ಕೆ.ಆರ್.ನಗರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಪತ್ನಿ ಅನಿತಾ ಒಡೆತನದ ದಟ್ಟಗಳ್ಳಿಯ ಸಾ.ರಾ.ಕನ್ವೆನ್ಷನ್ ಹಾಲ್ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸೇರಿದ ಜಾಗ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.ಈ ಕುರಿತು ಆರ್ಟಿಐ ಕಾರ್ಯಕರ್ತ ಕುವೆಂಪುನಗರದ ಎನ್.ಗಂಗರಾಜು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದು,ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಹ ಸಾರಾ ಕನ್ವೆನ್ಷನ್ ಹಾಲ್ ಗೋಮಾಳದಲ್ಲಿ ಹಾಗೂ ರಾಜಕಾಲುವೆ ಒತ್ತುವರಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಪ್ರಾದೇಶಿಕ ಆಯುಕ್ತರು ತನಿಖಾ ತಂಡ ರಚಿಸಿದ್ದಾರೆ.ಗಂಗರಾಜು ಅವರು ಸಲ್ಲಿಸಿರುವ ಸುದೀರ್ಘ ದೂರಿನ ಪ್ರಕಾರ ಸಾ.ರಾ.ಮಹೇಶ್ ಅವರ ಪತ್ನಿ ಅನಿತಾ ಮಹೇಶ್ ಅವರ ಹೆಸರಿನಲ್ಲಿರುವ ಸರ್ವೇ ನಂ.130/3 ದಟ್ಟಗಳ್ಳಿಯ ಸಾ.ರಾ. ಕನ್ವೆನ್ಷನ್ ಹಾಲ್ ಜಿಲ್ಲಾಧಿಕಾರಿ ಅವರ ಆದೇಶ ಸಂಖ್ಯೆ ೦ಐಓ(1)104/03-04 ದಿನಾಂಕ25.9.2004 ರ ಮೇರೆಗೆ 2.15 ಎಕರೆ ಜಾಗವನ್ನು ವಸತಿ ಉದ್ದೇಶಕ್ಕಾಗಿ ಅನ್ಯಕ್ರಾಂತವಾಗಿದೆ.ಆದರೆ, ಸಾ.ರಾ.ಮಹೇಶ್ ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸುತ್ತಿದ್ದಾರೆ.
ಸಕ್ಷಮ ಪ್ರಾಧಿಕಾರದಿಂದ ಕಟ್ಟಡ ಪರವಾನಗಿ ಅನುಮೋದನೆ ಪಡೆದಿಲ್ಲ. ಸಾ.ರಾ.ಕನ್ವೆನ್ಷನ್ ಹಾಲ್ ಗೆ ಹೊಂದಿಕೊಂಡಂತೆ ಇರುವ ಸುತ್ತಮುತ್ತಲಿನ ಮುಡಾ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ಇದೆಲ್ಲ ಮುಡಾ ಆಯುಕ್ತ ನಟೇಶ್ ಹಾಗೂ ಅಧ್ಯಕ್ಷ ಎಚ್.ವಿ. ರಾಜೀವ್ ಅವರಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಆದ್ದರಿಂದ ಇವರು ಸಹ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.ಆದ್ದರಿಂದ ಇಬ್ಬರ ಅಧಿಕಾರದ ಅವಧಿಯಲ್ಲಿ ತೆಗೆದುಕೊಂಡಿರುವ ಎಲ್ಲ ನಿರ್ಧಾರದ ಬಗ್ಗೆಯು ತನಿಖೆಯಾಗಬೇಕು ಹಾಗೂ ಸರ್ವೇ ನಂ.98,121,122,123,131,132, 133ಗಳನ್ನೂ ಸಹ ಅಳತೆ ಮಾಡಲು ಅದೇಶ ಮಾಡಬೇಕಾಗಿ ಹಾಗೂ ಜಿಲ್ಲಾಧಿಕಾರಿ ಅವರ ಅನ್ಯಕ್ರಾಂತ ಆದೇಶವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಸದರಿ ಅದೇಶವನ್ನು ರದ್ದು ಮಾಡಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡ ತೆರವು ಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು.
ಇದೇ ರೀತಿ ಸರ್ವೇ ನಂ.130/3 ದಟ್ಟಗಳ್ಳಿ, ಕಸಬಾ ಹೋಬಳಿಯಲ್ಲಿ 2 ಎಕರೆ 15 ಗುಂಟೆ ಭೂಮಿಗೆ ಜಿಲ್ಲಾಧಿಕಾರಿಯವರು ಮಾಡಿರುವ ಅದೇಶ ಸಂಖ್ಯೆ 0ಐಒ(1)004/03-04 ದಿನಾಂಕ:25.9.2004ರ ಮೇರೆಗೆ 2.15 ಎಕರೆ ಭೂಮಿ ವಸತಿ ಉದ್ದೇಶಕ್ಕಾಗಿ ಅನ್ಯಕ್ರಾಂತವಾಗಿದೆ. ಆದರೆ, ಸದ್ಯ ವಾಣಿಜ್ಯ ಉದ್ದೇಶಕ್ಕಾಗಿ ಸಾರಾ.ಮಹೇಶ್ ಅಕ್ರಮ ಕಟ್ಟಡ ಕಟ್ಟಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ. ಹಾಗೂ ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನಾ ಆದೇಶದ ಪ್ರಕಾರ ವಸತಿ ಉದ್ದೇಶಕ್ಕೆ ಭೂಮಿಯನ್ನು ಉಪಯೋಗಿಸದೇ ಇರುವುದರಿಂದ ಜಿಲ್ಲಾಧಿಕಾರಿಯವರ ಅನ್ಯಕ್ರಾಂತ’ ಅದೇಶ ಉಲ್ಲಂಘಿಸಿದ್ದಾರೆ. ಹಾಗಾಗಿ ಅನ್ಯಕ್ರಾಂತ ರದ್ದಾಗಬೇಕಾಗಿದೆ. ಕಟ್ಟಡ ಪರವಾನಗಿ ನಕ್ಷೆ ಅನುಮೋದನೆ ಪಡೆಯದೆ’ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವುಗೊಳಿಸಬೇಕು ಮತ್ತು ಸದರಿ ಸರ್ವೇ ನಂ.130ಕ್ಕೆ ಹೊಂದಿಕೊಂಡಂತೆ ಹಾಗೂ ಕಲ್ಯಾಣ ಮಂಟಪರ ಸುತ್ತಲೂ ಇರುವ ಮುಡಾ ಸ್ವತ್ತನ್ನು ಒತ್ತವರಿ ಮಾಡಿಕೊಂಡು ಅಕ್ರಮವೆಸಗಿದ್ದಾರೆ. ಈ ಎಲ್ಲಾ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಇದೊಂದೆ ಪ್ರಕರಣದ ಬಗ್ಗೆ ತನಿಖೆ ಮಾಡಿ ಕ್ಲೀನ್ ಚಿಟ್ ನೀಡುವುದಲ್ಲ. ಬದಲಾಗಿ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೂ ಅಕ್ರಮದ ಸಂಬಂಧ ಮಾಡಿರುವ ಈ ಕೆಳಕಂಡ ಎಲ್ಲಾ ನನ್ನ ದೂರಿನ ಸರ್ವೆ ಕಾರ್ಯವನ್ನು ಇದರ ಜೊತೆಯಲ್ಲಿಯೇ ತನಿಖೆ ಮಾಡಬೇಕಾಗಿ ವಿನಂತಿ.
1)ಸರ್ವೆ ನಂ 123,ದಟ್ಟಗಳ್ಳಿ, ಕಸಭಾ, ಮೈಸೂರು, 2)ನರ್ವ 115 ಕೇರ್ಗಳ್ಳಿ, ಜಯಪುರ ಹೋಬಳಿ,ಮೈಸೂರು, 3)ಸರ್ವೇ 65, 66, 68 ಮತ್ತು 124/2,ಲಿಂಗಾಬುಧಿ ಕಸಬಾ ಹೋಬಳಿ,ಮೈಸೂರು ಹಾಗೂ ಯಡಹಳ್ಳಿ,ಜಯಪುರ ಹೋಬಳಿ, ಮೈಸೂರು ಇದರಲ್ಲಿ ಮುಡಾ ಅಧಿಕಾರಗಳು ತಪ್ಪು ವರದಿ ಮಾಡಿರುವುದು ಬಯಲಾಗಿದೆ. ಆದ್ದರಿಂದ ಮೊದಲು ಆ ಅಧಿಕಾರಿಗಳ ತಲೆದಂಡ ಅಗಬೇಕು,4) ಸರ್ವೆ ನಂ 72 ಮತ್ತು 69ಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವದನ್ನು ಸೇರಿಕೊಂಡಂತೆ ಮಾಡಿರುವ ಅದೇಶ ಬಗ್ಗೆಯೂ ತನಿಖೆಯನ್ನು ಇದರ ಜೊತೆಗೆ ಮಾಡಲು ತಾವು ತಕ್ಷಣ ಆದೇಶ ನೀಡಬೇಕಾಗಿ ವಿನಂತಿಸಿದ್ದಾರೆ. ಸಾರಾ ಮಹೇಶ್ ಅವರಿಗಿಂತ ಮೊದಲು ನಾನು ಜಿಲ್ಲಾಧಿಕಾರಿಯವರಿಗೆ ಭೂ ಅಕ್ರಮದ ಬಗ್ಗೆ ದೂರು ನೀಡಿದ್ದೇನೆ.ಇದೊಂದೇ ಪ್ರಕರಣದ ಬಗ್ಗೆ ಏಕೆ ಇಷ್ಟೊಂದು ಮುತವರ್ಜಿ ವಹಿಸುತ್ತಿದ್ದೀರಿ? ನನ್ನ ದೂರಿಗೆ ಮೊದಲು ಪ್ರಾದನ್ಯತೆ ನೀಡಿ. ಈ ಅಕ್ರಮದ ಬಗ್ಗೆ ಧ್ವನಿ ಎತ್ತಿರುವುದು ಮೊದಲು ನಾನು.ಅವರು ಜನ ಪ್ರತಿನಿಧಿಯಾಗಿದ್ದ ಮಾತ್ರಕ್ಕೆ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅವಶ್ಯವಿಲ್ಲ.ಈ ಮೇಲ್ಕಂಡ ಎಲ್ಲ ವಿಷಯಕ್ಕೂ ತನಿಖೆಗೆ ಆದೇಶ ಮಾಡಬೇಕು. ಇದೊಂದೆ ಪ್ರಕರಣದ ಬಗ್ಗೆ ತರಾತುರಿಯಲ್ಲಿ ತನಿಖೆ ಮಾಡಿ ಕ್ಲೀನ್ ಚಿಟ್ ನೀಡಲು ತಾವುಗಳು ಪಿತೂರಿ ಮಾಡುತ್ತಿರುವ ಬಗ್ಗೆ ನನಗೆ ಅನುಮಾನ ಇದೆ. ಇದನ್ನು ನಾನು ಒಪ್ಪುವುದಿಲ್ಲ, ಆದ್ದರಿಂದ ಮರು ಪರಿಶೀಲಿಸಿ ತಕ್ಷಣ ಅದೇಶ ಮಾಡಬೇಕಾಗಿ ಕೋರಿದ್ದಾರೆ.
ಸರ್ವೆ ಕಾರ್ಯ ಮಾಡುವ ಸಂದರ್ಭದಲ್ಲಿ ದೂರುದಾರನಾದ ನನ್ನ ಸಮ್ಮುಖದಲ್ಲಿಯೇ ಸರ್ವೆ ಕಾರ್ಯ ಮಾಡಲು ಹಾಗೂ ನನಗೆ ಸದರಿ ಸರ್ವೇ ಅಳತೆಯ ಸಮಯದಲ್ಲಿ ನನಗೆ ಸೂಕ್ತ ಪೋಲಿಸ್ ಇಲಾಖೆಯಿಂದ ಬದ್ರತೆ ಒದಗಿಸಲು ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. ಗಂಗರಾಜು ಅವರು ನೀಡಿರುವ ದೂರಿನ ಅನ್ವಯ ಈ ಹಿಂದೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತನಿಖೆಗೆ ಆದೇಶ ನೀಡಿದ್ದರು. ಶುಕ್ರವಾರ ಶಾಸಕ ಸಾ.ರಾ.ಮಹೇಶ್ ಅವರ ಕಲ್ಯಾಣ ಮಂಟಪದ ಸುತ್ತಮುತ್ತ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು. ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಎಸಿ ವೆಂಕಟರಾಜು ಹಾಗೂ ತಹಸಿಲ್ದಾರ್ ರಕ್ಷಿತ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.
ʻಮೂಲ ಸರ್ವೆ, ರೀ ಸರ್ವೆ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸರ್ವೆ ಮಾಡುತ್ತಿದ್ದೇವೆ. 11 ಜನರ ತಂಡ ಈ ಕಾರ್ಯದಲ್ಲಿ ಪಾಲ್ಗೊಂಡಿದೆ. ಸರ್ವೆ ಮುಗಿದ ಮೇಲೆ ಅದರ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಿದ್ದೇವೆ ಎಂದು ಸರ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಪತ್ರಿಕಾ ಗೋಷ್ಟಿ ನಡೆಸಿದ ಮಾಜಿ ಸಚಿವ ಹೆಚ್ವಿಶ್ವನಾಥ್ ಪ್ರಾದೇಶಿಕ ಆಯುಕ್ತರು ಮತ್ತು ಸಾರಾ ಮಹೇಶ್ ನಡುವೆ ಒಳ ಒಪ್ಪಂದವಾಗಿದೆ ಎಂದು ಅರೋಪಿಸಿದ್ದಾರೆ. ಈ ಭೂ ಹಗರಣವು ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗಿದೆ. ಮುಂದೆ ಎಲ್ಲಿಗೆ ನಿಲ್ಲುತ್ತೋ ಕಾದು ನೋಡಬೇಕಷ್ಟೆ.