ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಳ್ಳುತ್ತಿರುವ ಮಹತ್ವಕಾಂಕ್ಷೆಯ ಸೂರ್ಯಯಾನ ಯೋಜನೆಗೆ ಕ್ಷಣಗಣನೆ ಆರಂಭವಾಗಿದ್ದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಶುಕ್ರವಾರ (ಸೆಪ್ಟೆಂಬರ್ 1) ಚೆಂಗಾಲಮ್ಮನ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪ್ರಸಿದ್ಧ ಸೂಳ್ಳೂರುಪೇಟ ಚೆಂಗಾಲಮ್ಮ ದೇವಾಲಯದಲ್ಲಿ ಎಸ್.ಸೋಮನಾಥ್ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 7.30 ಕ್ಕೆ ಪೂಜೆ ಸಲ್ಲಿಸಿದ ಅವರು, ಇಸ್ರೋ ಯೋಜನೆ ಯಶಸ್ವಿಯಾಗಲೆಂದು ಬೇಡಿಕೊಂಡಿರುವುದಾಗಿ ಅರ್ಚಕರು ತಿಳಿಸಿದರು ಎಂದು ಪಿಟಿಐ ವರದಿ ತಿಳಿಸಿದೆ.
ಸೆ.2ರ ಶನಿವಾರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಆದಿತ್ಯ ಎಲ್-1 ಉಪಗ್ರಹ ಹೊತ್ತ ಪಿಎಸ್ಎಲ್ವಿ-ಸಿ 57 ರಾಕೆಟ್ ನಭಕ್ಕೆ ಚಿಮ್ಮಲಿದೆ ಎಂದು ಎಸ್. ಸೋಮನಾಥ್ ಮಾಧ್ಯಮಗಳಿಗೆ ತಿಳಿಸಿದರು.
ಆದಿತ್ಯ-ಎಲ್1 ಉಪಗ್ರಹ ಸೂರ್ಯನ ಪ್ರಭಾವಲಯವನ್ನು (ರೇಡಿಯಸ್ ವ್ಯಾಪ್ತಿ) ಸೇರಲು 125 ದಿನ ಬೇಕಾಗುತ್ತದೆ ಎಂದು ತಿಳಿಸಿದರು. ಚಂದ್ರಯಾನ 3ರ ವಿಕ್ರಮ್ ಲ್ಯಾಂಡ ಹಾಗೂ ಪ್ರಜ್ಞಾನ್ ರೋವರ್ ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಚಂದ್ರಯಾನ 3ಕ್ಕೂ ಮುನ್ನ ಎಸ್ ಸೋಮನಾಥ್ ಅವರು ಇದೇ ಚಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.