ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿರುವ ನಡುವೆಯೇ, ಡಿಕೆಶಿ ಅವರ ಆಪ್ತ ಗುರು ಎಂದೇ ಗುರುತಿಸಿಕೊಂಡಿರುವ ದ್ವಾರಕನಾಥ್ ಗುರೂಜಿ ನೀಡಿರುವ ಭವಿಷ್ಯ ಇದೀಗ ಭಾರೀ ಸದ್ದು ಮಾಡುತ್ತಿದೆ.“ಮುಂದಿನ 8 ವರ್ಷಗಳ ಕಾಲ ಡಿಕೆ ಶಿವಕುಮಾರ್ ಅವರನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ” ಎಂದು ಗುರೂಜಿ ಹೇಳಿರುವ ಮಾತು ಕಾಂಗ್ರೆಸ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ದ್ವಾರಕನಾಥ್ ಗುರೂಜಿ, “ಡಿಕೆ ಶಿವಕುಮಾರ್ ಅವರಿಗೆ ಈಗ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಗುರು ಗ್ರಹ ಮಿಥುನ ರಾಶಿಗೆ ಪ್ರವೇಶಿಸಿರುವುದರಿಂದ ಅವರಿಗೆ ಭಾರೀ ರಾಜಯೋಗ ಶುರುವಾಗಿದೆ. ನನ್ನ ಲೆಕ್ಕಾಚಾರದ ಪ್ರಕಾರ ಮುಂದಿನ 8 ವರ್ಷ ರಾಜ್ಯ ರಾಜಕೀಯದಲ್ಲಿ ಅವರನ್ನು ಸೋಲಿಸುವುದು ಸುಲಭವಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ಮುಂದೆ ಮಾತನಾಡಿದ ಅವರು, “ಡಿಕೆ ಶಿವಕುಮಾರ್ ಸೋಮವಾರದೊಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ” ಎಂದು ಹೇಳಿದ್ದಾರೆ.
ದ್ವಾರಕನಾಥ್ ಗುರೂಜಿ ಹಾಗೂ ಡಿಕೆ ಶಿವಕುಮಾರ್ ನಡುವೆ ಮೂರು ದಶಕಗಳಿಗೂ ಅಧಿಕ ಸ್ನೇಹ ಮತ್ತು ಆತ್ಮೀಯತೆ ಇದೆ ಎನ್ನಲಾಗಿದೆ. “ಡಿಕೆಶಿ ನನಗೆ ಕಳೆದ 35 ವರ್ಷಗಳಿಂದ ಪರಿಚಯ. ಬಂಗಾರಪ್ಪ ಸಚಿವ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸಚಿವನಾಗಿದ್ದಾಗಲೇ ‘ನೀನು ಒಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಆಗ್ತೀಯಾ’ ಎಂದು ಹೇಳಿದ್ದೆ” ಎಂದು ಗುರೂಜಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
“ಅವನು ನಮ್ಮ ಮನೆಯ ಮಗನಂತಿದ್ದಾನೆ. ಯಾವಾಗಲೂ ಸಂಪರ್ಕದಲ್ಲೇ ಇರುತ್ತಾನೆ” ಎಂದು ಹೇಳುವ ಮೂಲಕ ಡಿಕೆಶಿಯೊಂದಿಗೆ ಇರುವ ಆತ್ಮೀಯ ಬಾಂಧವ್ಯವನ್ನು ಅವರು ವಿವರಿಸಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆ ತಮ್ಮ ಪರವಾಗಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾಗಿ ಗುರೂಜಿ ಹೇಳಿದ್ದಾರೆ.“ನಾನು ಶೃಂಗೇರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಡಿಕೆ ಶಿವಕುಮಾರ್ ಫೋನ್ ಮಾಡಿ ‘ಗುರೂಜಿ, ಕೆಲಸ ಆಗಿದೆ’ ಎಂದು ಸಂತಸದ ಸುದ್ದಿ ನೀಡಿದ” ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ತ್ಯಜಿಸಿರುವ ಸಿದ್ದರಾಮಯ್ಯ ಕುರಿತು ಮಾತನಾಡಿದ ಗುರೂಜಿ, “ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಹಾಗೂ ಶನಿ ಬಲ ಎರಡೂ ಇಲ್ಲ. ಅವರ ಮುಖ್ಯಮಂತ್ರಿ ರಾಜಯೋಗ ಈಗ ಅಂತ್ಯವಾಗಿದೆ. ಆದರೆ ರಾಜ್ಯಕ್ಕೆ ಅವರ ಅನುಭವ ಮತ್ತು ಮಾರ್ಗದರ್ಶನ ಇನ್ನೂ ಅಗತ್ಯವಿದೆ” ಎಂದು ಹೇಳಿದ್ದಾರೆ.ಸದ್ಯ ದ್ವಾರಕನಾಥ್ ಗುರೂಜಿ ನೀಡಿರುವ ಈ ಭವಿಷ್ಯ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಡಿಕೆ ಶಿವಕುಮಾರ್ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿದೆ.






