ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲಾ ಸಾಧ್ಯತೆಗಳು ಇವೆ ಅನ್ನೋದು ಸುಳ್ಳೇನು ಅಲ್ಲ. ಆದರೆ ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವನ್ನು ತನ್ನಷ್ಟಕ್ಕೆ ತಾನೇ ಕಳೆದುಕೊಳ್ತಿದ್ಯಾ..? ಅನ್ನೋ ಅನುಮಾನ ಮೂಡುವುದಕ್ಕೆ ಶುರುವಾಗಿದೆ. ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್ ಹೇಳಿಕೊಳ್ಳುವಂತಹ ಕೆಲಸ ಮಾಡಲಿಲ್ಲ ಅನ್ನೋ ಕಾರಣಕ್ಕೆ ಸುರೇಶ್ ಕುಮಾರ್ ಸಚಿವ ಸ್ಥಾನ ಕಳೆದುಕೊಂಡರು. ಆ ಬಳಿಕ ಸುರೇಶ್ ಕುಮಾರ್ ಹೆಚ್ಚು ಕಡಿಮೆ ಅಂತರ ಕಾಯ್ದುಕೊಂಡು ರಾಜಕೀಯದಿಂದ ದೂರ ಆಗುತ್ತಿದ್ದಾರೆ ಎನ್ನುವಂತೆ ನಡೆದುಕೊಳ್ತಿದ್ದಾರೆ. ಇದರ ಬೆನ್ನಲ್ಲೇ ರಾಜಾಜಿನಗರದಿಂದ ಈ ಬಾರಿ ಟಿಕೆಟ್ ಸುರೇಶ್ ಕುಮಾರ್ಗೆ ಸಿಗಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಯಾರು..? ಏನು..? ಅನ್ನೋ ಚರ್ಚೆ ನಡುವೆ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿರುವ ಕಾಂಗ್ರೆಸ್ಗೆ ಗೆಲ್ಲುವ ಅವಕಾಶಗಳಿವೆ. ಆದರೆ ನಾಲ್ವರು ಆಕಾಂಕ್ಷಿಗಳ ನಡುವೆ ನಿನ್ನೆ ಮತ್ತೊಬ್ಬರು ಸೇರ್ಪಡೆ ಆಗಿರುವುದು ಸಾಕಷ್ಟು ಗೊಂದಲ ಸೃಷ್ಟಿಗೆ ಕಾರಣವಾಗಿದೆ.
![](https://pratidhvani.com/wp-content/uploads/2023/03/S_Suresh_Kumar_wins_for_consecutive_times_in_the_assembly_elections.jpg)
ಕೆಪಿಸಿಸಿ ಅಧ್ಯಕ್ಷ ನಿವಾಸಕ್ಕೆ ಆಕಾಂಕ್ಷಿತರ ದಂಡು..!
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾದ ಪುಟ್ಟರಾಜು, ಭವ್ಯನರಸಿಂಹ ಮೂರ್ತಿ, ಮನೋಹರ್, ರಘುವೀರ್ ಗೌಡ ಆಗಮಿಸಿ, ನಾಲ್ವರ ಪೈಕಿ ಯಾರಿಗಾದ್ರೂ ಟಿಕೆಟ್ ಕೊಡಿ.. ಆದರೆ ಇತ್ತೀಚೆಗೆ ಸೇರ್ಪಡೆಯಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣಗೆ ಮಾತ್ರ ಟಿಕೆಟ್ ಕೊಡುವಂತಿಲ್ಲ ಎಂದು ಒತ್ತಡ ಹೇರಿದ್ದಾರೆ. ರಾಜಾಜಿನಗರ ಟಿಕೆಟ್ ವಿಚಾರದಲ್ಲಿ ಆಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಒತ್ತಡ ಹೇರಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಕೆಪಿಸಿಸಿ ಅಧ್ಯಕ್ಷರು ಪುಟ್ಟಣ್ಣಗೆ ಟಿಕೆಟ್ ಕೊಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ. ಪುಟ್ಟಣ್ಣಗೆ ಟಿಕೆಟ್ ಕೊಟ್ಟಿದ್ದೇವೆ ಅಂತ ಯಾರು ಹೇಳಿದ್ದು..? ಕಾಂಗ್ರೆಸ್ ಪಾರ್ಟಿ ಯಾರ ಬ್ಲಾಕ್ ಮೇಲ್ ಗೂ ಹೆದರಲ್ಲ ಎಂದಿದ್ದಾರೆ.
MLC ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪುಟ್ಟಣ್ಣ..!
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕಾಂಗ್ರೆಸ್ನಿಂದ ರಾಜಾಜಿನಗರ ಟಿಕೆಟ್ ಬಯಸಿದ್ದ ಪುಟ್ಟಣ್ಣಗೆ ಟಿಕೆಟ್ ಖಚಿತ ಆಗ್ತಿದ್ದಂತೆ ಕಾಂಗ್ರೆಸ್ ಸೇರಿದ್ದಾರೆ ಎನ್ನುವ ಮಾತುಗಳು ಹರಿದಾಡಿವೆ. ಡಿಕೆ ಶಿವಕುಮಾರ್ ಮಾತನಾಡಿ, ಮೂರು ದಿನದಿಂದ ಸ್ಕ್ರೀನಿಂಗ್ ಕಮಿಟಿ ಪರಿಶೀಲನೆ ಮಾಡಿದೆ. ಸೆಂಟ್ರಲ್ ಎಲೆಕ್ಷನ್ ಕಮಿಟಿಗೆ ಪರಿಶೀಲನೆ ಮಾಡಿದ ಲಿಸ್ಟ್ ಕಳಿಸಿಕೊಡಲಾಗತ್ತೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಬಿಜೆಪಿಯ ಶಾಸಕ ಪುಟ್ಟಣ್ಣ ಇವತ್ತು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಸತತ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಬಿಜೆಪಿ ಆಡಳಿತವನ್ಮ ನೋಡಿ ಶಿಕ್ಷಕರ ಕ್ಷೇತ್ರಕ್ಕೆ ನ್ಯಾಯ ಕೊಡಿಸಲು ಆಗಿಲ್ಲ ಅಂತ ಕಾಂಗ್ರೆಸ್ಗೆ ಬಂದಿದ್ದಾರೆ. ಮುಂದೆ ಅವರು ನಮ್ಮ ಪಕ್ಷದಲ್ಲಿ ಅವರ ಹೆಜ್ಜೆಗಳನ್ನ ನೋಡುತ್ತೀರಾ ಎಂದಿದ್ದರು.
ಸುರ್ಜೇವಾಲ, ಸಿದ್ದರಾಮಯ್ಯರಿಂದಲೂ ಪುಟ್ಟಣ್ಣ ಹೊಗಳಿಕೆ..!
ರಾಜಾಜಿನಗರ ಟಿಕೆಟ್ ಖಚಿತವಾದ ಬಳಿಕ ಕಾಂಗ್ರೆಸ್ ಸೇರಿದ್ದಾರೆ ಎನ್ನುವ ಮಾತಿಗೂ ಕಾಂಗ್ರೆಸ್ ನಾಯಕರ ಹೊಗಳಿಗೂ ಸಾಮ್ಯತೆ ಕಾಣಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದವರು, ಉತ್ತಮ ಹೆಸರು ಗಳಿಸಿದ ವ್ಯಕ್ತಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಅಂತಾ ಸುರ್ಜೇವಾಲ ಹೇಳಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಪುಟ್ಟಣ್ಣನವರನ್ನ ಪಕ್ಷಕ್ಕೆ ಸ್ವಾಗತ ಮಾಡಲಾಗಿದೆ. ನಾಲ್ಕು ಬಾರಿ ಪರಿಷತ್ ಸದಸ್ಯರಾಗಿದ್ದರು. ಇನ್ನೂ ಅವರ ಅವಧಿ ಪೂರ್ಣವಾಗಿಲ್ಲ. ನಾಲ್ಕು ವರ್ಷದ ಅವಧಿ ಬಾಕಿಯಿದೆ. ಆದ್ರೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸತತವಾಗಿ ನಾಲ್ಕು ಎಲೆಕ್ಷನ್ ಗೆದ್ದಿದ್ದವರು ಕಾಂಗ್ರೆಸ್ಗೆ ಬರ್ತಿರೋದ್ರಿಂದ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ಹೊಗಳಿ ಅಟ್ಟಕ್ಕೆ ಏರಿಸಿರುವುದು ಟಿಕೆಟ್ ಖಚಿತ ಎನ್ನಲಾಗ್ತಿದೆ.
![](https://pratidhvani.com/wp-content/uploads/2023/03/rajajinagar-Ticket-1024x576.jpg)
ಸ್ಥಳೀಯರಿಗೆ ಟಿಕೆಟ್ ಕೊಡದಿದ್ದರೆ ಜೆಡಿಎಸ್ ಗೆಲುವು..!
ಪುಟ್ಟಣ್ಣಗೆ ರಾಜಾಜಿನಗರ ಕ್ಷೇತ್ರದ ಟಿಕೆಟ್ ಕೊಡುವ ಭರವಸೆ ಸಿಕ್ಕ ಬಳಿಕ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಭವ್ಯಾ ನರಸಿಂಹ ಮೂರ್ತಿ ಹಾಗು ರಘುವೀರ್ ಗೌಡ ಈಗಾಗಲೇ ರಾಜಾಜಿನಗರ ಕ್ಷೇತ್ರದಲ್ಲಿ ಚುನಾವಣಾ ಹವಾ ಸೃಷ್ಟಿಸಿದ್ದು, ಒಂದು ವೇಳೆ ಪುಟ್ಟಣ್ಣ ಅಭ್ಯರ್ಥಿ ಆದರೆ ಬಿಜೆಪಿ ಕಾಂಗ್ರೆಸ್ನಿಂದ ಬೇಸತ್ತ ಜನ ಜೆಡಿಎಸ್ ಕಡೆಗೆ ಮುಖ ಮಾಡಲಿದ್ದಾರೆ ಎನ್ನುವ ಮಾತುಗಳಿವೆ. ಗಂಗಾಧರ ಮೂರ್ತಿಗೆ ಈಗಾಗಲೇ ಜೆಡಿಎಸ್ ಟಿಕೆಟ್ ಘೋಷಣೆ ಆಗಿದ್ದು, ಡಾ ಆಂಜನಪ್ಪ ಕೂಡ ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಗೊಂದಲ ಬಿಜೆಪಿ ನಿರ್ಲಕ್ಷ್ಯ ಜೆಡಿಎಸ್ಗೆ ವರದಾನ ಎನ್ನುವಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟಣ್ಣನೋ ಸ್ಥಳೀಯ ಯುವ ಅಭ್ಯರ್ಥಿಗಳೋ ಅನ್ನೋದನ್ನು ಕಾಂಗ್ರೆಸ್ ಕನ್ಫರ್ಮ್ ಮಾಡಬೇಕಿದೆ.