ಸಚಿವ ಸ್ಥಾನ ಹಂಚಿಕೆ ಬಳಿಕ ಬಂಗಲೆ ಹಂಚುವುದೇ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸದ್ಯದ ದೊಡ್ಡ ತಲೆನೋವಾಗಿದೆ. ಬಹುತೇಕ ಸಚಿವರು ಒಂದೇ ಬಂಗಲೆಗಾಗಿ ಹಟ ಮಾಡುತ್ತಿರುವುದೂ ಬೊಮ್ಮಾಯಿ ಅವರನ್ನು ಇಕ್ಕಟ್ಟಿನಲಿ ಸಿಲುಕಿಸಿದೆ.
ಈ ನಡುವೆ, ಸಾಮಾಜಿಕ ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಬಂಗಲೆಗಳ ಜಾಗದಲ್ಲಿ ಬಹುಮಹಡಿ ವಸತಿ ಸಂಕೀರ್ಣ ಮಾಡಿ ಸಚಿವರಿಗೆ ಹಂಚಿಕೆ ಮಾಡಬೇಕೆಂದು ಮನವಿ ಮಾಡಿ ಪತ್ರ ಬರೆದಿದ್ದಾರೆ.
“ಕರ್ನಾಟಕ ಸರ್ಕಾರವು ಸಚಿವರುಗಳಿಗೆ ವಸತಿ ಸೌಕರ್ಯವನ್ನು ಒದಗಿಸುವ ಅರ್ಧ ಎಕರೆಗೂ ಹೆಚ್ಚಿನ ವಿಸ್ತೀರ್ಣವಿರುವ ಬಂಗಲೆಗಳು ಮುಖ್ಯವಾಗಿ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್, ಕುಮಾರಕೃಪ ( ಗಾಂಧಿ ಭವನದ ಸಮೀಪವಿರುವ) ಕ್ವಾಟ್ರಸ್, ಜಯ ಮಹಲ್ ನಲ್ಲಿರುವ ಕ್ವಾಟರ್ಸ್, ಮತ್ತುಸ್ಯಾಂಕಿ ರಸ್ತೆಯಲ್ಲಿರುವ ಕ್ವಾಟ್ರಸ್ ಗಳನ್ನು ಸಚಿವರುಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಇಂತಹ ಕ್ವಾಟರ್ಸ್ ಗಳೇ ನಮಗೆ ಹಂಚಿಕೆ ಮಾಡಿ ಎಂದು ದಂಬಾಲು ಬಿದ್ದಿರುವುದು ಅಥವಾ ರೊಚ್ಚೆ ಹಿಡಿದಿರುವುದು ಮಾಧ್ಯಮಗಳ ಮೂಲಕ ರಾಜ್ಯದ ನಾಗರಿಕರು ಗಮನಿಸುತ್ತಿದ್ದಾರೆ.
ಇದರ ಜೊತೆ ವಿಧಾನಸೌಧ, ವಿಕಾಸಸೌಧದಲ್ಲಿ ಇಂಥ ಸಂಖ್ಯೆಯ ಕೊಠಡಿ ನಮಗೆ ಕಚೇರಿಯಾಗಿ ನೀಡಿ, ಶಾಸಕರ ಭವನದಲ್ಲಿ ಇಂತಹ ಕೊಠಡಿ ಬೇಕು ಎಂದು ಅದಕ್ಕೂ ಮಿಗಿಲಾಗಿ ಇಂತಹ ಖಾತೆಯನ್ನೇ ನಮಗೆ ನೀಡಿ ಎಂದು ಮುಖ್ಯಮಂತ್ರಿಗಳನ್ನು ಪೀಡಿಸುತ್ತಿರುವುದು ನಿನ್ನೆ ಮೊನ್ನೆಯ ವಿಷಯವಲ್ಲ.” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯದ ನಾಗರಿಕರಿಗೆ ಹಲವಾರು ಭರವಸೆಗಳನ್ನು ಆಮಿಷಗಳನ್ನು ಒಡ್ಡಿ ನಾನು ನಿಮ್ಮ ಸೇವೆಗೆ ಸದಾ ಸಿದ್ದ ನೆಂದು ಮತ ಪಡೆದುಕೊಂಡು ಹೋಗಿರುವ ಜನಪ್ರತಿನಿಧಿಗಳು ಖಾತೆ, ಕಚೇರಿ ಮತ್ತು ವಸತಿ ಬಗ್ಗೆ ಹಟ ಹಿಡಿಯುತ್ತಿರುವುದುನ್ನು ನೋಡಿದ ರಾಜ್ಯದ ನಾಗರಿಕರು ಅಸಹ್ಯಪಡುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.
ಸಾಮಾನ್ಯ ಮತ್ತು ಮಧ್ಯಮ ವರ್ಗದ ನಾಗರಿಕರಿಗೆ ವಸತಿ ಕೊಡುವ ಉದ್ದೇಶದಿಂದ ಸರ್ಕಾರವು ರಾಜ್ಯ ಮತ್ತು ನಗರದಾದ್ಯಂತ ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುತ್ತಿರುವುದು ಸರ್ಕಾರದ ಒಂದು ಯೋಜನೆಯಾಗಿದೆ.
ಅದೇ ರೀತಿಯಲ್ಲಿ ಕೇವಲ ಐದು ವರ್ಷಗಳಿಗೆ ಮಾತ್ರ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸಚಿವರಾದಾಗ ವಾಸ್ತವ್ಯ ಹೂಡಲು ಈಗಿರುವ ದೊಡ್ಡ ದೊಡ್ಡ ಬಂಗಲೆಗಳನ್ನು ತೆರವುಗೊಳಿಸಿ, ಕೆಡವಿ ಬಹುಮಹಡಿ ವಸತಿ ಸಮುಚ್ಚಯವನ್ನು ನಿರ್ಮಾಣ ಮಾಡಿ ಎಲ್ಲಾ ಸಚಿವರುಗಳು ಒಂದೇ ಸ್ಥಳದಿಂದ ವಿಧಾನಸೌಧಕ್ಕೆ ಬಂದು ಹೋಗಲು ಅನುಕೂಲವಾಗುವಂತಹ ಸ್ಥಿತಿ ನಿರ್ಮಾಣವಾಗಬೇಕಾಗಿದೆ.
ಜನ ಸೇವಕರಾದ ಇವರುಗಳು ಹೆಚ್ಚಿನ ವಿಸ್ತೀರ್ಣದಲ್ಲಿರುವ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರುವ ನಾವು ಪ್ರಶ್ನಿಸಬೇಕಾಗುತ್ತದೆ.
ಸರ್ಕಾರದ ಕೆಲಸಗಳನ್ನು ನಿರ್ವಹಿಸಲು ವಿಧಾನಸೌಧದ ಕಚೇರಿಗಳಲ್ಲಿ ಕುಳಿತು ಕಡತಗಳ ಪರಿಶೀಲನೆ ಮತ್ತು ಜನರ ಸೇವೆ ಮಾಡಬಹುದಾಗಿದೆ. ಇದರಿಂದ ಸಚಿವರು ಉಪಯೋಗಿಸುವ ಕಾರಿನ ಇಂಧನದ ಜೊತೆ ರಸ್ತೆ ಸಂಚಾರ ಸಮಸ್ಯೆಗಳಿಗೂ ಪರಿಹಾರವಾಗುತ್ತದೆ.
ನಮ್ಮನ್ನಾಳಿದ ಸರ್ಕಾರಗಳು ಇಂದಿನವರೆಗೂ ವಸತಿರಹಿತರಿಗೆ ವಸತಿಗಳನ್ನು ನೀಡುತ್ತಿರುವುದಾಗಿ ಆಶ್ವಾಸನೆ ಭರವಸೆಗಳನ್ನು ಹೇಳುತ್ತಿದ್ದರು ಸಹ, ಸ್ವಾತಂತ್ರ ಬಂದ ಇಂದಿನವರೆಗೂ ನಮ್ಮನ್ನಾಳಿದ ಜನಪ್ರತಿನಿಧಿಗಳು ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಸಂಪೂರ್ಣವಾಗಿ ಒದಗಿಸುವಲ್ಲಿ ವಿಫಲರಾಗಿದ್ದಾರೆ.
ಇಂತಹ ಸಂಕಷ್ಟದಲ್ಲಿರುವ ರಾಜ್ಯದ ಮತದಾರ ಬಂಧುಗಳಿಗೆ ವಸತಿರಹಿತರಿಗೆ ವಾಸಯೋಗ್ಯ ಮನೆಗಳು ಇಲ್ಲದಿರುವ ಸಂದರ್ಭದಲ್ಲಿ ಸಚಿವರುಗಳಿಗೆ ಇಂತಹ ದೊಡ್ಡ ದೊಡ್ಡ ಸರ್ಕಾರಿ ಬಂಗಲೆಗಳಿಗೆ, ಶಾಸಕರ ಭವನ, ವಿಧಾನಸೌಧ, ವಿಕಾಸಸೌಧ ಕಚೇರಿಗಳಿಗೆ ಲಾಬಿ ನಡೆಸುತ್ತಿರುವುದನ್ನು ನೋಡಿದರೆ ಪ್ರಜಾಪ್ರಭುತ್ವವನ್ನೇ ಅಣಕಿಸುತ್ತಿರುವಂತೆ ಕಾಣುತ್ತಿದೆ. ಹಾಗೂ ಒಂದು ರೀತಿಯ ಹಾಸ್ಯಾಸ್ಪದವೆನಿಸುತ್ತದೆ. ( ಅದು ಐದು ವರ್ಷಗಳ ಅವಧಿಗೆ ಮಾತ್ರ )
ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ವಿಧಾನಸೌಧಕ್ಕೆ ಸಮೀಪವಿರುವ ಸೆವೆನ್ ಮಿನಿಸ್ಟರ್ ಕ್ವಾಟರ್ಸ್, ಇದಕ್ಕೆ ಹೊಂದಿಕೊಂಡಿರುವ ಸಚಿವರುಗಳ ಬಂಗಲೆಗಳನ್ನು ಕೆಡವಿ ಬಹುಮಹಡಿ ವಸತಿ ಸಂಕೀರ್ಣವನ್ನು ನಿರ್ಮಾಣ ಮಾಡಿ ರಾಜ್ಯದ 35 ಸಚಿವರುಗಳಿಗೆ ಒಂದೇ ಸ್ಥಳದಲ್ಲಿ ವಸತಿ ಸೌಕರ್ಯವನ್ನು ಕಲ್ಪಿಸಬಹುದಾಗಿದೆ. ಇದರಿಂದ ಬಂಗಲೆಗಳಿಗಾಗಿಯೇ ಲಾಬಿ ನಡೆಸುವುದು ತಪ್ಪುತ್ತದೆ.
ಈ ನಿಟ್ಟಿನಲ್ಲಿ ತಾವು ಸೂಕ್ತ ಕ್ರಮಗಳನ್ನು ಕೈಗೊಂಡು
ಶೀಘ್ರವಾಗಿ ಸಚಿವರುಗಳ ವಸತಿ ಸಂಕೀರ್ಣ ನಿರ್ಮಾಣ ಮಾಡಬೇಕೆಂಬುದು ಮತದಾರ ನಾದ ನನ್ನ ಆಗ್ರಹ
ಹಾಗೆ ನಗರದ ವಿವಿಧ ಭಾಗದಲ್ಲಿರುವ ಸಚಿವರುಗಳಿಗೆ ಹಂಚಿಕೆಯಾಗುವ ಇತರ ಬಂಗಲೆಗಳನ್ನು ಕಚೇರಿಗಳಾಗಿ ಪರಿವರ್ತನೆ ಮಾಡಿದ್ದಲ್ಲಿ ಬಾಡಿಗೆಗೆ ತೆಗೆದುಕೊಂಡು ಕಚೇರಿಯನ್ನು ನಡೆಸುತ್ತಿರುವ ಸರ್ಕಾರದ ವಿವಿಧ ಇಲಾಖೆಗಳಿಗೆ ಸದರಿ ಜಾಗಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರ ಹಣವನ್ನು ಬಾಡಿಗೆಯ ರೂಪದಲ್ಲಿ ಕೊಡುವುದು ತಪ್ಪುತ್ತದೆ.
ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ಮುಖ್ಯ ಮಂತ್ರಿಗಳಾದ ತಾವು ಗಂಭೀರವಾಗಿ ತೆಗೆದುಕೊಂಡು ಕಾರ್ಯಪ್ರವೃತ್ತರಾದಲ್ಲಿ ಮುಂದಿನ ದಿನಮಾನಗಳಲ್ಲಿ ಈಗ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ ಜೊತೆಯಲ್ಲಿ ಸಾರ್ವಜನಿಕರ ತೆರಿಗೆ ಹಣವೂ ಪೋಲಾಗದಂತೆ ಇತರ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸಬಹುದಾಗಿದೆ.
ಈ ವಿಚಾರದಲ್ಲಿ ತಮ್ಮ ಆಡಳಿತದ ನಿರ್ಧಾರಗಳನ್ನು ರಾಜ್ಯದ ಮತದಾರ ಬಾಂಧವರಿಗೆ ತಿಳಿಸಬೇಕಾಗಿ ಮತ್ತು ತಮ್ಮ ಪ್ರತ್ಯುತ್ತರವನ್ನು ನಿರೀಕ್ಷಿಸುತ್ತಿರುವುದಾಗಿ ‘ನೈಜ ಹೋರಾಟಗಾರರ ವೇದಿಕೆ’ಯ ಹೆಚ್ ಎಂ ವೆಂಕಟೇಶ್ ಅವರು ಪತ್ರ ಬರೆದಿದ್ದಾರೆ.