ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ‘ಕಾನೂನುಬಾಹಿರ ಇಂಟರ್ನೆಟ್ ನಡವಳಿಕೆ ಮತ್ತು ಸೈಬರ್ ಅಪರಾಧಗಳಿಗೆ’ ದಂಡ ವಿಧಿಸಲು ‘ಕಠಿಣ ಕಾನೂನು’ ಜಾರಿಗೆ ತರಲು ಕರೆ ನೀಡಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ 25 ನೇ ಅಖಿಲ ಭಾರತ ವಿಧಿವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರು, ಸೋಶಿಯಲ್ ಮೀಡಿಯಾ ಪ್ಲಾಟ್ಫಾರಂಗಳು ಮತ್ತು ಸೈಬರ್ಸ್ಪೇಸ್ನಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನದ 19 ನೇ ಪರಿಚ್ಛೇದದ ಅಡಿಯಲ್ಲಿ ನೀಡಲಾಗಿರುವ ಸ್ವಾತಂತ್ರಕ್ಕಿಂತ ‘ದೊಡ್ಡದಲ್ಲ’ ಎಂದು ಹೇಳಿದ್ದಾರೆ.
“ತಂತ್ರಜ್ಞಾನಗಳು ಹೊಸ ರೀತಿಯ ಅಸ್ತ್ರಗಳಾಗಿದ್ದು ಅಪರಾಧ ಎಸಗುವಲ್ಲಿನ ವಿಧಾನದಲ್ಲಿ ಬದಲಾವಣೆಗಳಾಗಿವೆ” ಎಂದು ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ. “ಕಳೆದ ದಶಕದಲ್ಲಿ ಇಂಟರ್ನೆಟ್ ಬಳಕೆದಾರರ ಅಸಾಮಾನ್ಯ ಏರಿಕೆಗೆ ನಾವು ಸಾಕ್ಷಿಯಾಗಿದ್ದೇವೆ. ವ್ಯಕ್ತಿಗಳ ಗೌಪ್ಯತೆ ಸೇರಿದಂತೆ ನಾಗರಿಕ ಮತ್ತು ಮಾನವ ಹಕ್ಕುಗಳನ್ನು ದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸಲು ಸೈಬರ್ಸ್ಪೇಸ್ ಅನ್ನು ಬಳಸಲಾಗುತ್ತಿದೆ. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಸೈಬರ್ ಅಪರಾಧಗಳ ವಿರುದ್ಧ ಹೋರಾಡುವಲ್ಲಿ ಸೈಬರ್ ಸುರಕ್ಷತೆಯು ಅತ್ಯಂತ ಪ್ರಾಮುಖ್ಯತೆ ಉಳ್ಳದ್ದಾಗಿದೆ” ಎಂದೂ ಅವರು ಹೇಳಿದ್ದಾರೆ.

ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಸೈಬರ್ ಉದ್ದೇಶಿತ ದಾಳಿಗಳನ್ನು ಸಮರ್ಥವಾಗಿ ಎದುರಿಸುವ ವಿಚಾರದಲ್ಲಿ ಭಾರತವು ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದು ಎಂಬುವುದನ್ನು ಗೃಹ ವ್ಯವಹಾರಗಳ ಸಚಿವಾಲಯದ ಪೋರ್ಟಲೇ ತೋರಿಸುತ್ತದೆ ಎಂದು ಮಾಜಿ ನ್ಯಾಯಾಧೀಶರು ವಿಷಾದ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಭಾರತದಲ್ಲಿ ಕೆಳಸ್ತರದಲ್ಲಿರುವ ಜನಗಳೇ ಹೆಚ್ಚಾಗಿ ಕಳ್ಳತನ ಮತ್ತು ವಂಚನೆಗಳಂತಹ ಸೈಬರ್ ಅಪರಾಧಗಳಿಗೆ ಗುರಿಯಾಗುತ್ತಾರೆ ಎಂದೂ ಅವರು ಹೇಳಿದ್ದಾರೆ
“ಕಾನೂನುಬಾಹಿರ ಇಂಟರ್ನೆಟ್ ನಡವಳಿಕೆ ಮತ್ತು ಸೈಬರ್ ಅಪರಾಧಗಳಿಗೆ ದಂಡ ವಿಧಿಸಲು ಮತ್ತು ಶಿಕ್ಷಿಸಲು ಸೈಬರ್-ನಡಾವಳಿ ಮತ್ತು ಕಟ್ಟುನಿಟ್ಟಾದ ಶಾಸನವನ್ನು ಸರ್ಕಾರವು ಉತ್ತೇಜಿಸುವುದು ಅಗತ್ಯವಾಗಿದೆ. ಹೊಸ ರೀತಿಯ ಅಪರಾಧಗಳ ಆಗಮನದೊಂದಿಗೆ ಸೈಬರ್ ಅಪರಾಧಗಳನ್ನು ಎದುರಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಕಾನೂನನ್ನು ಅನೇಕ ದೇಶಗಳು ತಿದ್ದುಪಡಿ ಮಾಡಿವೆ. ಹೆಚ್ಚಿನ ಗಣಕೀಕೃತ ವಿಧಿವಿಜ್ಞಾನ ಪ್ರಯೋಗಾಲಯಗಳು, ಮಾಹಿತಿ ತಂತ್ರಜ್ಞಾನದ ಮೇಲಿನ ಕೇಂದ್ರಗಳು, ಭದ್ರತಾ ಶಿಕ್ಷಣ ಮತ್ತು ತರಬೇತಿ ತನಿಖಾಧಿಕಾರಿಗಳು, ವಕೀಲರು ಮತ್ತು ನ್ಯಾಯಾಧೀಶರ ಅಗತ್ಯ ದೇಶಕ್ಕಿದೆ ”ಎಂದು ಅವರು ಹೇಳಿದ್ದಾರೆ.
ವಿಶ್ವಾದ್ಯಂತ ಮಾನವ ಹಕ್ಕುಗಳ ಗುರುತಿಸುವಿಕೆ ಮತ್ತು ಸಂರಕ್ಷಣೆಗೆ ನ್ಯಾಯ ವಿಜ್ಞಾನವು ಅತ್ಯಗತ್ಯ ಎಂದು ಒತ್ತಿಹೇಳುತ್ತಾ “ವಿಧಿ ವಿಜ್ಞಾನವು ಭಾರತದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದಷ್ಟು ಹಿಂದಿನದು, ಸುಮಾರು 2,300 ವರ್ಷಗಳ ಹಿಂದೆ ಬರೆಯಲಾಗಿರುವ ‘ತಾರಿಜಾ’ ಎಂದು ಕರೆಯಲ್ಪಡುವ ಹಸ್ತಮುದ್ರೆಗಳನ್ನು ಸಹಿಯ ಇನ್ನೊಂದು ರೂಪವೆಂದು ಪರಿಗಣಿಸಲಾಗಿದೆ. ಫಿಂಗರ್ಪ್ರಿಂಟ್ನ ಮೂಲಕ ಮಾಡುವ ಗುರುತಿಸುವಿಕೆ ಎಂದಿಗೂ ತಪ್ಪಾಗುವುದಿಲ್ಲ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ” ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.






