• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮೋದಿಗೆ ಕಾಡುತ್ತಿರುವ ನೆಹರೂ ಭೂತ ಭಾಗ – ೧

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
July 14, 2022
in ಅಭಿಮತ
0
ಮೋದಿಗೆ ಕಾಡುತ್ತಿರುವ ನೆಹರೂ ಭೂತ ಭಾಗ – ೧
Share on WhatsAppShare on FacebookShare on Telegram

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಜ್ಜೆ ಹೆಜ್ಜೆಗೆ ಕಾಡುತ್ತಿರುವುದು ನೆಹರೂ ಭೂತ ಎನ್ನುವುದು ಅನೇಕ ವೇಳೆ ಮೋದಿ ಮಾಡಿದ ಭಾಷಣಗಳೇ ರುಜುವಾತು ಪಡಿಸುತ್ತವೆ. ದಿಲ್ಲಿಯ ಇನ್ಸ್ಟಿಟ್ಯೂಟ್ ಆಫ್  ಸೋಷಲ್ ಸಾಯ್ನ್ಸ್ ನ ಸೀನಿಯರ್ ಫೆಲೊ ಆಗಿರುವ ಪಾರ್ಥ್ ಎಸ್ ಘೋಶ್ ಅವರು ಸ್ಕ್ರೋಲ್.ಇನ್ ವೆಬ್ ಜರ್ನಲ್ಲಿಗೆ ಇತ್ತೀಚಿಗೆ ಬರೆದ ಅಂಕಣದಲ್ಲಿ ಈ ಕುರಿತು ವಿಸ್ತ್ರತವಾಗಿ ಚರ್ಚಿಸಿದ್ದಾರೆ. ಈ ಲೇಖನದಲ್ಲಿ ಪ್ರತಿ ಕ್ಷಣವು ನೆಹರೂರನ್ನು ದೂಷಿಸುವ ಮೋದಿಯ ದ್ವೇಷಪೂರ್ಣ ಮನಸ್ಥಿತಿˌ  ಅಪೂರ್ಣ ಜ್ಞಾನ ಮತ್ತು ಪೂರ್ವಾಗ್ರಹಗಳ ಕುರಿತು ಪಾರ್ಥ ಅವರು ಬೆಳಕು ಚೆಲ್ಲಿದ್ದಾರೆ. ಸಂಘದ ಆಜ್ಞಾಧಾರಕನಾಗಿರುವ ಮೋದಿಗೆ ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯವಾಗಲಿˌ ಘನತೆಪೂರ್ಣ ವ್ಯಕ್ತಿತ್ವವಾಗಲಿ ಇಲ್ಲದಿರುವ ಕುರಿತು ಈ ಅಂಕಣ ಪರಿಪರಿಯಾಗಿ ವಿವರಿಸುತ್ತದೆ.

ADVERTISEMENT

ಜವಾಹರಲಾಲ್ ನೆಹರು ನಿಧನರಾದ ೧೯೬೪ ರಲ್ಲಿ ನರೇಂದ್ರ ಮೋದಿ ಹದಿನಾಲ್ಕು ವರ್ಷದ ಪಡ್ಡೆ ಹುಡುಗ. ನೆಹರು ಅವರು ಈ ಸಂಕೀರ್ಣ ಸಂಸ್ಕೃತಿಯ ಭಾರತ ದೇಶಕ್ಕೆ ಯಾವ ರೀತಿಯಲ್ಲಿ ಆಡಳಿತ ನೀಡಿದರು ಎಂದು ಅರ್ಥಮಾಡಿಕೊಳ್ಳಲು ಮೋದಿಯವರಿಗೆ ಸಾಧ್ಯವಾಗಲಾರದು ಹಾಗು ಅರ್ಥ ಮಾಡಿಕೊಳ್ಳುವ ಅರ್ಹತೆಯೂ ಅವರಿಗಿಲ್ಲ. ದೇಶದ ಮೊದಲ ಪ್ರಧಾನಿಯಾಗಿ ನೆಹರು ಎದುರಿಸಿದ ಮೂಲಭೂತ ಸವಾಲುಗಳ ಬಗ್ಗೆಯಾಗಲಿ ಅಥವಾ ಒಂದು ದೇಶವನ್ನು ಆರಂಭದಲ್ಲಿ ಸಧೃಡವಾಗಿ ಕಟ್ಟಿದ ನಾಯಕನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಕುರಿತು ತಿಳಿದುಕೊಳ್ಳುವುದರಲ್ಲಾಗಲಿ ಮೋದಿ ಒಬ್ಬ ನಾಯಕನಾಗಿ ಹಾಗು ಒಬ್ಬ ವ್ಯಕ್ತಿಯಾಗಿ ಸಂಪೂರ್ಣವಾಗಿ ವಿಫಲವಾಗಿದ್ದಾರೆಂದು ಘೋಷ್ ಅಭಿಪ್ರಾಯ ಪಟ್ಟಿದ್ದಾರೆ. ನೆಹರೂ ಅವರು ಪ್ರಧಾನಿಯಾದ ಆರಂಭದ ವರ್ಷಗಳಲ್ಲಿನ ಸವಾಲಗಳ ಕುರಿತು ವಿವರಿಸುವ ಘೋಷ್ ವಿಭಜನೆಯ ನೆರಳಿನಲ್ಲಿ ನೆಹರು ಆಡಳಿತವು ಕಳೆದು ಹೋದದ್ದು ˌ ಆಶ್ರಯ ಮತ್ತು ಪುನರ್ವಸತಿ ಬಯಸಿ ಪಾಕಿಸ್ತಾನದಿಂದ ಬಂದ ಲಕ್ಷಾಂತರ ನಿರಾಶ್ರಿತರಿಗೆ ಸಹಾಯ ಮಾಡಿದ ನೆಹರು ಆಡಳಿತ ಅದಾಗಾಗಲೇ ತಾಂಡವವಾಡುತ್ತಿದ್ದ ರಾಷ್ಟ್ರದ ಬಡತನ ಮತ್ತು ಅಸುರಕ್ಷಿತತೆಯ ಸವಾಲನ್ನು ಎದುರಿಸಿದ್ದನ್ನು ವಿವರಿಸಿದ್ದಾರೆ. ಎರಡನೇಯ ಮಹಾಯುದ್ಧದ ದೆಶೆಯಿಂದ ರಾಷ್ಟ್ರೀಯ ಆರ್ಥಿಕತೆಯು ಅದಾಗಾಗಲೇ ಹದಗೆಟ್ಟಿತ್ತು ಎಂದು ಘೋಷ್ ವಿವರಿಸಿದ್ದಾರೆ.

ನೆಹರು ಈ ಮಹತ್ತರ ಸವಾಲುಗಳನ್ನು ಹೇಗೆ ಎದುರಿಸಿದರೆಂದು ಯುವ ನರೇಂದ್ರ ಮೋದಿಗೆ ನಿಸ್ಸಂದೇಹವಾಗಿ ಯಾವುದೇ ಸುಳಿವು ಇರಲಿಲ್ಲ. ಏಕೆಂದರೆ ದೇಶವು ಜಾತ್ಯಾತೀತˌ ಪ್ರಜಾತಂತ್ರ ರಾಷ್ಟ್ರವಾಗದೆ ಹಿಂದೂ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದ ಸಂಕುಚಿತ ಚಿಂತನೆಯ ಜನರ ಗುಂಪಿನಿಂದ ಪ್ರಭಾವಿತನಾಗಿದ್ದ ಹಾಗು ನೆಹರು ದ್ವೇಷಿಗಳ ಸಹವಾಸದಲ್ಲಿದ್ದ ಯುವ ಮೋದಿಗೆ ಇಂತಹ ಗಹನ ಸಂಗತಿಗಳು ಅರ್ಥವಾಗುತ್ತಲೂ ಇರಲಿಲ್ಲ. ನೆಹರು ಅವರು ಆಡಳಿತ ನಡೆಸಲು ಪಟ್ಟ ಕಷ್ಟಗಳ ಬಗ್ಗೆ ಮೋದಿಯವರಿಗೆ ಅರ್ಥವಾಗದಿರಲು ಅವರಿಗಿರುವ ಶೈಕ್ಷಣಿಕ ಹಿನ್ನೆಲೆಯ ಕೊರತೆಯೂ ಕಾರಣವಾಗಿರಬಹುದು. ಏಕೆಂದರೆˌ ನಮಗೆಲ್ಲ ತಿಳಿದಿರುವ ಪ್ರಕಾರ, ಬಡ ಕೌಟುಂಬಿಕ ಪರಿಸ್ಥಿತಿಯು ಯುವಕ ಮೋದಿ ತನ್ನ ತಂದೆಯೊಂದಿಗೆ ರೈಲು ನಿಲ್ದಾಣದಲ್ಲಿ ಚಹಾ ಮಾರಿ ಜೀವನ ಸಾಗಿಸುವಂತೆ ಮಾಡಿತ್ತು ಎನ್ನುವುದು ಅವರ ಮಾತುಗಳಿಂದಲೇ ತಿಳಿಯಬಹುದಾಗಿದೆ. ಮೋದಿ ೨೦೦೧ ರಲ್ಲಿ ಅನಿರಿಕ್ಷಿತವಾಗಿ ಗುಜರಾತಿನ ಮುಖ್ಯಮಂತ್ರಿಯಾಗಿ ರಾಜಕೀಯ ಅಧಿಕಾರವನ್ನು ಚಲಾಯಿಸಲು ಪ್ರಾರಂಭಿಸುವ ವೇಳೆಗೆ, ನೆಹರು ಅವರ ಭೂತವು ೩೭ ವರ್ಷಗಳ ಕಾಲ ಸುಪ್ತವಾಗಿ ಮೋದಿ ಮನಸ್ಸಿನಲ್ಲಿ ಅವಿತು ಕುಳಿತಿತ್ತು ಎನ್ನುತ್ತಾರೆ ಘೋಷ್ ಅವರು.

*ನೆಹರೂ ಭೂತ ಮೋದಿಯನ್ನೇ ಏಕೆ ಕಾಡುತ್ತಿದೆ?*

ಘೋಷ್ ಅವರು ಈ ಕುರಿತು ಲಘು ಹಾಸ್ಯದಿಂದ ಹೀಗೆ ಬರೆಯುತ್ತಾರೆ: ಒಂದು ಭೂತಕ್ಕೆ ಸಹಜವಾಗಿ ೩೭ ವರ್ಷಗಳು ತನ್ನ ಕಿಡಿಗೇಡಿತನದ ವೃತ್ತಿಜೀವನ ಪ್ರಾರಂಭಿಸಲು ಉತ್ತಮ ವಯಸ್ಸು. ನಮ್ಮ ಬಾಲ್ಯದಲ್ಲಿ, ಕಲ್ಕತ್ತಾದ ಹಳೆಯ ಮಹಲುಗಳಲ್ಲಿ ಲಾರ್ಡ್ ಕ್ಲೈವ್‌ನ ಅಥವಾ ಲಾರ್ಡ್ ವೆಲ್ಲೆಸ್ಲಿಯ ಭೂತಗಳ ಚೇಷ್ಟೆಯ ಕುರಿತು ಅನೇಕ ಕಥೆಗಳನ್ನು ನಾವು ಬಂಗಾಳಿಯಲ್ಲಿ ಕೇಳಿದ್ದೇವೆ. ಆದರೆ ನೆಹರು ಅವರ ಭೂತ ಮಾತ್ರ ಬೇರೆ ಎಲ್ಲರನ್ನು ಬಿಟ್ಟು ನರೇಂದ್ರ ಮೋದಿಯವರನ್ನೇ ಏಕೆ ಆರಿಸಿಕೊಂಡಿದೆ ಎನ್ನುವ ಪ್ರಶ್ನೆ ಹಾಗೆಯೇ ಉಳಿದು ಬಿಡುತ್ತದೆ. ಇದೆಲ್ಲದರ ನಂತರ, ನೆಹರು ಅವರು ತಮ್ಮ ಆಡಳಿತಾವಧಿಯಲ್ಲಿ ಚಿಂತಿಸಬಹುದಾಗಿದ್ದ ಹಲವಾರು ಸಂಭಾವ್ಯ ವಿಷಯಗಳನ್ನು ಹೊಂದಿದ್ದರು. ಅವುಗಳಲ್ಲಿ ಪ್ರತಿಯೊಂದು ಸಂಗತಿಗಳೂ ಕೂಡ ಪ್ರಧಾನಿಯಾಗಿ ಇಂದು ಮೋದಿ ಚಿಂತಿಸುವುದಕ್ಕಿಂತ ಯಾವುದೇ ರೀತಿಯಲ್ಲೂ ಅವು ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿರಲಿಲ್ಲ ಎನ್ನುತ್ತಾರೆ ಘೋಷ್ ಅವರು.

ಮೋದಿಯವರಿಗಿಂತ ಮೊದಲು ಭಾರತದಲ್ಲಿ ಆರು ಜನ ಕಾಂಗ್ರೆಸ್ಸೇತರ ಹಾಗು ಬಿಜೆಪಿಯೇತರ ಪ್ರಧಾನ ಮಂತ್ರಿಗಳು ಆಗಿ ಹೋಗಿದ್ದಾರೆ. ಅವರೆಂದರೆ ಮೊರಾರ್ಜಿ ದೇಸಾಯಿ, ಚೌಧರಿ ಚರಣ್ ಸಿಂಗ್, ವಿಪಿ ಸಿಂಗ್, ಚಂದ್ರಶೇಖರ್ ಸಿಂಗ್, ಐಕೆ ಗುಜ್ರಾಲ್ ಮತ್ತು ಎಚ್ ಡಿ ದೇವೇಗೌಡ. ನಾವು ಪಿವಿ ನರಸಿಂಹರಾವ್ (೧೯೯೧-೯೬) ಅವರನ್ನೂ ಸಹ ಈ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ರಾವ್ ಅವರು ಕಾಂಗ್ರೆಸ್ಸಿಗರಾಗಿದ್ದರೂ, ನೆಹರು ಕುಟುಂಬˌˌ ಮುಖ್ಯವಾಗಿ ಅವರ ಮೊಮ್ಮಗ ರಾಜೀವ್ ಗಾಂಧಿ ಹಾಗು ಅವರ ವಿಧವಾ ಪತ್ನಿ ಸೋನಿಯಾ ಗಾಂಧಿಯವರ

ಕಣ್ಣಿಗೆ ಮಣ್ಣೆರಚುತ್ತಿದ್ದರು ಎನ್ನುತ್ತಾರೆ ಘೋಷ್ ಅವರು. ಸೋನಿಯಾ ಗಾಂಧಿ ಅಂದು ಹಳೆಯದಾದ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಕೊಳ್ಳದಂತೆ ರಾವ್ ಮಾಡುತ್ತಿದ್ದ ಹುನ್ನಾರಗಳು ಯಾವ ಕಾಂಗ್ರೆಸ್ಸೇತರರಿಗೂ ಕಡಿಮೆ ಇರಲಿಲ್ಲ ಎನ್ನುವುದನ್ನು ರಾವ್ ಆಡಳಿತ ಕಾಲ ನೋಡಿದವರಿಗೆ ಗೊತ್ತಿರುವ ಸಂಗತಿಯಾಗಿದೆ. ನರಸಿಂಹರಾವ್ ಬಿಜೆಪಿಯ ಉಜ್ವಲ ಭವಿಷ್ಯಕ್ಕಾಗಿ ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದು ನಾವೆಲ್ಲ ನೋಡಿದ್ದೇವೆ.

ಮೋದಿಗಿಂತ ಪೂರ್ವದಲ್ಲಿ ಅಂದರೆ ೧೯೯೮ ರಿಂದ ೨೦೦೪ರ ವರೆಗೆ ಆಡಳಿತ ನಡೆಸಿದ ಭಾರತದ ಏಕೈಕ ಬಿಜೆಪಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ನೆಹರು ಅವರ ಭೂತ ತುಂಬಾ ವಿಚಿತ್ರವಾಗಿ ಕಾಡದೆ ಉಳಿಸಿದೆ ಎಂದಿದ್ದಾರೆ ಘೋಷ್ ಅವರು. ಆದರೆˌ ಅದರ ಬದಲಿಗೆ, ನೆಹರು ಅವರೊಂದಿಗಿನ ತಮ್ಮ ತಾರುಣ್ಯದ ದಿನಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವ ಅವಕಾಶವನ್ನು ವಾಜಪೇಯಿ ಅಪರೂಪವಾಗಿ ಕಳೆದುಕೊಂಡರು. ಆ ಸಮಯದಲ್ಲಿ, ಅವರು ಉದಯೋನ್ಮುಖ ಜನಸಂಘದ ನಾಯಕರಾಗಿದ್ದು ಉತ್ತರ ಪ್ರದೇಶದ ಬಲರಾಮ್‌ಪುರ ಕ್ಷೇತ್ರದಿಂದ ಎರಡನೇ ಲೋಕಸಭೆಯಲ್ಲಿ (೧೯೫೭-೬೨) ಜನಸಂಘದ ಸಂಸದರಾದವರು.

೧೯೬೨ ರಲ್ಲಿ ಭಾರತವು ಚೀನಾ ವಿರುದ್ಧ ಸೋತ ನಂತರ ನೆಹರು ಅವರ ಇಮೇಜ್ ಡ್ಯಾಮೇಜ್ ಆಗಿದ್ದ ನಂತರವೂ, ವಾಜಪೇಯಿ ಅವರು ನೆಹರು ಅವರ ನಿಷ್ಠಾವಂತ ವಿಮರ್ಶಕರಾಗಿದ್ದರು. ನೆಹರು ಅವರನ್ನು ರಾಜಕೀಯವಾಗಿ ಟೀಕಿಸುತ್ತಿದ್ದರೂ ನೆಹರು ಕುರಿತ ಅವರ ನಿಲುವು ಮನುಷ್ಯನ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿರಲಿಲ್ಲ. ನೆಹರು ಅವರ ನಿಧನದ ಬಗ್ಗೆ ವಾಜಪೇಯಿ ಅವರು ಹೇಳಿದ್ದು ಹೀಗೆ: “ಭಾರತ ಮಾತೆ ಇಂದು ದುಃಖದಲ್ಲಿ ಮುಳುಗಿದ್ದಾಳೆˌ ಅವಳು ತನ್ನ ನೆಚ್ಚಿನ ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ. ಮಾನವೀಯತೆ ಇಂದು ದುಃಖಕ್ಕೀಡಾಗಿದೆˌ ಅದು ತನ್ನ ಪರಮ ಭಕ್ತನನ್ನು ಕಳೆದುಕೊಂಡಿದೆ. ಶಾಂತಿ ಇಂದು ಪ್ರಕ್ಷುಬ್ಧವಾಗಿದೆˌ ಅದರ ರಕ್ಷಕ ಇನ್ನಿಲ್ಲ. ದೀನದಲಿತರು ತಮ್ಮ ಆಶ್ರಯವನ್ನು ಕಳೆದುಕೊಂಡಿದ್ದಾರೆ. ಜನಸಾಮಾನ್ಯರು ತಮ್ಮ ಕಣ್ಣಿನಲ್ಲಿರುವ ಬೆಳಕನ್ನು ಕಳೆದುಕೊಂಡಿದ್ದಾರೆ. ತೆರೆ ಬಿದ್ದಿದೆˌ ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿ ರಾಮನ ಕುರಿತು ಹೇಳಿದ್ದ ಅಸಾಧ್ಯಗಳನ್ನು ನೆಹರು ಒಟ್ಟಿಗೆ ತಂದರು. ಪಂಡಿತ್‌ಜಿಯವರ ಜೀವನದಲ್ಲಿ, ಆ ಮಹಾಕವಿ ಏನು ಹೇಳಿದ್ದಾರೆ ಎಂಬುದರ ಒಂದು ಝಲಕ್ ಅನ್ನು ನಾವು ನೋಡಬೇಕು. ಅವರು ಶಾಂತಿಯ ಭಕ್ತರಾಗಿದ್ದರು ಮತ್ತು  ಹಾಗೆಯೇ ಕ್ರಾಂತಿಯ ಮುಂಚೂಣಿಯಲ್ಲೂ ಇದ್ದರು. ಅವರು ಅಹಿಂಸೆಯ ಭಕ್ತರಾಗಿದ್ದರು ಆದರೆ ಸ್ವಾತಂತ್ರ್ಯ ಮತ್ತು ಗೌರವವನ್ನು ರಕ್ಷಿಸಲು ಪ್ರತಿ ಅಸ್ತ್ರವನ್ನು ಪ್ರತಿಪಾದಿಸಿದರು. ಘೋಷ ಅವರು ತಮ್ಮ ಅಂಕಣದಲ್ಲಿ  ವಾಜಪೇಯಿ ನೆಹರು ಕುರಿತು ಹೊಂದಿದ್ದ ಸದಾಭಿಪ್ರಾಯವನ್ನು ಉಲ್ಲೇಖಿಸುವ ಮೂಲಕ ಮೋದಿಯ ಸಂಕುಚಿತ ಮನಸ್ಥಿತಿಯ ಅನಾವರಣ ಮಾಡಿದ್ದಾರೆ.

ಇವೆಲ್ಲ ಬೆಳವಣಿಗೆಗಳು ಸ್ವಾಭಾವಿಕವಾಗಿ ನಮ್ಮಲ್ಲಿ ಸರಳವಾದ ಕುತೂಹಲವನ್ನು ಹುಟ್ಟುಹಾಕುತ್ತವೆ: ಮೋದಿ ಏಕೆ ಅಂತಹ ರೋಗಗ್ರಸ್ತ ಉತ್ಸಾಹದಿಂದ ನೆಹರು ಅವರನ್ನು ಟೀಕಿಸುತ್ತಾರೆ? ಮೋದಿಯವರು ನಮಗೆ ಇದಕ್ಕೆ ಉತ್ತರ ನೀಡುವುದಿಲ್ಲ ಎಂದು ನಾವು ಬಲ್ಲೆವು. ಇಲ್ಲಿ ನಾವು ಕೆಲವು ಅಪಾಯಕಾರಿ ಊಹೆಗಳ ಆಧಾರದಲ್ಲಿ ಮಾತ್ರ ಚರ್ಚಿಸಬಹುದು ಎನ್ನುತ್ತಾರೆ ಘೋಷ್. 

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಚೀನಾದ ಓಪ್ಪೊ ಮೊಬೈಲ್ ಕಂಪನಿಯಿಂದ 4390 ಕೋಟಿ ರೂ. ಸುಂಕ ವಂಚನೆ!

Next Post

ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಅಭ್ಯರ್ಥಿಯ ನಾಮನಿರ್ದೇಶನ ಸಕಾರಾತ್ಮಕ ಹೆಜ್ಜೆ: ದಲಿತ ಚಿಂತಕ ಕಾಂಚ ಐಲಯ್ಯ | ಭಾಗ-1

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಅಭ್ಯರ್ಥಿಯ ನಾಮನಿರ್ದೇಶನ ಸಕಾರಾತ್ಮಕ ಹೆಜ್ಜೆ: ದಲಿತ ಚಿಂತಕ ಕಾಂಚ ಐಲಯ್ಯ | ಭಾಗ-1

ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಅಭ್ಯರ್ಥಿಯ ನಾಮನಿರ್ದೇಶನ ಸಕಾರಾತ್ಮಕ ಹೆಜ್ಜೆ: ದಲಿತ ಚಿಂತಕ ಕಾಂಚ ಐಲಯ್ಯ | ಭಾಗ-1

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada