ಬಾಗಲಕೋಟೆ : ಬಿಜೆಪಿ ಸರ್ಕಾರ ಎಂದಿಗೂ ಸಂವಿಧಾನದ ಆಶಯದಂತೆ ಕೆಲಸ ಮಾಡಿದೆಯೇ ಹೊರತು ಬೇಕಾಬಿಟ್ಟಿ ಕೆಲಸವನ್ನು ಎಂದಿಗೂ ಮಾಡಿಲ್ಲ ಅಂತಾ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕ್ತೀವಿ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾವು 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಯಾವುದೇ ರೀತಿಯ ಅನ್ಯಾಯ ಆಗದಂತೆ ಮೀಸಲಾತಿ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮಾಜದವರು ಮೀಸಲಾತಿ ಕೇಳ್ತಿದ್ದರು. ಅವರಿಗೆ ಮೀಸಲಾತಿ ಕೊಟ್ಟಿದ್ದು ಮಾತ್ರವಲ್ಲದೇ 2 ಪರ್ಸೆಂಟ್ ಹೆಚ್ಚು ಮಾಡಿದ್ದೇವೆ. ಮೀಸಲಾತಿ ಕೇಳಿದ ಒಕ್ಕಲಿಗ ಸಮಾಜದವರಿಗೂ 2 ಪರ್ಸೆಂಟ್ ಹೆಚ್ಚು ಮಾಡಿದ್ದೇವೆ. ಪ್ರತಿಯೊಂದನ್ನು ನಾವು ಸಂವಿಧಾನದ ಅಡಿಯಲ್ಲಿ ಮಾಡಿದ್ದೇವೆ. ಆದರೆ ಈ ಕಾಂಗ್ರೆಸ್ನವರು ಜನರನ್ನು ಮಿಸ್ಗೈಡ್ ಮಾಡ್ತಿದ್ದಾರೆ ಎಂದು ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಮೀಸಲಾತಿ ಅವೈಜ್ಞಾನಿಕ ಅಂತಾ ಕಾಂಗ್ರೆಸ್ನವರು ಹೇಳುತ್ತಾರೆ. ಐವತ್ತು ವರ್ಷ ಆಡಳಿತ ನಡೆಸುವಾಗ ಮೀಸಲಾತಿಯನ್ನು ವೈಜ್ಞಾನಿಕ ಮಾಡಬೇಕಿತ್ತು. ನಿಮಗೆ ಯಾರಾದರೂ ಮಾಡಬೇಡಿ ಅಂತಾ ಹೇಳಿದ್ರಾ..? ಇಂದು ಬಿಜೆಪಿ ಮೀಸಲಾತಿ ಮಾಡಿದೆ ಅಂತಾ ಕಾಂಗ್ರೆಸ್ ಮೊಸರಿನಲ್ಲಿ ಕೆಸರು ಹುಡುಕುವ ಕೆಲಸ ಮಾಡ್ತಿದೆ ಅಂತಾ ಗೋವಿಂದ ಕಾರಜೋಳ ಗುಡುಗಿದ್ದಾರೆ.
9 ವರ್ಷಗಳ ಅವಧಿಯಲ್ಲಿ ದೇಶದ ಜನತೆಗೆ ಲೆಕ್ಕವಿಡಲು ಸಾಧ್ಯವಾಗದಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಇದನ್ನೆಲ್ಲ ನೋಡಿ ಹೊಟ್ಟೆಯುರಿಯಲ್ಲಿ ಕಾಂಗ್ರೆಸ್ ಈ ಎಲ್ಲಾ ಆರೋಪಗಳನ್ನು ಮಾಡ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.