ಕೊಪ್ಪಳ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಲ್ಲಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಇದೀಗ ಕೊಪ್ಪಳ ಜಿಲ್ಲಾ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸಚಿವ ಶಿವರಾಜ್ ತಂಗಡಗಿ, ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಅನ್ಸಾರಿ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗುತ್ತಿದ್ದು, ತಮ್ಮ ಸೋಲಿಗೆ ಈ ನಾಯಕರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಸಚಿವ ಶಿವರಾಜ್ ತಂಗಡಗಿ, ʼಇಕ್ಬಾಲ್ ಅನ್ಸಾರಿ ಬೇರೆಯವರ ಬಗ್ಗೆ ಮಾತನಾಡುವ ಬದಲು ಜನರ ನಡುವೆ ಹೋಗಿ ಗೆದ್ದು ತೋರಿಸಲಿʼ ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಕ್ಬಾಲ್ ಅನ್ಸಾರಿ, ʼಬಹಿರಂಗ ವೇದಿಕೆಗೆ ಚರ್ಚೆಗೆ ಬನ್ನಿ. ಯಾರು ಯಾರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ಹೇಳುತ್ತೇನೆʼ ಎಂದು ಸವಾಲು ಹಾಕಿದ್ದಾರೆ.

ಅನ್ಸಾರಿ ಮಾತನಾಡುತ್ತಾ, ಗಂಗಾವತಿ ಕ್ಷೇತ್ರಕ್ಕೆ ಬಂದು ತಮ್ಮ ವಿರುದ್ಧ ರಾಜಕೀಯ ಮಾಡಲಾಗಿದೆ ಎಂದು ಆರೋಪಿಸಿದರು. ತಮ್ಮ ಸೋಲಿಗೆ ಶಾಸಕ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ ಹಾಗೂ ಸಚಿವ ಶಿವರಾಜ್ ತಂಗಡಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಗಾವತಿ ಕ್ಷೇತ್ರಕ್ಕೆ ಬರದಂತೆ ತಡೆಯಲಾಗಿದೆ ಎಂದು ಆರೋಪಿಸಿದ ಅವರು, ʼನಾನು ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಬರುವಂತೆ ಕೆಲಸ ಮಾಡಿದ್ದೆ. ಆದರೆ ನೀವು ನನ್ನ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಮತಗಳು ನನಗೆ ಸಿಗದಂತೆ ಕೆಲಸ ಮಾಡಿದ್ದೀರಿʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅಧಿಕಾರಿಗಳ ವರ್ಗಾವಣೆ ವಿಚಾರವನ್ನೂ ಪ್ರಸ್ತಾಪಿಸಿದ ಅನ್ಸಾರಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ ಅಧಿಕಾರಿಗಳು ತಮ್ಮ ಮಾತು ಕೇಳದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿಯೂ ರಾಜಕೀಯ ಪ್ರಭಾವ ಬಳಸಲಾಗಿದೆ ಎಂದು ದೂರಿದರು. ಗಂಗಾವತಿ ಕ್ಷೇತ್ರದ ನಿಗಮ-ಮಂಡಳಿಗಳಿಗೆ ಬಿಜೆಪಿ ಹಾಗೂ ಆರ್ಎಸ್ಎಸ್ ಹಿನ್ನೆಲೆಯವರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿದ ಅವರು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನಗತ್ಯವಾಗಿ ಮಾತನಾಡಲಾಗುತ್ತಿದೆ ಎಂದಿದ್ದಾರೆ.

ʼನಾನು ಕ್ಷೇತ್ರದಲ್ಲಿ ಪ್ರಚಾರ ಮಾಡದಿದ್ದರೆ 58 ಸಾವಿರ ಮತಗಳು ನನಗೆ ಹೇಗೆ ಬಂದವು?ʼ ಎಂದು ಪ್ರಶ್ನಿಸಿದ ಅನ್ಸಾರಿ, ಇದು ತಮ್ಮ ಮೊದಲ ಎಪಿಸೋಡ್ ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ದಾಖಲೆಗಳ ಸಮೇತ ಜನರ ಮುಂದೆ ಬಹಿರಂಗಪಡಿಸುವುದಾಗಿ ಆಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇಕ್ಬಾಲ್ ಅನ್ಸಾರಿ ಅವರ ಈ ಹೇಳಿಕೆಗಳು ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.






