
- ವಿವಿಧ ರಾಜ್ಯಗಳ ಬಫರ್ ಝೋನ್ ನಿಯಮಾವಳಿಗಳು ಅಧ್ಯಯನದ ನಂತರ ವೈಜ್ಞಾನಿಕವಾಗಿ ಬಫರ್ ಝೋನ್ ತಿದ್ದುಪಡಿಯ ಪ್ರಸ್ತಾವನೆ
ಬೆಂಗಳೂರು ಆಗಸ್ಟ್ 03: ಕರ್ನಾಟಕ ರಾಜ್ಯದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳು/ಕೆರೆಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿವಾಗಿ ಬಫರ್ ಝೋನ್ ನಿಯಮಾವಳಿಗಳ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದು ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ ಪ್ರಕಟಣೆ ನೀಡಿದೆ.
ಕೆರೆ ಮತ್ತು ಕಾಲುವೆ ಬಫರ್ ತಿದ್ದುಪಡಿ ಪ್ರಸ್ತಾವನೆಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ, ಈ ತಿದ್ದುಪಡಿಗೆ ಕಾರಣವಾದ ಅಂಶಗಳನ್ನು ಈ ಮೂಲಕ ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯದ ಜಲಾಶಯಗಳನ್ನು ಸಂರಕ್ಷಿಸುವುದು, ಕಾಪಾಡುವುದು ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ (KTCDA) ಅನ್ನು 2014ರಲ್ಲಿ ಸ್ಥಾಪಿಸಲಾಗಿದೆ. ಗೌರವಾನ್ವಿತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ತನ್ನ OA ಸಂಖ್ಯೆ 222/2014, ದಿನಾಂಕ 04.05.2016ರ ಆದೇಶದಲ್ಲಿ, ಬೆಂಗಳೂರು ಕೆರೆಗಳ ಬಫರ್ ವಲಯವನ್ನು ಈ ಕೆಳಕಂಡಂತೆ ನಿಗದಿಪಡಿಸಿತ್ತು.
1.ಕೆರೆಗಳಿಗೆ 75 ಮೀ
2.ಪ್ರಾಥಮಿಕ ಕಾಲುವೆಗೆ 50 ಮೀ
3.ದ್ವಿತೀಯ ಕಾಲುವೆಗೆ 35 ಮೀ
4.ತೃತೀಯ ಕಾಲುವೆಗೆ 25 ಮೀ
ನಂತರ, ಗೌರವಾನ್ವಿತ ಸುಪ್ರೀಂ ಕೋರ್ಟ್ ತನ್ನ ಆದೇಶ CA ಸಂಖ್ಯೆ 5016/2019, ದಿನಾಂಕ 05.03.2019ರ ಆದೇಶದಲ್ಲಿ NGT ಯ ಆದೇಶವನ್ನು ತಿದ್ದುಪಡಿ ಮಾಡಿ, ಕೆರೆಗಳ ಬಫರ್ ವಲಯವನ್ನು 30 ಮೀ ಎಂದು ನಿಗದಿಪಡಿಸಿತು. ಅಲ್ಲದೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ನಡುವೆ ಸಮತೋಲನವನ್ನು ಕಾಪಾಡುವಂತೆ NGT ಯ ಆದೇಶವನ್ನು ಮರುನಿರೂಪಿಸಿತು.
ಇದನ್ನು ಕರ್ನಾಟಕ ಸರ್ಕಾರವು 20.07.2019ರ ದಿನಾಂಕದ UDD BMR 2017 ಸರಕಾರಿ ಆದೇಶದ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳಿಸಿದೆ. ಸಾಮಾನ್ಯವಾಗಿ ಬಫರ್ ವಲಯಗಳು ಮಾನವ ಚಟುವಟಿಕೆ ಮತ್ತು ಸೂಕ್ಷ್ಮ ಪರಿಸರವನ್ನು ಹೊಂದಿರುವ ಜಲ ಸಂಪನ್ಮೂಲಗಳ ನಡುವೆ ತಡೆಗೊಡೆಯಾಗಿ ಹಾಗೂ ರಕ್ಷಣಾ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ.
ಕುಂದಾಪುರದ ಶಾಸಕರು, ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಇತರರು ಸರ್ಕಾರವು ನಿಗಧಿಪಡಿಸಿರುವ ಕೆರೆಯ ಬಫರ್ ವಲಯ 30 ಮೀಟರ್ ಏಕ ರೂಪವಾಗಿದ್ದು, ಒಂದು ಎಕರೆ ಕೆರೆಗೂ ಹಾಗೂ 100 ಎಕರೆ ಕೆರೆಗೆ ಯಾವುದೇ ವ್ಯತ್ತಾಸವಿಲ್ಲದಂತೆ ನಿಗಧಿಪಡಿಸಲಾಗಿದ್ದು, ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ನಿಗದಿಪಡಿಸಲು ಕೋರಿರುತ್ತಾರೆ.

ಈ ಮನವಿಯ ಬಗ್ಗೆ 31.08.2024 ರಂದು ಗೌರವಾನ್ವಿತ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮತ್ತು 22.04.2025ರಂದು ಗೌರವಾನ್ವಿತ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಚರ್ಚಿಸಲಾಯಿತು.
ಈ ಹಿನ್ನಲೆಯಲ್ಲಿ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಾಗೂ ಸಂಬಂಧಿತ ಇಲಾಖೆಗಳನ್ನು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಕೆರೆ ಮತ್ತು ಕಾಲುವೆ ಬಫರ್ ಜೋನ್ ತಿದ್ದುಪಡಿ ಸಮಿತಿಯ ಪ್ರಮುಖ ಉದ್ದೇಶಗಳು ಈ ಕೆಳಗಿನಂತಿವೆ:
•ಕರ್ನಾಟಕ ರಾಜ್ಯದಲ್ಲಿ 1 ಗುಂಟೆಯಿಂದ 1000 ಎಕರೆಗಳವರೆಗೆ ವಿವಿಧ ಗಾತ್ರದ 41,849 ಕೆರೆಗಳಿವೆ. ಆದ್ದರಿಂದ ರಾಜ್ಯದಾದ್ಯಂತ ಮಾರ್ಗಸೂಚಿಗಳ ಏಕರೂಪತೆ ತರುವುದು ಅಗತ್ಯ.
•ಸಾರ್ವಜನಿಕ ಉಪಯೋಗಕ್ಕಾಗಿ ಕುಡಿಯುವ ನೀರಿನ ಪೈಪ್ಲೈನ್ಗಳು, ಭೂಗತ ವಿದ್ಯುತ್ ಕೇಬಲ್ಗಳು, ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು, ಏತ ನೀರಾವರಿ ಯೋಜನೆಗಳು, ಜ್ಯಾಕ್ವೆಲ್ / ಪಂಪ್ ಹೌಸ್, ಕೊಳಚೆ ನೀರು ಶುದ್ಧೀಕರಣ ಘಟಕಗಳು ಮುಂತಾದ ಸಾರ್ವಜನಿಕ ಉಪಯೋಗ ಕಾಮಗಾರಿಗಳನ್ನು ಕೆರೆ ಬಫರ್ನಲ್ಲಿ ಅಳವಡಿಸುವುದು ಅತ್ಯಾವಶ್ಯಕ.
ಕೂಲಂಕುಷ ಪರಿಶೀಲನೆಯ ನಂತರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ, ದೇಶದ ಇತರೆ ರಾಜ್ಯಗಳು ಅನುಸರಿಸಿರುವ ಕೆರೆ ಬಫರ್ಗಳನ್ನು ಪರಿಗಣಿಸಿ, ಕೆರೆಯ ಗಾತ್ರದ ಆಧಾರದ ಮೇಲೆ ಈ ಕೆಳಗಿನಂತೆ ಬಫರ್ ವಲಯವನ್ನು ತಿದ್ದುಪಡಿ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ:
A.5 ಗುಂಟೆವರೆಗೆ – 0 ಮೀಟರ್
B.5 ಗುಂಟೆಯಿಂದ 1 ಏಕರೆಯವರೆಗೆ – 3.0 ಮೀಟರ್
C.1 ಏಕರೆಯಿಂದ 10 ಏಕರೆಯವರೆಗೆ – 6.0 ಮೀಟರ್
D.10 ಏಕರೆಯಿಂದ 25 ಏಕರೆಯವರೆಗೆ – 12.0 ಮೀಟರ್
E.25 ಏಕರೆಯಿಂದ 100 ಏಕರೆಯವರೆಗೆ – 24.0 ಮೀಟರ್
F.100 ಏಕರೆಗಿಂತ ದೊಡ್ಡದಾದ ಕೆರೆಗಳಿಗೆ – 30.0 ಮೀಟರ್
ಈ ಬಫರ್ ಅಂತರವನ್ನು ರೂಪಿಸುವಾಗ ವೈಜ್ಞಾನಿಕ ದೃಷ್ಟಿಕೋನವನ್ನು ಅನುಸರಿಸಲಾಗಿದೆ. ಕೆರೆ ಬಫರ್ ಎಂದರೆ ಕೆರೆಯ ಸುತ್ತಲಿನ ಪ್ರದೇಶವು ಮಳೆ ನೀರನ್ನು ಕೆರೆಗೆ ಹರಿಯಲು ಅನುಕೂಲವಾಗುವಂತೆ ಮಾಡುವುದು. ಅನೇಕ ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ, ಹಳೆಯ ಬಫರ್ ಝೋನ್ ಪ್ರದೇಶವು ಕೆರೆಯ ಗಾತ್ರಕ್ಕಿಂತ ಹೆಚ್ಚಿತ್ತು. ಕರ್ನಾಟಕ ರಾಜ್ಯದಲ್ಲಿ ಮೊದಲು, ಕೆರೆಗಳ ಮೇಲೆ ಬಂಡೆ ನಿರ್ಮಿಸಲಾಗುತ್ತಿತ್ತು ಮತ್ತು ಸಾರ್ವಜನಿಕರು ತಮ್ಮ ಸಂಚಾರಕ್ಕಾಗಿ ಕೆರೆ ಬಂಡೆಯನ್ನು ರಸ್ತೆವಾಗಿ ಬಳಸುತ್ತಿದ್ದರು. ಹೀಗಾಗಿ, ಇದೇ ರೀತಿಯಲ್ಲಿ ಈ ಬಾರಿ ಕೆರೆಗಳ ಗಾತ್ರದ ಆಧಾರದ ಮೇಲೆ ಬಫರ್ ಝೋನ್ ನಿಗದಿಪಡಿಸಲಾಗಿದೆ – ಕೆರೆ ಸಣ್ಣದಾಗಿದ್ದರೆ ಕಡಿಮೆ ಬಫರ್ ಝೋನ್, ಕೆರೆ ದೊಡ್ಡದಾಗಿದ್ದರೆ ಹೆಚ್ಚು ಬಫರ್ ಝೋನ್ ನಿಗದಿಪಡಿಸಲಾಗಿದೆ.

ಇತರೆ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಬಫರ್ ಝೋನ್ ಅಳವಡಿಸಿಕೊಳ್ಳಲಾಗಿದೆ ಎಂದು ಅಧ್ಯಯನ ನಡೆಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಜಲಮೂಲಗಳ ಪ್ರದೇಶದಿಂದ 9 ಮೀ ಬಫರ್ ನಿಗದಿಪಡಿಸಲಾಗಿದೆ. ತೆಲಂಗಾಣ ರಾಜ್ಯದಲ್ಲಿ 10 ಹೆಕ್ಟೇರ್ಗಿಂತ ದೊಡ್ಡದಾದ ಕೆರೆಗೆ 30 ಮೀ ಮತ್ತು 9 ಹೆಕ್ಟೇರ್ಗಿಂತ ಕಡಿಮೆ ವಿಸ್ತೀರ್ಣದ ಕೆರೆಗೆ 9 ಮೀ ಬಫರ್ ನಿಗದಿಪಡಿಸಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಏಕರೂಪವಾಗಿ ಕೆರೆಗಳ ಅಂಚಿನಿಂದ 3 ಮೀ ಬಫರ್ ಝೋನ್ ಅನುಸರಿಸಲಾಗಿದೆ. ಕರ್ನಾಟಕವು ರಾಜ್ಯವು ವೈಜ್ಞಾನಿಕವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿಸಿರುವ ಬಫರ್ ಝೋನ್ ಮಾರ್ಗಸೂಚಿಗಳನ್ನು ರೂಪಿಸಿರುವ ಏಕೈಕ ರಾಜ್ಯವಾಗಿದೆ.
ಕಾಲುವೆ ಬಫರ್ಗಳ ವಿಷಯದಲ್ಲಿ, ಪ್ರಸ್ತುತ 30 ಮೀ (ಪ್ರಾಥಮಿಕ ಕಾಲುವೆ), 15 ಮೀ (ದ್ವಿತೀಯ ಕಾಲುವೆ), 10 ಮೀ (ತೃತೀಯ ಕಾಲುವೆ) ಅವೈಜ್ಞಾನಿಕವಾಗಿದ್ದು, ಅನೇಕ ಸಂದರ್ಭಗಳಲ್ಲಿ ಕಾಲುವೆಯ ಅಗಲವೇ ಬಫರ್ಗಿಂತ ಕಡಿಮೆಯಾಗಿದೆ. ಆದ್ದರಿಂದ, ಪರಿಶೀಲನೆಯ ನಂತರ, ಹೊಸ ಕಾಲುವೆ ಬಫರ್ಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- ಪ್ರಾಥಮಿಕ ಕಾಲುವೆ – 15 ಮೀ
- ದ್ವಿತೀಯ ಕಾಲುವೆ – 10 ಮೀ
- ತೃತೀಯ ಕಾಲುವೆ – 5 ಮೀ.
ಪ್ರಸ್ತಾಪಿತ ತಿದ್ದುಪಡಿಯ ಲಾಭಗಳು ಈ ಕೆಳಕಂಡಂತಿವೆ:
1.ಬಫರ್ ವಲಯದಲ್ಲಿ ಕೆರೆಯ ಸಾಮರ್ಥ್ಯವನ್ನು ಕುಗ್ಗಿಸದೆ ಹಾಗೂ ನೀರಿನ ಹರಿವಿಗೆ ಅಡ್ಡಿಪಡಿಸದಂತಹ ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆಗಳನ್ನು ಮಾತ್ರ ಕೈಗೊಳ್ಳಲಾಗುತ್ತದೆ. ಇದರಿಂದ ಕೆರೆಯ ಸಾಮರ್ಥ್ಯ ಕಡಿಮೆಯಾಗುವುದಿಲ್ಲ ಮತ್ತು ನೀರಿನ ಹರಿವು ಅಡ್ಡಿಯಾಗುವುದಿಲ್ಲ.
2.ಹಲವಾರು ಪ್ರಕರಣಗಳಲ್ಲಿ ಕೆರೆ ಬಫರ್ ಝೋನ್ ಖಾಸಗಿ ಭೂಮಿಯಾಗಿದ್ದು, ‘ನಿರ್ಮಾಣ ನಿಷೇಧ ವಲಯ’ ಎಂದು ಘೋಷಿಸಲಾಗಿದೆ.
3.ಈ ತಿದ್ದುಪಡಿಯಿಂದ ಪ್ರವಾಹ ಪ್ರಕರಣಗಳು ಹೆಚ್ಚಾಗುವುದಿಲ್ಲ, ಬದಲಾಗಿ ಉತ್ತಮ ಮೂಲಸೌಕರ್ಯ ಅಭಿವೃದ್ಧಿಯಿಂದ ನಗರ ಪ್ರದೇಶಗಳಲ್ಲಿ ಪ್ರವಾಹ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
4.ಈ ತಿದ್ದುಪಡಿ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಅಲ್ಲ. ಇದು ಕೆರೆಯ ಗಾತ್ರಕ್ಕೆ ಅನುಗುಣವಾಗಿ ಬಫರ್ ವಲಯಗಳಲ್ಲಿ ಏಕರೂಪತೆಯನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದೆ.
5.ತಿದ್ದುಪಡಿಯಿಂದ ಜಲಮೂಲಗಳ ಜೀವವೈವಿಧ್ಯತೆಯ ಮೇಲೆ ಯಾವುದೇ ಪರಿಣಾಮಗಳನ್ನು ಬೀರುವುದಿಲ್ಲ. ಬದಲಿಗೆ ಸರ್ಕಾರಗಳು ನಗರಗಳಿಗೆ ಮೂಲಸೌಕರ್ಯ ಒದಗಿಸಲು ಸಹಾಯ ಮಾಡುತ್ತದೆ. ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಲು ಎಸ್ಟಿಪಿಗಳ ನಿರ್ಮಾಣ ಅಗತ್ಯ. ಈ ಹಿನ್ನಲೆಯಲ್ಲಿ ಹಾನಿಕಾರಕ ಕೊಳಚೆ ನೀರು ಸೇರ್ಪಡೆಯಾಗದಂತೆ ತಡೆಗಟ್ಟಲು ಕೆರೆಗಳು ಹಾಗೂ ಜಲಮೂಲಗಳ ಹತ್ತಿರ ಎಸ್ಟಿಪಿಗಳ ನಿರ್ಮಾಣಕ್ಕೆ ಇದು ಅನುವು ಮಾಡಿಕೊಡುತ್ತದೆ.
6.ಈ ತಿದ್ದುಪಡಿ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನವನ್ನು ಸಾಧಿಸುತ್ತದೆ.
7.ಬಫರ್ ವಲಯದಲ್ಲಿ ನೀರು, ಒಳಚರಂಡಿ, ವಿದ್ಯುತ್ ಮುಂತಾದ ಉಪಯೋಗ ಜಾಲಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ, ಇದು ನಗರ ಪ್ರದೇಶಗಳ ಒಟ್ಟು ಮೂಲಸೌಕರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಲಿದೆ.









