ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ 5 ವರ್ಷದ ಬಾಲಕ ಅಮ್ಮನ ತೋಳಿನಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಜಬಲ್ಪುರ್ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಈ ದುರಂತ ಸಂಭವಿಸಿದ್ದು, ವೈದ್ಯರು ಬಂದು ನೋಡದ ಕಾರಣ ಅಸ್ವಸ್ಥಗೊಂಡಿದ್ದ ಸಂಜಯ್ ಪಾಂಡ್ರೆ ಅವರ ಪುತ್ರ ರಿಷಿ ಮೃತಪಟ್ಟ ಮಗು.
ಅಸ್ವಸ್ಥಗೊಂಡಿದ್ದ ಮಗನನ್ನು ಹೊತ್ತು ಕೂತಿದ್ದ ತಾಯಿ ಅಸಹಾಯಕಳಾಗಿ ಚಿಕಿತ್ಸೆಯನ್ನು ಎದುರು ನೋಡುತ್ತಿದ್ದರು. ಗಂಟೆಗಟ್ಟಲೆ ಆಸ್ಪತ್ರೆ ಮುಂದೆ ಕಾಯುತ್ತಿದ್ದರೂ ಒಬ್ಬ ವೈದ್ಯರಾಗಲಿ, ಆಸ್ಪತ್ರೆ ಸಿಬ್ಬಂದಿ ಆಗಲಿ ಬಂದು ನೋಡಲಿಲ್ಲ.
ಮಧ್ಯಪ್ರದೇಶದಲ್ಲಿ ಕಳಪೆ ವೈದ್ಯ ಸೇವೆ ಬಗ್ಗೆ ಪದೇಪದೆ ದೂರುಗಳು ಬರುತ್ತಲೇ ಇದ್ದು, ಈ ಬಾರಿ ಮಗುವನ್ನು ಬಲಿ ಪಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕರ್ತವ್ಯನಿರತ ವೈದ್ಯರನ್ನು ಯಾಕೆ ಚಿಕಿತ್ಸೆ ನೀಡಲಿಲ್ಲ ಅಥವಾ ಮಗುವಿನ ಪರಿಸ್ಥಿತಿಯನ್ನು ಯಾಕೆ ಗಮನಿಸಲಿಲ್ಲ ಎಂದು ಪ್ರಶ್ನಿಸಿದರೆ, ಅಂದು ಅವರ ಪತ್ನಿ ಉಪವಾಸ ಇದ್ದಳು. ಹಾಗಾಗಿ ಆಸ್ಪತ್ರೆಗೆ ಬರುವುದು ತಡವಾಯಿತು ಎಂದು ಹಾರಿಕೆಯ ಉತ್ತರ ಬಂದಿದೆ.
ಕಳೆದ ವಾರವಷ್ಟೇ ವೈದ್ಯ ದಂಪತಿ ಅಕ್ರಮವಾಗಿ 70 ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಬದಲು ಪಕ್ಕದ ಹೋಟೆಲ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದರು.