ಬೆಂಗಳೂರು: ಕೇಂದ್ರ ಸರಕಾರವು ದೇಶದಲ್ಲಿ ಸುಗಮ ರೈಲು ಸಂಚಾರ ಮತ್ತು ಸರಕು ಸಾಗಣೆ ಉದ್ದೇಶದಿಂದ ಅತಿಸಾಂದ್ರತೆ (High Density) ಇರುವ ಏಳು ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಕರ್ನಾಟಕದ ಒಂದೇ ಒಂದು ಮಾರ್ಗವನ್ನೂ ಪರಿಗಣಿಸದೆ ಇರುವುದು ಅನ್ಯಾಯದ ಪರಮಾವಧಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮುಖ್ಯಮಂತ್ರಿಯವರಿಂದ ಪತ್ರ ಬರೆಸುವ ಜೊತೆಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನೂ ಖುದ್ದಾಗಿ ಭೇಟಿ ಮಾಡುವಂತೆ ಕೋರುತ್ತೇನೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅಶ್ವಿನಿ ವೈಷ್ಣವ್ ಅವರು ದೆಹಲಿ- ಹೌರಾ, ಹೌರಾ- ಚೆನ್ನೈ, ಚೆನ್ನೈ – ಮುಂಬೈ, ಮುಂಬೈ- ದೆಹಲಿ, ದೆಹಲಿ-ಚೆನ್ನೈ, ಮುಂಬೈ- ಹೌರಾ, ದೆಹಲಿ- ಗೋವಹಾತಿ ಒಟ್ಟು 7 ರೈಲ್ವೆ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದ್ದರು.
ರಾಜ್ಯದಲ್ಲಿ ಬೆಂಗಳೂರು- ಪುಣೆ- ಮುಂಬೈ, ಬೆಂಗಳೂರು- ಮೈಸೂರು, ಬೆಂಗಳೂರು- ಮಂಗಳೂರು, ಬೆಂಗಳೂರು- ಚೆನ್ನೈ, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ವಿಜಯಪುರ, ಬೆಂಗಳೂರು- ಕಲಬುರಗಿ- ಹೀಗೆ ಹತ್ತಾರು ಅತಿದಟ್ಟಣೆಯ ಮಾರ್ಗಗಳಿವೆ. ಇವುಗಳನ್ನು ಕೇಂದ್ರ ಸರಕಾರವು ಸಮಗ್ರವಾಗಿ ಚತುಷ್ಪಥ ಮಾರ್ಗಗಳನ್ನಾಗಿ ಅಭಿವೃದ್ಧಿ ಪಡಿಸಬೇಕು. ಇದು ಅದರ ಕರ್ತವ್ಯವಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರವು ನಮ್ಮ ರಸ್ತೆ ಜಾಲಕ್ಕೆ ಪೂರಕವಾಗಿ ರಾಜ್ಯದಲ್ಲಿ ರೈಲು ಮಾರ್ಗಗಳನ್ನು ಅಭಿವೃದ್ಧಿ ಮಾಡದೆ ಮಲತಾಯಿ ಧೋರಣೆ ತೋರುತ್ತಿದೆ. ಇದರಿಂದಾಗಿ ನಮ್ಮ ಹೆದ್ದಾರಿಗಳ ಮೇಲೆ ವಿಪರೀತ ಒತ್ತಡ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 330 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಕರಾವಳಿಯಲ್ಲಿ ಇರುವ ಬಂದರು ಪಟ್ಟಣಗಳಿಗೂ ಒಳನಾಡಿಗೂ ಸಮರ್ಪಕ ರೈಲು ಸಂಪರ್ಕ ಆಗಬೇಕು. ಆದರೆ ಈ ವಿಚಾರದಲ್ಲಿ ಕೂಡ ನಮಗೆ ಅನ್ಯಾಯವಾಗಿದೆ. ಮಂಗಳೂರು, ಭಟ್ಕಳ, ಹೊನ್ನಾವರ, ಕುಂದಾಪುರ, ಕಾರವಾರ ಇತ್ಯಾದಿಗಳಿಂದ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಪ್ರಮುಖ ಕೇಂದ್ರಗಳಿಗೆ ಸರಿಯಾದ ರೈಲ್ವೇ ಸಂಪರ್ಕವೇ ಇಲ್ಲವಾಗಿದೆ ಎಂದರು.

ಈ ವರ್ಷದ ಬಜೆಟ್ಟಿನಲ್ಲಿ ಕೇಂದ್ರ ಸರಕಾರ ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್ ಗೆ ಹೈಸ್ಪೀಡ್ ರೈಲು ಯೋಜನೆಗಳನ್ನು ಘೋಷಿಸಿದೆ. ಆದರೆ ಇವುಗಳಿಂದ ತಮಿಳುನಾಡು ಮತ್ತು ಆಂಧ್ರ-ತೆಲಂಗಾಣಗಳಿಗೆ ಪ್ರಯೋಜನವಾಗುತ್ತದೆ. ಏಕೆಂದರೆ ಈ ಎರಡೂ ಮಾರ್ಗಗಳಲ್ಲಿ ರೈಲುಗಳು ನಮ್ಮ ರಾಜ್ಯದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದರ ಬಗ್ಗೆ ನಾನು ತಕ್ಷಣವೇ ಧ್ವನಿ ಎತ್ತಿ, ಬೆಂಗಳೂರು-ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ಹೈಸ್ಪೀಡ್ ರೈಲು ಮಾರ್ಗ ಬರಬೇಕು ಎಂದು ಗಮನ ಸೆಳೆದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಕೇಂದ್ರದ ಈ ತಾರತಮ್ಯದ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತಬೇಕು. ಅದರಲ್ಲೂ ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿ ಸಂಸದರು ಮೌನವಾಗಿರುವುದು ಸರಿಯಲ್ಲ. ಹಲವರು ಮಾಜಿ ಮುಖ್ಯಮಂತ್ರಿಗಳು ಕೂಡ ಇದ್ದಾರೆ. ಹಾಗೆಯೇ ನಮ್ಮ ಪಕ್ಷದ ಸಂಸದರೂ ಆಗ್ರಹ ಮಾಡಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು. ರೈಲ್ವೆ ಯೋಜನೆಗಳು ತ್ವರಿತವಾಗಿ ಆಗಬೇಕೆಂದು ನಾವು 50:50 ವೆಚ್ಚ ಹಂಚಿಕೆ ಆಧಾರದಲ್ಲಿ ಸಹಕರಿಸುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಹೀಗಿಲ್ಲ. ಆದರೂ ಕೇಂದ್ರ ಸರಕಾರವು ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಕೊಡುವಷ್ಟು ಆದ್ಯತೆಯನ್ನು ಕರ್ನಾಟಕಕ್ಕೆ ಕೊಡುತ್ತಿಲ್ಲ. ಬೆಂಗಳೂರು ದೇಶದ ಐಟಿ ಸೇವೆ, ನವೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಆರ್ & ಡಿ, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್, ಎಫ್.ಡಿ.ಐ. ಗಳ ತೊಟ್ಟಿಲಾಗಿದೆ. ಆದ್ದರಿಂದ ಕೇಂದ್ರ ಸರಕಾರವು ನಮಗೆ ತಾನಾಗಿಯೇ ಚತುಷ್ಪಥ ರೈಲ್ವೆ ಮಾರ್ಗದಂತಹ ಯೋಜನೆಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.







