಚಾರವಂತೂ ಕಮಲ ಪಾಳಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ..





