ಬೆಂಗಳೂರು : ಬಿಡದಿ ಟೌನ್ ಶಿಪ್ ರೈತರ ಹಿಡುವಳಿ ಜಮೀನನ್ನು ರಿಯಲ್ ಎಸ್ಟೇಟ್ ದಂಧೆಗೆ ತಳ್ಳಿ ದುಡ್ಡು ಮಾಡುವ ಯೋಜನೆಯಾಗಿದೆ. ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವುದು ಇದ್ಯಾವ ಸರ್ಕಾರ ಎಂದು ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನತಾದಳದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿರುವ ಬಡ ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಅಂತಿಮ ಗೆಜೆಟ್ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಅಲ್ಲದೆ ಇದು ರೈತರ ಮೇಲೆ ದಬ್ಬಾಳಿಕೆ ನಡೆಸುವ ಕೆಲಸವಾಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರವು ಜಾರಿಗೆ ತರಲಿರುವ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ದಂಧೆ ಅಡಗಿದೆ. ಮಾಗಡಿ ಶಾಸಕ ಬಾಲಕೃಷ್ಣ ಗೋಸುಂಬೆ ರಾಜಕಾರಣ ಬಿಡಬೇಕಾಗುತ್ತದೆ, ಅಧಿಕಾರದಲ್ಲಿದ್ದಾಗ ಒಂದು, ಇಲ್ಲದಿದ್ದಾಗ ಇನ್ನೊಂದು ಹೇಳಿಕೆ ನೀಡುತ್ತಿರುವುದನ್ನು ನೋಡಿದಾಗ ಎಲ್ಲವೂ ಗೊತ್ತಾಗುತ್ತದೆ. ಕುಮಾರಸ್ವಾಮಿಯವರ ಮಾತನಾಡುವ ಅವರು ರೈತರ ಪರವಾಗಿ ನಿಲ್ಲಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : 4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ, ಯಾರೆಂದು ಗೊತ್ತಿದೆ: ಹೆಚ್.ಡಿ ಕುಮಾರಸ್ವಾಮಿ
ನಾವು ಯಾವತ್ತೂ ರೈತರ ಪರವಾಗಿದ್ದೇವೆ, ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ನಾವು ಬಿಡೋದಿಲ್ಲ. ಟೌನ್ ಶಿಪ್ ನಿರ್ಮಾಣ ಮಾಡೋಕೆ ಹೋದ್ರೆ ರಕ್ತ ಕ್ರಾಂತಿ ಆಗುತ್ತದೆ. ಪೋಸ್ಟರ್ ಅಂಟಿಸುವ ನೀಚ ಕೆಲಸ ಮಾಡೋದಕ್ಕೆ ಕಾಂಗ್ರೆಸ್ ಕೆಲವರನ್ನು ಇಟ್ಕೊಂಡಿದೆ. ಆದರೆ ಬಿಡದಿಯಲ್ಲಿ ಅಂಟಿಸಿದ್ದ ಪೋಸ್ಟರ್ ಕಂಡು ನಮ್ಮ ಕಾರ್ಯಕರ್ತರು ಆಕ್ರೋಶಗೊಂಡು ಕುಮಾರಸ್ವಾಮಿ ಬಳಿ ಬಂದಿದ್ದರು. ಆಗ ಕಾರ್ಯಕರ್ತರು ತಾಳ್ಮೆ ವಹಿಸುವಂತೆ ತಿಳಿಸಿದ್ದೇವೆ. ನಮ್ಮ ನಿಲುವು ಸ್ಪಷ್ಟವಾಗಿದೆ, ಟೌನ್ ಶಿಪ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಲ್ ಟನ್ ರೆಸಾರ್ಟ್ಗೆ ನೀಡಿದಂತೆ ರೈತರಿಗೂ ಎಕರೆಗೆ 12 ಕೋಟಿ ರೂಪಾಯಿ ಪರಿಹಾರ ನೀಡಿ ಏನಾಗುತ್ತದೆ? ರೈತರಿಗೂ ಅನುಕೂಲ ಮಾಡಿಕೊಡಿ, ದ್ವಂದ್ವ ನಿಲುವಿನಿಂದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಹೊರಗೆ ಬರಲಿ. ಈ ಸರ್ಕಾರಕ್ಕೆ ನಿಜವಾಗಿಯೂ ಪಾಪ ಪ್ರಜ್ಞೆ ಇದ್ರೆ, ಕಾರಂತ್ ಬಡಾವಣೆಯ ಸಮಸ್ಯೆ ಬಗೆಹರಿಸಲಿ. ಹೀಗೆ ಬಡಾವಣೆಗಳಲ್ಲಿ ನಡೆದ ಅನಾನುಕೂಲಗಳನ್ನು ಪರಿಹರಿಸಲಿ. ಈ ಬಿಡದಿ ಟೌನ್ ಶಿಪ್ ಯೋಜನೆ ಬರೀ ದುಡ್ಡು ಹೊಡೆಯೋ ಸ್ಕೀಂ ಆಗಿದೆ ಎಂದು ರಮೇಶ್ ಗೌಡ ಲೇವಡಿ ಮಾಡಿದ್ದಾರೆ.






