ಅಫ್ಗಾನಿಸ್ತಾನದಲ್ಲಿ ತಾಲೀಬಾನರ ಪುನರಾಗಮನ ಭಾರತದ ಹಿಂದೂ ಮೂಲಭೂತವಾದಿಗಳಿಗೆ ಮುಸಲ್ಮಾನರ ವಿರುದ್ಧ ಹೊಸ ಅಲೆಯ ದ್ವೇಷಾಂದೋಲನವನ್ನು ಆರಂಭಿಸಲು ನೆಪವಾಗಿದೆ.
ಮುಸಲ್ಮಾನ ಸಮುದಾಯದ ರಾಜಕಾರಣಿಗಳು, ಬರಹಗಾರರು, ಪತ್ರಕರ್ತರು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಮತ್ತು ಸಮಾನ್ಯ ನಾಗರೀಕರು ಬಲಪಂಥೀಯರ ಈ ದ್ವೇಷಾಂದೋಲನಕ್ಕೆ ಬಲಿಯಾಗುತ್ತಿದ್ದಾರೆ. ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಹಲವಾರು ಸದಸ್ಯರು ಈ ದ್ವೇಷಾಂದೋಲನವನ್ನು ಪ್ರಚೋದಿಸುವದರಲ್ಲಿ ಭಾಗಿಯಾಗಿದ್ದಾರೆ.
ತಾಲೀಬಾನರು ಅಫ್ಗಾನಿಸ್ತಾನದ ಅಮೇರಿಕಾ-ಬೆಂಬಲಿತ ಸರಕಾರದಿಂದ ಅಧಿಕಾರವನ್ನು ಕಸಿದುಕೊಂಡ ತಕ್ಷಣ ಭಾರತದಲ್ಲಿ #GoToAfghanistan ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಲು ಶುರುವಾಯಿತು. ಇದು ಈ ಹಿಂದೆ #GoToPakistan ಎಂದು ಟ್ರೆಂಡ್ ಮಾಡಿಸಿದ್ದ ಬಲಪಂಥೀಯ ಗುಂಪುಗಳದ್ದೇ ಕೆಲಸವಾಗಿದೆ.
“ಬಿಜೆಪಿ ಯ ಪರವಾಗಿರುವವರು ಮತ್ತು ವಿರುದ್ಧವಾಗಿರುವವರು, ಎಲ್ಲರೂ ‘ತಾಲೀಬಾನಿ’ ಎಂಬ ಪದವನ್ನು ಸಾರ್ವಜನಿಕರ ಪದಕೋಶದಲ್ಲಿ ತುಂಬಲು ಯತ್ನಿಸುತ್ತಿದ್ದಾರೆ.” ಎಂದು ಕವಿ ಮತ್ತು ಹೋರಾಟಗಾರರಾದ ಹುಸೇನ್ ಹೈದ್ರೀ ಅವರು ಅಲ್ ಜಝೀರಾ ಬಳಿ ಹಂಚಿಕೊಂಡಿದ್ದಾರೆ.
“’ಪಾಕಿಸ್ತಾನಿ’, ‘ಜಿಹಾದಿ’, ‘ಆತಂಕವಾದಿ’, ಹೀಗೆ ಮುಸಲ್ಮಾನರನ್ನು ದೂಷಿಸುವುದಕ್ಕೆ ಬಳಸುವ ಪದಗಳನ್ನು ಹೇಗೆ ಜನರ ಬಾಯಿಗಳಲ್ಲಿ ತೂರಿಸಲು ಯತ್ನಿಸಿದರೋ, ಇದು ಅದೇ ಯತ್ನದ ಭಾಗವಾಗಿದೆ.”
ತಾಲೀಬಾನರು ಕಾಬುಲ್ ನಲ್ಲಿ ಅಧಿಕಾರವನ್ನು ಪಡೆದ ಕೆಲವೇ ಕ್ಷಣಗಳಲ್ಲಿ ಬಿಜೆಪಿ ಯ ರಾಜಕಾರಣಿ ರಾಮ್ ಮಾಧವ್ ಅವರು 1921ರ ಮೊಪ್ಲಾಹ್ ದಂಗೆಯನ್ನು ‘ತಾಲೀಬಾನಿ ಮನಸ್ಥಿತಿಯ’ ಮೊದಲ ಅಭಿವ್ಯಕ್ತಿ ಎಂದು ಕರೆದು ಕೇರಳಾದ ರಾಜ್ಯ ಸರಕಾರ ಅದನ್ನು ಮರೆಸಲು ಯತ್ನಿಸುತ್ತಿದೆ ಅಂದು ಆರೋಪಿಸಿದರು.
ಮಾಧವ್ ಅವರು ಕೇರಳಾದಲ್ಲಿ ಬ್ರಿಟೀಷರ ಹಾಗು ಉಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಮೊದಲ ಬಾರಿಗೆ ರೈತರು ಹೋರಾಡಿದ ಘಟನೆಯ ಶತಮಾನೋತ್ಸದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ಮತ್ತೊಂದು ಘಟನೆಯಲ್ಲಿ, ಮಧ್ಯ ಪ್ರದೇಶದ ಮೊಹರಮ್ ಯಾತ್ರೆಯೊಂದರಲ್ಲಿ ಮುಸಲ್ಮಾನರು ಪಾಕಿಸ್ತಾನ ಪರವಾದ ಘೋಷಣೆಗಳನ್ನು ಕೂಗಿದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಈ ಘಟನೆಗೆ ಪ್ರತಿಕ್ರಯಿಸುತ್ತಾ “ತಾಲೀಬಾನಿ ಮನಸ್ಥಿತಿಯನ್ನು ಸಹಿಸುವುದಿಲ್ಲ” ಎಂದು ಹೇಳಿಕೆ ನೀಡಿದರು. ಅವರು ಪ್ರತಿಕ್ರಯಿಸಿ ಎರಡು ದಿನಗಳಾದ ಮೇಲೆ ಪ್ರಮುಖ ಸತ್ಯಶೋಧಕ ಜಾಲತಾಣವಾಗಿರುವ ಆಲ್ಟ್ ನ್ಯೂಸ್ ಮಾಧ್ಯಮದ ವರದಿಗಳು ಕಲ್ಪಿತವಾದದ್ದು ಎಂದು ತಿಳಿಸಿದೆ.
ಆಸ್ಸಾಂ ರಾಜ್ಯದಲ್ಲಿ, ಇಸ್ಲಾಮ್ ವಿದ್ವಾಂಸರು, ರಾಜಕಾರಣಿಯೊಬ್ಬರು ಮತ್ತು ಸ್ಥಳೀಯ ಪತ್ರಕರ್ತರೊಬ್ಬರನ್ನು ಸೇರಿದಂತೆ 15 ಮುಸಲ್ಮಾನರನ್ನು ಪೋಲೀಸರು ಬಂಧಿಸಿದರು. ತಾಲೀಬಾನ್ ಗಳಿಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸಿದರು ಎಂದು ಆರೋಪಿಸಿ ಅವರನ್ನು UAPA ಕಾಯ್ದೆಯಡಿ ಬಂಧಿಸಲಾಯಿತು. ಇದೇ ಜನವಿರೋಧಿ ಕಾಯ್ದೆಯನ್ನು ಬಳಸಿ ಹಲವಾರು ಮುಸಲ್ಮಾನರನ್ನು ಹಾಗು ಸರಕಾರವನ್ನು ಟೀಕಿಸುವವರನ್ನು ಬಂಧಿಸಲಾಗಿದೆ.
“ತಾಲೀಬಾನಿಗಳಿಂದ ನಮಗೇನಾಗಬೇಕು?”
ದ್ವೇಷಾಂದೋಲನವನ್ನು ವಿರೋಧಿಸುವ ಅಥವಾ ಮುಸಲ್ಮಾನರ ಮೇಲಿನ ಕ್ರೌರ್ಯಗಳ ವಿರುದ್ಧ ದನಿ ಎತ್ತುವ ಪ್ರತಿಯೊಬ್ಬರನ್ನು ತಾಲೀಬಾನಿಗಳು ಎಂದು ಬಿಂಬಿಸಲಾಗುತ್ತಿದೆ. ಅವರು ತಾಲೀಬಾನ್ ಸಂಘಟನೆಯನ್ನು ಸಾರ್ವಜನಿಕವಾಗಿ ಖಂಡಿಸಿದ್ದರೂ ಅವರನ್ನು ತಾಲಿಬಾನಿಗಳು ಎಂದು ಕರೆಯಲಾಗುತ್ತಿದೆ ಎಂದು ಹೈದ್ರಿ ಅವರು ಹೇಳಿಕೆ ನೀಡಿದ್ದಾರೆ.
ಲಕ್ನೌ ನಗರದಲ್ಲಿ ಖ್ಯಾತ ಕವಿ ಮುನ್ನಾವರ್ ರಾಣಾ ಅವರು ತಾಲೀಬಾನರ ನಡುವೆ ಹಾಗು ರಾಮಾಯಣದ ಕರ್ತೃ ಆದ ವಾಲ್ಮೀಕಿ ಅವರ ನಡುವೆ ಹೋಲಿಕೆ ಮಾಡಿದಕ್ಕೆ ಹಿಂದೂ ಬಲಪಂಥೀಯರ ಆಗ್ರಹಕ್ಕೆ ಒಳಗಾದರು.
ಎರಡು ವಾರಗಳ ಹಿಂದೆ ಟಿವಿ ಚರ್ಚೆಯೊಂದರಲ್ಲಿ ವ್ಯಕ್ತಿಗಳು ಕಾಲಕಾಲಕ್ಕೆ ಬದಲಾಗುತ್ತಾರೆ ಎಂದು ನಿರೂಪಿಸಲು ರಾಣಾ ಅವರು ವಾಲ್ಮೀಕಿಯ ಉದಾಹರಣೆಯನ್ನು ತೆಗೆದುಕೊಂಡಿದ್ದರು. “ವಾಲ್ಮೀಕಿ ರಾಮಾಯಣ ಬರೆದು ದೇವರಾದರು. ಅದಕ್ಕೂ ಮುನ್ನ ಅವರು ದರೋಡೆಕೋರರಾಗಿದ್ದರು.” ಎಂದು ರಾಣಾ ಹೇಳಿದ್ದರು.
ರಾಣಾ ಅವರ ಪ್ರಕಾರ ತಾವು ಆಡಿದ್ದರಲ್ಲಿ ತಪ್ಪೇನು ಇರಲಿಲ್ಲ, ಆದರೆ ಅವರ ಮುಸಲ್ಮಾನ ಅಸ್ಮಿತೆಯಿಂದಾಗಿ ಅವರನ್ನು ದೂಷಿಸಲಾಗುತ್ತಿದೆ. ಜೊತೆಗೆ ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ಎದುರಾಗುತ್ತಿರುವದರಿಂದ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಯತ್ನದ ಭಾಗವಿದು ಎಂಬುದು ಅವರ ಅಭಿಪ್ರಾಯ.
“ಭಾರತೀಯರಾಗಿಯೋ, ಮುಸಲ್ಮಾನರಾಗಿಯೋ, ನಾವೆಂದು ಉಗ್ರಗಾಮಿಗಳನ್ನು ಬೆಂಬಲಿಸಿದ್ದೇವೆ? ತಾಲೀಬಾನಿಗಳಿಂದ ನಮಗೇನಾಗಬೇಕು? ಜಗತ್ತಿನಲ್ಲಿ ಯಾವುದೇ ಭಾಗದಲ್ಲಿ ಒಬ್ಬ ಮುಸಲ್ಮಾನ ಬಾಂಬ್ ಸಿಡಿದರೂ, ನಾವೇ ಆರೋಪಕ್ಕೊಳಗಾಗುತ್ತೇವೆ.” ಎಂದು ರಾಣಾ ಅಲ್ ಜಝೀರಾ ಗೆ ಹೇಳಿದರು.
ಮತ್ತೊಬ್ಬ ಮುಸಲ್ಮಾನ ಮತ್ತು ಉತ್ತರ ಪ್ರದೇಶದ ರಾಜಕಾರಣಿ, ಶಫೀಕುರ್ ರೆಹಮಾನ್ ಬಾರ್ಕ್ ಬ್ರಿಟೀಷರ ವಿರುದ್ಧ ಭಾರತದ ಹೋರಾಟವನ್ನು ಅಮೇರಿಕಾದ ವಿರುದ್ಧ ಅಫ್ಗಾನಿಸ್ತಾನದ ಹೋರಾಟಕ್ಕೆ ಹೋಲಿಸಿದ್ದಕ್ಕೆ ದೇಶದ್ರೋಹ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ಆಗಸ್ಟ್ 17 ರಂದು ANI ಪೋಸ್ಟ್ ಮಾಡಿದ್ದ ವೀಡಿಯೋ ಒಂದರಲ್ಲಿ ಬಾರ್ಕ್ ಅವರು ಭಾರತ ಬ್ರಿಟೀಷರ ಆಕ್ರಮಣಕ್ಕೆ ಒಳಗಾಗಿದ್ದಾಗ ಭಾರತೀಯರು ಸ್ವತಂತ್ರಕ್ಕಾಗಿ ಹೋರಾಡಿದರು ಎಂದು ಹೇಳಿರುವುದನ್ನು ಕಾಣಬಹುದು.
“ಈಗ ಅವರು (ಅಫ್ಗಾನಿಸ್ತಾನ) ಅಮೇರಿಕಾದ ಆಳ್ವಿಕೆಯಲ್ಲಿದ್ದರು, ಅದಕ್ಕೂ ಮುನ್ನ ರಷ್ಯಾ. ಅವರಿಗೂ (ತಾಲೀಬಾನರಿಗೂ) ಸ್ವಾತಂತ್ರ ಬೇಕಿತ್ತು ಮತ್ತು ಅವರ ದೇಶವನ್ನು ಉಳಿಸಿಕೊಳ್ಳಬೇಕಿತ್ತು.” ಎಂದು ಹೇಳಿದ್ದರು.
ಹೀಗಿರುವಾಗ ಅವರ ವಿರುದ್ಧ ಹಾಗು ಅದೇ ರಾತ್ರಿ ಅಂತೆಯೇ ಮಾತನಾಡಿದ್ದ ಇನ್ನು ಇಬ್ಬರ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ.
ಬಾರ್ಕ್ ಅವರ ಪ್ರಕಾರ ಅವರ ಹೇಳಿಕೆಯನ್ನು ತಿರುಚಲಾಗಿದೆ. ತಾಲೀಬಾನರು ಅಧಿಕಾರ ಕಸಿದುಕೊಂಡಿರುವುದು ಅಫ್ಗಾನಿಸ್ತಾನದ ಆಂತರಿಕ ವಿಷಯ ಎಂಬುದು ಅವರ ಮಾತಿನ ಅರ್ಥವಾಗಿತ್ತು.
“ಬೇರೆ ದೇಶಗಳಲ್ಲಿ ಸರಕಾರಗಳು ಬದಲಾಗುತ್ತಾ ಹೋಗುತ್ತವೆ. ಅಲ್ಲಿನ ಆಂತರಿಕ ವಿಷಯದ ಬಗ್ಗೆ ನಾವೇಕೆ ಆಸಕ್ತಿ ವಹಿಸಬೇಕು? ನಮ್ಮ ದೇಶ (ಸರಕಾರ) ತಾಲೀಬಾನರನ್ನು ಪರಿಗಣಿಸಬೇಕೋ ಇಲ್ಲವೋ ಎಂಬ ನೀತಿಯೊಂದನ್ನು ತರುತ್ತದೆ. ನಾವು ಆ ನೀತಿಗೆ ಬದ್ಧರಾಗಿರುತ್ತೇವೆ.” ಎಂದಿದ್ದಾರೆ ಬಾರ್ಕ್.
ಒಂದೆಡೆ ಬಿಜೆಪಿಯ ನಾಯಕರು ಮತ್ತು ವಕ್ತಾರರು ತಾಲೀಬಾನರನ್ನು ಉಗ್ರಗಾಮಿಗಳು ಎಂದು ಕರೆದರೆ, ಮತ್ತೊಂದೆಡೆ, ಕತಾರ್ ದೇಶದ ಭಾರತೀಯ ರಾಯಭಾರಿಯು ತಾಲೀಬಾನರ ರಾಜಕೀಯ ಮುಖ್ಯಸ್ಥರನ್ನು ಮಂಗಳವಾರ ದೋಹಾದಲ್ಲಿ ಭೇಟಿ ಮಾಡಿದ್ದಾರೆ.
ರಾಣಾ ಅವರಂತೆಯೇ ಬಾರ್ಕ್ ಅವರು ಸಹ ಉತ್ತರ ಪ್ರದೇಶದ ಚುನಾವಣಾ ತಂತ್ರವಾಗಿ ಬಿಜೆಪಿ ತನ್ನ ಮಾತುಗಳನ್ನು ತಿರುಚುತ್ತಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಭಾರತೀಯ ಚುನಾವಣಾ ರಾಜಕಾರಣದಲ್ಲಿ ಪ್ರಮುಖ ಪಾತ್ರವೊಂದನ್ನು ವಹಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಇಸ್ಲಾಮಿನ ಪಂಡಿತರು ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಸದಸ್ಯರೂ ಆದ ಸಾಜದ್ ನೊಮಾನಿಯವರು ತಾಲೀಬಾನರಿಗೆ ಶುಭಾಷಯಗಳನ್ನು ಸಲ್ಲಿಸಿದ ವೀಡಿಯೋ ಇನ್ನಷ್ಟು ವಿವಾದವನ್ನು ಸೃಷ್ಟಿ ಮಾಡಿದೆ.
ಹೀಗಿರುವಾಗ, ಹೋರಾಟಗಾರರ, ಪತ್ರಕರ್ತರ ಹಾಗು ಮುಸಲ್ಮಾನ ಬುದ್ಧಿಜೀವಿಗಳ ಗುಂಪೊಂದು ತಾಲೀಬಾನರ ಕ್ರೌರ್ಯವನ್ನು ಹಾಗು ‘ಒಂದು ವರ್ಗದ ಭಾರತೀಯ ಮುಸಲ್ಮಾನರ ಉದ್ರೇಕವನ್ನು’ ಖಂಡಿಸಿದ್ದಾರೆ.
ಬಾರ್ಕ್, ನೊಮಾನಿ ಮತ್ತು ರಾಣಾ ಅವರ ಕುರಿತು ಅಲ್ ಜಝೀರಾ ಒಡನೆ ಮಾತನಾಡಿದ ರಾಜಕೀಯ ಮಾನವಶಾಸ್ತ್ರಜ್ಞ, ಇರ್ಫಾನ್ ಅಹಮದ್ ಅವರು ಯಾವುದೇ ಪ್ರಜಾಪ್ರಭುತ್ವವಾದಿ ಇವರ ಮಾತುಗಳನ್ನು ಖಂಡಿಸುವ ಹಾಗಿಲ್ಲ ಎಂದು ಹೇಳಿದರು. ‘ಉಗ್ರವಾದದ ವಿರುದ್ಧದ ಯುದ್ಧ’ ಎಂಬ ಹೆಸರಿನಲ್ಲಿ 20 ವರ್ಷಗಳ ಕಾಲ ಒಂದು ಬಡದೇಶದ ಮೇಲೆ ನಡೆದಂತಹ ಆಕ್ರಮಣ ಮತ್ತು ಕ್ರೌರ್ಯವನ್ನು ಎಲ್ಲಾ ಪ್ರಜಾಪ್ರಭುತ್ವವಾದಿಗಳು ಖಂಡಿಸತಕ್ಕದ್ದು ಎಂದು ಅಹಮದ್ ಅಭಿಪ್ರಾಯ ಪಟ್ಟರು.
“ಅವರು ತಾಲೀಬಾನರ ಕ್ರೌರ್ಯಗಳನ್ನು ಶ್ಲಾಘಿಸುತ್ತಿಲ್ಲ. ಬದಲಾಗಿ ಕಾಬುಲ್ ನಗರವನ್ನು ಅಹಿಂಸಾತ್ಮಕವಾಗಿ ಪ್ರವೇಶಿಸಿದ್ದು, ಹೆಣ್ಣು ಮಕ್ಕಳ ಶಿಕ್ಷಣವನ್ನು ಮುಂದುವರೆಸುವುದಾಗಿ ಅವರು ನೀಡಿರುವ ಭರವಸೆ, ಮತ್ತು ಪಂಥೀಯ ಸಾಮರಸ್ಯವನ್ನು ಅವರು ಸೂಚಿಸಿದ್ದಾರೆ.” ಎಂಬುದು ಜರ್ಮನಿಯ ಗೊಟಿಂಗೆನ್ ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಫಾರ್ ದ ಸ್ಟಡಿ ಆಫ್ ರಿಲೀಜಿಯಸ್ ಅಂಡ್ ಎಥ್ನಿಕ್ ಡೈವರ್ಸಿಟಿಯ ಸಂಶೋಧನಕಾರ, ಅಹಮದ್ ಅವರ ಅಭಿಪ್ರಾಯ.
ಉತ್ತರ ಪ್ರದೇಶದ ಚುನಾವಣೆಗಳು ಸಮೀಪಿಸುತ್ತಿರುವಾಗ ತಾಲೀಬಾನರ ಪರವಾಗಿದ್ದಂತೆ ಗೋಚರಿಸಿದ ಹೇಳಿಕೆಗಳು ಬಿಜೆಪಿಯ ನಾಯಕರಿಗೆ ಮತ್ತು ವಕ್ತಾರರಿಗೆ ಮೇವು ಸಿಕ್ಕಂತಾಯಿತು.
ಉತ್ತರ ಪ್ರದೇಶದ ಖಾವಿಧಾರಿ ವಿವಾದಾತ್ಮಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಚ್ಚು ಸಮಯ ತೆಗೆದುಕೊಳ್ಳದೆ ಅಂತಹ ಹೇಳಿಕೆಗಳು ಭಾರತವನ್ನು ‘ತಾಲಿಬಾನೀಕರಿಸುವ ಪ್ರಯತ್ನ’ ಎಂದು ಸ್ಪಂದಿಸಿಯೇ ಬಿಟ್ಟರು.
“ಅಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕ್ರೌರ್ಯದ ರೀತಿ… ಆದರೆ ಇಲ್ಲಿ ಕೆಲವರು ನಾಚಿಕೆಯಿಲ್ಲದೆ ತಾಲೀಬಾನರನ್ನು ಬೆಂಬಲಿಸುತ್ತಿದ್ದಾರೆ” ಎಂದು ರಾಜ್ಯ ವಿಧಾನಸಭೆಯಲ್ಲಿ ಅವರು ಹೇಳಿದರು.
ಆದಿತ್ಯನಾಥರ ಸರಕಾರ ದೇವಬಂದ್ ನಲ್ಲಿ ಹೊಸ ಉಗ್ರವಿರೋಧಿ ಕೇಂದ್ರವೊಂದನ್ನು ನೇಮಿಸುವುದಾಗಿ ಘೋಷಿಸಿದೆ. ತಾಲೀಬಾನರ ಸಿದ್ಧಾಂತವು ಸಡಿಲವಾಗಿ ದೇವಬಂದ್ ತತ್ವ ಸಿದ್ಧಾಂತದಿಂದ ಪ್ರಭಾವಿತಗೊಂಡಿದ್ದೂ, ದೇವಬಂದ್ ಎಂಬ ಸ್ಥಳ ಈ ವಿಚಾರಧಾರೆಯ ಜನ್ಮಸ್ಥಳವಾಗಿದೆ.
ಈ ಪ್ರಭಾವಿ ತತ್ವ ಸಿದ್ಧಾಂತ ವಿಶ್ವದಾದ್ಯಂತ ಲಕ್ಷಾಂತರ ಸಂಸ್ಥೆಗಳಿಗೆ ಸ್ಪೂರ್ಥಿಯಾಗಿದೆ.
ಉಗ್ರವಿರೋಧಿ ಕೇಂದ್ರದ ಕುರಿತು ಸ್ಪಂದಿಸಿದ ರಾಜ್ಯ ವಕ್ತಾರ ಶಲಭ್ ಮಣಿ ತ್ರಿಪಾಠಿ ಹೀಗೆ ಟ್ವೀಟ್ ಮಾಡಿದ್ದಾರೆ;”ತಾಲಿಬಾನಿಗಳ ಕ್ರೌರ್ಯದ ನಡುವೆ, ಉತ್ತರ ಪ್ರದೇಶದ ಸುದ್ದಿಯನ್ನೂ ಗಮನಿಸಿ. ದೇವಬಂದದಲ್ಲಿ ಉಗ್ರವಿರೋಧಿ ಕೇಂದ್ರವನ್ನು ಈ ಕೂಡಲೇ ಸ್ಥಾಪಿಸುವುದಾಗಿ ಯೋಗಿಜಿ ನಿರ್ಧರಿಸಿದ್ದಾರೆ.”
ಉತ್ತರ ಪ್ರದೇಶದ ರಾಜ್ಯ ಸರಕಾರ ‘ಮುಸ್ಲಿಂ-ವಿರೋಧಿ ನೀತಿಗಳನ್ನು ತಯಾರಿಸುವುದರಲ್ಲಿ ಮಗ್ನವಾಗಿದೆ’, ದೇವಬಂದವನ್ನು ಉಗ್ರರ ತಾಣ ಎಂದು ಕರೆಯುವುದರ ಮೂಲಕ ಹಾಗು ಅಲ್ಲಿ ಕೇಂದ್ರವೊಂದನ್ನು ಸ್ಥಾಪಿಸುವುದರ ಮೂಲಕ ಸರಕಾರ ‘ದ್ವೇಷದ ರಾಜಕಾರಣ’ ಮಾಡುತ್ತಿದೆ.
“ಇಂತಹ ನಾಮಪಟ್ಟಿಯನ್ನು ಪಡೆಯಲು ದೇವಬಂದ ಏನು ಮಾಡಿತ್ತು? ಅದು ಇಸ್ಲಾಮಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಒಂದು ಪಳಗುಸ್ಥಳವಷ್ಟೇ. ಇದರಲ್ಲಿ ತಪ್ಪೇನಿದೆ?”
“ಈ ಒಂದು ದ್ವೇಷದ ನೀತಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತದೆ ಎಂದು ಅವರು ನಂಬಿದ್ದಾರೆ.”
ಹಿಂದೂ ಮೂಲಭೂತವಾದಿಗಳು
ಭಾರತೀಯ ಮುಸಲ್ಮಾನರ ಮೇಲಿನ ದ್ವೇಷಪೂರಿತ ಹಲ್ಲೆಗಳು ಇದೇ ಮೊದಲೇನಲ್ಲ. ಸಾರ್ವಜನಿಕ ಗುಂಪು ಹಲ್ಲೆಗಳು ಮತ್ತು ಮುಸಲ್ಮಾನರ ವ್ಯವಹಾರಗಳ ಮೇಲಿನ ಹಲ್ಲೆಗಳು ದಿನನಿತ್ಯದ ಸಂಗತಿಗಳಾಗಿವೆ.
ಕಳೆದ ವರುಷ, ಕೊರೊನಾ ಸಾಂಕ್ರಾಮಿಕ ಹರಡಲಾರಂಭಿಸಿದಾಗ ತಬ್ಲಿಘಿ ಜಮಾತ್ ಎಂಬ ಮುಸಲ್ಮಾನ ಮತಪ್ರಚಾರಕರ ಗುಂಪೊಂದನ್ನು ವೈರಾಣು ಹರಡಿದ್ದಕ್ಕೆ ದೂಷಿಸಲಾಗಿತ್ತು.
ಯು.ಎಸ್. ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಂ ತನ್ನ 2020ರ ವರದಿಯಲ್ಲಿ ಭಾರತವನ್ನು ‘ವಿಶೇಷ ಕಳಕಳಿಯ ದೇಶ’ ಎಂದು ಕರೆದಿದೆ.
“ರಾಷ್ಟ್ರೀಯ ಸರಕಾರವು ತನ್ನ ಅಲ್ಪಸಂಖ್ಯಾತರ ಮೇಲೆ ಮತ್ತು ಅವರ ಪ್ರಾರ್ಥನಾ ಸ್ಥಳಗಳ ಮೇಲೆ ಹಲ್ಲೆ ಮಾಡಲು ಅವಕಾಶ ನೀಡಿತ್ತು. ಅಲ್ಲದೇ ದ್ವೇಷಪೂರಿತ ಭಾಷಣಗಳನ್ನು ಸಹಿಸಿಕೊಂಡು ಹಿಂಸೆಗೆ ಆಮಂತ್ರಣ ನೀಡಿದೆ.” ಎಂದು ಆ ವರದಿಯಲ್ಲಿ ಉಲ್ಲೇಖವಾಗಿದೆ.
ಕಾಬುಲ್ ನಗರದಲ್ಲಿ ತಾಲೀಬಾನರು ಅಧಿಕಾರ ವಹಿಸಿಕೊಂಡಾಗಿನಿಂದ ಭಾರತೀಯ ಸುದ್ದಿ ಮಾಧ್ಯಮಗಳು ಮುಸಲ್ಮಾನರನ್ನು ‘ತಾಲೀಬಾನರ ಸಮರ್ಥಕರು’ ಅಥವಾ ಅವರ ‘ವಕ್ತಾರರು’ ಎಂಬಂತೆ ಬಿಂಬಿಸುತ್ತಾ ಬರುತ್ತಿವೆ. ದೈನಂದಿನ ಟಿವಿ ಚರ್ಚೆಗಳಲ್ಲಿ ರಾಣಾ, ಬಾರ್ಕ್ ರಂತಹ ಪ್ರಭಾವಿ ಮುಸಲ್ಮಾನರು ತಮ್ಮನ್ನು ತಾವು ವಿವರಿಸಿಕೊಳ್ಳಲು ಯತ್ನಿಸುವಾಗ ಬಿಜೆಪಿ ವಕ್ತಾರರು ಅವರನ್ನು ತಾಲಿಬಾನಿಗಳು ಎಂದು ಪದೇ ಪದೇ ಕರೆಯುವುದನ್ನು ಗಮನಿಸಬಹುದು.
ಒಂದು ಚರ್ಚೆಯಲ್ಲಂತೂ ರಾಜ್ಯದ ಅಧಿಕಾರಿಯೊಬ್ಬರು ಅಫ್ಗಾನಿಸ್ತಾನದಲ್ಲಿ ಏನಾಗಿದೆ ಎಂಬುದರಿಂದ ಭಾರತ ಕಲಿತು, ‘ಇಸ್ಲಾಂ ಮೂಲಭೂತವಾದವನ್ನು’ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದರು.
ಸುಳ್ಳು ಮಾಹಿತಿಯ ಮಹಾಪೂರವೇ ಸುದ್ದಿ ಕೊಠಡಿಗಳಲ್ಲಿ ತುಂಬಿಹೋಗಿತ್ತು. ಸಿರಿಯಾ, ಯೆಮೆನ್ ಅಥವಾ ಇರಾಕ್ ದೇಶದ ಹಳೆಯ ಫೋಟೋ ಮತ್ತು ವೀಡಿಯೋಗಳನ್ನು ಅಫ್ಗಾನಿಸ್ತಾನದ ಚಿತ್ರಣಗಳೆಂದು ಹೇಳಲಾಗಿತ್ತು. ಹಲವಾರು ಸತ್ಯಾಶೋಧಕ ಜಾಲತಾಣಗಳು ಇವುಗಳು ಸುಳ್ಳು ಸುದ್ದಿಗಳು ಎಂದು ಸಾಬೀತು ಮಾಡಿದವು.
ಅಹಮದ್ ಅವರ ಪ್ರಕಾರ ಮುಸಲ್ಮಾನರು ಹೆಂಗಸರ ಮೇಲೆ ಕ್ರೌರ್ಯ ಮೆರೆಯುತ್ತಾರೆ ಎಂದು ಆರೋಪಿಸಿ ತಾಲೀಬಾನರ ವಿರುದ್ಧ ಹಾಗು ಒಟ್ಟಾರೆ ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂ ಮೂಲಭೂತವಾದಿಗಳು ಉನ್ಮಾದವನ್ನು ಪುನರ್ಚುರುಕುಗೊಳಿಸುತ್ತಿದ್ದಾರೆ.
ಎಲ್ಲೇ ಮುಸಲ್ಮಾನರನ್ನು ಒಳಗೊಂಡ ಭಯೋತ್ಪಾದಕ ಘಟನೆ ಸಂಭವಿಸಿದರೂ, ಅದನ್ನು ಭಾರತೀಯ ಮುಸಲ್ಮಾನರು ಸಾರ್ವಜನಿಕವಾಗಿ ಖಂಡಿಸಲೇಬೇಕು. ಈ ರೀತಿ ಆದಾಗಲೆಲ್ಲಾ ಪ್ರತಿ ಮುಸಲ್ಮಾನನನ್ನು ಸಮಾಜ ಪರಿಶೀಲಿಸುವಂತೆಯೇ ಕಾಣುತ್ತದೆ ಎಂದು ಹಲವಾರು ಭಾರತೀಯ ಮುಸಲ್ಮಾನರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹೊರದೇಶದ ಯಾವುದೋ ಘಟನೆಗೆ ಇಲ್ಲಿನ ಮುಸಲ್ಮಾನರು ಯಾಕೆ ಹೊಣೆಗಾರರಾಗಬೇಕು ಎಂದು ಕೇಳಿದಾಗ ಅಹಮದ್ ಹೀಗೆ ಉತ್ತರಿಸುತ್ತಾರೆ, “ನಿಮ್ಮ ಮತ ಇಸ್ಲಾಂ ಆಗಿರುವುದರಿಂದ ಮತ್ತು ಇಸ್ಲಾಂ ಜಾಗತಿಕ ಮತಗಳಲ್ಲಿ ಒಂದಾಗಿರುವುದರಿಂದ, ನೀವು ಅದನ್ನು ಖಂಡಿಸಲೇ ಬೇಕು ಎಂಬುದು ಎಲ್ಲರ ಕಲ್ಪನೆ.”
“ಆದರೆ ಇದಕ್ಕೆ ವಿಪರ್ಯಯವಾದದ್ದನ್ನು ಯಾರೂ ಕಲ್ಪಿಸಿಕೊಳ್ಳುವುದಿಲ್ಲ. ಅಂದರೆ, ಹೊರದೇಶದ ಮುಸಲ್ಮಾನರು ನಡೆಸುವ ಮಾನವೀಯ ಕಾರ್ಯಗಳಿಗೆ ಭಾರತದ ಮುಸಲ್ಮಾನರು ಹೊಣೆಗಾರರಾಗುವುದೇ ಇಲ್ಲ. ಅದಿರಲಿ, ಭಾರತದ ಮುಸಲ್ಮಾನರೇ ಅಂತಹ ಕೆಲಸಗಳನ್ನು ಕೈಗೆತ್ತಿಕೊಂಡಾಗ ಮಾಧ್ಯಮಗಳು ಅದನ್ನು ಸುದ್ದಿ ಮಾಡುವುದೇ ಇಲ್ಲ.”
ಮೂಲ: ಅಲ್ ಜಝೀರ
ಅನುವಾದ: ಸೂರ್ಯ ಸಾಥಿ