ಬೆಂಗಳೂರು: ರಾಜ್ಯ ರಾಜಧಾನಿಯ ಐತಿಹಾಸಿಕ ಹಾಗೂ ಜನನಿಬಿಡ ಕೃಷ್ಣರಾಜೇಂದ್ರ (ಕೆ.ಆರ್.) ಮಾರ್ಕೆಟ್ಗೆ ಇನ್ಮುಂದೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಶುಲ್ಕ ವಿಧಿಸುವ ಪ್ರಸ್ತಾವನೆ ಸಿದ್ಧವಾಗಿದೆ. ಮಾರುಕಟ್ಟೆಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಶುಲ್ಕ ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) 10 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಡಿಜಿಟಲ್ ಟೋಲ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಪ್ರಸ್ತಾವಿತ ಯೋಜನೆಯಡಿ ಕೆ.ಆರ್. ಮಾರ್ಕೆಟ್ಗೆ ಪ್ರವೇಶಿಸುವ ಸರಕು ವಾಹನಗಳಿಗೆ ನಿಗದಿತ ಎಂಟ್ರಿ ಫೀಸ್ ವಿಧಿಸಲಾಗುತ್ತದೆ. ಇದರ ಜೊತೆಗೆ ವ್ಯಾಪಾರಿಗಳು ಮಾರುಕಟ್ಟೆಗೆ ತರುವ ಹಣ್ಣು, ತರಕಾರಿ, ಹೂವು ಸೇರಿದಂತೆ ಕೃಷಿ ಉತ್ಪನ್ನಗಳ ಪ್ರಮಾಣಕ್ಕೆ ಅನುಗುಣವಾಗಿಯೂ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.

ವಾಹನಗಳಿಗೆ ಎಂಟ್ರಿ ಫೀಸ್ ಎಷ್ಟು?
- ಟ್ರಕ್, 6 ಚಕ್ರ ಅಥವಾ ಅದಕ್ಕಿಂತ ದೊಡ್ಡ ವಾಹನ: ಪ್ರತಿ ಎಂಟ್ರಿ/ಎಕ್ಸಿಟ್ಗೆ ₹350
- 4 ಚಕ್ರದ ಸರಕು ವಾಹನ: ಪ್ರತಿ ಎಂಟ್ರಿ/ಎಕ್ಸಿಟ್ಗೆ ₹100
- 3 ಚಕ್ರದ ಸರಕು ವಾಹನ/ಸರಕು ಆಟೋ: ಪ್ರತಿ ಎಂಟ್ರಿ/ಎಕ್ಸಿಟ್ಗೆ ₹75
ವಾಹನದ ಪ್ರವೇಶ ಶುಲ್ಕದ ಜತೆಗೆ ಮಾರುಕಟ್ಟೆಗೆ ತರಲಾಗುವ ಸರಕುಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಇದೆ.
- ಹಣ್ಣು, ತರಕಾರಿ, ಹೂವು, ಸೊಪ್ಪು, ಹತ್ತಿ, ತೆಂಗಿನಕಾಯಿ ಸೇರಿದಂತೆ ಕೃಷಿ ಉತ್ಪನ್ನಗಳು: ಪ್ರತಿ ಚೀಲ ಅಥವಾ ಕಟ್ಟುಗೆ ₹5
- ಕೋಳಿ ಮಾಂಸ, ಮಾಂಸ ಹಾಗೂ ಸೀಫುಡ್ ಉತ್ಪನ್ನಗಳು: ಪ್ರತಿ ಬಾಕ್ಸ್ ಅಥವಾ ಟ್ರೇಗೆ ₹10

ಶುಲ್ಕ ಸಂಗ್ರಹದಲ್ಲಿ ಪಾರದರ್ಶಕತೆ ತರಲು ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. UPI, FASTag, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹಾಗೂ POS ಯಂತ್ರಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿಯೊಂದು ವಹಿವಾಟಿಗೂ ಎಲೆಕ್ಟ್ರಾನಿಕ್ ರಸೀದಿ ನೀಡಲಾಗುತ್ತದೆ.
ಶುಲ್ಕ ಪಾವತಿಸದೆ ಮಾರುಕಟ್ಟೆ ಪ್ರವೇಶಿಸುವುದು, ವಂಚನೆ ಮಾಡುವುದು ಅಥವಾ ತರಲಾಗಿರುವ ಸರಕಿನ ಪ್ರಮಾಣವನ್ನು ಕಡಿಮೆ ತೋರಿಸುವುದು ಕಂಡುಬಂದರೆ ದಂಡ ವಿಧಿಸುವ ಪ್ರಸ್ತಾವನೆಯೂ ಇದೆ.
- ಮೊದಲ ಬಾರಿಗೆ ನಿಯಮ ಉಲ್ಲಂಘನೆ: ₹2,500 ದಂಡ
- ಮೂರನೇ ಬಾರಿಗೆ ಉಲ್ಲಂಘನೆ: ₹10,000ವರೆಗೆ ದಂಡ ಹಾಗೂ ಸರಕು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ
ಕೆ.ಆರ್. ಮಾರ್ಕೆಟ್ನ ಸಂಚಾರ ದಟ್ಟಣೆ ನಿಯಂತ್ರಿಸುವುದು, ಶುಲ್ಕ ಸಂಗ್ರಹವನ್ನು ವ್ಯವಸ್ಥಿತಗೊಳಿಸುವುದು ಹಾಗೂ ಮಾರುಕಟ್ಟೆಯ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶದಿಂದ ಈ ಡಿಜಿಟಲ್ ಟೋಲ್ ವ್ಯವಸ್ಥೆ ಜಾರಿಗೆ ತರಲು BCCC ಪ್ರಸ್ತಾವನೆ ಸಲ್ಲಿಸಿದೆ.






