ಬಂಡವಾಳಶಾಹಿ ವ್ಯವಸ್ಥೆಗೆ ಪ್ರಜಾಪ್ರಭುತ್ವ ಪೂರಕವಾಗಿ ಕಾಣುವುದಕ್ಕೆ ಒಂದು ಮೂಲ ಕಾರಣ ಎಂದರೆ ಇಲ್ಲಿ ಬಂಡವಾಳದ ಹರಿವು ಅನಿಯಂತ್ರಿತವಾಗಿರುವ ಹಾಗೆಯೇ ಆಡಳಿತ ವ್ಯವಸ್ಥೆಯೊಳಗೆ ವ್ಯಾಪಿಸಲು ಮುಕ್ತ ಅವಕಾಶಗಳನ್ನೂ ಒದಗಿಸುತ್ತದೆ. ಪ್ರಪಂಚದ ಎಲ್ಲ ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಭ್ರಷ್ಟಾಚಾರ ಎನ್ನುವುದು ಒಂದು ವ್ಯವಸ್ಥೆಯೇ ಆಗಿಹೋಗಿದೆ. ನಿರಂಕುಶಾಧಿಕಾರದ ರಾಷ್ಟ್ರಗಳಲ್ಲಿ ಭ್ರಷ್ಟತೆಯ ಮೂಲಗಳು ಅಧಿಕಾರ ಪೀಠಗಳ ವ್ಯಾಪ್ತಿಯೊಳಗೇ ಕಂಡುಬಂದರೆ, ಪ್ರಜಾಪ್ರಭುತ್ವದಲ್ಲಿ ಇದು ವ್ಯವಸ್ಥಿತವಾಗಿ ವಿಕೇಂದ್ರೀಕರಣಕ್ಕೊಳಗಾಗಿರುತ್ತದೆ. ತಳಮಟ್ಟದ ಆಡಳಿತ ಕೇಂದ್ರದಿಂದ ಹಿಡಿದು ಅತ್ಯುನ್ನತ ಮಟ್ಟದ ಅಧಿಕಾರ ಕೇಂದ್ರದವರೆಗೂ ಇರುವ ಒಂದು ಕೊಂಡಿ, ಬಂಡವಾಳದ ಹರಿವಿಗೆ ಪೂರಕವಾದ ನೀತಿಗಳನ್ನು ರೂಪಿಸುತ್ತಲೇ, ಆಳುವವರ, ಅಧಿಕಾರಶಾಹಿಗಳ ಮತ್ತು ಈ ಎರಡೂ ವರ್ಗಗಳ ವಂದಿಮಾಗಧರ ಭಂಡಾರವನ್ನು ತುಂಬಿಸಲು ನೆರವಾಗುತ್ತಿರುತ್ತದೆ.
ರಾಜಕೀಯ ಅಧಿಕಾರ ಕೇಂದ್ರಗಳ ನಡುವೆ ಸರ್ಕಾರದ ಘೋಷಿತ ಯೋಜನೆಗಳೇ ಬಂಡವಾಳದ ಹರಿವಿಗೆ ಕಾಲುವೆಗಳಂತೆ ಕಾರ್ಯನಿರ್ವಹಿಸಿದರೆ, ಅಧಿಕಾರಶಾಹಿಯ ಕೇಂದ್ರಗಳ ನಡುವೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಬಳಿಗೆ ಕೊಂಡೊಯ್ಯಬೇಕಾದ ಸಾಧನಗಳು ಮತ್ತು ಮಾರ್ಗಗಳು ಮುಖ್ಯವಾಹಿನಿಗಳಾಗಿರುತ್ತವೆ. ಅಧಿಕಾರ ಕೇಂದ್ರಗಳು ಮತ್ತು ಆಡಳಿತ ಕೇಂದ್ರಗಳ ನಡುವೆ ಸಂಪರ್ಕ ಮತ್ತು ಸಂಬಂಧಗಳನ್ನು ಬೆಳೆಸುವ ಸಲುವಾಗಿಯೇ ಬಂಡವಾಳ ಮತ್ತು ಮಾರುಕಟ್ಟೆ ವ್ಯವಸ್ಥೆ ಸಾಂಸ್ಥಿಕ ಮಧ್ಯವರ್ತಿಗಳನ್ನು, ವಶೀಲಿಬಾಜಿಗಳನ್ನು (ಲಾಬಿಗಳು) ರೂಪಿಸಿರುತ್ತದೆ. ಈ ವಶೀಲಿಬಾಜಿಗಳು ಐಎಎಸ್, ಐಪಿಎಸ್, ಐಎಫ್ಎಸ್ ಮತ್ತಿತರ ಎಲ್ಲ ಅಧಿಕಾರ ಕೇಂದ್ರಗಳಲ್ಲೂ ತಮ್ಮ ಬಾಹುಗಳನ್ನು ಚಾಚಿರುತ್ತಾರೆ. ಕಾರ್ಯಾಂಗದ ಆಡಳಿತ ವ್ಯವಸ್ಥೆ, ಪೊಲೀಸ್ ಮತ್ತು ಕಾನೂನು ಪಾಲನೆ ಹಾಗೂ ಅರಣ್ಯ ಪಾಲನೆಯಲ್ಲಿ ಮುತುವರ್ಜಿ ವಹಿಸಬೇಕಾದ ಅಧಿಕಾರಶಾಹಿಯು ಈ ವಶೀಲಿಬಾಜಿಗಳನ್ನು ಅವಲಂಬಿಸಿಯೇ ವರ್ಗಾವಣೆ, ಬಡ್ತಿ ಇತರ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಿರುತ್ತದೆ.
ಹಾಗಾಗಿಯೇ ಅಧಿಕಾರಶಾಹಿಯಲ್ಲಿ ಪ್ರಾಮಾಣಿಕವಾಗಿ ಕೆಲವೇ ಅಧಿಕಾರಿಗಳು ಸಮಾಜದ ದೃಷ್ಟಿಯಲ್ಲಿ ಅನುಕರಣೀಯರೂ ಆಗಿಬಿಡುತ್ತಾರೆ. ಚಲನಚಿತ್ರಗಳಿಗೆ ಕಥಾವಸ್ತುವಾಗಿಬಿಡುತ್ತಾರೆ. ಇಲ್ಲಿ ಪ್ರಾಮಾಣಿಕತೆ ಎನ್ನುವುದು ಎರಡು ನೆಲೆಯಲ್ಲಿ ಕಾರ್ಯಗತವಾಗುತ್ತದೆ. ಸಿನಿಮಾ ಪರದೆಯ ಮೇಲೆ ತೋರಿದಂತೆ ರಾಜಕೀಯ ಅಧಿಕಾರ ಕೇಂದ್ರಗಳನ್ನು ದಿಟ್ಟವಾಗಿ ಎದುರಿಸಿ ಕರ್ತವ್ಯ ನಿಷ್ಠೆ ಮೆರೆಯುವ ಬೆರಳೆಣಿಕೆಯಷ್ಟು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು ಊರಿಂದೂರಿಗೆ ವರ್ಗಾವಣೆಯಾಗುವುದರಲ್ಲೇ ತಮ್ಮ ಸೇವೆ ಮುಗಿಸಿರುತ್ತಾರೆ. ಇಂತಹ ಅಧಿಕಾರಿಗಳು ಸಾಮಾನ್ಯವಾಗಿ ರಾಜಕೀಯ ಅಧಿಕಾರಕ್ಕೆ ತಲೆಬಾಗದೆ, ಸಂವಿಧಾನ ನಿಷ್ಠೆಯಿಂದ ತಮ್ಮ ಕರ್ತವ್ಯ ನಿಭಾಯಿಸುವುದೇ ಅಲ್ಲದೆ, ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತಿನ ಗಳಿಕೆಯಿಂದ ಮುಕ್ತವಾಗಿರುತ್ತಾರೆ.
ಮತ್ತೊಂದು ನೆಲೆಯಲ್ಲಿ ಪ್ರಾಮಾಣಿಕತೆ ಎನ್ನುವುದು ವ್ಯಕ್ತಿನಿಷ್ಠವಾಗಿರುತ್ತದೆ. ರಾಜಕೀಯ ನಿಷ್ಠೆಯೇ ಪ್ರಧಾನವಾಗಿರುವ ಇಂತಹ ಅಧಿಕಾರಿಗಳು ಜನಸಾಮಾನ್ಯರ ದೃಷ್ಟಿಯಲ್ಲಿ ಪ್ರಾಮಾಣಿಕರಾಗಿ ಕಂಡುಬಂದರೂ, ಆಡಳಿತ ವ್ಯವಸ್ಥೆಯೊಳಗಿನ ಭ್ರಷ್ಟ ಜಾಲದಿಂದ ಪೂರ್ಣ ಮುಕ್ತರಾಗಿರುವುದಿಲ್ಲ. ಇಂತಹ ಅಧಿಕಾರಿಗಳು ಜನಾನುರಾಗಿರುವ ಸಾಧ್ಯತೆಗಳೂ ಇರುತ್ತವೆ. ಆದರೆ ರಾಜಕೀಯ ಭ್ರಷ್ಟತೆಯ ವಿರುದ್ಧ ದನಿ ಎತ್ತಲೂ ಸಾಧ್ಯವಾಗದೆ, ತಮ್ಮ ಕಾರ್ಯಾವಧಿಯಲ್ಲಿ ಕರ್ತವ್ಯ ಪಾಲನೆಗೆ ಗಮನ ನೀಡುತ್ತಾ, ಭ್ರಷ್ಟಾಚಾರದ ಬೇರುಗಳು ಸಡಿಲಗೊಳ್ಳದಂತೆ ಎಚ್ಚರವಹಿಸುತ್ತಾರೆ. ಇಂತಹ ಹಲವು ಅಧಿಕಾರಿಗಳು ತಮ್ಮ ನಿವೃತ್ತಿಯ ನಂತರ ಅಥವಾ ಸೇವೆಗೆ ರಾಜೀನಾಮೆ ನೀಡಿ, ಯಾವುದೋ ಒಂದು ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಒಂದಾಗಿ ಹೋಗುತ್ತಾರೆ. ಅಲ್ಲಿ ತಾಂಡವಾಡುವ ಭ್ರಷ್ಟಾಚಾರವನ್ನು ಮರೆಮಾಚಲು ಈ ಅಧಿಕಾರಿಗಳ “ ಪ್ರಾಮಾಣಿಕತೆ ”ಯ ವರ್ಚಸ್ಸು ಒಂದು ಗುರಾಣಿಯಂತೆ ಬಳಸಲಾಗುತ್ತದೆ. ಆದರೆ ಅಂತಿಮವಾಗಿ ವ್ಯವಸ್ಥೆಯೊಳಗಿನ ಭ್ರಷ್ಟಾಚಾರದ ಬೇರುಗಳು ಗಟ್ಟಿಯಾಗಿ ಉಳಿದುಕೊಂಡಿರುತ್ತವೆ.
74 ವರ್ಷಗಳ ಸ್ವತಂತ್ರ ಭಾರತದಲ್ಲಿ ಈ ಎರಡೂ ತರಹದ ಅಧಿಕಾರಶಾಹಿಯನ್ನು ಸಮಾಜ ಕಂಡಿದೆ, ಜೀರ್ಣಿಸಿಕೊಂಡಿದೆ. ಇಂತಹುದೇ ಅಧಿಕಾರಶಾಹಿಯನ್ನು ಪೋಷಿಸಿ, ಸಂರಕ್ಷಿಸಿ, ಬೆಳೆಸುವ ರಾಜಕೀಯ ವ್ಯವಸ್ಥೆಯನ್ನೂ ಕಂಡಿದೆ. ನೆಹರೂ ಕಾಲದಿಂದ ಮೋದಿ ಯುಗದವರೆಗೆ ಈ ಭ್ರಷ್ಟಾಚಾರದ ನದಿ ಹರಿಯುತ್ತಲೇ ಬಂದಿದೆ. ಉನ್ನತ ರಾಜಕಾರಣದ ಮಟ್ಟದಲ್ಲಿ ಹಗರಣಗಳು ಇಲ್ಲವೆಂದ ಮಾತ್ರಕ್ಕೆ ಭ್ರಷ್ಟಾಚಾರವೇ ಇಲ್ಲವಾಗಿದೆ ಎಂದು ಭಾವಿಸುವುದು ಸಾರ್ವಜನಿಕರ ಅಮಾಯಕತೆಯನ್ನಷ್ಟೇ ತೋರಿಸುತ್ತದೆ. ರಕ್ಷಣಾ ಒಪ್ಪಂದಗಳಲ್ಲಿ, ವಿದೇಶಗಳಿಂದ ಸರ್ಕಾರಗಳು ಖರೀದಿಸುವ ಸಮರ ಶಸ್ತ್ರಾಸ್ತ್ರಗಳಲ್ಲಿ, ಅಂತಾರಾಷ್ಟ್ರೀಯ ಒಡಂಬಡಿಕೆಗಳಲ್ಲಿ ಮತ್ತು ಕಲ್ಲಿದ್ದಲು ಗಣಿಗಾರಿಕೆ, ದೂರ ಸಂಪರ್ಕ ತಂತ್ರಾಂಶಗಳು, ವಿದ್ಯುತ್ ಮತ್ತು ತೈಲ ಉತ್ಪಾದನೆಯ ಘಟಕಗಳು ಈ ಎಲ್ಲ ಗುತ್ತಿಗೆ ವ್ಯವಹಾರಗಳು ಹಣಕಾಸು ಸ್ವರೂಪದ ಭ್ರಷ್ಟಾಚಾರವನ್ನು ಒಳಗೊಂಡಿರುತ್ತವೆ. ಹಣಕಾಸು ಭ್ರಷ್ಟಾಚಾರ ಇಲ್ಲದೆಡೆ ಆಡಳಿತಾರೂಢ ಪಕ್ಷಕ್ಕೆ ದೇಣಿಗೆ ನೀಡುವುದು, ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಹಲವು ರೀತಿಯಲ್ಲಿ ನೆರವಾಗುವುದು, ತಮ್ಮ ನಿಕಟವರ್ತಿಗಳಿಗೆ ಗುತ್ತಿಗೆ, ಕರಾರು ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಒತ್ತಡ ಹೇರುವ ಮೂಲಕ ಉದ್ಯಮಿಗಳು, ಅಧಿಕಾರಶಾಹಿಯ ಮೂಲಕ ರಾಜಕೀಯ ಪಕ್ಷಗಳನ್ನು ಓಲೈಸುತ್ತಾರೆ.
ಈ ನೇಪಥ್ಯದ ಭ್ರಷ್ಟಾಚಾರವೇ ಭಾರತದ ಆಡಳಿತ ವ್ಯವಸ್ಥೆಯ ಹಲವು ಲೋಪಗಳಿಗೆ ಕಾರಣವೂ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿ ಹೊರಬಂದ ರಾಜಕಾರಣಿಗಳಿಗೂ ಸಹ ಶಿಕ್ಷೆಯಾಗದಿರುವುದನ್ನು ಗಮನಿಸಿದರೆ, ಭ್ರಷ್ಟಾಚಾರದ ಸರಪಳಿ ಹೇಗೆ ಅಧಿಕಾರಶಾಹಿ ಮತ್ತು ಆಳುವ ವರ್ಗಗಳನ್ನು ಪರಸ್ಪರ ಬಂಧಿಸಿದೆ ಎಂದು ಅರಿವಾಗುತ್ತದೆ. ಯುಪಿಎ ಸರ್ಕಾರದ ಪತನಕ್ಕೆ ಕಾರಣವಾದ 2 ಜಿ ತಂತ್ರಾಂಶ ಹಗರಣದಲ್ಲೇ ಯಾವ ರಾಜಕಾರಣಿಗೂ ಶಿಕ್ಷೆಯಾಗಲಿಲ್ಲ. ಉನ್ನತ ಮಟ್ಟದಲ್ಲಿ ನಡೆಯುವ ಇಂತಹ ಹಗರಣಗಳನ್ನು ಮುಚ್ಚಿಹಾಕಲು ಅಥವಾ ತನಿಖೆಯ ದಾರಿ ತಪ್ಪಿಸಲು ಸಾಂವಿಧಾನಿಕ ತನಿಖಾ ಸಂಸ್ಥೆಗಳೂ ಸಹ ಸಹಾಯ ಮಾಡುವುದನ್ನು ಕಂಡಿದ್ದೇವೆ. ಸಂವಿಧಾನಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳು ಪಕ್ಷ ನಿಷ್ಠೆಗೆ ಬಲಿಯಾಗುವ ಹಲವು ಪ್ರಸಂಗಗಳನ್ನೂ ಕಂಡಿದ್ದೇವೆ. ಆಡಳಿತಶಾಹಿ ಮತ್ತು ಅಧಿಕಾರಶಾಹಿಯ ನಡುವಿನ ಈ ಹೊಂದಾಣಿಕೆ ಮತ್ತು ಒಡನಾಟವೇ, ಭಾರತದಲ್ಲಿ ಹಲವು ಬೃಹತ್ ಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳನ್ನು ಭೂಗತಗೊಳಿಸಿವೆ. ಆರೋಪಿಗಳು ಇಂದಿಗೂ ಅಧಿಕಾರ ರಾಜಕಾರಣದ ಫಲಾನುಭವಿಗಳಾಗಿದ್ದಾರೆ.
ಈ ಭ್ರಷ್ಟಾಚಾರದ ಸರಪಳಿಯನ್ನು ತುಂಡರಿಸಲು ಮತ್ತು ಭ್ರಷ್ಟ ಕೂಪಗಳನ್ನು ಶೋಧಿಸಿ, ಭ್ರಷ್ಟ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಶಿಕ್ಷಿಸಲು ನೆರವಾಗಬಹುದಾದ ಲೋಕಾಯುಕ್ತದಂತಹ ಸಂಸ್ಥೆಗಳೂ ಸಹ ಕಳೆದ ಏಳು ವರ್ಷಗಳಲ್ಲಿ ಶಿಥಿಲವಾಗುತ್ತಿವೆ. ಈ ಸಂಸ್ಥೆಗಳ ಸತ್ವಹೀನ ಕಾರ್ಯಾಚರಣೆ ಉನ್ನತ ಮಟ್ಟದ ರಾಜಕೀಯ ಭ್ರಷ್ಟಾಚಾರಕ್ಕೆ ವರದಾನವಾಗಿರುತ್ತದೆ. 2014ರಲ್ಲಿ ಯುಪಿಎ ಸರ್ಕಾರದ ಪತನದ ನಂತರ ರಾಜಕೀಯ ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ನೂರು ದಿನಗಳೊಳಗಾಗಿ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವ ಆಶ್ವಾಸನೆ ನೀಡಿದ ನರೇಂದ್ರ ಮೋದಿ ಸರ್ಕಾರ, ಬಹುಶಃ ಈ ಮಸೂದೆಯ ಪಳೆಯುಳಿಕೆಗಳನ್ನೂ ನಾಶಮಾಡಿಬಿಟ್ಟಿದೆ. ರಾಜಕೀಯ ಭ್ರಷ್ಟಾಚಾರ ಮತ್ತು ಅಧಿಕಾರಶಾಹಿಯ ಭ್ರಷ್ಟ ಕೂಪಗಳನ್ನು ಹೊರಗೆಳೆಯುವ ಒಂದು ಉತ್ತಮ ಸಾಧನವಾಗಿದ್ದ ಮಾಹಿತಿ ಹಕ್ಕು ಕಾಯ್ದೆಯನ್ನೂ ಬಹಳಷ್ಟು ಶಿಥಿಲಗೊಳಿಸಲಾಗಿದೆ. ಪಿಎಂ ಕೇರ್ ಫಂಡ್ ನಂತಹ ಸಾರ್ವಜನಿಕರ ದೇಣಿಗೆಯಿಂದ ತುಂಬುವ ಭಂಡಾರ ಇಂದು ಗೋಪ್ಯವಾಗಿದೆ. ಈ ನಿಧಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ, ಎಷ್ಟು ವ್ಯಯವಾಗಿದೆ ಎಂದು ತಿಳಿಯುವ ಹಕ್ಕನ್ನೂ ಕಿತ್ತುಕೊಳ್ಳಲಾಗಿದೆ.
ಮೇಲ್ಮನೆ ಎಂಬ ಬಿಳಿ ಆನೆ
ಆಡಳಿತ ವ್ಯವಸ್ಥೆಯ ಈ ಕುತಂತ್ರಗಳ ನಡುವೆಯೇ ಕರ್ನಾಟಕದಲ್ಲಿ ಇತ್ತೀಚೆಗೆ ಎರಡು ವಿಚಾರಗಳು ಸಾರ್ವಜನಿಕ ಚರ್ಚೆಗೊಳಗಾಗಿವೆ. ಮೊದಲನೆಯದು ವಿಧಾನಪರಿಷತ್ತಿನ ಚುನಾವಣೆಗಳು ಮತ್ತೊಂದು ಹಲವು ಭ್ರಷ್ಟ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ನಡೆಸಿರುವ ಧಾಳಿ. ವಿಧಾನಸಭೆಯಲ್ಲಿ ಆಡಳಿತಾರೂಢ ಸರ್ಕಾರ ತನ್ನ ಬಹುಮತದ ಬಲದಿಂದ ಕೆಲವು ಜನವಿರೋಧಿ ಅಥವಾ ತಪ್ಪು ನಿರ್ಣಯಗಳನ್ನು ಕೈಗೊಂಡರೂ ಅದಕ್ಕೆ ಅಂಕುಶ ಹಾಕುವ ಒಂದು ಸಾಧನವಾಗಿ ಮೇಲ್ಮನೆ ಅಥವಾ ವಿಧಾನಪರಿಷತ್ತು ಕಾರ್ಯನಿರ್ವಹಿಸಬೇಕು. ಇದು ಮೇಲ್ಮನೆಯನ್ನು ಹೊಂದಿರಲು ಇರುವ ಸಾಂವಿಧಾನಿಕ ಧ್ಯೇಯ. ಹಣಕಾಸು ಮಸೂದೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಿಚಾರಗಳಲ್ಲೂ ವಿಧಾನಪರಿಷತ್ತಿಗೆ ಈ ಅವಕಾಶ ಇರುತ್ತದೆ. ಅಷ್ಟೇ ಅಲ್ಲದೆ ಚುನಾಯಿತರಲ್ಲದ, ನೇರ ನೇಮಕಾತಿಯನ್ನು ಪಡೆದ ವಿವಿಧ ಸಾಮಾಜಿಕ-ಸಾಂಸ್ಕøತಿಕ-ಶೈಕ್ಷಣಿಕ ಕ್ಷೇತ್ರದ ಪ್ರತಿನಿಧಿಗಳಿಗೂ ಮೇಲ್ಮನೆಯಲ್ಲಿ ಅವಕಾಶ ಇರುವುದರಿಂದ, ಅಧಿಕಾರ ರಾಜಕಾರಣದಿಂದಾಚೆಗೂ ಜನಾಭಿಪ್ರಾಯಕ್ಕೆ ಇಲ್ಲಿ ಅವಕಾಶ ಇರುತ್ತದೆ.
ಸಂವಿಧಾನದ ಪರಿಚ್ಚೇದ 169ರ ಅಡಿಯಲ್ಲಿ ಯಾವುದೇ ರಾಜ್ಯದಲ್ಲಿ ವಿಧಾನಪರಿಷತ್ತನ್ನು ಸ್ಥಾಪಿಸಬಹುದು. ಈಗ ಭಾರತದಲ್ಲಿ ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ, ಅಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ವಿಧಾನಪರಿಷತ್ತು ಅಸ್ತಿತ್ವದಲ್ಲಿದೆ. ಇತ್ತೀಚೆಗೆ ಪಶ್ಚಿಮ ಬಂಗಾಲದ ವಿದಾನಸಭೆಯಲ್ಲಿ ಈ ನಿಟ್ಟಿನಲ್ಲಿ ಮಸೂದೆಯೊಂದನ್ನು ಅಂಗೀಕರಿಸಲಾಗಿದ್ದು, ಸಂಸತ್ತಿನ ಅನುಮೋದನೆಗಾಗಿ ಕಾಯುತ್ತಿದೆ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷದ ಈ ಪ್ರಯತ್ನಕ್ಕೆ ಅಡ್ಡಿಯಾಗಲೂ ಸಾಧ್ಯವಿದೆ. ವಿಧಾನಪರಿಷತ್ತಿನ ಅಧಿಕಾರ ವ್ಯಾಪ್ತಿ ಸೀಮಿತವಾಗಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸಚಿವ ಸಂಪುಟ ಹುದ್ದೆಯ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಮೇಲ್ಮನೆಯ ಸದಸ್ಯತ್ವ ವಿಧಾನಸಭೆಯ ಮೂರನೆ ಒಂದಕ್ಕಿಂತಲೂ ಹೆಚ್ಚಾಗಿರುವುದು ಸಾಧ್ಯವಿಲ್ಲ. ಕನಿಷ್ಠ 40 ಸದಸ್ಯರು ಇರುವುದು ಕಡ್ಡಾಯವಾಗಿರುತ್ತದೆ. ಮೂರನೆ ಒಂದರಷ್ಟು ಸದಸ್ಯರನ್ನು ಶಾಸಕರು ಆಯ್ಕೆ ಮಾಡುತ್ತಾರೆ, ಇನ್ನು ಮೂರನೆ ಒಂದರಷ್ಟು ಪುರಸಭೆ, ನಗರಸಭೆ, ಜಿಲ್ಲಾಅ ಮಂಡಳಿಗಳು ಮತ್ತು ಸ್ಥಳೀಯ ಕೇಂದ್ರಗಳ ಸದಸ್ಯರು ಆಯ್ಕೆ ಮಾಡುತ್ತಾರೆ. ಹನ್ನೆರಡನೆ ಒಂದರಷ್ಟು ಸದಸ್ಯರನ್ನು ಶಿಕ್ಷಕರು , ಅಷ್ಟೇ ಪ್ರಮಾಣದ ಸದಸ್ಯರನ್ನು ನೋಂದಾಯಿತ ಪದವೀಧರರು ಆಯ್ಕೆ ಮಾಡುತ್ತಾರೆ. ಉಳಿದ ಸದಸ್ಯರನ್ನು ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ವಲಯ, ಸಮಾಜಸೇವಾ ಕ್ಷೇತ್ರಗಳಿಂದ ರಾಜ್ಯಪಾಲರೇ ನೇಮಕ ಮಾಡುತ್ತಾರೆ. ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸುವ ಅಧಿಕಾರ ವಿಧಾನಪರಿಷತ್ತಿಗೆ ಇರುವುದಿಲ್ಲ.
ಈ ಸಾಂವಿಧಾನಿಕ ಸಂಸ್ಥೆ ಉಪಯುಕ್ತವಾಗಬೇಕಾದರೆ, ಪ್ರಜಾತಂತ್ರ ಮೌಲ್ಯಗಳಿಗೆ ಆಡಳಿತ ವಲಯದಲ್ಲಿ ಹೆಚ್ಚಿನ ಮಾನ್ಯತೆ ಇರಬೇಕಾಗುತ್ತದೆ. ವಿಧಾನಪರಿಷತ್ತಿಗೆ ಆಯ್ಕೆಯಾಗದಿರುವವರಿಗೆ ವಿಧಾನಮಂಡಲದಲ್ಲಿ ಅವಕಾಶ ಒದಗಿಸುವ ಒಂದು ಪರಂಪರೆ ಬೆಳೆದುಬಂದಿದ್ದು, ಮೇಲ್ಮನೆ ಎನ್ನುವುದು ನಿರಾಶ್ರಿತರ ತಾಣವಾಗಿ ಪರಿಣಮಿಸುತ್ತಿದೆ. ಶಾಸಕರಾಗಲು ಖರ್ಚುಮಾಡಬೇಕಾದ ಕೋಟ್ಯಂತರ ರೂಗಳನ್ನು ಪರಿಷತ್ ಸದಸ್ಯರಾಗಲೂ ಖರ್ಚುಮಾಡುವ ಒಂದು ಭ್ರಷ್ಟ ಪರಂಪರೆಯೂ ಬೆಳೆದುಬಂದಿದೆ. ಹಾಗಾಗಿ ಇಲ್ಲಿಯೂ ಸಹ ಕೋಟ್ಯಧಿಪತಿಗಳೇ ರಾಜ್ಯಭಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ನಡೆಯುತ್ತಿರುವ ವಿಧಾನಪರಿಷತ್ತಿನ ಚುನಾವಣೆಗಳಲ್ಲೂ ಸಹ ಹಣದ ಹೊಳೆ ಹರಿಯುತ್ತಿದ್ದು, ಕೋಟ್ಯಧಿಪತಿಗಳ ದಂಡು ವಿಧಾನಮಂಡಲವನ್ನು ಅಲಂಕರಿಸಲಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ನಡುವಿನ ಮುತ್ಸದ್ದಿಗಳನ್ನು ಅಥವಾ ಸಮಾಜಮುಖಿ ಚಿಂತಕ ರಾಜಕೀಯ ನಾಯಕರನ್ನು ಮೇಲ್ಮನೆಗೆ ತರುವ ಪ್ರಯತ್ನಗಳನ್ನೂ ಮಾಡದೆ, ವಿಧಾನಪರಿಷತ್ತಿನ ಮೌಲ್ಯವನ್ನೇ ನಗಣ್ಯಗೊಳಿಸುತ್ತಿರುವುದು ಇಂದಿನ ದುಸ್ಥಿತಿಗೆ ಕಾರಣವಾಗಿದೆ.
ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗುವ ಅಭ್ಯರ್ಥಿಗಳಲ್ಲಿ ರಾಜಕೀಯ ಪ್ರಜ್ಞೆಯೊಂದಿಗೇ ಸಮಾಜಮುಖೀ ಧೋರಣೆಯೂ ಇರಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದೇ ಅಲ್ಲದೆ, ಆಡಳಿತಾರೂಢ ಸರ್ಕಾರದ ಆಡಳಿತ ನೀತಿಗಳು, ಕಾಯ್ದೆಗಳು ಶಿಕ್ಷಣ ಕ್ಷೇತ್ರದ ಮುನ್ನಡೆಗೆ ಪೂರಕವಾಗದೆ ಇದ್ದಲ್ಲಿ, ನಿರುದ್ಯೋಗಿ ಪದವೀಧರರಿಗೆ ಅನುಕೂಲಕರವಾಗದೆ ಇದ್ದಲ್ಲಿ ಅದನ್ನು ವಿಧಾನಪರಿಷತ್ತಿನಲ್ಲಿ ಮಂಡಿಸಿ, ಸಲಹೆ ನೀಡುವ ವಿವೇಕ ಮತ್ತು ವಿವೇಚನೆ ಈ ಕ್ಷೇತ್ರದಿಂದ ಆಯ್ಕೆಯಾದವರಿಗೆ ಇರಬೇಕಾಗುತ್ತದೆ. ಸಾಹಿತ್ಯ, ಕಲೆ ಮುಂತಾದ ಕ್ಷೇತ್ರಗಳಿಂದ ನೇಮಕವಾದವರಲ್ಲೂ ಸಹ ಸಮಾಜಮುಖಿ ಧೋರಣೆ ಇಲ್ಲದೆ ಹೋದರೆ ವಿಧಾನಪರಿಷತ್ತಿನ ಕಲಾಪಗಳೆಲ್ಲವೂ ವ್ಯರ್ಥಾಲಾಪವಾಗುತ್ತವೆ. ದಿವಂಗತ ಸಿದ್ಧಲಿಂಗಯ್ಯ ಅವರು ತಮ್ಮ ಅವಧಿಯಲ್ಲಿ ಮಂಡಿಸಿದ ವಿಚಾರಗಳನ್ನು ಇಂದಿನ ಸದಸ್ಯರು ಒಮ್ಮೆಯಾದರೂ ಪರಾಮರ್ಶಿಸಿದರೆ, ಮೇಲ್ಮನೆ ಸದಸ್ಯರ ಜವಾಬ್ದಾರಿಯ ಅರಿವು ಮೂಡಲು ಸಾಧ್ಯ.
ಅಧಿಕಾರಶಾಹಿ ಮತ್ತು ಆಡಳಿತಶಾಹಿ
ದುರಾದೃಷ್ಟವಶಾತ್ ಇಂದು ಅಧಿಕಾರ ಕೇಂದ್ರಗಳು ಬಂಡವಾಳ ಕ್ರೋಢೀಕರಣ ಕೇಂದ್ರಗಳೂ ಆಗಿವೆ. ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪಣೆಯ ಮೂಲಕವೇ ತಮ್ಮೊಳಗಿನ ಹೊಲಸನ್ನು ಹೊರಹಾಕುತ್ತಿರುವುದು ಒಂದು ರೀತಿಯಲ್ಲಿ ಸ್ವಾಗತಾರ್ಹವೇ. ಯಾವ ಸರ್ಕಾರ ಎಷ್ಟು ಕಮಿಷನ್ ಪಡೆಯುತ್ತದೆ, ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಜನರ ತೆರಿಗೆ ಹಣದಿಂದ ಸರ್ಕಾರಗಳು ಖರ್ಚು ಮಾಡುವ ಕೋಟ್ಯಂತರ ರೂಗಳಲ್ಲಿ ಎಷ್ಟು ಭಾಗ ಅಧಿಕಾರಿಗಳ ಮತ್ತು ರಾಜಕಾರಣಿಗಳ ಖಾಸಗಿ ಭಂಡಾರಗಳನ್ನು ಸೇರುತ್ತವೆ ಎನ್ನುವುದಕ್ಕೆ ಇತ್ತೀಚೆಗೆ 15 ಅಧಿಕಾರಿಗಳ ಮೇಲೆ ಎಸಿಬಿ ನಡೆಸಿದ ಧಾಳಿಯೇ ಸಾಕ್ಷಿಯಾಗಿದೆ. ಕಬ್ಬಿಣದ ಪೆಟ್ಟಿಗೆಗಳಲ್ಲಿಡುತ್ತಿದ್ದ ಹಣವನ್ನು ನೀರಿನ ಪೈಪುಗಳಲ್ಲಿ ಅವಿಸಿಡುವಷ್ಟು ಮಟ್ಟಿಗೆ ನಮ್ಮ ಅಧಿಕಾರಶಾಹಿಯ ಬುದ್ಧಿವಂತಿಕೆ ತೀಕ್ಷ್ಣವಾಗಿದೆ. ಒಬ್ಬರೇ ಅಧಿಕಾರಿಯ ಬಳಿ 28 ಮನೆಗಳು, 19 ನಿವೇಶನಗಳು, ಒಂದು ಕಿಲೋ ಚಿನ್ನ, 14 ಎಕರೆ ಭೂಮಿ 1.31 ಕೋಟಿ ರೂ ಬ್ಯಾಂಕ್ ಠೇವಣಿ ಇರುವುದನ್ನು ಎಸಿಬಿ ಗುರುತಿಸಿದೆ.
ಇದು ಹಿಮಗಡ್ಡೆಯ ತುದಿ ಮಾತ್ರ ಎನ್ನಬಹುದು. ಇಂತಹ ಸಾವಿರಾರು ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಮಂಡಲಿ, ಸಿಬಿಐ ಮತ್ತಿತರ ಸಂಸ್ಥೆಗಳು ಇಂತಹ ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡುತ್ತಲೇ ಇರುತ್ತಾರೆ. ಕೋಟ್ಯಂತರ ರೂಗಳ ಅಕ್ರಮ ಹಣವನ್ನು, ಅಕ್ರಮ ಆಸ್ಥಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಬ್ಯಾಂಕುಗಳಲ್ಲಿನ ಲಾಕರುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನಗದು ಇರುತ್ತದೆ ಎನ್ನುವ ವಾಸ್ತವವನ್ನೂ ನಾವು ಗ್ರಹಿಸಬೇಕಿದೆ. ಲಾಕರುಗಳಲ್ಲಿರುವುದನ್ನು ಬ್ಯಾಂಕಿನವರಿಗೂ ಬಹಿರಂಗಪಡಿಸುವಂತಿಲ್ಲ ಹಾಗಾಗಿ ಇಲ್ಲಿ ಗೋಪ್ಯವಾಗಿರಿಸುವ ಅಕ್ರಮ ಸಂಪತ್ತು ಶಾಶ್ವತವಾಗಿ ಗೋಪ್ಯವಾಗಿಯೇ ಉಳಿಯುತ್ತದೆ. ತನಿಖಾ ಸಂಸ್ಥೆಗಳು ಪರಿಶೋಧಿಸುವಾಗ ಮಾತ್ರವೇ ಇದು ಹೊರಬರಲು ಸಾಧ್ಯ. ಅಕ್ರಮ ಸಂಪತ್ತನ್ನು ಸಂರಕ್ಷಿಸುವ ಹಲವಾರು ವಿಧಾನಗಳನ್ನು ವ್ಯವಸ್ಥೆಯೇ ರೂಪಿಸಿರುವುದರಿಂದ ಭ್ರಷ್ಟ ಅಧಿಕಾರಿಗಳು ತಮ್ಮದೇ ಆದ ವಾಮಮಾರ್ಗಗಳನ್ನು ಅನುಸರಿಸುತ್ತಾರೆ.
2016ರ ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಭ್ರಷ್ಟಾಚಾರ ನಿರ್ನಾಮವಾಗುತ್ತದೆ ಎಂಬ ಪ್ರಧಾನಿ ಮೋದಿಯವರ ಭರವಸೆ ಎಷ್ಟು ಠೊಳ್ಳು ಎನ್ನುವುದು ಇದರಿಂದಲೇ ಸಾಬೀತಾಗುತ್ತದೆ. ಇಂದಿಗೂ ಸಹ ಶ್ರೀಸಾಮಾನ್ಯನಿಗೆ ಒಂದು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಲಂಚ ಇಲ್ಲದೆ ಸಾಧ್ಯವಾಗುತ್ತಿಲ್ಲ. ಮನೆಗಳನ್ನು ಕೊಳ್ಳುವ ಮಧ್ಯಮ ವರ್ಗದವರಿಗೆ ನೋಂದಣಿಯ ಸಮಯದಲ್ಲಿ ಇಂತಿಷ್ಟು ಶೇಕಡಾ ಲಂಚ ನೀಡದಿದ್ದರೆ ನೋಂದಣಿಯೇ ಆಗುವುದಿಲ್ಲ. ನಗರಸಭೆಯ ನಿಯಮಗಳ ಅನುಸಾರ ಮೇಲಂತಸ್ತನ್ನು ನಿರ್ಮಿಸಲು ಅವಕಾಶ ಇಲ್ಲದಿದ್ದರೂ, ಮೈಸೂರನ್ನೂ ಸೇರಿದಂತೆ ಎಲ್ಲ ನಗರಗಳಲ್ಲೂ ಎರಡು, ಮೂರಂತಸ್ತಿನ ಮನೆಗಳು ರಾರಾಜಿಸುತ್ತಿರುತ್ತವೆ. ಇದರರ್ಥ, ಈ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಅಧಿಕಾರಿಗಳು ಸೂಕ್ತ ಪ್ರಮಾಣದ ಲಂಚ ಸ್ವೀಕರಿಸಿಯೇ ತೀರಿರುತ್ತಾರೆ.
ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕಾದರೆ ಆಡಳಿತ ವ್ಯವಸ್ಥೆ ಸ್ವಚ್ಚವಾಗಿರಬೇಕು. ಆಡಳಿತಶಾಹಿಯಲ್ಲಿ ಪ್ರಾಮಾಣಿಕತೆ ಇರಬೇಕು. ತಮ್ಮ ಶಾಸಕ, ಸಂಸದ ಸ್ಥಾನ ಪಡೆಯಲು ಕೋಟ್ಯಂತರ ರೂಗಳ ಹೊಳೆ ಹರಿಸುವ ರಾಜಕಾರಣಿಗಳಿಗೆ, ಅಧಿಕಾರಿಗಳ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ನೈತಿಕ ಸ್ಥೈರ್ಯ ಹೇಗಿರುತ್ತದೆ. ಗ್ರಾಮಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ಚುನಾಯಿತ ಜನಪ್ರತಿನಿಧಿಗಳು ಹಣಬಲದ ಮೇಲೆಯೇ ತಮ್ಮ ಅಧಿಕಾರ ಕೇಂದ್ರಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಈ ಧನಾರ್ಜನೆಯ ಮಾರ್ಗಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಶಾಹಿಯೂ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತದೆ. ಈ ಅಕ್ರಮಗಳ ಸಂತೆಯಲ್ಲಿ ಪ್ರಾಮಾಣಿಕರಾಗಿರಲು ಬಯಸುವ ಕೆಲವೇ ಅಧಿಕಾರಿಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಮೇಲ್ಮನೆ ಎಂಬ ಬಿಳಿಯಾನೆಯನ್ನು ಸಾಕಲು ಜನಸಾಮಾನ್ಯರ ದುಡಿಮೆಯ ಹಣ ವ್ಯರ್ಥವಾಗುವಂತೆಯೇ, ಈ ಆಡಳಿತಶಾಹಿಯನ್ನು ಸಂರಕ್ಷಿಸಲು ಅಕ್ರಮ ಹಣಗಳಿಕೆಯ ಸಾಧನಗಳನ್ನು ವ್ಯವಸ್ಥಿತವಾಗಿ ಬಳಸುವ ಅಧಿಕಾರಶಾಹಿಗಳು ತಮ್ಮ ಪ್ರಾಮಾಣಿಕತೆಯನ್ನೇ ಒತ್ತೆಯಿಟ್ಟು ಆಡಳಿತಕೇಂದ್ರಗಳನ್ನು ಸಂರಕ್ಷಿಸುವುದರಲ್ಲಿ ತೊಡಗಿರುತ್ತಾರೆ.
ಆಡಳಿತಶಾಹಿ ಮತ್ತು ಅಧಿಕಾರಶಾಹಿಯ ಈ ಜುಗಲ್ಬಂದಿ, ಈ ಒಡನಾಟ, ಸಹಯೋಗ, ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯೇ ಇಡೀ ವ್ಯವಸ್ಥೆಯನ್ನು ಭ್ರಷ್ಟಾಚಾರದ ಕೂಪದಂತೆ ಮಾಡಿದೆ. ಪ್ರಜೆಗಳು ಜಾಗೃತರಾಗದ ಹೊರತು,. ಬಂಡವಾಳಶಾಹಿ ಅರ್ಥಿಕತೆ ವ್ಯವಸ್ಥಿತವಾಗಿ ಪೋಷಿಸುವ ಈ ಭ್ರಷ್ಟಕೂಪದಿಂದ ಮುಕ್ತಿದೊರೆಯಲಾರದು.