ಅಲಹಾಬಾದ್: ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಜೊತೆ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಸೋಮವಾರ ಲಕ್ನೋ ಪೀಠದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಶಾಹಿ ತಮ್ಮ ತಂಡದೊಂದಿಗೆ ಹಾಜರಾಗಿದ್ದರು. ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಜಾಮೀನು ಅರ್ಜಿಯ ವಿಚಾರಣೆ ಮೇ 25 ರಂದು ನಡೆಯಲಿದೆ.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರು ರೈತರನ್ನು ಲಖಿಂಪುರ ಖೇರಿಯಿಂದ ಓಡಿಸುವುದಾಗಿ ಬೆದರಿಕೆಯೊಡ್ಡುವ ಹೇಳಿಕೆಗಳನ್ನು ನೀಡದಿದ್ದರೆ ಈ ಘಟನೆ (ಹತ್ಯೆ) ನಡೆಯುತ್ತಿರಲಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿರುವುದಾಗಿ livelaw ವರದಿ ಮಾಡಿದೆ.
ಟಿಕುನಿಯಾ ಹಿಂಸಾಚಾರ ಪ್ರಕರಣದ ಆರೋಪಿಗಳಾದ ಅಂಕಿತ್ ದಾಸ್, ಲವ್ಕುಶ್, ಸುಮಿತ್ ಜೈಸ್ವಾಲ್ ಮತ್ತು ಶಿಶುಪಾಲ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಡಿ.ಕೆ.ಸಿಂಗ್ ಈ ನಾಲ್ವರ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಮತ್ತೊಂದೆಡೆ, ಲಖಿಂಪುರ ಖೇರಿಯ ಜಿಲ್ಲಾ ಅಧಿವೇಶನ ಮತ್ತು ನ್ಯಾಯಾಲಯದಲ್ಲಿ, ಟಿಕುನಿಯಾ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರೈತರಲ್ಲಿ ಒಬ್ಬರಾದ ವಿಚಿತ್ರಾ ಸಿಂಗ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೇ ಉಳಿದ ಮೂವರು ಆರೋಪಿಗಳು ಬಿಡುಗಡೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ರೈತರ ಮೇಲಿನ ಆರೋಪಗಳನ್ನು ಇಂದು ನಿಗದಿ ಮಾಡಬೇಕಿತ್ತು.
ಇದಕ್ಕೂ ಮೊದಲು, ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠದಿಂದ ಆಶಿಶ್ ಮಿಶ್ರಾಗೆ ಜಾಮೀನು ನೀಡಿದ ನಂತರ, ಪ್ರಕರಣವು ಸುಪ್ರೀಂ ಕೋರ್ಟ್ಗೆ ತಲುಪಿತ್ತು. ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದುಗೊಳಿಸಿದ್ದು, ಏಪ್ರಿಲ್ 25ರೊಳಗೆ ಶರಣಾಗುವಂತೆ ಆದೇಶಿಸಿತ್ತು. ಏಪ್ರಿಲ್ 24 ರಂದು ಆಶಿಶ್ ಮಿಶ್ರಾ ನ್ಯಾಯಾಲಯದ ಎದುರು ಶರಣಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 3 ರಂದು ಲಖಿಂಪುರ ಖೇರಿಯ ಟಿಕುನಿಯಾ ಪಟ್ಟಣದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತ ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಕೇಂದ್ರದ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹತ್ತಿಸಿ ಹತ್ಯೆಗೈದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದರು.