(ಕೃಪೆ – ಸಮಾಜಮುಖಿ ಆಗಸ್ಟ್ 2026)
2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಮಿತ್ರಪಕ್ಷಗಳ ಮೂಲ ಮಂತ್ರ ಅಧಿಕಾರ ಕೇಂದ್ರಗಳ ಮತ್ತು ಸಾಂವಿಧಾನಿಕ ಸಂಸ್ಥೆಗಳ ಕೇಂದ್ರೀಕರಣ. ಈ ಮಹದಾಶಯಕ್ಕೆ ಪೂರಕವಾಗಿ ಆರ್ಥಿಕತೆ, ಶಿಕ್ಷಣ, ಆರೋಗ್ಯ ಮತ್ತಿತರ ಎಲ್ಲ ಸಾಂವಿಧಾನಿಕ ನಿಬಂಧನೆಗಳನ್ನೂ ಕೇಂದ್ರೀಕರಣಗೊಳಿಸುವುದು ನರೇಂದ್ರ ಮೋದಿ ಆಳ್ವಿಕೆಯ ಮೂಲ ಆಡಳಿತ ನೀತಿ. ಉನ್ನತ ಶಿಕ್ಷಣದ ಯುಜಿಸಿ (UGC)ಯನ್ನೂ ಒಳಗೊಂಡಂತೆ, NCEŖT ಸಂಸ್ಥೆಯನ್ನೂ ಈಗಾಗಲೇ ಈ ಪರಿಧಿಯಲ್ಲಿ ಒಳಪಡಿಸಿರುವ ಕೇಂದ್ರ ಸರ್ಕಾರ ಶಿಕ್ಷಣ ವಲಯದ ಕಾರ್ಪೋರೇಟೀಕರಣವನ್ನು ತೀವ್ರಗೊಳಿಸುತ್ತಿರುವಾಗಲೇ, ಶಿಕ್ಷಣಾರ್ಥಿಗಳನ್ನು ಈ ಮಾರುಕಟ್ಟೆ ಸಾಂಸ್ಥೀಕರಣದ ಅಕ್ಷರ ಸರಕುಗಳಾಗಿ ಪರಿವರ್ತಿಸುತ್ತಿದೆ. ಈ ಎರಡೂ ನೀತಿಗಳ ಸಮ್ಮಿಲನವನ್ನು NEET/CUET ಎಂಬ ಪ್ರವೇಶ ಪರೀಕ್ಷಾ ಪದ್ಧತಿಯಲ್ಲಿ ಕಾಣಬಹುದು.

ದೇಶದಲ್ಲಿರುವ ಒಟ್ಟು 800 ವೈದ್ಯಕೀಯ ಕಾಲೇಜುಗಳ ಪೈಕಿ ಸುಮಾರು 300 ಕಾಲೇಜುಗಳು ದಕ್ಷಿಣ ಭಾರತದಲ್ಲಿದೆ. ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿವೆ. ಇಂಜಿನಿಯರಿಂಗ್ ವಿಭಾಗದಲ್ಲಿ ಇದೇ ರಾಜ್ಯಗಳೇ ಮುಂಚೂಣಿಯಲ್ಲಿವೆ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಈ ರಾಜ್ಯಗಳಲ್ಲಿ ಕನಿಷ್ಠ ಸಂಖ್ಯೆಯ ಕಾಲೇಜುಗಳಿವೆ. ಆದರೆ ಈ ರಾಜ್ಯಗಳಲ್ಲಿ ವೈದ್ಯಕೀಯ-ಇಂಜಿನಿಯರಿಂಗ್ ಪದವಿಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದಿ ಬೆಲ್ಟ್ ಎನ್ನಲಾಗುವ ರಾಜ್ಯಗಳಲ್ಲಿ ಹಿರಿಯ ಪೀಳಿಗೆಯ ಸುಶಿಕ್ಷಿತ ಕುಟುಂಬಗಳು ತಮ್ಮ ಮಕ್ಕಳನ್ನು ವೃತ್ತಿಪರ ಶಿಕ್ಷಣಕ್ಕೆ, ಬ್ಯಾಂಕಿಂಗ್ ಮತ್ತಿತರ ಸಾರ್ವಜನಿಕ ಸಂಸ್ಥೆಗಳ ನೌಕರಿಗೆ ಕಳುಹಿಸಲು ಉತ್ಸುಕರಾಗಿರುವುದು ಕಳೆದ ಹಲವು ವರ್ಷಗಳ ಬೆಳವಣಿಗೆ.
ಈ ರಾಜ್ಯಗಳಲ್ಲಿ ಶಿಕ್ಷಣ ಪಡೆಯಲಾಗದ ಜನಸಂಖ್ಯೆ ವಲಸೆ ಕಾರ್ಮಿಕರಾಗಿ ದಕ್ಷಿಣ ಭಾರತಕ್ಕೆ ಬರುವುದು ವಾಸ್ತವ. ಏಕೆಂದರೆ ಅಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳ ಸಂಖ್ಯೆ ಕಡಿಮೆ ಇದೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತಿಲ್ಲ. ಜನಸಂಖ್ಯೆಯ ಬೆಳವಣಿಗೆಯೂ ಹೆಚ್ಚಾಗಿರುವುದರಿಂದ ಯುವ ಪೀಳಿಗೆಯ ಸುಶಿಕ್ಷಿತರನ್ನು ಉನ್ನತ ವಿದ್ಯಾಭ್ಯಾಸಕ್ಕೆ ಕಳುಹಿಸುವುದು ಸಾಮಾನ್ಯವಾಗಿದೆ. ಹಾಗಾಗಿಯೇ ಕರ್ನಾಟಕದ ಬ್ಯಾಂಕಿಂಗ್ ವಲಯದಲ್ಲಿ ಒಡಿಷಾ, ಬಿಹಾರ, ಜಾರ್ಖಂಡ್, ಛತ್ತಿಸ್ಘಡ, ಉತ್ತರ ಖಂಡ್ ಮುಂತಾದ ರಾಜ್ಯಗಳ ಯುವ ಜನಾಂಗವೇ ಹೆಚ್ಚಾಗಿ ಕಾಣುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ದೊಡ್ಡ ತೊಡಕಾಗಿರುವುದು ಡೊನೇಷನ್ ಹಾವಳಿ. ಡೊನೇಷನ್ ಕೇಂದ್ರಿತ ವೃತ್ತಿಪರ ಕಾಲೇಜುಗಳಲ್ಲೂ ಕರ್ನಾಟಕ ಮತ್ತಿತರ ದಕ್ಷಿಣ ರಾಜ್ಯಗಳೇ ಮುಂಚೂಣಿಯಲ್ಲಿವೆ.

ನೀಟ್ ಹಂಗಾಮಾ ಮತ್ತು ಹಗರಣ
2026ರ ನೀಟ್ ಪರೀಕ್ಷೆಗೆ ನೋಂದಣಿ ಮಾಡಿಸಿದ್ದ ಆಕಾಂಕ್ಷಿಗಳ ಸಂಖ್ಯೆ ವೈದ್ಯಕೀಯ ಶಿಕ್ಷಣಕ್ಕೆ 11.1 ಲಕ್ಷ, ಒಟ್ಟು ಅಭ್ಯರ್ಥಿಗಳ ಸಂಖ್ಯೆ 22.7 ಲಕ್ಷ. ಇದಲ್ಲದೆ ಪದವಿ ಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ರಾಷ್ಟ್ರೀಯ ಕೇಂದ್ರ ವಿಶ್ವವಿದ್ಯಾಲಯಗಳು, ದೆಹಲಿ ವಿವಿ, ಬನಾರಸ್ ಹಿಂದೂ ವಿವಿ, ಜೆಎನ್ಯು ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ನಡೆಸಲಾಗುತ್ತದೆ. 2026ರಲ್ಲಿ ಈ ಪ್ರವೇಶ ಪರೀಕ್ಷೆಗಳಿಗೆ ನೋಂದಣಿಯಾದ ಸಂಖ್ಯೆ 15.68 ಲಕ್ಷ. ಪ್ರತಿ ಅಭ್ಯರ್ಥಿಯೂ ಗರಿಷ್ಠ ಐದು ವಿಷಯಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಇರುವುದರಿಂದ ಒಟ್ಟು 67,56,321 ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇಲ್ಲಿ ಪರೀಕ್ಷೆ ಬರೆಯುವ ಉತ್ತರ ಭಾರತದ, ವಿಶೇಷವಾಗಿ ಹಿಂದಿ ಬೆಲ್ಟ್ ರಾಜ್ಯಗಳ ಅಭ್ಯರ್ಥಿಗಳಿಗೆ ಅರ್ಹತೆ ಪಡೆದರೂ ಕಾಲೇಜುಗಳ ಲಭ್ಯತೆ ಕಡಿಮೆ ಅಥವಾ ಡೊನೇಷನ್ ಹಾವಳಿ ಹೆಚ್ಚು.

ಈ ಆಕಾಂಕ್ಷಿಗಳಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕಾರ NEET ಮತ್ತು CUET ಪರೀಕ್ಷಾ ವಿಧಾನಗಳನ್ನು ಜಾರಿಗೆ ತಂದಿದೆ. ಇದರ ಪರಿಣಾಮ ಕರ್ನಾಟಕದ ಮೂಲೆಯಲ್ಲಿರುವ ಗ್ರಾಮದ ಒಬ್ಬ ಶಿಕ್ಷಣಾರ್ಥಿ ತನ್ನ ಸಮೀಪದ ನಗರದಲ್ಲಿರುವ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಬೇಕಾದರೆ, ರಾಷ್ಟ್ರಮಟ್ಟದಲ್ಲಿ ನಡೆಯುವ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕು. ಲಕ್ಷಾಂತರ ಅಭ್ಯರ್ಥಿಗಳೊಡನೆ ಪೈಪೋಟಿ ನಡೆಸಿ ಅರ್ಹತೆ ಸಂಪಾದಿಸಬೇಕು. ಯುವ ಜನರಿಗೆ ಇಲ್ಲಿ ಎದುರಾಗುವ ಸಮಸ್ಯೆ, ಪರೀಕ್ಷೆಯನ್ನು ಬರೆಯಲು ಬೇಕಾದ ಕ್ಷಮತೆ, ವಿಷಯ ಗ್ರಹಿಕೆ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ ಗಳಿಸಬೇಕಾದ ಉನ್ನತ ಶ್ರೇಣಿ (Ranking).
ಈ ಶ್ರೇಣೀಕರಣ ರಾಷ್ಟ್ರಮಟ್ಟದಲ್ಲಿ ನಿಷ್ಕರ್ಷೆಯಾಗುವುದರಿಂದ ಉನ್ನತ ಶ್ರೇಣಿ ಅಥವಾ ಮೇಲ್ ಸ್ತರದ ಶ್ರೇಣಿ ( Higher & Top Ranking) ಪಡೆಯಲು ಅಭ್ಯರ್ಥಿಗಳು ಅಪಾರ ಶ್ರಮ ವಹಿಸಬೇಕಾಗುತ್ತದೆ. ಇದರ ನೇರ ಪರಿಣಾಮವೇ ನಾಯಿಕೊಡೆಗಳಂತೆ ಸಣ್ಣ ಪುಟ್ಟ ಊರುಗಳಲ್ಲೂ ಹುಟ್ಟಿಕೊಂಡಿರುವ ಕೋಚಿಂಗ್ ಸೆಂಟರ್ಗಳು ಉನ್ನತ ಶಿಕ್ಷಣ ಮಾರುಕಟ್ಟೆಯನ್ನು ಪ್ರವೇಶಿಸುವ ಕ್ಷಮತೆಯನ್ನು ಮೂಡಿಸುವ ಕಾರ್ಖಾನೆಗಳಂತೆ, ಪ್ರತಿಯೊಂದು ಖಾಸಗಿ ಕಾಲೇಜಿನೊಡನೆ ಒಪ್ಪಂದ (Tie up) ಮಾಡಿಕೊಂಡಿರುತ್ತವೆ̤ ರಾಜಸ್ಥಾನದ ಕೋಟಾ ಎಂಬ ಪ್ರದೇಶ ಇಂತಹ ಒಂದು ಶೈಕ್ಷಣಿಕ ಕಾರ್ಖಾನೆಗಳ ಕೈಗಾರಿಕಾ ಎಸ್ಟೇಟ್.

ಪೇಪರ್ ಸೋರಿಕೆಯ ಭ್ರಷ್ಟ ಕೂಪ
ಅಖಿಲ ಭಾರತ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವುದಕ್ಕೆ ಕಾರಣಗಳನ್ನು ಶೋಧಿಸುವ ಮೊದಲು ಭಾರತ ಸಾಗುತ್ತಿರುವ ಈ ಶೈಕ್ಷಣಿಕ ಹಾದಿಯನ್ನು ನೋಡಲೇಬೇಕು. NEET ಅಥವಾ CUET ಪರೀಕ್ಷೆಗಳನ್ನು ರಾಷ್ಟ್ರೀಯ ಅಗ್ನಿಪರೀಕ್ಷೆಗಳನ್ನಾಗಿ ಮಾಡಲೆಂದೇ ಕೇಂದ್ರ ಸರ್ಕಾರ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (NTA) ಸ್ಥಾಪಿಸಿದೆ. ಇದರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ NEET ಪರೀಕ್ಷೆಗಳು ಒಕ್ಕೂಟ ವ್ಯವಸ್ಥೆಗೆ ಭಂಗ ತರುವ ಒಂದು ವಿಧಾನ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಒಬ್ಬರೇ ಇದರ ವಿರುದ್ಧ ಅಧಿಕೃತವಾಗಿ, ಸರ್ಕಾರದ ಪರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ಒಟ್ಟಾರೆಯಾಗಿ ನೋಡಿದಾಗ, ಅಲ್ಲಿಯೂ ಸಹ ಕರ್ನಾಟಕವೇ ಮುಂಚೂಣಿಯಲ್ಲಿ ಕಾಣುತ್ತದೆ. ಏಕೆಂದರೆ ನಮ್ಮ ರಾಜ್ಯದಲ್ಲಿರುವ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಬಹುತೇಕವಾಗಿ ಡೊನೇಷನ್ ಕೂಪಗಳು.
ಈ ವಿಷಮ ಪರಿಸ್ಥಿತಿಯಲ್ಲೇ ನಾವು ನೀಟ್ ಪರೀಕ್ಷಾ ಪೇಪರ್ಗಳ ಸೋರಿಕೆಯ ಪ್ರಕರಣವನ್ನೂ ನೋಡಬೇಕಿದೆ. 2014ರಲ್ಲಿ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಸಂಯೋಜಿತ ವೈದ್ಯಕೀಯ ಪೂರ್ವ ಪರೀಕ್ಷೆ (CPMT) ಪತ್ರಿಕೆಯ ಸೋರಿಕೆಯಾಗಿ ಮುಂದೂಡಲ್ಪಟ್ಟಿತ್ತು. 2015ರಲ್ಲಿ ಸಿಬಿಎಸ್ಇ ಆಯೋಜಿಸಿದ್ದ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆ (AIPMT) ಸುಪ್ರೀಂಕೋರ್ಟ್ ಆದೇಶದನ್ವಯ ಮುಂದೂಡಲ್ಪಟ್ಟಿತ್ತು. ಈ ಹಗರಣದಲ್ಲಿ 90ಕ್ಕೂ ಹೆಚ್ಚು ಪ್ರಶ್ನೆಗಳ ಉತ್ತರಗಳನ್ನು 15 ರಿಂದ 20 ಲಕ್ಷ ರೂಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿತ್ತು. 6.3 ಲಕ್ಷ ಆಕಾಂಕ್ಷಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. 2016ರಲ್ಲಿ ಉತ್ತರ ಪ್ರದೇಶದ ಲೋಕಸೇವಾ ಆಯೋಗ ನಡೆಸುವ ಪರಿಶೀಲನಾ ಅಧಿಕಾರಿ ಮತ್ತು ಸಹಾಯಕ ಪರಿಶೀಲನಾ ಅಧಿಕಾರಿ (RO & ARO) ಪ್ರವೇಶ ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದವು. ಇದೇ ರಾಜ್ಯದಲ್ಲಿ 2016ರ NEET ಪರೀಕ್ಷೆಯಲ್ಲೂ ಎಂಟು ಜನರನ್ನು ಪತ್ರಿಕೆಯ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿತ್ತು.

2017ರಲ್ಲಿ ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ಹೈಯ್ಯರ್ ಸೆಕಂಡರಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮಹಾರಾಷ್ಟ್ರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆಗಳಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. 2018ರಲ್ಲಿ ದೆಹಲಿ ಪೊಲೀಸರು ಸಿಬಿಎಸ್ಇ ನಡೆಸುವ 10 ಮತ್ತು 12ನೆ ತರಗತಿಯ ಗಣಿತ ಹಾಗೂ ಅರ್ಥಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದರು. ಗುಜರಾತ್ನ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗಳಲ್ಲೂ ಪತ್ರಿಕೆಯ ಸೋರಿಕೆ ಉಂಟಾಗಿದ್ದು ಇಬ್ಬರು ಬಿಜೆಪಿ ಸದಸ್ಯರು ಮತ್ತು ಒಬ್ಬ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿತ್ತು. 2019ರಲ್ಲಿ ರೈಲ್ವೆ ನೇಮಕಾತಿ ಮಂಡಲಿ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲೂ ಸಹ ಸ್ಕ್ರೀನ್ ಷಾಟ್ಗಳನ್ನು ಹಂಚುವ ಮೂಲಕ ಅಕ್ರಮ ಎಸಗಲಾಗಿತ್ತು.
2020ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪರೀಕ್ಷೆಗಳಲ್ಲಿ, ನ್ಯಾಷನಲ್ ಲಾ ಸ್ಕೂಲ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಸಾಮರ್ಥ್ಯ ಪರೀಕ್ಷೆಯಲ್ಲಿ, ಉತ್ತರ ಪ್ರದೇಶದ 12ನೆಯ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. 2021ರಲ್ಲಿ ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (UPTET), ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳು, ಗುಜರಾತ್ ಅಧೀನ ಸೇವೆಗಳ ಆಯ್ಕೆ ಮಂಡಳಿ (GSSSB) ಪರೀಕ್ಷೆಗಳು ಈ ಅಕ್ರಮಗಳಿಗೆ ಬಲಿಯಾಗಿದ್ದವು. 2022ರಲ್ಲಿ ಉತ್ತರ ಪ್ರದೇಶದ ಲೇಕಪಾಲ್ ನೇಮಕಾತಿ ಪರೀಕ್ಷೆಗಲು, ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆ, ಉತ್ತರ ಖಂಡದ ಅಧೀನ ಸೇವಾ ಆಯ್ಕೆ ಆಯೋಗದ ಪರೀಕ್ಷೆ, ಅರುಣಾಚಲ ಪ್ರದೇಶದ ಲೋಕಸೇವಾ ಆಯೋಗ ನಡೆಸುವ ಸಹಾಯಕ ಇಂಜಿನಿಯರ್ ಪರೀಕ್ಷೆ, ಪಶ್ಚಿಮ ಬಂಗಾಲದ ಪ್ರಾಥಮಿಕ ಶಿಕ್ಷಣ ಡಿಪ್ಲೊಮಾ (DEIED) ಪರೀಕ್ಷೆ, ಒಡಿಷಾದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪರೀಕ್ಷೆ ಇವೆಲ್ಲವೂ ಸಹ ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ರದ್ದಾಗಿದ್ದವು ಅಥವಾ ಮುಂದೂಡಲ್ಪಟ್ಟಿದ್ದವು. 2023ರಲ್ಲೂ ಸಹ ತೆಲಂಗಾಣ, ಅಸ್ಸಾಂ ಮತ್ತು ಮಹಾರಾಷ್ಟ್ರದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಅಕ್ರಮ ನಡೆದಿತ್ತು.

(ಆಧಾರ ಡೆಕ್ಕನ್ ಹೆರಾಲ್ಡ್ ವರದಿ 24-10-2024 List of major paper leaks in India in the last 10 years )
ಕೇಂದ್ರ ಪರೀಕ್ಷೆ ಸ್ಥಳೀಯ ಉದ್ಯೋಗ
ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸುವ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ ಕಾಣುತ್ತದೆ. ಇದಕ್ಕೆ ಎರಡು ಕಾರಣಗಳಿರಬಹುದು. ಸಾಮಾನ್ಯವಾಗಿ ಕರ್ನಾಟಕದ ಯುವ ಜನತೆ (ಕನ್ನಡಿಗರು) ಹೊರರಾಜ್ಯಗಳಿಗೆ ನೌಕರಿಯ ಮೇಲೆ ಹೋಗಲು ಬಲವಾಗಿ ಇಚ್ಛಿಸುವುದಿಲ್ಲ. ಇದೇ ಕಾರಣಕ್ಕಾಗಿ ಎಸ್ಬಿಐ ಮುಂತಾದ ಬ್ಯಾಂಕಿಂಗ್ ಪರೀಕ್ಷೆಗಳಲ್ಲೂ ಕನ್ನಡಿಗರ ಸಂಖ್ಯೆ ಕಡಿಮೆ ಇರುತ್ತದೆ. ಎರಡನೆಯ ಕಾರಣ ಐಟಿ-ಬಿಟಿ ಔದ್ಯಮಿಕ ಬೆಳವಣಿಗೆಯ ಪರಿಣಾಮ ಕರ್ನಾಟಕದ ಕೆಳಮಧ್ಯಮ ವರ್ಗದ ಸುಶಿಕ್ಷಿತ ಜನರಲ್ಲಿ ಯುವ ಜನಾಂಗ ಈ ನೌಕರಿಗಳನ್ನು ಹೆಚ್ಚಾಗಿ ಅಪೇಕ್ಷಿಸುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ, ಆಂಗ್ಲ ಭಾಷೆಯ ಗ್ರಹಿಕೆ ಮತ್ತು ಬಳಕೆಯಲ್ಲಿ ಕೊರತೆ ಇರುವ ನಿರುದ್ಯೋಗಿ ಯುವಕರು ಹೊರ ರಾಜ್ಯಗಳಿಗೆ ಹೋಗಲು ಬಯಸುವುದಿಲ್ಲ.
ಎಲ್ಲ ಪರೀಕ್ಷೆಗಳಲ್ಲೂ English Comprehension Section ಕಡ್ಡಾಯವಾಗಿರುವುದರಿಂದ, ಈ ವರ್ಗದ ಯುವ ಜನತೆ ತೇರ್ಗಡೆಯಾಗುವ ಪ್ರಮಾಣ ಕಡಿಮೆ ಇರಬಹುದು. ಇದರ ದತ್ತಾಂಶ/ಅಂಕಿಅಂಶಗಳನ್ನು ಪರಿಶೀಲಿಸಿದರೆ ಬಹುಶಃ ಈ ಆಯಾಮದ ಸ್ಪಷ್ಟ ಚಿತ್ರಣ ಕಾಣಬಹುದು. ಬ್ಯಾಂಕಿಂಗ್, ರೈಲ್ವೆ, ಪೋಸ್ಟಲ್ ಮೊದಲಾದ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಅವಶ್ಯಕತೆಯಂತೂ ಖಂಡಿತವಾಗಿ ಇದೆ. ಆದರೆ ಈ ಆಸಕ್ತಿ ವಹಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ವಿಕೇಂದ್ರೀಕರಣದ (Decentralisation) ಉದಾತ್ತ ಮೌಲ್ಯಗಳನ್ನು ಹಂತಹಂತವಾಗಿ ಇಲ್ಲವಾಗಿಸುತ್ತಿರುವ ಕೇಂದ್ರ ಸರ್ಕಾರ, ಈ ಮೀಸಲಾತಿ ಆಗ್ರಹವನ್ನು ವಿಭಜಕ ಎಂದೇ ಪರಿಗಣಿಸುವ ಸಾಧ್ಯತೆಗಳಿವೆ. ಕರ್ನಾಟಕದ ರಾಜಕೀಯ ನಾಯಕರ ನಿಷ್ಕ್ರಿಯತೆ, ನಿರಾಸಕ್ತಿ ಮತ್ತು ಕೇಂದ್ರದ ಮಡಿಲಲ್ಲೇ ಸುಖಬಯಸುವ ಗುಣ ಇವೆಲ್ಲವೂ ಇಲ್ಲಿ ನಿರ್ಣಾಯಕವಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕುಗಳ ಪರೀಕ್ಷೆಗಳಲ್ಲಿ ಕನ್ನಡಿಗರು ಹೆಚ್ಚು ಭಾಗವಹಿಸುವಂತೆ ಉತ್ತೇಜಿಸಬೇಕು. ಈಗ ಕನಿಷ್ಠ ವಿದ್ಯಾರ್ಹತೆ ಪದವಿ. ದುರಂತ ಎಂದರೆ ಪಿಯುಸಿ ಹಂತದಲ್ಲೇ ಕರ್ನಾಟಕದ ಬಹುಪಾಲು ಎಲ್ಲ ಕಾಲೇಜುಗಳು ಮಕ್ಕಳಿಗೆ ಸಿಇಟಿ-ನೀಟ್ ಹುಚ್ಚು ಹಿಡಿಸಿಬಿಡುತ್ತವೆ. ಪದವಿ ಪೂರ್ವ ಪ್ರವೇಶದಲ್ಲೇ ಈ ಅಖಿಲ ಭಾರತ ಪರೀಕ್ಷೆಗಳಿಗೆ ಪೂರಕವಾಗಿ ಶಿಕ್ಷಣ ಒದಗಿಸುವ ಭರವಸೆಗಳು ಮತ್ತು ಇದಕ್ಕೆ ಪೂರಕವಾಗಿ ಕೋಚಿಂಗ್ ಸೆಂಟರ್ಗಳೊಡನೆ ಕಾಲೇಜುಗಳಿಗೆ ಇರುವ ಅಪವಿತ್ರ ಮೈತ್ರಿ, ಬಹುಪಾಲು ಪ್ರತಿಭಾವಂತ ಶಿಕ್ಷಣಾರ್ಥಿಗಳನ್ನು ವೃತ್ತಿ ಶಿಕ್ಷಣದ ಮಾರುಕಟ್ಟೆಗೆ ದೂಡಿಬಿಡುತ್ತದೆ. ಪ್ರತಿಯೊಂದು ಕಾಲೇಜಿನಲ್ಲೂ, ಕನ್ನಡ ಮಾಧ್ಯಮಗಳಲ್ಲೂ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ತರಬೇತಿ ನೀಡುವ ಆಲೋಚನೆ ಬಹುಶಃ ಯಾರಿಗೂ ಬಂದಂತಿಲ್ಲ. ಕೆಲವು ಖಾಸಗಿ ಸಂಸ್ಥೆಗಳು ಇದನ್ನು ನಡೆಸುತ್ತಿವೆ ಹೀಗಿರುವಾಗ ವಿದ್ಯಾರ್ಜನೆಯಲ್ಲಿರುವ ಯುವ ಜನತೆಗೆ ಬ್ಯಾಂಕಿಂಗ್ ಹುದ್ದೆ ಆಕರ್ಷಣೀಯವಾಗುವುದಾದರೂ ಹೇಗೆ ? ಇದು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ.

ಪರಿಹಾರದ ಹಾದಿಗಳನ್ನರಸಿ
ಕೊನೆಯದಾಗಿ, ಕರ್ನಾಟಕ ರಾಜ್ಯದ ಅನುದಾನ, ಧನಸಹಾಯ ಮತ್ತು ಕಟ್ಟಡದ ನಿವೇಶನವನ್ನೂ ಸೇರಿ ಕನ್ನಡಮಯವಾಗಿರುವ ವಿದ್ಯಾ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯರಿಗೇ ಆದ್ಯತೆ ನೀಡುವುದನ್ನೂ ವಸ್ತುನಿಷ್ಠವಾಗಿ ನೋಡಬೇಕು. ರಾಜ್ಯದ ಬಹುಪಾಲು ಸಂಸ್ಥೆಗಳ ಒಡೆತನ ಇರುವುದು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಜನಪ್ರತಿನಿಧಿಗಳ ಅಥವಾ ರಾಜಕೀಯ ನಾಯಕರ ಬಳಿ. ಇಲ್ಲವೇ ವಿವಿಧ ಜಾತಿಗಳ ಮಠೋದ್ಯಮಿಗಳ ಬಳಿ. ಯಾವುದೇ ಅಪವಾದ ಇಲ್ಲದೆ ಎಲ್ಲವೂ ಸಹ ಧನದಾಹಿ ಸಂಸ್ಥೆಗಳೇ ಆಗಿವೆ. ಹೆಚ್ಚು ಡೊನೇಷನ್ ಕೊಟ್ಟವರಿಗೆ ಸೀಟು ದೊರೆಯುತ್ತದೆ. ಈ ದುರಾಸೆ ಮತ್ತು ದುರಾಗ್ರಹವೇ ವಿದ್ಯಾಸಂಸ್ಥೆಗಳನ್ನು ಮೀನುಮಾರುಕಟ್ಟೆಯನ್ನಾಗಿ (Fish market) ಪರಿವರ್ತಿಸಿದ್ದು, ಎಷ್ಟಾದರೂ ಡೊನೇಷನ್ ಕೊಡಲು ಸಿದ್ಧವಾಗಿರುವ ಉತ್ತರದ ಅಭ್ಯರ್ಥಿಗಳಿಗೆ ಮನ್ನಣೆ ನೀಡುತ್ತವೆ
ಇದನ್ನು ಪ್ರಶ್ನಿಸುವವರಾದರೂ ಯಾರು ? ಪ್ರಶ್ನಿಸುವ ಸಾಂವಿಧಾನಿಕ ಅಧಿಕಾರ ಇರುವವರೆಲ್ಲ ಸಾಂಸ್ಥಿಕ ಭಾಗಿದಾರರಾಗಿದ್ದಾರೆ. (Stakeholders). ಈ ಜಟಿಲ ಪ್ರಶ್ನೆಗಳಿಗೆ ನ್ಯಾಯಾಂಗ ಉತ್ತರಿಸುವುದಿಲ್ಲ. ಏಕೆಂದರೆ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಜಿಡಿಪಿ ವೃದ್ಧಿಯ ದೃಷ್ಟಿಯಿಂದ ಜಾರಿಗೊಳಿಸುವ ಆರ್ಥಿಕ ನೀತಿಗಳು ಮತ್ತು ಶೈಕ್ಷಣಿಕ ನಿಬಂಧನೆಗಳು, ನ್ಯಾಯಾಂಗದ ವ್ಯಾಪ್ತಿಯಲ್ಲಿ ವಿಚಾರಣಾರ್ಹವಾಗುವುದಿಲ್ಲ. ಒಕ್ಕೂಟ ವ್ಯವಸ್ಥೆಯ ಎಲ್ಲ ಬೇರುಗಳನ್ನೂ ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿರುವ ಹೊತ್ತಿನಲ್ಲಿ, ಶಿಕ್ಷಣ ಕ್ಷೇತ್ರದ ಈ ಸಮಸ್ಯೆ ಭವಿಷ್ಯದ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾದುದು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸುವಂತಹ ಸಾರ್ವಜನಿಕ ಸಂಕಥನಗಳು ಅಲ್ಲಲ್ಲಿ ಮಾತ್ರ ಕಾಣುತ್ತವೆ. ಕೆಲವೇ ಶಿಕ್ಷಣ ತಜ್ಞರು ದನಿ ಎತ್ತುತ್ತಿದ್ದಾರೆ.

ಇದಕ್ಕೆ ಪರಿಹಾರ ಇರುವುದು ಶಿಕ್ಷಣವನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವಂತೆ ಸಂವಿಧಾನ ತಿದ್ದುಪಡಿ ಮಾಡುವುದು. ಪ್ರಸ್ತುತ ಭಾರತೀಯ ಸಂವಿಧಾನದ ಏಳನೇ ವೇಳಾಪಟ್ಟಿಯಡಿಯಲ್ಲಿ ಶಿಕ್ಷಣ ಸಮಕಾಲೀನ ಪಟ್ಟಿಯ ವಿಷಯವಾಗಿದೆ, ಅಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಇದರ ಮೇಲೆ ಕಾನೂನು ರಚಿಸುವ ಅಧಿಕಾರವನ್ನು ಹೊಂದಿವೆ. ಭಾರತ ಸರ್ಕಾರದ ಕಾಯ್ದೆ 1935 ರ ಅಡಿಯಲ್ಲಿ ಮತ್ತು ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ, ಶಿಕ್ಷಣವು ಪ್ರಾಥಮಿಕವಾಗಿ ರಾಜ್ಯ ಪಟ್ಟಿಯ ವಿಷಯವಾಗಿತ್ತು, ಇದು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡಿತು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಶಿಕ್ಷಣದ ವಿಷಯವನ್ನು 1976 ರ 42 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಮೂಲಕ ರಾಜ್ಯ ಪಟ್ಟಿಯಿಂದ ಸಹವರ್ತಿ ಪಟ್ಟಿಗೆ ವರ್ಗಾಯಿಸಲಾಯಿತು. ದೇಶಾದ್ಯಂತ ಏಕರೂಪದ ಶೈಕ್ಷಣಿಕ ನೀತಿಗಳನ್ನು ಸ್ಥಾಪಿಸಲು ಮತ್ತು ರಾಷ್ಟ್ರವ್ಯಾಪಿ ಶಿಕ್ಷಣವನ್ನು ಮಾರ್ಗದರ್ಶನ ಮಾಡಲು ಕೇಂದ್ರಕ್ಕೆ ಅಧಿಕಾರ ನೀಡಲು ಇದನ್ನು ಮಾಡಲಾಯಿತು.
ತುರ್ತುಪರಿಸ್ಥಿತಿಯನ್ನು ಖಂಡತುಂಡವಾಗಿ ವಿರೋಧಿಸುವ ಬಿಜೆಪಿ ಮತ್ತಿತರ ಪಕ್ಷಗಳು ಈ ನಿಯಮವನ್ನು ಪ್ರಸ್ತಾಪಿಸುವುದೇ ಇಲ್ಲ. ಈಗ ನಾವು ಪುನಃ 1975ರ ಮುನ್ನ ಇದ್ದ ಸ್ಥಿತಿಗೆ ಹೋಗಬೇಕಿದೆ. ಆಗ ಶಿಕ್ಷಣದ ವ್ಯಾಪಾರೀಕರಣ ಮತ್ತು ಸರ್ಕಾರದ ಕೇಂದ್ರೀಕರಣ ಒಟ್ಟಿಗೇ ಚಲಿಸಲಾಗುವುದಿಲ್ಲ. ಕನ್ನಡ ಪರ, ಸಾಮಾಜಿಕ , ಪ್ರಗತಿಪರ ಸಂಘಟನೆಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕಿದೆ.

-೦-೦-೦-






