• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಆಮ್ಲಜನಕವನ್ನು ಹೊರಸೂಸುವ ಪ್ರಾಣಿ ಗೋವು ಮಾತ್ರ ಎಂಬುದು ಎಷ್ಟು ನಿಜ?

Any Mind by Any Mind
September 5, 2021
in ಕರ್ನಾಟಕ, ದೇಶ
0
ಆಮ್ಲಜನಕವನ್ನು ಹೊರಸೂಸುವ ಪ್ರಾಣಿ ಗೋವು ಮಾತ್ರ ಎಂಬುದು ಎಷ್ಟು ನಿಜ?
Share on WhatsAppShare on FacebookShare on Telegram

“ಆಮ್ಲಜನಕವನ್ನು ಉಸಿರೆಳೆದುಕೊಳ್ಳುವ ಮತ್ತು ಹೊರಬಿಡುವ ಏಕೈಕ ಪ್ರಾಣಿ ಎಂದರೆ ಗೋವು ಎಂಬುದಾಗಿ ವಿಜ್ಞಾನಿಗಳು ನಂಬುತ್ತಾರೆ.”

ADVERTISEMENT

-ಇದು ವಿಶ್ವ ಕುಖ್ಯಾತ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಹರಿದಾಡುತ್ತಿರುವ ವಿಚಾರ ಎಂದುಕೊಂಡಿರಾ? ಅಲ್ಲ, ಇದು ಪ್ರಚಾರವಾಗಿ ಸಾಕಷ್ಟು ವರ್ಷಗಳೇ ಸಂದಿವೆ. ಹಾಗಾದರೆ ಮತ್ತೆ ಈಗೇಕೆ ಇದೇ ಸುದ್ದಿ ಇಲ್ಲಿ ಎಂದಿರಾ? ಹೌದು, ಅದಕ್ಕೂ ಒಂದು ಹಿನ್ನೆಲೆ ಇದೆ. ಇತ್ತೀಚೆಗೆ ಉತ್ತರಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯವು ಜಾಮೀನು ಆದೇಶವೊಂದರಲ್ಲಿ ಹೀಗೆಂದು ನುಡಿದಿದೆ. ಈ ಆದೇಶವು ದೇಶದಾದ್ಯಂತ ಪ್ರಜ್ಞಾವಂತ ನಾಗರಿಕರನ್ನು, ಅಷ್ಟೇ ಏಕೆ, ವಿಶ್ವದ ವೈಜ್ಞಾನಿಕ ಸಮುದಾಯವನ್ನು ತಬ್ಬಿಬ್ಬುಗೊಳಿಸಿದೆ.

ಘಟನೆಯ ಹಿನ್ನೆಲೆ:

ಜಾವೇದ್ ಎಂಬ ವ್ಯಕ್ತಿ ಹಸುವೊಂದನ್ನು ಕಳ್ಳತನ ಮಾಡಿ ಅದನ್ನು ಹತ್ಯೆಗೈದಿದ್ದನೆಂಬ ಆರೋಪವನ್ನು ಎದುರಿಸುತ್ತಿದ್ದು, ಆತನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 ಹಾಗೂ 1955ರ ಉತ್ತರಪ್ರದೇಶ ಗೋ ಹತ್ಯೆ ತಡೆಗಟ್ಟುವಿಕೆ ಕಾನೂನಿನ ಸೆಕ್ಷನ್ 3, 5 ಮತ್ತು 8ರ ಅಡಿಯಲ್ಲಿ ಬಂಧಿಸಲಾಗಿತ್ತು. ಆತ ಜಾಮೀನು ಕೋರಿ ಅಲಹಾಬಾದ್ ಉಚ್ಚನ್ಯಾಯಾಲಯಕ್ಕೆ ಮೊರೆ ಹೋಗಿದ್ದು ಪ್ರಕರಣವು ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಮುಂದೆ ವಿಚಾರಣೆಗೆ ಬಂದಿತ್ತು.

ಈ ಸಂದರ್ಭದಲ್ಲಿ ಆಪಾದಿತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ ಪೀಠವು, ಗೋವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ, ಗೋಮಾಂಸ ತಿನ್ನುವುದು ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕೆಂದು ಪರಿಗಣಿಸಲಾಗದು ಎಂದು ಹೇಳಿರುತ್ತದೆ. ಹಸುವಿನ ಹಾಲು, ಮೊಸರು, ತುಪ್ಪ, ಗಂಜಲ(ಗೋಮೂತ್ರ) ಮತ್ತು ಸಗಣಿ ಎಂಬ ಐದು ಪದಾರ್ಥಗಳಿಂದ ಮಾಡಿರುವ ಪಂಚಗವ್ಯವು ಗುಣಪಡಿಸಲಾಗದ ಅದೆಷ್ಟೋ ಕಾಯಿಲೆಗಳ ಚಿಕಿತ್ಸೆಗೆ ನೆರವಾಗುತ್ತದೆ ಎಂದಿರುವ ಆದೇಶವು, ಭಾರತೀಯ ಪರಂಪರೆಯಲ್ಲಿ ಯಾಗಯಜ್ಞಾದಿ ಸಂದರ್ಭಗಳಲ್ಲಿ ಹಸುವಿನ ಹಾಲನ್ನು ಬಳಕೆ ಮಾಡಲಾಗುತ್ತದೆ, ಏಕೆಂದರೆ ಅದು ಸೂರ್ಯಕಿರಣಗಳಿಗೆ ವಿಶೇಷ ಕಸುವು ನೀಡುತ್ತ ಅಂತಿಮವಾಗಿ ಮಳೆಯನ್ನು ಸುರಿಸುತ್ತದೆ ಎಂದೂ ಹೇಳಿದೆ. ಜಾಮೀನು ಆದೇಶವನ್ನು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ.

ಗೋವು ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿಯೇ?

ಈಗ ಹಸುವಿನ ಉಸಿರಾಟದ ಬಗ್ಗೆ ವೈಜ್ಞಾನಿಕವಾಗಿ ಗಮನ ಹರಿಸೋಣ. ಹಸು ಎಂಬ ಪ್ರಾಣಿಯನ್ನು ಪವಿತ್ರ ದೃಷ್ಟಿಯಲ್ಲಿ ನೋಡುವುದನ್ನು ಒಂದಿಷ್ಟು ಸಮಯ ಬದಿಗಿಟ್ಟು ಅದನ್ನೂ ಪ್ರಾಣಿಲೋಕದ ಒಂದು ಸಸ್ತನಿ ಪ್ರಾಣಿ ಎಂದೂ ಪರಿಗಣಿಸೋಣ. ಮನುಷ್ಯನಂತೆ ಹಸುವಿನ (ಗೋವಿನ) ಉಸಿರಾಟಕ್ಕೂ ಸಹ ಆಮ್ಲಜನಕ ಬೇಕೇಬೇಕು. ಅಲ್ಲದೆ ಇಂಗಾಲದ ಡೈ ಆಕ್ಸೈಡ್ ದೇಹದಿಂದ ಹೊರಹೋಗಲೇಬೇಕು. ವೈಜ್ಞಾನಿಕ ಸತ್ಯ ಏನೆಂದರೆ ಎಲ್ಲಾ ಪ್ರಾಣಿಗಳೂ(ಮನುಷ್ಯನೂ ಸೇರಿದಂತೆ) ವಾತಾವರಣದಲ್ಲಿರುವ ಆಮ್ಲಜನಕ, ಸಾರಜನಕ, ಇಂಗಾಲದ ಡೈ-ಆಕ್ಸೈಡ್ ಮತ್ತು ಇತರ ಅನಿಲಗಳನ್ನು ಒಳ ತೆಗೆದುಕೊಳ್ಳುತ್ತವೆ ಹಾಗೂ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಗಳನ್ನು ಹೊರಬಿಡುತ್ತವೆ. ಆದರೆ ಅವುಗಳ ಪ್ರಮಾಣಗಳು ಮಾತ್ರ ಬೇರೆಬೇರೆ ಇರುತ್ತವೆ. ಆದ್ದರಿಂದ ಹಸು ಆಮ್ಲಜನಕ ಹೊರಸೂಸುವ ಏಕೈಕ ಪ್ರಾಣಿಯಲ್ಲ.

ಉಸಿರನ್ನು ಒಳತೆಗೆದುಕೊಂಡಾಗ ಗಾಳಿಯಲ್ಲಿ ಸುಮಾರು ಶೇ. 21ರಷ್ಟು ಆಮ್ಲಜನಕ ಮತ್ತು ಶೇ. 0.04ರಷ್ಟು ಇಂಗಾಲದ ಡೈ ಆಕ್ಸೈಡ್ ಇದ್ದರೆ, ಹೊರಬಿಡುವ ಗಾಳಿಯಲ್ಲಿ ಶೇ.16ರಷ್ಟು ಆಮ್ಲಜನಕ ಮತ್ತು ಶೇ. 4ರಷ್ಟು ಇಂಗಾಲದ ಡೈ ಆಕ್ಸೈಡ್ ಇರುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.

ದ ಕ್ವಿಂಟ್ ಸುದ್ದಿ ಮಾಧ್ಯಮವು ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರೂ ಸಹ-ಪ್ರಾಧ್ಯಾಪಕರೂ ಆದ ಫೆಲಿಕ್ಸ್ ಬಾಸ್ಟ್ ಅವರನ್ನು ಮಾತನಾಡಿಸಿದಾಗ,
“ನೀವು ಏನೆಲ್ಲ ಅನಿಲಗಳನ್ನು ಒಳತೆಗೆದುಕೊಳ್ಳುವಿರೋ ಅವುಗಳನ್ನೆಲ್ಲ ಹೊರಹಾಕುವಿರಿ. ಇಂಗಾಲದ ಡೈ-ಆಕ್ಸೈಡ್ನ ಸಾಂದ್ರತೆಯು ಉಸಿರು ತೆಗೆದುಕೊಂಡ ಗಾಳಿಗೆ ಹೋಲಿಸಿದರೆ ಹೊರಸೂಸಿದ ಗಾಳಿಯಲ್ಲಿ ಹೆಚ್ಚಿರುತ್ತದೆ. ಅದೇ ಸಮಯದಲ್ಲಿ ಒಳತೆಗೆದುಕೊಂಡ ಗಾಳಿಗೆ ಹೋಲಿಸಿದರೆ ಹೊರಬಿಟ್ಟ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆ ಇರುತ್ತದೆ. ಇದು ಗೋವುಗಳಿಗೆ ಮಾತ್ರವಲ್ಲ, ಎಲ್ಲ ಪ್ರಾಣಿಗಳಿಗೂ ಅನ್ವಯವಾಗುತ್ತದೆ.

ವಾಟ್ಸಪ್ ನಿಂದ ಜಡ್ಜ್ಮೆಂಟ್ ವರೆಗೆ…

ಆಮ್ಲಜನಕವನ್ನು ಒಳತೆಗೆದುಕೊಂಡು ಹೊರಬಿಡುವ ಏಕೈಕ ಪ್ರಾಣಿ ಎಂದರೆ ಗೋವು ಎಂಬುದಾಗಿ ಕೆಲವು ವರ್ಷಗಳ ಹಿಂದಿನಿಂದಲೂ ವಾಟ್ಸಪ್ ನಲ್ಲಿ ಸಂದೇಶ ಹರಿದಾಡುತ್ತಿತ್ತು. ಮುಕ್ಕೋಟಿ ದೇವರುಗಳು ಗೋವಿನಲ್ಲಿ ಮನೆ ಮಾಡಿರುವುದರಿಂದ ಅದು ಅತ್ಯಂತ ಪವಿತ್ರವಾದ ಪ್ರಾಣಿ ಎಂದೆಲ್ಲ ಹೇಳಲಾಗಿತ್ತು. ಆ ಸಂದೇಶದ ಹುಟ್ಟು ಎಲ್ಲಿಂದ ಎಂಬುದು ಸ್ಪಷ್ಟವಾಗಿ ನಮೂದಾಗಿರಲಿಲ್ಲ. ಆದರೂ ಆ ಅವೈಜ್ಞಾನಿಕ ಸಂದೇಶವನ್ನು ಓದಿದೊಡನೆಯೇ ಯಾರಿಗೇ ಆಗಲೀ ಅದರ ಮೂಲ ಯಾವ ಐಟಿ ಸೆಲ್ ದೆಂದು ಅರ್ಥವಾಗಿಬಿಡುತ್ತಿತ್ತು! ಅದೂ ಅಲ್ಲದೆ ಎಲ್ಲೆಲ್ಲೂ ಗೋ ರಕ್ಷಣೆ ಎಂದು ಹೇಳಿ ಜನರನ್ನು ಹತ್ಯೆ ಮಾಡುವವರ ಸಂಘ ಪರಿವಾರದ ಗುಂಪುಗಳೇ ಹುಟ್ಟುಕೊಂಡವು. ಇದೀಗ ಈ ಅವೈಜ್ಞಾನಿಕ ಮತ್ತು ಸಮಾಜ-ವಿಭಜಕ, ಸಂವಿಧಾನ-ವಿರೋಧಿ ವಾಟ್ಸಪ್ ಸಂದೇಶಗಳು ನ್ಯಾಯಾಲಯಗಳ ಆದೇಶಗಳಲ್ಲೇ ಕಾಣಿಸಿಕೊಳ್ಳುತ್ತಿವೆ!

ಒಂದು ವೈಜ್ಞಾನಿಕ ವಿಷಯದಲ್ಲೂ, ವಿಜ್ಞಾನಿಗಳು ನೀಡುವ ಹೇಳಿಕೆಗಳಿಗೂ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಆದೇಶಗಳಲ್ಲಿನ ಹೇಳಿಕೆಗಳಿಗೂ ಸಂಬಂಧವೇ ಇಲ್ಲವೆಂದಾದರೆ ನಾವು ಎತ್ತ ಸಾಗುತ್ತಿದ್ದೇವೆ? ನಾವು ವಿಜ್ಞಾನದಿಂದ, ವೈಜ್ಞಾನಿಕ ಮನೋಭಾವದಿಂದ ದೂರ ಸರಿಯುತ್ತಿದ್ದೇವೆಯೇ? ಅಷ್ಟೇ ಅಲ್ಲ, ಈ ಆದೇಶವು ಸಂವಿಧಾನದಲ್ಲಿ ಅಡಕವಾಗಿರುವ ಮತನಿರಪೇಕ್ಷತೆಯ ಮೌಲ್ಯದ ಮತ್ತು ಸ್ವಾತಂತ್ರ್ಯದ ಹಕ್ಕುಗಳ ವಿರುದ್ಧ ದಿಕ್ಕಿನಲ್ಲಿದೆಯೇ ಎಂಬ ಅನುಮಾನ ಗಾಢವಾಗುತ್ತದೆ.

ಏನಿದೆ ತೀರ್ಪಿನಲ್ಲಿ?

“ಕೊಲ್ಲುವ ಹಕ್ಕಿಗಿಂತ ಬದುಕುವ ಹಕ್ಕು ಮಿಗಿಲಾದುದು ಹಾಗೂ ಗೋಮಾಂಸ ತಿನ್ನುವ ಹಕ್ಕನ್ನು ಮೂಲಭೂತ ಹಕ್ಕೆಂದು ಪರಿಗಣಿಸಲು ಸಾಧ್ಯವಿಲ್ಲ. ಹಸು ವಯಸ್ಸಾದಾಗಲೂ, ಹುಷಾರಿಲ್ಲದಾಗಲೂ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಹಸುವಿನ ಸಗಣಿ ಮತ್ತು ಗಂಜಲಗಳು ಕೃಷಿಕಾರ್ಯಗಳಿಗೆ ಅತಿ ಪ್ರಯೋಜನಕಾರಿಯಾಗಿದ್ದು ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ. ಅವೆಲ್ಲಕ್ಕಿಂತ ಮಿಗಿಲಾಗಿ ಹಸುವನ್ನು ಕಾಯಿಲೆ-ಕಸಾಲೆಗಳು ಬರಲಿ ಇಲ್ಲವೇ ವಯಸ್ಸಾಗಲೀ ಮಾತೆಯಾಗಿ ಪೂಜಿಸಲ್ಪಡುತ್ತಾಳೆ. ಅವಳನ್ನು ಕೊಲ್ಲುವ ಹಕ್ಕನ್ನು ಯಾರಿಗೂ ಕೊಡಲಾಗದು.”

ಹೀಗೆಂದಿದೆ ಅಲ್ಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಪೀಠ ತನ್ನ ಜಾಮೀನು ಆದೇಶದಲ್ಲಿ. ಗೋವು ನಿಜಕ್ಕೂ ಮಾತೆ ಎಂದು ಪೂಜಿಸಲ್ಪಟ್ಟವಳೇ ಆಗಿದ್ದರೆ ಅವಳ ಬಳಕೆ ಯೋಗ್ಯತನವನ್ನು, ಉಪಯುಕ್ತತೆಯನ್ನು ಲೆಕ್ಕ ಹಾಕುವುದು ಎಷ್ಟು ಸರಿ? ಇದು ಮನುಷ್ಯರ ಸ್ವಾರ್ಥವೇ ಅಲ್ಲವೇ? ಬೇರೆ ಯಾವ ಪ್ರಾಣಿಗಳೂ ಮನುಷ್ಯನಿಗೆ ಲಾಭದಾಯಕವಾಗಿಲ್ಲವೇ, ಕುರಿ, ಇತ್ಯಾದಿ? ರೈತರು ವಯಸ್ಸಾದ ಜಾನುವಾರುಗಳನ್ನು ಎಲ್ಲಿ ಬಿಡಬೇಕು? ಎಷ್ಟೇ ಆಗಲೀ ಎಲ್ಲ ಪ್ರಾಣಿಗಳೂ ಅಥವಾ ಜೀವಿಗಳೂ ತಮ್ಮ ಜೀವಿತಾವಧಿ ಮುಗಿದ ಮೇಲೆ ಅಂತ್ಯಗೊಳ್ಳಲೇಬೇಕಲ್ಲವೇ? ಅವುಗಳನ್ನು ಪವಿತ್ರ ಎಂದು ಸಂರಕ್ಷಣೆ ಮಾಡಿಟ್ಟುಕೊಳ್ಳಲು ಆಗುವುದೇ? ವಾಸ್ತವದಲ್ಲಿ ಹೇಳುವುದಾದರೆ, ರೈತರು ವಯಸ್ಸಾದ ಮತ್ತು ನಿಷ್ಪ್ರಯೋಜಕವಾದ ದನಗಳನ್ನು ವಿಲೇವಾರಿ ಮಾಡುತ್ತಾರೆ.

ಮತೀಯರಾಜಕಾರಣದ ಹೆಸರಿನಲ್ಲಿ…

ಮತೀಯರಾಜಕಾರಣದ ಹೆಸರಿನಲ್ಲಿ ಪ್ರಕೃತಿ ಸಹಜವಾದ ಆಹಾರ ಚಕ್ರಕ್ಕೆ ಧಕ್ಕೆ ತರುವುದು ಅಸ್ವಾಭಾವಿಕವಾಗುತ್ತದೆ, ಅವೈಜ್ಞಾನಿಕವೂ ಆಗುತ್ತದೆ. ಭಾರತದಲ್ಲಿ ಅಪೌಷ್ಟಿಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂಚಿಗೆ ಸರಿಸಲ್ಪಟ್ಟ ಮತ್ತು ತಳ ಸಮುದಾಯಗಳು ಅಲ್ಪಸ್ವಲ್ಪ ಏನಾದರೂ ಆರೋಗ್ಯವಾಗಿ ಬದುಕುತ್ತಿವೆ ಎಂದಾದರೆ ಆ ಜನರು ಸೇವಿಸುವ ಗೋಮಾಂಸದಿಂದ ಮಾತ್ರ. ಇದು ಆರ್ಥಿಕವಾಗಿಯೂ ಅವರ ಕೈಗೆಟುಕುವಂತಹದ್ದಾಗಿದೆ. ಇದು ಕೇವಲ ಮುಸ್ಲಿಮರಿಗಷ್ಟೇ ಅಲ್ಲದೆ, ಹಿಂದೂ ಧರ್ಮದ ವ್ಯಾಪ್ತಿಗೆ ಒಳಪಟ್ಟ ಅನೇಕ ಸಮುದಾಯಗಳಿಗೂ ಅನ್ವಯವಾಗುತ್ತದೆ. ಈ ಬಡಜನರು ತಮ್ಮ ಪೌಷ್ಟಿಕಾಂಶಕ್ಕೆ ಈ ಆಹಾರವನ್ನೇ ಅವಲಂಬಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಈ ಜನರಿಂದ ಅವರ ಆಹಾರವನ್ನು ಕಸಿಯುವುದು ಪ್ರಭುತ್ವ ಅವರಿಗೆ ದ್ರೋಹ ಮಾಡಿದಂತೆಯೇ.

ಬದುಕುವ ಹಕ್ಕು ಕೊಲ್ಲುವ ಹಕ್ಕನ್ನು ಮುಂದಿಕ್ಕುತ್ತದೆ ಅಲ್ಲವೇ?

ರಾಸುಗಳ ಯೋಗಕ್ಷೇಮ ಚೆನ್ನಾಗಿದ್ದಾಗಲೇ ದೇಶವು ಸುರಕ್ಷಿತವಾಗಿರುತ್ತದೆ ಮತ್ತು ಆಗ ಮಾತ್ರ ದೇಶವು ಸುಭಿಕ್ಷವಾಗಿರಲು ಸಾಧ್ಯ ಎಂದು ನುಡಿದಿರುವ ನ್ಯಾಯಪೀಠ, ಇಡೀ ವಿಶ್ವದಲ್ಲಿ ವಿವಿಧ ಧರ್ಮಗಳನ್ನು ಅನುಸರಿಸುವ ಜನರು ವಾಸಿಸುವ ಏಕಮಾತ್ರ ದೇಶ ಭಾರತವೊಂದೇ ಆಗಿದ್ದು, ಇಲ್ಲಿ ಅವರು ವಿಭಿನ್ನವಾಗಿ ಪೂಜಿಸುತ್ತಾರಾದರೂ ದೇಶಕ್ಕಾಗಿ ಅವರ ಆಲೋಚನೆಯು ಒಂದೇ ಆಗಿರುತ್ತದೆ ಹಾಗೂ ಅವರು ಪರಸ್ಪರ ತಮ್ಮ ಧರ್ಮಗಳನ್ನು ಗೌರವಿಸುತ್ತಾರೆ ಎಂದಿದೆ. ಮುಂದುವರಿದು, “ಭಾರತದ ಜನತೆ ವಿವಿಧ ಆಹಾರ ಅಭ್ಯಾಸಗಳನ್ನು ಮತ್ತು ಪದ್ಧತಿಗಳನ್ನು ಆದರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತವನ್ನು ಒಗ್ಗೂಡಿಸಲು ಮತ್ತು ಅದರ ನಂಬಿಕೆಯನ್ನು ಬೆಂಬಲಿಸಲು ಒಂದು ಹೆಜ್ಜೆ ಮುನ್ನಡೆದಾಗ, ತಮ್ಮ ಶ್ರದ್ಧಾನಂಬಿಕೆಗಳು ದೇಶದ ಹಿತಾಸಕ್ತಿಯಲ್ಲಿಲ್ಲದ ಕೆಲವರು ದೇಶದಲ್ಲಿ ಈ ರೀತಿ ಮಾತನಾಡುತ್ತ ದೇಶವನ್ನು ದುರ್ಬಲ ಮಾಡುತ್ತಾರಷ್ಟೇ” ಎಂದು ಹೇಳಿದೆ. ಇದೇ ಸಂದರ್ಭದಲ್ಲಿ, “ಕೇವಲ ಬೇರೊಬ್ಬರ ನಾಲಿಗೆಯ ರುಚಿಗಾಗಿ ಇನ್ನ್ಯಾರದ್ದೋ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ; ಬದುಕುವ ಹಕ್ಕು ಕೊಲ್ಲುವ ಹಕ್ಕನ್ನು ಮುಂದಿಕ್ಕುತ್ತದೆ” ಎಂದೂ ನುಡಿದಿದೆ.

ಹಸುವನ್ನು ಒಂದು ಪ್ರಾಣಿಯನ್ನಾಗಿ ಕಾಣದೆ ಅದಕ್ಕೆ ಪಾವಿತ್ರ್ಯತೆ ಅಂಟಿಸುವುದು ತರವಲ್ಲ. ಇಲ್ಲಿ ಮನುಷ್ಯನ ಬದುಕುವ ಹಕ್ಕಿಗಿಂತ ಯಾವುದೋ ಒಂದು ಪ್ರಾಣಿಯ ಬದುಕುವ ಹಕ್ಕು ಮುಖ್ಯವಾಗಿರುವುದು ಅತ್ಯಂತ ಖೇದಕರ. ಮೊದಲೇ ವಿವರಿಸಿದಂತೆ ದನದ ಮಾಂಸವನ್ನು ತಿನ್ನುವುದು ಬಾಯಿ ರುಚಿಗಾಗಿ ಅಲ್ಲ, ಅದರ ಕೈಗಟುಕುವ ಬೆಲೆ ಮತ್ತು ಪೌಷ್ಟಿಕಾಂಶಕ್ಕಾಗಿ. ಅದೊಂದು ಆಹಾರ ಸಂಸ್ಕೃತಿಯಾಗಿ ಬೆಳೆದುಬಂದಿರುವುದನ್ನು ಗಮನಿಸಬೇಕು. ಒಂದು ಧರ್ಮದ ಜೊತೆ ಅದನ್ನು ತಳಕು ಹಾಕುವುದಲ್ಲ. ಭಾರತದಲ್ಲಿ ಪ್ರತಿದಿನವೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕುತ್ತಿರುವಾಗ, ದಲಿತರನ್ನು ಹಿಂಸೆಗೈದು ಕೊಲ್ಲುತ್ತಿರುವಾಗ, ಅಲ್ಪಸಂಖ್ಯಾತರನ್ನು ಬದುಕಲು ಬಿಡದೇ ಕಗ್ಗೊಲೆ ಮಾಡುತ್ತಿರುವಾಗ, ಗೋರಕ್ಷಣೆ ಮಾಡಿದರೆ ದೇಶ ಸುರಕ್ಷಿತವಾಗಿಯೂ ಸುಭಿಕ್ಷವಾಗಿಯೂ ಇರಲು ಸಾಧ್ಯ ಎಂದು ಹೇಳುವ ಉಚ್ಚ ನ್ಯಾಯಾಲಯದ ಮಾತಗಳಿಗೆ ನಗಬೇಕೋ ಅಳಬೇಕೋ ಒಂದೂ ತಿಳಿಯದಾಗಿದೆ! ಈ ಎಲ್ಲಾ ಜನವರ್ಗಗಳನ್ನು ಕೊಲ್ಲುವ ಸಂದರ್ಭದಲ್ಲಿ ಬದುಕುವ ಹಕ್ಕು ಕೊಲ್ಲುವ ಹಕ್ಕನ್ನು ಮುಂದಿಕ್ಕುತ್ತದೆ ಎಂಬ ಮಾತನ್ನು ಹೇಳಬೇಕಿತ್ತು.

ಬಹುತ್ವ ಸಂಸ್ಕೃತಿಯೇ ನಮ್ಮ ಸಂವಿಧಾನದ ಜೀವಾಳ

ಭಾರತೀಯರು ವಿವಿಧ ಆಹಾರ ಪದ್ಧತಿಗಳನ್ನು ಗೌರವಿಸುತ್ತಾರೆಂದ ಮೇಲೆ ಇಂತಹ ಅವೈಜ್ಞಾನಿಕ ಆದೇಶದ ಅರ್ಥವೇನು? ವೈವಿಧ್ಯತೆಯೇ, ಬಹುತ್ವ ಸಂಸ್ಕೃತಿಯೇ ನಮ್ಮ ಸಂವಿಧಾನದ ಜೀವಾಳ. ಇಂದು ಅತ್ಯಾಚಾರದಂತಹ ಹೀನಕೃತ್ಯಗಳ ಆರೋಪಿಗಳಿಗೂ ಜಾಮೀನು ಸಿಗುವಾಗ ಹಸುವನ್ನು ಕಳ್ಳತನ ಮಾಡಿ ಹತ್ಯೆ ಮಾಡಿದ್ದಾನೆಂಬ ಆರೋಪ ಹೊತ್ತ ಒಬ್ಬ ಅಲ್ಪಸಂಖ್ಯಾತನಿಗೆ ಜಾಮೀನು ಸಿಗದಂತೆ ಉಚ್ಚನ್ಯಾಯಾಲಯ ನೋಡಿಕೊಂಡಿದ್ದು ನ್ಯಾಯ ಎಲ್ಲರಿಗೂ ಸಮಾನವಾಗಿ ವಿತರಣೆ ಆಗುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತದೆ.

ಭಾರತೀಯರು ವೈವಿಧ್ಯತೆಯನ್ನು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಾರಾದರೂ ಇಂದು ಕೋಮುವಾದಿ ರಾಜಕಾರಣವು ಮೇಲುಗೈ ಸಾಧಿಸುತ್ತ ಜನರ ಮನಸ್ಸುಗಳನ್ನು ಒಡೆಯಲು ಯತ್ನಿಸುತ್ತಿದೆ. ಅಲ್ಲದೆ ಸರ್ಕಾರದ ಎಲ್ಲ ಅಂಗಗಳಲ್ಲೂ ಕೋಮುವಾದದ ವಿಷಬೀಜಗಳ ಬಿತ್ತನೆ ಆಗಿಹೋಗಿದೆ. ನ್ಯಾಯಾಂಗವೇ ಇಂತಹ ವಿಷಪೂರಿತ ಮತ್ತು ಅವೈಜ್ಞಾನಿಕ ಆದೇಶಗಳನ್ನು ನೀಡುತ್ತದೆ ಎಂದಾದರೆ ಜನರು ನ್ಯಾಯವನ್ನು ಅರಸಿ ಹೋಗುವುದು ಎಲ್ಲಿ? ನಮ್ಮದು ಮತನಿರಪೇಕ್ಷ ದೇಶ ಎಂಬುದಾಗಿ ಸಂವಿಧಾನದ ಪ್ರಸ್ತಾವನೆ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಇಲ್ಲಿ ಮತೀಯವಾದದ ಕಮಟು ವಾಸನೆ ಎಲ್ಲೆಲ್ಲೂ ಗಬ್ಬು ನಾರುತ್ತಿದೆ. ಗೋವು ಭಾರತದ ಸಂಸ್ಕೃತಿ ಎಂದು ನ್ಯಾಯಮೂರ್ತಿಗಳು ಪಾಠಮಾಡುತ್ತಾರೆ. ಗೋಹತ್ಯೆಯನ್ನು ನಿಷೇಧಿಸಿದ ಮುಸ್ಲಿಮ್ ರಾಜರ ಬಗ್ಗೆಯೂ ಹೇಳುವ ಆದೇಶ ಗೋಹತ್ಯೆ ಎಂಬ ಕ್ರಿಯೆಗೆ ಮತ್ತೆಮತ್ತೆ ಮತಧರ್ಮದ ಬಣ್ಣ ಹಚ್ಚುವುದನ್ನು ಕಾಣಬಹುದು.

ಗೋಮಾಂಸ ಆ ಕಾಲದ ವಿಶಿಷ್ಟ ಭಕ್ಷ್ಯವೂ ಆಗಿತ್ತು

“ಗೋವುಗಳಿಗೆ ವೇದಗಳು, ಪುರಾಣಗಳು, ಶಾಸ್ತ್ರಗಳು, ಮಹಾಭಾರತ ಮತ್ತು ರಾಮಾಯಣದಂತಹ ಭಾರತೀಯ ಧರ್ಮಗ್ರಂಥಗಳಲ್ಲಿ ವಿಶೇಷ ಸ್ಥಾನ ನೀಡಲಾಗಿದೆ” ಎಂದೂ ಆದೇಶದಲ್ಲಿ ನಮೂದಿಸಲಾಗಿದೆ. ಆದರೆ ಗೋಮಾಂಸ ಆ ಕಾಲದ ವಿಶಿಷ್ಟ ಭಕ್ಷ್ಯವೂ ಆಗಿತ್ತು, ಒಂದು ಕಾಲಘಟ್ಟದ ವರೆಗೂ ಗೋಮಾಂಸ ಜನರ ಸಾಮಾನ್ಯ ಆಹಾರವೂ ಆಗಿತ್ತು ಎಂಬುದರ ಉಲ್ಲೇಖವಾಗಿಲ್ಲ!

ಭಾರತೀಯ ಪರಂಪರೆಯಲ್ಲಿ ಯಾಗಯಜ್ಞಾದಿ ಸಂದರ್ಭಗಳಲ್ಲಿ ಹಸುವಿನ ಹಾಲನ್ನು ಬಳಕೆ ಮಾಡಲಾಗುತ್ತದೆ, ಏಕೆಂದರೆ ಅದು ಸೂರ್ಯಕಿರಣಗಳಿಗೆ ವಿಶೇಷ ಕಸುವು ನೀಡುತ್ತ ಅಂತಿಮವಾಗಿ ಮಳೆಯನ್ನು ಸುರಿಸುತ್ತದೆ ಎಂದೂ ಆದೇಶದಲ್ಲಿ ಹೇಳಲಾಗಿದೆ. ಇದಕ್ಕೆ ಯಾವ ವೈಜ್ಞಾನಿಕ ತಳಹದಿ ಇದೆಯೋ ತಿಳಿಯದು. ಮಳೆ ಸುರಿಯುವುದಕ್ಕೂ ಹಸುವಿನ ಹಾಲಿಗೂ ಏನು ಸಂಬಂಧ ಎಂದು ವಿಜ್ಞಾನಿಗಳು ಮೂಗಿನ ಮೇಲೆ ಬೆರಳಿಟ್ಟಾರು! ಇನ್ನು ಗಂಜಲದಿಂದ ಕ್ಯಾನ್ಸರ್ ಶಮನವಾಗುತ್ತದೆ, ಸಗಣಿಯನ್ನು ಮೈ ಮೇಲೆ ಲೇಪಿಸಿಕೊಳ್ಳುವುದರಿಂದ ಕೋವಿಡ್-19 ವಾಸಿಯಾಗುತ್ತದೆ, ಇತ್ಯಾದಿಗಳನ್ನು ಹಲವು ರಾಜಕಾರಣಿಗಳು ಮತ್ತು ನಕಲಿ ಬಾಬಾಗಳು ಪ್ರಚಾರ ಮಾಡಿದರು. ಇವುಗಳಿಗೆ ಒಂದಕ್ಕೂ ವೈಜ್ಞಾನಿಕ ಆಧಾರಗಳಿಲ್ಲ ಎಂಬುದು ಸಾಬೀತಾಗಿದೆ. ಹೀಗೆಲ್ಲ ರಾಜಕೀಯವಾಗಿ ಅಗ್ಗದ ಪ್ರಚಾರ ಮಾಡಿದವರೇ ಆಸ್ಪತ್ರೆಗೆ ಸೇರಿಕೊಂಡು ಚಿಕಿತ್ಸೆ ಪಡೆದ ಸಂದರ್ಭಗಳನ್ನೂ ನಾವು ಕಂಡಿದ್ದೇವೆ.

ಒಟ್ಟಿನಲ್ಲಿ ಹಸು ಎಂಬ ಪ್ರಾಣಿ ಭಾರತದಲ್ಲಿ ರಾಜಕೀಯ ಅಸ್ತ್ರವಾಗಿ ಪುನರ್ಜನ್ಮ ಪಡೆದುಕೊಂಡಿರುವುದು ದುರಂತ. ಇದಕ್ಕೆ ನ್ಯಾಯಾಲಯಗಳೂ ಇಂಬು ನೀಡುತ್ತಿರುವುದು ದೇಶದ ಸಂವಿಧಾನಿಕ ವ್ಯವಸ್ಥೆಯೇ ಕುಸಿಯುತ್ತಿರುವುದಕ್ಕೆ ಮತ್ತೊಂದು ನಿದರ್ಶನ.

Tags: Congress Partyಅಲಹಾಬಾದ್ ಹೈಕೋರ್ಟ್ಗೋ ರಕ್ಷಣೆಗೋ ಹತ್ಯೆಗೋರಕ್ಷಕರುನರೇಂದ್ರ ಮೋದಿಫೆಲಿಕ್ಸ್ ಬಾಸ್ಟ್ಬಿಜೆಪಿಸಂಘಪರಿವಾರ
Previous Post

ಗುಜರಾತ್: ಗೋ ಹತ್ಯೆ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಬಿರುಸಿನ ವಾಕ್ಸಮರ !

Next Post

ಭಾರತದಲ್ಲಿ ಇಸ್ಲಾಮೋಫೋಬಿಯಾವನ್ನು ಪ್ರಚೋದಿಸಿದ ತಾಲೀಬಾನರ ಪುನರಾಗಮನ!

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
Next Post
ಭಾರತದಲ್ಲಿ ಇಸ್ಲಾಮೋಫೋಬಿಯಾವನ್ನು ಪ್ರಚೋದಿಸಿದ ತಾಲೀಬಾನರ ಪುನರಾಗಮನ!

ಭಾರತದಲ್ಲಿ ಇಸ್ಲಾಮೋಫೋಬಿಯಾವನ್ನು ಪ್ರಚೋದಿಸಿದ ತಾಲೀಬಾನರ ಪುನರಾಗಮನ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada