ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಕೋಗಿಲು ಬಡಾವಣೆಯ ನಿರಾಶ್ರಿತರಿಗೆ ಯುಗಾದಿ ಹಾಗೂ ರಂಜಾನ್ ಹಬ್ಬದ ಗಿಫ್ಟ್ ನೀಡಿದೆ. ಇಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕಂದಾಯ ಮಂತ್ರಿ ಕೃಷ್ಣಭೈರೇಗೌಡ ಇಬ್ಬರೂ ನಿರಾಶ್ರಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ.

ಆಯ್ದ 32 ಫಲಾನುಭವಿಗಳನ್ನು ಆಯ್ಕೆ ಮಾಡಿ ನೈಜತೆ ಕಂಡು ಬಂದಿರುವ ಕುಟುಂಬಗಳಿಗೆ ಸೂರು ಭಾಗ್ಯ ಕಲ್ಪಿಸಿದ್ದಾರೆ. ತೀವ್ರ ಚರ್ಚಿತವಾಗಿದ್ದ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಕೋಗಿಲು ಲೇಔಟ್ನ ತೆರವುಗೊಳಿಸುವಿಕೆಯು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಇದೇ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರೂ ವಾಸಿಸುತ್ತಿದ್ದಾರೆ ಎಂದು ವಿಪಕ್ಷ ಬಿಜೆಪಿಯು ಆರೋಪಿಸಿತ್ತು. ಆದರೆ ಈ ಘಟನೆಯನ್ನು ಟೀಕಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ ಎಂದು ಟೀಕಿಸಿದ್ದರು. ಇದಾದ ಬೆನ್ನಲ್ಲೇ ಖುದ್ದು ಸಿದ್ದರಾಮಯ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಇದನ್ನೂ ಓದಿ : ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಿ : ಗುಲಾಬಿ ಹೂ ನೀಡಿ ಮಧು ಬಂಗಾರಪ್ಪ ವಿಶ್..!
ಪ್ರಮುಖವಾಗಿ ಕೇರಳ ಸಿಎಂ ಎಂಟ್ರಿಯಿಂದ ರಾಷ್ಟ್ರ ಮಟ್ಟದಲ್ಲಿ ಸದ್ದು ಗದ್ದಲಕ್ಕೆ ಕಾರಣವಾದ ಕೋಗಿಲು ಲೇಔಟ್ ತೆರವಿನಲ್ಲಿ ಸಂತ್ರಸ್ತರಾದ 161 ಕುಟುಂಬಗಳ ಪೈಕಿ ಕೇವಲ 26 ಮಂದಿಗಷ್ಟೇ ಪರ್ಯಾಯವಾಗಿ ಮನೆ ನೀಡಲು ನಿರ್ಧಾರ ಮಾಡಲಾಗಿತ್ತು. ಈ ಕುರಿತಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಹಿತಿ ನೀಡಿದ್ದರು, 26 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಕಳೆದ ಜನವರಿ ತಿಂಗಳಲ್ಲಿ ನೀಡಿದ್ದರು.
ಏನಿದು ಕೋಗಿಲು ಕಥೆ..?
ಕೋಗಿಲು ಬಡಾವಣೆಯಲ್ಲಿ ಅಕ್ರಮ ತೆರವು ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತೆರವು ಕಾರ್ಯಾಚರಣೆ ನಡೆಸಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕೇರಳದ ಸಿಎಂ ಪಿಣರಾಯ್ ವಿಜಯನ್ ಈ ಬಗ್ಗೆ ಟ್ವೀಟ್ ಮಾಡಿದ್ದರು. ಬಳಿಕ ಕೇರಳದ ಸಂಸದರು ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದರು.






