ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಲೇ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೇ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿರುವ ಬಿ.ನಾಗೇಂದ್ರ ಅವರು ಜನತಾ ನ್ಯಾಯಾಲಯಕ್ಕೆ ಬಂದು ಎಲ್ಲವನ್ನೂ ಎದುರಿಸಿ ಎಂದು ಬಿಜೆಪಿಗರಿಗೆ ಬಹಿರಂಗ ಸವಾಲು ಕೂಡ ಹಾಕಿದ್ದಾರೆ.

ಇನ್ನು ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಈ ಬಾರಿಯ ವಿಧಾನಸಭಾ ಕಲಾಪದ ಒಳಗೂ ಹೊರಗೂ ಹೋರಾಟ ನಡೆಸಿದ್ದು, ಬಳ್ಳಾರಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದೆ. ಬಿಜೆಪಿ ನಾಯಕರು 10 ದಿನ 170 ಕಿ.ಮೀ ಪಾದಯಾತ್ರೆ ಘೋಷಣೆ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿರೋಧ ಪಕ್ಷದವರಿಗೆ ಹಲವು ಬಾರಿ ಮನವಿ ಮಾಡಿಕೊಂಡೆವು, ನೋಟಿಸ್ ಕೊಡಿ. ಚರ್ಚೆಗೆ ಬನ್ನಿ ಎಂದು ಕೇಳಿಕೊಂಡೆವು, ಆದರೂ ಅವರು ಚರ್ಚೆಗೆ ಬರಲಿಲ್ಲ. ಈಗ ಇಶ್ಯೂಲೆಸ್ ಇಶ್ಯೂ ಇಟ್ಟುಕೊಂಡು ಪಾದಯಾತ್ರೆಗೆ ಹೊರಟಿದ್ದಾರೆ. ಬಿಜೆಪಿಯವರು ಮನುಸ್ಮೃತಿಯ ವಾದ ಮಾಡುತ್ತಿದ್ದು, ಸಂವಿಧಾನ ನಮಗೆಲ್ಲಾ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ.

ದಲಿತರು, ಬಡವರು ಹಾಗೂ ಆದಿವಾಸಿಗಳು ಬದುಕಬಾರದು ಎಂಬ ಮನಸ್ಥಿತಿಯನ್ನು ಬಿಜೆಬಿಗರು ಹೊಂದಿದ್ದಾರೆ. 2024ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ವಿನಾಕಾರಣ ನನ್ನನ್ನು ಬಂಧಿಸಿ ಮೂರು ತಿಂಗಳು ಜೈಲಿಗೆ ಹಾಕಿದರು. ಬಳಿಕ ಕೋರ್ಟ್ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದೇನೆ. ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ. ನಾನು ಸಂವಿಧಾನಕ್ಕೆ ತಲೆ ಬಾಗುತ್ತೇನೆ ಎಂದು ಬಿ.ನಾಗೇಂದ್ರ ಹೇಳಿದ್ದಾರೆ.

ನೀವು ಚಲಾವಣೆಯಲ್ಲಿ ಇಲ್ಲದ ನಾಣ್ಯಗಳು. ಒಂದು ಬಾರಿ ಅಲ್ಲ ಎರಡು ಬಾರಿ ಛೀಮಾರಿ ಹಾಕಿದ್ದಾರೆ. ಬಳ್ಳಾರಿಯ ಜನ ಛೀಮಾರಿ ಹಾಕಿದ್ದಾರೆ. ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ. ಜನತಾ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಆರೋಪ ಮುಕ್ತನಾಗಿ ಬರುವ ನಂಬಿಕೆ ಇದೆ. ಇದು ನಮ್ಮ ಪಕ್ಷದವರಿಗೂ ಗೊತ್ತಿದೆ. ನೀವು ನೀಚ ಕೆಲಸಕ್ಕೆ ಹೊರಟಿದ್ದೀರಲ್ಲ ಬನ್ನಿ ನೊಡೋಣ ಮುಂದೆ ಎಂದು ಬಳ್ಲಾರಿ ಬಿಜೆಪಿ ನಾಯಕರಿಗೆ ನಾಗೇಂದ್ರ ಸವಾಲು ಹಾಕಿದ್ದಾರೆ.







