ಬೆಂಗಳೂರು : ಕುಮಾರಸ್ವಾಮಿಗೆ ನಮ್ಮ ಬಗ್ಗೆ ಟೀಕೆ ಮಾಡಲಿಲ್ಲ ಎಂದರೆ ರಾಜಕೀಯವಾಗಿ ಬದುಕಿರಲು ಆಗುವುದಿಲ್ಲ. ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಅವರು ವಿರೋಧ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ಮಾಡಿದ ಯೋಜನೆಯನ್ನೇ ನಾವು ಮುಂದುವರೆಸುತ್ತಾ ಇರುವುದು. ನಾನು ರೈತರ ಬಳಿ ಮಾತನಾಡಲು ಸಮಯ, ದಿನಾಂಕ ನಿಗದಿ ಮಾಡಿಕೊಂಡು ಹೋಗುತ್ತೇನೆ. ರೈತರು ನನಗೆ ಎರಡೇಟು ಹೊಡೆಯಬಹುದು, ಅಷ್ಟೇ ತಾನೇ..? ಬಟ್ಟೆ ಹರಿಯಬಹುದು, ಕಲ್ಲೆಸೆಬಹುದು, ಧಿಕ್ಕಾರ ಹಾಕಬಹುದು. ಅದಕ್ಕೆಲ್ಲಾ ಹೆದರಿಕೊಳ್ಳಲು ಆಗುತ್ತದೆಯೇ? ಮುಂದೆ ಅವರ ಭವಿಷ್ಯ, ಮಕ್ಕಳ ಹಾಗೂ ಆಸ್ತಿಗಳ ಭವಿಷ್ಯ ಮುಖ್ಯ. ಇವತ್ತಲ್ಲ ಮುಂದಿನ 20 ವರ್ಷಗಳ ನಂತರ ಬಿಡದಿ, ಬೆಂಗಳೂರು ದಕ್ಷಿಣದ ಜನರು ನನ್ನನ್ನು ನೆನಪಿಸಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರೇ ಈ ಯೋಜನೆಯ ಭೂಮಿಯನ್ನು ಡಿನೊಟಿಫೈ ಮಾಡಬಹುದಿತ್ತಲ್ಲವೇ? ಯಾಕೆ ಮಾಡಲಿಲ್ಲ? ನಾನು ಡಿನೋಟಿಫೈ ಮಾಡಲು ತಯಾರಿಲ್ಲ. ಅವರು ಡಿನೋಟಿಫೈ ಮಾಡಿ ಎಷ್ಟು ಅನುಭವಿಸುತ್ತಿದ್ದಾರೆ ಎಂದು ಅವರಿಗೆ ಗೊತ್ತು. ಯಡಿಯೂರಪ್ಪ ಅವರಿಗೆ, ನನಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು
ಕೇಂದ್ರ ಸರ್ಕಾರ ದೇಶಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬೆಲೆ ಏರಿಕೆ ಮೋದಿ ಕೊಡುಗೆ. ಪ್ರಧಾನಿ ಬೇರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಉಳಿಸಿಕೊಂಡು ಬಂದಿಲ್ಲ. ಅಂತರರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮೋದಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಅವರು ವಿದ್ಯುತ್ ಉಳಿಸಿ, ಪೆಟ್ರೋಲ್ ಬಳಸಬೇಡಿ ಎಂದು ಹೇಳುತ್ತಿದ್ದಾರೆ. ಇಂಧನಗಳನ್ನು ಬಳಸದೇ ದಿನನಿತ್ಯ ಜೀವನ ಮಾಡುವುದು ಹೇಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳನ್ನು ಕಡಿತ ಮಾಡಿದ್ದಾರೆ. ಇದು ಆಗಬಹುದು. ಆದರೆ ಜನ ಸಾಮಾನ್ಯ ಓಡಾಟ ಮಾಡದೇ ಇರಲು ಹೇಗೆ ಸಾಧ್ಯ. ಬದುಕಿಗಾಗಿ ಪ್ರಯಾಣ ಮಾಡಬೇಕಲ್ಲವೇ? ಚಿನ್ನ ಖರೀದಿ ಮಾಡಬೇಡಿ ಎಂದಿದ್ದಾರೆ ಇದು ಹೇಗೆ ಸಾಧ್ಯ. ವಿವಾಹಿತ ಮಹಿಳೆಯರಿಗೆ ಮಾಂಗಲ್ಯ ಸರ ಬೇಕು. ಹೀಗಿದ್ದಾಗ ಚಿನ್ನ ಕೊಂಡುಕೊಳ್ಳಬೇಡಿ ಎಂಬುದು ಹೇಗೆ ಸಾಧ್ಯ? ದೇಶ ದೊಡ್ಡ ದುರಂತದ ಸ್ಥಿತಿಗೆ ಬಂದಿದೆ. ಅಡುಗೆ ಎಣ್ಣೆ ಬಳಸಬೇಡಿ ಎಂದರೆ ಎಲ್ಲಿ ಕಡಿಮೆ ಮಾಡೋಕೆ ಆಗುತ್ತದೆ. ಇದೆಲ್ಲಾ ಮಾಡೋಕೆ ಆಗಲ್ಲ. ಜನ ಸಂಪಾದನೆ ಮಾಡುತ್ತಾರೆ ಬದುಕುತ್ತಾರೆ. ಯಾರನ್ನೂ ನಿಯಂತ್ರಣ ಮಾಡೋಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸತೀಶನ್ ಜನರ ಆಶೋತ್ತರಗಳಿಗೆ ಕೆಲಸ ಮಾಡುತ್ತಾರೆ..
ಕೇರಳಕ್ಕೆ ನೂತನ ಸಿಎಂ ಆಯ್ಕೆಗೆ ಪ್ರತಿಕ್ರಿಯಿಸಿ, ನಾನು ಶುಭಾಶಯ ಕೋರುತ್ತೇನೆ. ಪಕ್ಷದಲ್ಲಿ ಅರ್ಹತೆ ಇರುವ ಅನೇಕ ಹಿರಿಯ ನಾಯಕರು ಇದ್ದಾರೆ. ಪಕ್ಷದ ಹೈಕಮಾಂಡ್ ಸತೀಶನ್ ಅವರಿಗೆ ಅವಕಾಶ ನೀಡಿದೆ. ಅವರಿಗೆ ನಾನು ಮನಃಪೂರ್ವಕವಾಗಿ ಶುಭ ಕೋರುತ್ತೇನೆ. ಎಲ್ಲಾ ಮೈತ್ರಿ ಪಕ್ಷಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್ ಐ ಆರ್ ಕರ್ನಾಟಕಕ್ಕೆ ಕಾಲಿಡುತ್ತಿದೆ ನಮಗೂ ಇದರ ಬಗ್ಗೆ ಅರಿವಿದೆ. ಪಕ್ಷದ ನಾಯಕರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲಾಗಿದೆ. ಎಲ್ಲಾ ಪಕ್ಷಗಳು ಈ ಕೆಲಸ ಮಾಡುತ್ತಿವೆ. ಬಿಜೆಪಿ, ಜನತಾದಳ ಎಲ್ಲರೂ ಅವರವರ ಮತಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನಸಾಮಾನ್ಯರು ಸಂಪಾದಿಸಿದ ಆಸ್ತಿಗಳಿಗೆ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ನಾವು ಆರನೇ ಗ್ಯಾರಂಟಿಯಾಗಿ “ಭೂಮಿ ಗ್ಯಾರಂಟಿ”ಯನ್ನು ಜಾರಿಗೆ ತಂದಿದ್ದೇವೆ. ಜನರ ಮನೆ ಬಾಗಿಲಿಗೆ ಇ ಖಾತೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಬಿ ಯಿಂದ ಎ ಖಾತೆ ಬದಲಾವಣೆ ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾನೇ ಅನೇಕ ಬ್ಯಾನರ್ ಗಳನ್ನು ಹೇಳಿ ತೆಗಿಸಿದ್ದೇನೆ..
“ನಾನೇ ಬ್ಯಾನರ್ ಹಾಕಬೇಡಿ ಕೇಸ್ ಹಾಕಲಾಗುವುದು ಅಂತ ಹೇಳಿದ್ದೆ. ಆದರೂ ಅಭಿಮಾನದಿಂದ ಹಾಕಿಸಿದ್ದಾರೆ. ನಾನೇ ಹಲವರಿಗೆ ಹೇಳಿ ಬ್ಯಾನರ್ ಗಳನ್ನು ತೆಗಿಸಿದ್ದೇನೆ. 50 ರಷ್ಟು ಬ್ಯಾನರ್ ಗಳು ತೆರವುಗೊಳಿಸಲಾಗಿದೆ. ಹಾಕಿರೋದು ತಪ್ಪು. ಕಾರ್ಪೋರೇಷನ್ ಅವರಿಗೂ ಕೂಡಲೇ ತೆಗೆಯಬೇಕು ಎಂದು ಸೂಚಿಸಿದ್ದೇನೆ. ಬಿಜೆಪಿ ಲೀಡರ್ ಗಳು ಸಹ ಅವರ ನಾಯಕರುಗಳು ಬರುವುದನ್ನು ಬ್ಯಾನರ್ ಹಾಕಿದ್ದಾರೆ ಅವನ್ನು ಸಹ ತೆಗೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಎಷ್ಟೇ ಕಠಿಣ ನಿಯಮ ತಂದರೂ ಇದನ್ನು ತಡೆಯಲು ಆಗುತ್ತಿಲ್ಲ. ಇದು ಸರಿಯಲ್ಲ. ದಯವಿಟ್ಟು ಬೆಂಗಳೂರು ನಗರವನ್ನು ಸ್ವಚ್ಛವಾಗಿಡಬೇಕು. ನಗರ ವ್ಯಾಪ್ತಿ ಬಿಟ್ಟು ಹಳ್ಳಿ ಭಾಗದಲ್ಲಿ ಹಾಕಿಕೊಂಡರೆ ಬೇಡ ಎನ್ನಲ್ಲ. ಆದರೆ ನಗರ ಭಾಗದಲ್ಲಿ ಬೇಡ. ನಾನು ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದಿದ್ದೆ. ಕಳೆದ ರಾತ್ರಿ ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಹಾಗೂ ಸಚಿವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಕಾಯುತ್ತಿದ್ದರು. ಅವರ ಪ್ರೀತಿ ವಿಶ್ವಾಸ, ಆಶೀರ್ವಾದ ಬೇಡ ಎನ್ನಲು ಆಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬರ್ತ್ಡೇ ಆಚರಣೆಯ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.





