ಕಿವಿ ನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಯೊಬ್ಬರು ಖಿನ್ನತೆಗೆ ಒಳಗಾಗಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ದೇವನೂರು ಶ್ರೀ ಮಠದಲ್ಲಿ ನಡೆದಿದೆ. ದೇವನೂರು ಶ್ರೀ ಮಠದ ಶ್ರೀ ಶಿವಪ್ಪ ಸ್ವಾಮಿಗಳೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದು, ದೇವನೂರು ಶ್ರೀ ಗುರು ಮಲ್ಲೇಶ್ವರ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮಿಗಳವರ ಶಿಷ್ಯರಾಗಿದ್ದ ಶ್ರೀ ಶಿವಪ್ಪ ಸ್ವಾಮಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಕಳೆದ 40 ವರ್ಷಗಳಿಂದ ಶ್ರೀಮಠದಲ್ಲಿ ಒಣ ಭಿಕ್ಷೆ, ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಬಾನಹಳ್ಳಿ ಶ್ರೀ ಶಿವಪ್ಪ ಸ್ವಾಮಿಗಳು, ತಮ್ಮ ಕಾಯಕದಿಂದ ಶ್ರೀ ಮಠದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದು ಶಿವಪ್ಪ ದೇವರೇ ಎಂದು ಭಕ್ತರಿಂದ ಖ್ಯಾತಿ ಪಡೆದಿದ್ದರು ಶ್ರೀ ಶಿವಪ್ಪ ಸ್ವಾಮಿಗಳು
ಇತ್ತೀಚೆಗೆ ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು, ಖಿನ್ನತೆಗೆ ಒಳಗಾಗಿ ಕಳೆದ ಕೆಲವು ದಿನಗಳಿಂದ ಮಠದಿಂದ ಕಾಣೆಯಾಗಿದ್ದರು ಎನ್ನಲಾಗಿದೆ. ಟಿ ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಅವರ ಶವ ಇಂದು ನರಸೀಪುರದ ಬಳಿ ನದಿಯಲ್ಲಿ ದೊರಕಿದೆ
ಶ್ರೀ ಮಠದ ಮಠಾಧ್ಯಕ್ಷರಾದ ಮಹಾಂತ ಸ್ವಾಮಿಗಳು ಸೇರಿದಂತೆ ದೇವನೂರಿನ ಪ್ರಮುಖರು ಹಾಗು ಮಠದ ಭಕ್ತರು ಅವರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ






