ಒಂದೆಡೆ ಭರದಿಂದ ಸಾಗುತ್ತಿರೋ ಫ್ಲೈ ಓವರ್ ನಿರ್ಮಾಣ ಕಾಮಗಾರಿ. ಇನ್ನೊಂದೆಡೆ ಯಾವುದೇ ಸುರಕ್ಷತೆ ವಹಿಸದೇ ಎತ್ತರದಲ್ಲಿ ನಿಂತು ಕೆಲಸ ಮಾಡುತ್ತಿರೋ ಕಾರ್ಮಿಕರು. ಮತ್ತೊಂದೆಡೆ ಕಾಮಗಾರಿಯ ಪಕ್ಕದಲ್ಲೇ ಹಾದುಹೋಗುವ ಹೆದ್ದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ವಾಹನ ಸವಾರರು. ಈ ಸಮಸ್ಯೆ ಕಂಡು ಬಂದಿರುವುದು ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿ.
ಮೂರು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ನಿರ್ಮಾಣ ಕಾರ್ಯಕ್ಕೆ ಸದ್ಯಕ್ಕೀಗ ಸ್ವಲ್ಪ ವೇಗ ಸಿಕ್ಕಿದೆ. ಕಾಮಗಾರಿಯೇನೋ ಪ್ರಗತಿಯಲ್ಲಿದೆ, ಆದರೆ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ವಾ ಎಂಬ ಪ್ರಶ್ನೆ ಎದುರಾಗಿದೆ. ಅಷ್ಟೇ ಅಲ್ಲಾ, ಕಾಮಗಾರಿ ನಡೆಯುವ ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೆ ಜೀವಭಯ ಶುರುವಾಗಿದೆ.
ಹೌದು, ಕಾರವಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಂಡನ್ ಬ್ರಿಡ್ಜ್ನಿಂದ ಆರ್.ಟಿ.ಓ ಕಛೇರಿವರೆಗೆ ಸುಮಾರು 1.4 ಕಿಲೋ ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣ ಮಾಡಲಾಗ್ತ್ತಿದೆ. ಆದ್ರೆ, ಫ್ಲೈಓವರ್ ನಿರ್ಮಾಣ ಮಾಡ್ತಿರೋ ಕಾರ್ಮಿಕರ ಸುರಕ್ಷತೆ ಬಗ್ಗೆ ಐಆರ್ಬಿ ಕಂಪೆನಿ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕರು ಹೆಲ್ಮೆಟ್ ಸೇರಿದಂತೆ, ಸುರಕ್ಷತಾ ಸಾಧನಗಳನ್ನ ಧರಿಸದೇ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕಾಮಗಾರಿ ಪ್ರದೇಶದ ಸುತ್ತ ಯಾವುದೇ ಬ್ಯಾರಿಕೇಡ್ಗಳನ್ನ ಸಹ ಅಳವಡಿಸದೇ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೇ, ಕಾಮಗಾರಿ ನಡೀತಿರೋ ಪ್ರದೇಶದ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕಾರ್ಮಿಕರು ಎಲ್ಲೆಂದರಲ್ಲಿ, ಕಾಮಗಾರಿ ವಸ್ತುಗಳನ್ನ ಎಸೆದಿದ್ದಾರೆ. ಕಾಮಗಾರಿ ಪ್ರದೇಶಕ್ಕೆ ಹೊಂದಿಕೊಂಡೇ ಸರ್ವಿಸ್ ರಸ್ತೆಯಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದರಿಂದ ಅಪಾಯ ಎದುರಾಗುವ ಆತಂಕ ಇದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆ ಕಂಪನಿಗೆ ಸೂಚನೆ ನೀಡಲಾಗುತ್ತೆ ಎಂದಿದ್ದಾರೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.
ಒಟ್ಟಾರೆ ಆಮೆಗತಿಯಲ್ಲಿ ಸಾಗುತ್ತಿದ್ದ ಫ್ಲೈಓವರ್ ನಿರ್ಮಾಣ ಕಾಮಗಾರಿ ಚುರುಕು ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆ ಅನ್ನೋದೇನೋ ನಿಜ. ಆದ್ರೆ, ಕಾಮಗಾರಿ ವೇಳೆ ಸುರಕ್ಷತೆ ಕುರಿತು ನಿರ್ಲಕ್ಷ್ಯವಹಿಸಿರುವುದು ದುರಂತವೇ ಸರಿ. ಇನ್ನಾದ್ರೂ ಸಂಬಂಧಪಟ್ಟ ಗುತ್ತಿಗೆ ಕಂಪೆನಿ ಕಾರ್ಮಿಕರಿಗೆ ಸುರಕ್ಷಾ ಸಾಧನಗಳನ್ನ ನೀಡುವುದರ ಜೊತೆಗೆ ಹೆದ್ದಾರಿಯಲ್ಲಿ ಸಂಚರಿಸೋ ವಾಹನ ಸವಾರರಿಗೆ ಪ್ರಾಣಾಪಾಯ ಆಗದಂತೆ ನೋಡಿಕೊಳ್ಳೋದು ಮುಖ್ಯವಾಗಿದೆ.