ಪಹಲ್ಗಾಮ್ನಲ್ಲಿ ನಡೆದ ದಾಳಿಯಿಂದ ಕಲಬುರಗಿಯ ಪ್ರವಾಸಿಗರು ಪಾರಾಗಿದ್ದಾರೆ. ದಾಳಿ ನಡೆದಿದ್ದ ಪ್ರದೇಶವನ್ನ ಕಲಬುರಗಿ ಹೈಕೋರ್ಟ್ ವಕೀಲರಾದ ಮಲ್ಲಿಕಾರ್ಜುನ ಬೃಂಗಿಮಠ ಹಾಗೂ ಅವರ ಕುಟುಂಬದ ಎಂಟು ಜನರು ಸುತ್ತಾಡಿದ್ರಂತೆ. ಘಟನೆ ನಡೆದ ಬಳಿಕ ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಮಲ್ಲಿಕಾರ್ಜುನ ಬೃಂಗಿಮಠ ಮಾತನಾಡಿ, ಪಹಲ್ಗಾಮ್ ಭೂಲೋಕದ ಸ್ವರ್ಗ.. ಆದರೆ ಅಲ್ಲಿ ಉಗ್ರರ ದಾಳಿ ಸುದ್ದಿ ಕೇಳಿ ಶಾಕ್ ಆಗಿದೆ ಎಂದಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಹಾವೇರಿಯ 30 ಪ್ರವಾಸಿಗರು ಕೂಡ ಸೇಫ್ ಆಗಿದ್ದಾರೆ. ಗುರುಶಾಂತವೀರ ಟ್ರಾವೆಲ್ ಆ್ಯಂಡ್ ಟೂರ್ ಏಜೆನ್ಸಿ ಮೂಲಕ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದರು. ಸದ್ಯ ಅರ್ಧಕ್ಕೆ ಜಮ್ಮು ಕಾಶ್ಮೀರದ ಪ್ರವಾಸ ಮೊಟಕುಗೊಳಿಸಿದ್ದಾರೆ. ಶಿವಮೊಗ್ಗದ ಟ್ರಾವೆಲ್ ಏಜೆನ್ಸಿ ಮೂಲಕ ತೆರಳಿದ್ದ 107 ಜನ ಪ್ರವಾಸಿಗರು ಈಗ ಕತ್ರಾದಿಂದ ದೆಹಲಿಯತ್ತ ಪ್ರಯಾಣಿಸ್ತಿದ್ದಾರೆ.
ಕಾಶ್ಮೀರ ಪ್ರವಾಸದಲ್ಲಿರುವ ಉಡುಪಿಯ 20 ಮಂದಿಯ ತಂಡ ಜಮ್ಮು-ಕಾಶ್ಮೀರದಲ್ಲಿ ಸೇಫ್ ಆಗಿದ್ದಾರೆ. ಇಂದು ಪಹಲ್ಗಾಮ್ಗೆ ಹೋಗಬೇಕಾಗಿದ್ದ ತಂಡ, ಶ್ರೀನಗರದ ಆಸು-ಪಾಸಿನಲ್ಲಿ ಪ್ರವಾಸ ಮಾಡ್ತಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳದಿಂದ ಸುಮಾರು 150 ಕಿಲೋ ಮೀಟರ್ ದೂರ ಇದ್ದೇವೆ. ನಾವು 20 ಮಂದಿಯೂ ಅತ್ಯಂತ ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ..
ಜಮು ಕಾಶ್ಮೀರದಲ್ಲಿ 13 ಬಾಗಲಕೋಟೆ ಪ್ರವಾಸಿಗರು ಸೇಫ್ ಆಗಿದ್ದಾರೆ. ನಾಲ್ಕು ಜನ ದಂಪತಿ ಹಾಗೂ ಐವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆಯ ಮಾರವಾಡಿ ಗಲ್ಲಿಯ ನಿವಾಸಿಗಳಾಗಿದ್ದು, ನಿನ್ನೆ ಪಹಲ್ಗಾಮ್ಗೆ ಹೊರಟಿದ್ದರು. ಮಾರ್ಗ ಮಧ್ಯೆ ಮನೆಯಿಂದ ಪಹಲ್ಗಾಮ್ನಲ್ಲಿ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಕರೆ ಬಂದಿದ್ದರಿಂದ ಪಹಲ್ಗಾಮ್ಗೆ ಹೋಗೋದನ್ನು ನಿಲ್ಲಿಸಿದ್ದಾರೆ.
ವಿಜಯನಗರ ಜಿಲ್ಲೆಯಿಂದ ತೆರಳಿದ್ದ ನಾಲ್ವರು ಪ್ರವಾಸಿಗರು ಕೂಡ ಸೇಫ್ ಆಗಿದ್ದಾರೆ. ಹರಪನಹಳ್ಳಿ ಪಟ್ಟಣದ ನಿವಾಸಿಯಾದ ಬಿ.ಇಡಿ ಕಾಲೇಜಿನ ಡೀನ್, ಟಿ.ಎಂ ರಾಜಶೇಖರ್ ಕುಟುಂಬ ಸಮೇತವಾಗಿ ಕಾಶ್ಮೀರಕ್ಕೆ ತೆರಳಿದ್ರು. ನಿನ್ನೆ ದಾಳಿ ನಡೆದ ಸ್ಥಳದಿಂದ ದೂರವಿದ್ದ ಕಾರಣ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಬಳಿಕ ಊರಿಗೆ ವಾಪಸಾಗ್ತಿದ್ದಾರೆ.
ಮೈಸೂರಿನ 10 ಮಂದಿ ಶ್ರೀನಗರದಲ್ಲಿ ಸೇಫ್ ಆಗಿದ್ದಾರೆ. ಕಾಶ್ಮೀರದ ಶ್ರೀನಗರದಲ್ಲಿರುವ ಸಚಿವ ಸಂತೋಷ್ ಲಾಡ್, ಆತಂಕದಲ್ಲಿದ್ದ ಕನ್ನಡಿಗರನ್ನ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಕರ್ನಾಟಕಕ್ಕೆ ತೆರಳಲು ವ್ಯವಸ್ಥೆ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ನೆರವಿಗೆ, ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಧನ್ಯವಾದ ತಿಳಿಸಿದ್ದಾರೆ.





