ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾವುಕ ವಿದಾಯ ಭಾಷಣ ಮಾಡಿದರು. ತಮ್ಮ ರಾಜಕೀಯ ಪಯಣ, ಹೋರಾಟ, ಸಾಧನೆಗಳು ಮತ್ತು ಬದುಕಿನ ಮೌಲ್ಯಗಳನ್ನು ಹಂಚಿಕೊಂಡ ಸಿದ್ದರಾಮಯ್ಯ, “ನನ್ನ ಪಾಲಿಗೆ ಮತದಾರರೇ ದೇವರು” ಎಂದು ಹೇಳುವ ಮೂಲಕ ಗಮನ ಸೆಳೆದರು.
“ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಚೇರಿಗೆ ನೀಡಿದ್ದೇನೆ. ಸಂವಿಧಾನಾತ್ಮಕ ವಿಧಿವಿಧಾನಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಸಿಗಲಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದರು.“ನಾನು ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಪ್ರೀತಿ ಮತ್ತು ವಿಶ್ವಾಸಕ್ಕೆ ತಲೆಬಾಗುವವನು. ಈ ರಾಜೀನಾಮೆಯನ್ನೂ ಸಂಪೂರ್ಣ ಮನಪೂರ್ವಕವಾಗಿ, ಸಂತೋಷದಿಂದಲೇ ಸಲ್ಲಿಸಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ಬಾಲ್ಯ ಮತ್ತು ರಾಜಕೀಯ ಪಯಣವನ್ನು ಸ್ಮರಿಸಿದ ಸಿದ್ದರಾಮಯ್ಯ, “ಹಳ್ಳಿಯ ರೈತ ಕುಟುಂಬದಿಂದ ಬಂದ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸೂ ಕಂಡಿರಲಿಲ್ಲ. ನನ್ನಂತಹವನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ” ಎಂದು ಹೇಳಿದರು.“ಸಂವಿಧಾನ ಇಲ್ಲದಿದ್ದರೆ ನಾನು ಎಲ್ಲೋ ಕುರಿ ಮೇಯಿಸುತ್ತಿದ್ದೆ. ಆದ್ದರಿಂದ ಮೊದಲು ಸಂವಿಧಾನಕ್ಕೂ, ಅಂಬೇಡ್ಕರ್ ಅವರಿಗೂ ತಲೆಬಾಗಿ ನಮಿಸುತ್ತೇನೆ” ಎಂದು ಭಾವುಕರಾದರು.
ಮೇರು ನಟ ಡಾ ರಾಜಕುಮಾರ್ ಅಭಿಮಾನಿಗಳನ್ನು “ಅಭಿಮಾನಿ ದೇವರು” ಎಂದು ಕರೆಯುತ್ತಿದ್ದುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ನನ್ನ ಪಾಲಿಗೆ ಮತದಾರರೇ ದೇವರು. ನಾಲ್ಕೂವರೆ ದಶಕಗಳ ರಾಜಕೀಯ ಜೀವನದಲ್ಲಿ ಜನತೆ ನನ್ನನ್ನು ಶಾಸಕ, ಸಚಿವ, ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದಾರೆ. ಆ ಮತದಾರ ದೇವರಿಗೆ ನಾನು ಚಿರಋಣಿ” ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕತ್ವದ ಮೇಲೂ ಸಿದ್ದರಾಮಯ್ಯ ಕೃತಜ್ಞತೆ ವ್ಯಕ್ತಪಡಿಸಿದರು. “ನನ್ನ ಸೈದ್ಧಾಂತಿಕ ಹೋರಾಟಕ್ಕೆ ಮನ್ನಣೆ ನೀಡಿ ನನ್ನನ್ನು ಬರಮಾಡಿಕೊಂಡ ಕಾಂಗ್ರೆಸ್ ಪಕ್ಷ ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ನೀಡಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನಾನು ಸದಾ ಆಭಾರಿ” ಎಂದರು.
“ನಾನು ರಾಜಕಾರಣವನ್ನು ಅಧಿಕಾರದ ದಂಡ ಅಥವಾ ವ್ಯಾಪಾರದ ಗಲ್ಲಾಪೆಟ್ಟಿಗೆ ಎಂದು ಎಂದಿಗೂ ನೋಡಿಲ್ಲ. ಬಡವರು, ಶೋಷಿತರು, ದೀನದಲಿತರಿಗೆ ನೆರವಾಗುವ ಸಾಧನ ಎಂದು ತಿಳಿದು ರಾಜಕೀಯಕ್ಕೆ ಬಂದವನು” ಎಂದು ಹೇಳಿದರು.ತಮ್ಮ ರಾಜಕೀಯ ಬದುಕಿನಲ್ಲಿ ಎದುರಿಸಿದ ದ್ವೇಷ, ಪಿತೂರಿ, ಸುಳ್ಳು ಆರೋಪಗಳು ಹಾಗೂ ಕುಟುಂಬ ಅನುಭವಿಸಿದ ನೋವುಗಳನ್ನು ನೆನೆದು ಸಿದ್ದರಾಮಯ್ಯ ಭಾವುಕರಾದರು. “ಬಹಳ ಬಾರಿ ಕುಗ್ಗಿದ್ದೇನೆ, ಆದರೆ ಹೋರಾಟ ಬಿಟ್ಟಿಲ್ಲ” ಎಂದು ಹೇಳಿದರು.

“ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಸಮಾನತೆಯ ಕನಸಿಗಾಗಿ ನನ್ನ ಹೋರಾಟ ಮುಂದುವರಿಯುತ್ತದೆ. ಅಧಿಕಾರ ಇರಲಿ, ಇಲ್ಲದಿರಲಿ ಜನರ ಪರವಾದ ಹೋರಾಟ ನಿಲ್ಲುವುದಿಲ್ಲ” ಎಂದು ಸಿದ್ದರಾಮಯ್ಯ ಘೋಷಿಸಿದರು.ತಮ್ಮ ಆಡಳಿತದ ಸಾಧನೆಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು, ಹಸಿವುಮುಕ್ತ ಕರ್ನಾಟಕ, ರೈತರ ಪರ ನೀತಿಗಳು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
“ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎನ್ನುವುದಕ್ಕಿಂತ, ಜನರ ಬದುಕು ಬದಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ನನಗೆ ಮುಖ್ಯ” ಎಂದು ಹೇಳಿದರು.ಸುದ್ದಿಗೋಷ್ಠಿಯ ಅಂತ್ಯದಲ್ಲಿ, “ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು. ಆದರೆ ರಾಜಕೀಯ ಮತ್ತು ಜನಸೇವೆ ಬಿಡುವುದಿಲ್ಲ. ಪಕ್ಷ ಹಾಗೂ ಜನತೆ ಯಾವ ಜವಾಬ್ದಾರಿ ಕೊಟ್ಟರೂ ನೆರವೇರಿಸುತ್ತೇನೆ” ಎಂದು ಹೇಳಿ ಸಿದ್ದರಾಮಯ್ಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.





