ಬೆಳಗಾವಿ: ನಿನ್ನೆ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ವೃದ್ಧೆಯೊಬ್ಬರು ಬಸ್ ಮೆಟ್ಟಿಲಿಗೆ ತಲೆ ಬಾಗಿ ನಮಸ್ಕರಿಸಿ ಬಸ್ ಏರಿದ ಫೋಟೋಗಳು ವೈರಲ್ ಆಗಿತ್ತು. ಈ ಫೋಟೋವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇಂದು ಬಸ್ ಏರಿದ್ದ ನಿಂಗಮ್ಮ ಸಿದ್ದರಾಮಯ್ಯ ಆಯಸ್ಸು ವೃದ್ಧಿಸಲಿ ಎಂದು ಹಾರೈಸಿದ್ದಾರೆ.
ಧಾರವಾಡದಲ್ಲಿ ನನ್ನ ಪುತ್ರನ ಮನೆಯ ಗೃಹಪ್ರವೇಶವಿತ್ತು. ಅಲ್ಲಿಂದ ಸವದತ್ತಿಯಲ್ಲಿರುವ ನನ್ನ ಮೊಮ್ಮಗನ ಮನೆಗೆ ಹೊರಡಬೇಕಿತ್ತು. ಧಾರವಾಡದಲ್ಲಿ ಬಸ್ ಹತ್ತಿದಾಗ ಕಂಡಕ್ಟರ್ ಇನ್ಮೇಲೆ ನೀವು ಟಿಕೆಟ್ಗೆ ಹಣ ನೀಡೋದು ಬೇಡ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಿ ಅಂದ್ರು. ನಾನಾಗ ಖುಷಿಯಾಗಿ ಬಸ್ಗೆ ನಮಸ್ಕರಿಸಿದೆ ಎಂದು ಹೇಳಿದರು.
ನನಗೆ ಬಸ್ ಟಿಕೆಟ್ ಫ್ರೀ ಮಾಡಿದವರು ಖುಷಿಯಾಗಿ ಇರಲಿ. ಇದರಿಂದ ನನಗೆ ತುಂಬಾನೇ ಉಪಕಾರವಾಗಿದೆ. ಸಿಎಂ ಸಿದ್ದರಾಮಯ್ಯ ಇನ್ನಷ್ಟು ವರ್ಷಗಳ ಕಾಲ ಆರೋಗ್ಯದಿಂದ ಬದುಕಲಿ ಎಂದು ಅಜ್ಜಿ ನಿಂಗವ್ವ ಹಾರೈಸಿದ್ದಾರೆ.







