ಭಾರತದಲ್ಲಿ ಅತಿ ಸುಲಭವಾಗಿ ಹಣ ಗಳಿಸುವ ಬಂಡವಾಳ ರಹಿತ ಧಂದೆ ಅಂದರೆ ಅಧ್ಯಾತ್ಮೋದ್ಯಮ ಹಾಗು ಪ್ರವಚನ. ಇಂದಿನ ಖಾಸಗಿ ಸುದ್ದಿ ವಾಹಿನಿಗಳು ಪ್ರಮೋಟ್ ಮಾಡೋದು ಕೂಡ ವಾಣಿಜ್ಜೀಕರಣಗೊಂಡ ದೇವಸ್ಥಾನಗಳನ್ನುˌ ಜೋತಿಷಿಗಳುˌ ಸಂಖ್ಯಾ ಶಾಸ್ತ್ರಜ್ಞರುˌ ವಾಸ್ತು ಶಾಸ್ತ್ರಜ್ಞರು ಮುಂತಾದ ಗಿಳಿ ಶಾಸ್ತ್ರದ ಸುಲಿಗೆಕೋರರನ್ನು. ಸರಳ ವಾಸ್ತುವಿನ ಹೆಸರಲ್ಲಿ ದೇಶಾದ್ಯಂತ ಬೃಹದಾಕಾರವಾದ ಉದ್ಯಮ ಸ್ಥಾಪಿಸಿದ್ದ ಚಂದ್ರಶೇಖರ ಗುರೂಜಿ ಎಂಬಾತ ಅಮಾನುಷವಾಗಿ ಮೊನ್ನೆ ಕೊಲೆಗೀಡಾದ ಸಂಗತಿ ನೀವೆಲ್ಲ ಬಲ್ಲಿರಿ.
ಈತ ಸರಳ ವಾಸ್ತು ಹೆಸರಿನ ಬಂಡವಾಳರಹಿತ ಉದ್ಯಮದ ಮೂಲಕ ಸಾವಿರಾರು ಕೋಟಿ ಬೇನಾಮಿ ಆಸ್ತಿ ಮಾಡಿದ್ದ ಎಂದು ಆತನನ್ನು ಬೆಳೆಸಿದ ಸುದ್ದಿ ವಾಹಿನಿಗಳೆ ಎರಡು ಮೂರು ದಿನಗಳು ಸತತವಾಗಿ ಸುದ್ದಿ ಬಿತ್ತಿರಿಸಿದ್ದನ್ನು ನೋಡಿದ್ದಿರಿ. ಈತ ಹೇಳಿದ ಸರಳ ವಾಸ್ತುವಿನಿಂದ ಯಾರಿಗೆಲ್ಲ ಒಳಿತಾಗಿದೆಯೊ ಗೊತ್ತಿಲ್ಲ ˌ ಆದರೆ ಈತ ಮಾತ್ರ ಕೆಲವೆ ವರ್ಷಗಳಲ್ಲಿ ಒಳಿತುಕಂಡದ್ದು ಮಾತ್ರ ಸುಳ್ಳಲ್ಲ.
ಈ ಅಧ್ಯಾತ್ಮೋದ್ಯಮ ಕ್ಷೇತ್ರ ಇಂದು ಅತ್ಯಂತ ಪ್ರಬಲ ಪೈಪೋಟಿ ಹಾಗು ಸ್ಪರ್ಧಾತ್ಮಕ ಕ್ಷೇತ್ರ. ಬಾಗಲಕೋಟೆ ಮೂಲದ ಬ್ರಾಹ್ಮಣೇತರನಾಗಿದ್ದ ಗುರೂಜಿ ಹೆಸರಿನ ಈ ಚಂದ್ರಶೇಖರ ಅಂಗಡಿ ಎಂಬ ಲಿಂಗಾಯತ ಬಣಜಿಗ(ವಣಿಕ=ವ್ಯಾಪಾರಿ) ಅಸಲಿಗೆ ಒಬ್ಬ ಸಿವಿಲ್ ಇಂಜಿನೀಯರ್ ಪದವಿಧರ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಓದಿ ಸುಡಗಾಡು ಅಜ್ಞಾನವನ್ನು ಬಿತ್ತುವ ಮೂಲಕ ಅಗರ್ಭ ಶ್ರೀಮಂತನಾಗಿ ಬೆಳೆದ. ಈತನಿಗಿಂತಲೂ ಅತಿ ಹೆಚ್ಚು ಆಸ್ತಿ ಗಳಿಸಿದ ಬ್ರಾಹ್ಮಣ ಜೋತಿಷಿಗಳು ಇನ್ನೂ ಅನೇಕರು ನಮ್ಮ ಕಣ್ಣಿಗೆ ಕಾಣದಂತೆ ತಮ್ಮ ಶ್ರೀಮಂತಿಕೆ ಬಚ್ಚಿಟ್ಟು ಬದುಕುತ್ತಿದ್ದಾರೆ. ಮೇಲ್ಮೋಟಕ್ಕೆ ಇದೊಂದು ಬೇನಾಮಿ ಆಸ್ತಿಗೆ ಸಂಬಂಧಿಸಿದ ಕೊಲೆಯಂತೆ ಕಂಡರೂ ಇದರ ಆಳದಲ್ಲಿ ವೃತ್ತಿ ಮಾತ್ಸರ್ಯದ ಕೈವಾಡ ಅಲ್ಲಗಳೆಯಲಾಗದು. ಬ್ರಾಹ್ಮಣೇತರರು ಯಾವುದೇ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಾಗಲೆಲ್ಲ ಇಂತಹ ದುರಂತಗಳು ಸಂಭವಿಸುವುದು ವಾಡಿಕೆ. ತನಿಖೆಯು ಒಂದೊಮ್ಮೆ ಕೂಲಂಕುಷವಾಗಿ ನಡೆದರೆ ಈ ಕೊಲೆಯ ಹಿಂದಿನ ಅನೇಕ ರಹಸ್ಯಗಳು ಹೊರಬರುವ ಸಾಧ್ಯತೆಗಳು ಅಲ್ಲಗಳೆಯಲಾಗದು.
ಇನ್ನು ಅಧ್ಯಾತ್ಮೋದ್ಯಮ ಹಾಗು ಮಂದಿರಗಳು ಸಾರ್ವಜನಿಕರಿಂದ ಹಣ ಬಾಚುವ ಧಂದೆಯ ಬಗ್ಗೆ ಹೆಚ್ಚಿಗೆ ಬರೆಯುವ ಅಗತ್ಯವೆ ಇಲ್ಲ. ಭಾರತದಲ್ಲಿ ಹಿಂದಿನ ಕಾಲದಿಂದಲು ಹಳ್ಳಿಗೆ ನಾಲ್ಕಾರು ಮಂದಿರಗಳು ಕಟ್ಟಲಾಗಿದೆಯೆ ಹೊರತು ಶಾಲೆˌ ಗ್ರಂಥಾಲಯ ಅಥವಾ ಕ್ರೀಡಾಂಗಣಗಳು ಸ್ಥಾಪಿಸಲಾಗಿಲ್ಲ. ಇಂದಿಗೂ ಹಳ್ಳಿಗಳಿಂದ ನಗರದ ವರೆಗೆ ಶ್ರಾವಣ ಮಾಸ ಮೊದಲ್ಗೊಂಡು ವರ್ಷದ ಎಲ್ಲಾ ಋತುಗಳಲ್ಲಿ ಪ್ರಕಾಂಡ ಪಂಡಿತರಿಂದ ಪ್ರವಚನಗಳು ನಡೆಯುವುದು ವಾಡಿಕೆ. ಈ ಪ್ರವಚನಕಾರರು ಮೇಲ್ನೋಟಕ್ಕೆ ಸಾತ್ವಿಕ ಮಠಾಧೀಶರುˌ ಸಜ್ಜನ ಸಂತರುˌ ಅತ್ಯಂತ ಸರಳ ಆರೂಢರಂತೆ ಕಾಣುತ್ತಾರಾದರೂ ಇವರಲ್ಲಿ ಬಹುತೇಕರು ಬಲಪಂಥೀಯ ಹುಸಿ ವಾಗ್ಮಿಗಳು ಹಾಗು ಜೀವವಿರೋಧಿ ಸಿದ್ಧಾಂತದ ಪ್ರತಿಪಾದಕರಾಗಿದ್ದಾರೆ. ಇವರಲ್ಲಿ ಕೆಲವರು ತಾವು ಅತ್ಯಂತ ಸರಳ ಸಜ್ಜನರೆಂತಲುˌ ಸರಕಾರದ ಅನುದಾನ ಅಥವಾ ಪ್ರಶಸ್ತಿಗಳನ್ನು ನಿರಾಕರಿಸಿದವರೆಂತಲುˌ ತಮ್ಮ ಅಂಗಿಗೆ ಜೇಬು ಇಲ್ಲದವರೆಂತಲು ಖ್ಯಾತಿ ಗಳಿಸಿದ್ದಾರಾದರೂ ಇವರ ಪ್ರವಚಗಳು ದುಬಾರಿ ಹಣದ ವ್ಯವಹಾರಗಳಿಂದಲೆ ಕುದುರುತ್ತವೆ.
ಈ ಪ್ರವಚನಗಳ ಹಣಕಾಸಿನ ವ್ಯವಹಾರಗಳೆಲ್ಲ ಇವರ ಅನುಯಾಯಿಗಳು ತೆರೆಮರೆಯಲ್ಲಿ ನಿರ್ವಹಿಸುತ್ತಾರೆ. ಈ ಖ್ಯಾತನಾಮ ಪ್ರವಚನಕಾರರು ಅವ್ಹಾನಿಸಿದ ಎಲ್ಲರಿಗೂ ಒಪ್ಪಿಗೆ ಸೂಚಿಸುವುದಿಲ್ಲ. ಬದಲಾಗಿ ತಮ್ಮ ಅನುಯಾಯಿಗಳೊಂದಿಗೆ ಮಾತನಾಡಲು ಹೇಳುತ್ತಾರೆ ಮತ್ತು ಆಮೇಲೆ ಪ್ರವಚನದ ಕುರಿತು ದಿನ ನಿಗದಿಗೊಳ್ಳುತ್ತದೆ. ಬಹುತೇಕ ತಮ್ಮ ಪ್ರವಚನಗಳಲ್ಲಿ ಈ ಮಹನೀಯರು ಹೇಳುವ ವಿಷಯಗಳಲ್ಲಿ ವರ್ತಮಾನದ ತಲ್ಲಣಗಳಾಗಲಿˌ ಇತಿಹಾಸದ ಪ್ರಮಾದಗಳಾಗಲಿˌ ಭವಿಷ್ಯದ ಭರವಸೆಗಳಾಗಲಿ ಇರುವುದಿಲ್ಲ. ಪ್ರಭುತ್ವದ ಜನವಿರೋಧಿ ನೀತಿಗಳಾಗಲಿˌ ಜನಸಾಮಾನ್ಯರ ಬವಣೆಗಳಾಗಲಿ ಸುಳಿಯುವುದೆಯಿಲ್ಲ. ಅದಾಗದಿದ್ದರೆ ಹೋಗಲಿˌ ಕೊನೆಗೆ ಮನುಷ್ಯನ ಬದುಕಿಗೆ ಸಹಾಯವಾಗಬಲ್ಲ ಯಾವುದಾದರು ನೀತಿಗಳುˌ ರೈತರಿಗೆˌ ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಅಥವಾ ಯುವಕರಿಗೆ ಶೈಕ್ಷಣಿಕ ಮಾರ್ಗದರ್ಶನˌ ಉದ್ಯಮಶೀಲತೆˌ ವ್ಯಕ್ತಿತ್ವ ವಿಕಸನದ ಪಾಠಗಳಾಗಲಿˌ ಮಹಿಳೆಯರಿಗೆ ಒಗ್ಗಟ್ಟಿನಿಂದ ಸಂಸಾರ ನಡೆಸುವ ಮತ್ತು ಪುರುಷನಂತೆ ಎಲ್ಲ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವ ಭರವಸೆಯ ಮಾತುಗನ್ನಾಡುವುದಿಲ್ಲ.
ಬಹುತೇಕ ಪ್ರವಚನಕಾರರು ತಮ್ಮ ಪ್ರವಚನಗಳಲ್ಲಿ ಪ್ರಕೃತಿ ರಮ್ಯತೆಯ ವರ್ಣನೆˌ ಕರ್ಮ ಸಿದ್ಧಾಂತದ ರಗಳೆˌ ಹಿಂಸೆˌ ಯುದ್ದೋನ್ಮಾದಗಳನ್ನು ಪ್ರಚೋಧಿಸುವ ಹಾಗು ಬದುಕಿಗೆ ಸ್ಪಷ್ಟ ಗುರಿಯಿಲ್ಲದ ದೈವೆಚ್ಚೆಯ ಕುರುಡು ನಂಬಿಕೆ ಸಾರುವ ಶುಷ್ಕ ಭೋದನೆಗಳನ್ನು ಯಥೇಚ್ಚೆಯಾಗಿ ಮಾಡುತ್ತಾರೆ. ನೀನು ಕರ್ಮವನ್ನು ಮಾಡು ಆದರೆ ಅದರ ಫಲವನ್ನು ಅಪೇಕ್ಷಿಸಬೇಡ ಎನ್ನುವ ಯಾವುದೊ ಕಾಲದ ಔಟ್ಡೇಟೆಡ್ ಕರ್ಮಸಿದ್ಧಾಂತಕ್ಕೆ ಜೋತು ಬಿದ್ದಿರುವ ಈ ಪ್ರವಚನಕಾರರಿಗೆ ಇಂದು ನಾವು ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ ಎನ್ನುವ ಕನಿಷ್ಟ ಪ್ರಜ್ಞೆ ಇದ್ದಂತಿಲ್ಲ. ನಮ್ಮ ಮಕ್ಕಳು ಶಾಲೆಗೆ ಹೋಗುವುದೇ ಒಂದು ನಿರ್ಧಿಷ್ಟ ಗುರಿ ತಲುಪುವ ಹಂಬಲದಿಂದ. ನಿರ್ಧಿಷ್ಟ ಉದ್ದೇಶವಿಲ್ಲದ ಯಾವುದೇ ಕೆಲಸ ಅಥವಾ ಶಿಕ್ಷಣ ಇಂದು ನಿರರ್ಥಕ. ಹಾಗೆ ಗುರಿಯಿಟ್ಟು ಮುಂದುವರೆದಾಗಲು ನಾವು ಇಚ್ಚಿಸಿದ ದಡವನ್ನು ಸೇರುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಂತ ಕಷ್ಟದಾಯಕ ಕೆಲಸ. ಇನ್ನು ಗುರಿ ಇಲ್ಲದೆ ಫಲಾಪೇಕ್ಷೆ ಹೊಂದದ ಕರ್ಮ ಸಿದ್ಧಾಂತದ ಹಿಂದೆ ಬಿದ್ದರೆ ನಮ್ಮ ಪೀಳಿಗೆಯ ಭವಿಷ್ಯ ಏನಾದೀತು ಎಂಬ ಬಗ್ಗೆ ಇವರು ಯಾವತ್ತೂ ಯೋಚಿಸಿಲ್ಲ. ಯಾವುದೊ ಕಾಲದಲ್ಲಿ ಓದಿದ ತತ್ವಶಾಸ್ತ್ರದ ಹಳಸಲು ಸಿದ್ಧಾಂತಗಳನ್ನು ಇಂಗ್ಲೀಷ್ ಮತ್ತು ಸಂಸ್ಕೃತದ ಲೇಪನಗಳಿಂದ ಅಲಂಕರಿಸಿ ಹೇಳುವುದು ಕೇವಲ ಪ್ರವಚನಲಂಕಾರವಾದೀತೆ ಹೊರತು ಬದುಕು ಕಟ್ಟಿಕೊಳ್ಳಲು ಸಹಾಯವಾಗಲಾರದು.
ಇಂತಹ ಸಜ್ಜನ ವೇಷದ ಪ್ರವಚಕಾರರು ತಾವು ಬಹಿರಂಗವಾಗಿ ಹೇಳಲಾಗದ ಸಂಗತಿಗಳನ್ನು ತಮ್ಮ ಶಿಷ್ಯಂದಿರಿಂದ ಹೇಳಿಸುತ್ತಾರೆ. ತಮ್ಮ ವಿರುದ್ಧ ಬರುವ ವಸ್ತುನಿಷ್ಟ ಟೀಕೆಗಳಿಗೆ ಸೂಕ್ತವಾಗಿ ಉತ್ತರಿಸಲಾಗದೆ ತಮ್ಮ ಶಿಷ್ಯರಿಂದ ಹಾರಿಕೆಯ ಉತ್ತರ ಕೊಡಿಸಿ ನುಣುಚಿಕೊಳ್ಳುತ್ತಾರೆ. ಉತ್ತರ ಕರ್ನಾಕಟದಲ್ಲಿ ಸದ್ಗುರು ಸಿದ್ಧಾರೂಢರು ಪ್ರತಿಪಾದಿಸಿದ ಆರೂಢ ಸಾಧನಾ ಮಾರ್ಗ ಪರಂಪರೆಯ ಅನೇಕ ಮಠಗಳಿವೆ. ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಬ್ರಾಹ್ಮಣೇತರ ಪಕ್ಷದ ವತಿಯಿಂದ ಬ್ರಾಹ್ಮಣೇತರ ಸಮ್ಮೇಳನ ಮಾಡಲು ಅಂದು ಸರ್ ಕಂಬಳಿ ಸಿದ್ಧಪ್ಪನವರು ನಿರ್ಧರಿಸಿದಾಗ ಆ ಸಭೆಗೆ ಬೆಂಬಲಿಸುವಂತೆ ಅಂದಿನ ಕೊಲ್ಹಾಪುರದ ಶಾಹು ಮಹಾರಾಜರು ಸದ್ಗುರು ಸಿದ್ಧಾರೂಢರನ್ನು ವಿನಂತಿಸುತ್ತಾರೆ. ಆ ಸಭೆಗೆ ಬೆಂಬಲಿಸಬಾರದೆಂದು ಸಿದ್ಧಾರೂಢರ ಮೇಲೆ ಪ್ರಭಾವ ಬೀರಲು ಪುಣೆಯಿಂದ ಬಂದಿದ್ದ ಬಾಲಗಂಗಾಧರನಾಥ್ ತಿಲಕ ಅದರಲ್ಲಿ ವಿಫಲರಾಗಿಗಿದ್ದರು. ಇಂತಹ ಉದಾತ್ ಆರೂಢ ಪರಂಪರೆಯ ಮಠಗಳಿಗೆ ಇಂದು ಮಠಾಧೀಶರಾಗಿರುವ ಅನೇಕರ ಹೆಸರುಗಳು ನಿತ್ಯಾನಂದ ಮಾದರಿಯಲ್ಲಿ ಆನಂದ ಶಬ್ಧದಿಂದ ಕೊನೆಗೊಳ್ಳುತ್ತವೆ. ಈ ಆನಂದರುಗಳು ಯಾವತ್ತೂ ಆರೂಢ ಪರಂಪರೆಯನ್ನಾಗಲಿˌ ಆ ಸಾಧನಾ ಮಾರ್ಗವನ್ನಾಗಲಿ ಜನರಿಗೆ ಭೋದಿಸುವುದಿಲ್ಲ. ಬದಲಿಗೆ ಇವರು ಸನಾತನ ವೈದಿಕ ಧರ್ಮ ಮತ್ತು ಹಿಂದುತ್ವದ ಕುರಿತೆ ಅಧಿಕ ಮಾತನಾಡುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹಿಂದುತ್ವದ ವಿಷವನ್ನು ಯುವಕರಲ್ಲಿ ಬಿತ್ತುವಲ್ಲಿ ಈ ಆನಂದರುಗಳ ಪಾತ್ರ ಬಹಳ ದೊಡ್ಡದಿದೆ.
ಈ ಆರೂಢ ಮಠಾಧೀಶರಲ್ಲಿ ಒಬ್ಬ ಆನಂದ ಎಂಬಾತ “ಹೆಜ್ಜೆ ಹೆಜ್ಜೆಗೆ ಶಿವಶಿವ ಎನ್ನುತ್ತಿದ್ದ ಬಸವಣ್ಣ ಹಿಂದೂ ವಿರೋಧಿ ಹೇಗಾದ” ಎಂದು ಜನಾಂಗದ್ವೇಷ ಹರಡುವ ಫೇಸ್ಬುಕ್ಕಿನ ಸಂಘಿ ಪೇಜೊಂದರಲ್ಲಿ ಊಳಿಟ್ಟಿದ್ದನ್ನು ನಾವು ನೋಡಿದ್ದೇವೆ. ಅಸಲಿಗೆ ಈ ಆನಂದನಿಗೆ ಆರೂಢ ತತ್ವವೆ ಸರಿಯಾಗಿ ತಿಳಿದಿಲ್ಲದಿರುವಾಗ ಇನ್ನು ಬಸವಣ್ಣನವರ ಶಿವ ಯಾರು ಎನ್ನುವುದಾಗಲಿˌ ಶರಣರ ಪ್ರಗತಿಪರˌ ಜೀವನ್ಮುಖಿ ಚಿಂತನೆಗಳಾಗಲಿ ಹೇಗೆ ತಿಳಿದಾವು. ಇಂತವರೆಲ್ಲ ಅಧ್ಯಾತ್ಮದ ಹೆಸರಿನಲ್ಲಿ ಧಂದೆಗಳನ್ನು ಕಟ್ಟುತ್ತಿದ್ದಾರೆ ಹಾಗು ಹಿಂದುತ್ವವಾದಿಗಳ ರಾಯಭಾರಿಗಳಾಗಿ ಜನಾಂಗ ದ್ವೇಷವನ್ನು ಬಿತ್ತುತ್ತಿದ್ದಾರೆಯೆ ಹೊರತು ಮತ್ತೇನನಲ್ಲ. ಜೀವನ್ಮುಖಿ ಚಿಂತನೆಗಳನ್ನು ಬದಿಗಿರಿಸಿ ಕರ್ಮ ಸಿದ್ಧಾಂತ ಮತ್ತು ಭಗವದ್ಗೀತೆಯ ಮೇಲೆ ಮಾತನಾಡುವವರನ್ನು ಬಸವಣ್ಣನವರು ಹೀಗೆ ವ್ಯಾಖ್ಯಾನಿಸುತ್ತಾರೆ:
“ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ
ಹಿರಿಯರೆನ್ನೆ, ಇವರು ಹಿರಿಯರುಗಳೇ?
ಯಾಗನಟ್ಟು ವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ?
ಇಂತು ವಿದ್ಯೆ ಗುಣ ಜ್ಞಾನ ಧರ್ಮ
ಆಚಾರ ಶೀಲಂಗಳ, ನಮ್ಮ ಕೂಡಲಸಂಗನ
ಶರಣರು ಸಾಧಿಸಿದ ಸಾಧನೆಯನೆ ಸಾಧಿಸುವುದು.”
~ ಬಸವಣ್ಣ.
ತಮ್ಮನ್ನು ತಾವು ಮಹಾನ್ ಪಂಡಿತರೆಂದು ಭ್ರಮಿಸಿರುವ ವೇದ, ಶಾಸ್ತ್ರ, ಉಪನಿಷತ್ತಿನ ಮೇಲೆ ಸುಲಲಿತವಾಗಿ ಪ್ರವಚನ ಮಾಡುವ ಪಂಡಿತರನ್ನು ಬಸವಣ್ಣನವರು ಹಿರಿಯರಲ್ಲವೆಂದು ಹೇಳುತ್ತಾರೆ. ಇವರಿಗಿಂತ ಜೀವನ್ಮುಖಿ ಚಿಂತನೆ ಮಾಡುವ ಶರಣರೇ ದೊಡ್ಡವರು ಎಂದು ಅಧಿಕಾರಯುತವಾಗಿ ಬಸವಣ್ಣ ಸಾರುತ್ತಾರೆ. ಗೀತೆಯ ಬಗ್ಗೆ ಪ್ರವಚನ ಮಾಡುವವರನ್ನು ಬಸವಣ್ಣನವರು ಮಾಯಾಭ್ರಾಂತಿ ಕವಿದ ಗೀತಜ್ಞರು ಎಂದು ವಿಡಂಬಿಸುತ್ತಾರೆ. ಹಾಗಾಗಿ, ವೇದ, ಶಾಸ್ತ್ರ , ಆಗಮ, ಪುರಾಣ, ಭಗವದ್ಗೀತೆಗಳು ಬಲ್ಲೆವೆಂದು ಅವುಗಳ ಬಗ್ಗೆ ಪುಂಖಾನುಪುಂಖ ಪ್ರವಚನ ಮಾಡುವವರು ಪಂಡಿತರು ಅಲ್ಲ , ಹಿರಿಯರೂ ಅಲ್ಲ ಎನ್ನುವ ಮಾತು ವಿಚಾರವಾದಿ ಹಾಗು ಶ್ರೇಷ್ಟ ದಾರ್ಶನಿಕ ಬಸವಣ್ಣನವರು ಒಂಬತ್ತುನೂರು ವರ್ಷಗಳ ಹಿಂದೆಯೆ ಸಾರಿ ಹೇಳಿದ್ದಾರೆ. ಹಾಗಾಗಿ, ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ಇಂದು ನಡೆಯುತ್ತಿರುವ ಅನಾಚಾರಗಳಿಗೆ ಕಡಿವಾಣ ಹಾಕುವ ಶಕ್ತಿ ಅದು ಕೇವಲ ಬುದ್ಧ, ಬಸವ, ಗಾಂಧಿ, ಪೆರಿಯಾರ್ ಮುಂತಾದ ದಾರ್ಶನಿಕರ ತತ್ವಗಳಿಗೆದೆಯೆ ಹೊರತು ಮತ್ತಾವ ಸನಾತನ ಕರ್ಮಟ ಸಿದ್ಧಾಂತಗಳಿಗೂ ಇಲ್ಲ ಎನ್ನುವುದು ಸೂರ್ಯ-ಚಂದ್ರರಷ್ಟೆ ಸತ್ಯವಾಗಿದೆ. ಸಮಕಾಲೀನ ತಲ್ಲಣಗಳಿಗೆ ಪರಿಹಾರವನ್ನು ಈ ಮೇಲಿನ ಮಹನೀಯರ ತತ್ವಗಳಲ್ಲೆ ಹುಡುಕುವ ಅನಿವಾರ್ಯತೆ ಇಂದು ನಮ್ಮ ಮುಂದಿದೆ.