ಮಳೆ ಬಂದು ಹೋದ ಮೇಲೆ ಬೆಳ್ಳಂದೂರು ನಿವಾಸಿಗಳಿಗೆ ಮತ್ತೊಂದು ಗೋಳು ಶುರುವಾಗಿದೆ. ಮಳೆ ಬಂದಾಗ ನೆರೆ ಜೊತೆ ಗುದ್ದಾಡಿದ್ದಾಯ್ತು. ಈಗ ಮಳೆಯ ಸೈಡ್ ಎಫೆಕ್ಟ್ ನಿಂದಾಗಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ನಿವಾಸಿಗಳು ಮೂಗಿ ಮುಚ್ಚಿಕೊಂಡು ಓಡಾಡಬೇಕಾಗಿದೆ.
ಕೆರೆಯ ನಾಲೆ, ರಾಜಕಾಲುವೆ ಎಲ್ಲ ಗಬ್ಬುನಾರುತ್ತಿದೆ. ಆದರೆ ಪಾಲಿಕೆ ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತಿದೆ.
ರಾಜಕಾಲುವೆಯಿಂದ ಬರುವ ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ
ಮಳೆ ನಿಂತ ಮೇಲೆ ಬೆಳ್ಳಂದೂರು ನಿವಾಸಿಗಳು ಒಂದಲ್ಲಾ ಒಂದು ಯಾತನೆ ಅನುಭವಿಸುತ್ತಿದ್ದಾರೆ. ಮೆರೆಯಿಂದಾಗಿ ಕಾರು, ಬೈಕು, ಮನೆಯೊಳಗಿನ ವಸ್ತುಗಳನ್ನೆಲ್ಲಾ ಕಳೆದುಕೊಂಡು ಮತ್ತೆ ರೂಟಿನ್ ಲೈಫ್ ಗೆ ಒಗ್ಗಿಕೊಳ್ಳೋಕೆ ಶುರುವಾಗಿದ್ರು. ಆಗಲೇ ಬೆಳ್ಳಂದೂರು ನಿವಾಸಿಗಳಿಗೆ ಮತ್ತೊಂದು ಕಾಟ ಶುರುವಾಗಿದೆ. ಈಗ ಬೆಳ್ಳಂದೂರು ಕೆರೆ ಯಿಂದ ಬರುವ ನೀರು ಮೋರಿ ನೀರಿನ ಜೊತೆ ಮಿಕ್ಸ್ ಆಗಿ ಗಬ್ಬುನಾರೋದಕ್ಕೆ ಶುರುವಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡೋಕೆ ಶುರುವಾಗಿದೆ. ಕಳೆದ ಕೆಲವು ವರ್ಷಗಳಿಂದ ಡ್ರೈನ್ ಲೈನ್ ಗಳು ಕೆರೆಗೆ ಬಿಟ್ಟಿರುವ ಹಿನ್ನೆಲೆ ನೊರೆ ಹಾವಳಿ ಹೆಚ್ಚಾಗಿತ್ತು. ಆದರೆ ಕ್ರಮೇಣವಾಗಿ ನೊರೆ ತಗ್ಗಿ ಜನರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮಳೆಯ ಕಾರಣಕ್ಕೆ ಮತ್ತೆ ವಿಪರೀತ ದುರ್ನಾತ ಬರುತ್ತಿದ್ದು ಜನರು ಹೈರಾಣಗಿದ್ದಾರೆ.
ಬೆಳ್ಳಂದೂರು ಕೆರೆ ಸುತ್ತಮುತ್ತ ದುರ್ನಾತ : ಮನೆಯೊಳಗೂ ಮಾಸ್ಕ್ ಹಾಕಿಕೊಳ್ಳಬೇಕಾದ ಸ್ಥಿತಿ
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ದಿನ ದುರ್ನಾತದಿಂದ ಉಸಿರಾಟ ಸಮಸ್ಯೆ ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಮನೆಯೊಳಗೆ ಕೂರುವಾಗಲೂ ಮಾಸ್ಕ್ ಹಾಕಿಕೊಂಡೇ ಇರಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಮಳೆ ಬಂದು ಹೋದ ಬಳಿಕ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿರುದೆ ಇಲ್ಲಿನ ರಾಜಕಾಲುವೆ ನೀರು.
ಈ ಮೊದಲು ವಾಸನೆ ಬರುತ್ತಿದ್ದರೂ ಇಷ್ಟು ಪ್ರಮಾಣದಲ್ಲಿ ಇರ್ಲಿಲ್ಲ. ಇದೀಗ ಮಾಸ್ಕ್ ಇಲ್ಲದೆ ಇಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಕಾಲಕಾಲಕ್ಕೆ ಕೆರೆ ಹೂಳೆತ್ತಿ ಕ್ಲೀನ್ ಮಾಡಬೇಕಿದ್ದ ಬಿಬಿಎಂಪಿ ತನ್ನ ಜವಾಬ್ದಾರಿ ಮರೆತಂತಿದೆ. ಹೀಗೆ ಆದರೆ ಬೆಳ್ಳಂದೂರು ಜನರಿಗೆ ಇದರಿಂದ ತೀವ್ರವಾದ ಕಾಯಿಲೆಗಳು ಉಲ್ಬಣಗೊಳ್ಳಲಿದೆ. ಅದಕ್ಕೂ ಮೊದಲೇ ಪಾಲಿಕೆ ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ಕಾಣಬೇಕಿದೆ.