ಗದಗ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಕುರಿತು ನೊಣವಿನಕೆರೆ ಮಠದ ವೀರ ಗಂಗಾಧರ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ. 2028ರಿಂದ ಮುಂದಿನ 8ರಿಂದ 10 ವರ್ಷಗಳ ಕಾಲ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಮುಕ್ತಿ ಮಂದಿರಕ್ಕೆ ಡಿಕೆ ಶಿವಕುಮಾರ್ ಅವರೊಂದಿಗೆ ನೊಣವಿನಕೆರೆ ಅಜ್ಜಯ್ಯ ಆಗಮಿಸಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಅವರು ಜಗದ್ಗುರು ರಂಭಾಪುರಿ ವೀರಸಿಂಹಾಸನಾದೀಶ್ವರ ಶ್ರೀ 1008 ಪ್ರಸನ್ನ ರೇಣುಕಾ ವೀರಗಂಗಾಧರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೊಣವಿನಕೆರೆ ಅಜ್ಜಯ್ಯ, ಡಿಕೆ ಶಿವಕುಮಾರ್ ಅವರ ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗಾಗಿ ವಿಶೇಷ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

“ಡಿಕೆ ಶಿವಕುಮಾರ್ ಅವರು ಆರೋಗ್ಯ, ಆಯುಷ್ಯ ಹಾಗೂ ಅಭಿವೃದ್ಧಿಗಾಗಿ ಸಂಕಲ್ಪ ಮಾಡಿದ್ದಾರೆ. ಅಷ್ಟೋತ್ತರ ಪೂಜೆ ಹಾಗೂ ಆರೋಗ್ಯ ಭಾಗ್ಯದ ಸಂಕಲ್ಪ ಮಾಡಲಾಗಿದೆ. 2028ರಿಂದ ಅವರ ಆಳ್ವಿಕೆ ಇರುವಂತೆ ಪೂಜೆ ಮಾಡಲಾಗಿದೆ” ಎಂದು ಅಜ್ಜಯ್ಯ ಹೇಳಿದ್ದಾರೆ.ಡಿಕೆ ಶಿವಕುಮಾರ್ ಅವರಿಗೆ ಹಲವು ಅಡೆತಡೆಗಳಿವೆ. ಉತ್ತಮ ಆಡಳಿತ ನಡೆಸುವ ಸಂದರ್ಭದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ಸಹಜ. ಆದರೂ ಅವರು ಉತ್ತಮವಾಗಿ ಮುನ್ನಡೆಯಲಿದ್ದಾರೆ ಎಂದು ಅಜ್ಜಯ್ಯ ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ಗುರುಗಳು ಹೇಳಿದಂತೆ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಧರ್ಮದಂಡವನ್ನು ಅವರಿಗೆ ನೀಡಿ ಆಶೀರ್ವಾದ ಮಾಡಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅವರ ಹಿಂದೆ ನಾವಿದ್ದೇವೆ. ರಕ್ಷಾಕವಚವಾಗಿ ಅವರನ್ನು ಕಾಪಾಡುತ್ತೇವೆ” ಎಂದು ಅಜ್ಜಯ್ಯ ಹೇಳಿದ್ದಾರೆ.2028ರ ನಂತರವೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅವರು ತಮ್ಮ ಬದುಕನ್ನು ರೂಪಿಸಿಕೊಂಡು ಮುಂದೆ ಸಾಗುತ್ತಾರೆ ಎಂದು ಲಕ್ಷ್ಮೇಶ್ವರದ ಮುಕ್ತಿಮಂದಿರದಲ್ಲಿ ನೊಣವಿನಕೆರೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಮುಕ್ತಿ ಮಂದಿರದ ಜಗದ್ಗುರು 1008 ವಿಮಲ ರೇಣುಕಾ ವೀರಗಂಗಾಧರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.“ಈ ಬಗ್ಗೆ ನಾನು ಏನೂ ಹೇಳಲ್ಲ. ಬೇಕಾದಷ್ಟು ಜನ ಈಗಾಗಲೇ ಹೇಳಿದ್ದಾರೆ. ದೇವರ ಆಶೀರ್ವಾದ ಇರುವವರೆಗೆ ಎಲ್ಲವೂ ಸರಿಯಾಗುತ್ತದೆ, ಒಳ್ಳೆಯದಾಗುತ್ತದೆ” ಎಂದು ಹೇಳಿದ್ದಾರೆ.
“ಮುಂದೆ ಏನೇನು ಆಗುತ್ತದೆಯೋ ಆಗುತ್ತದೆ. ಯಾರೂ ಸ್ಥಿರವಾಗಿರುವುದಿಲ್ಲ. ಮನುಷ್ಯ ಅಂದ ಮೇಲೆ ಹುಟ್ಟು-ಸಾವು ಇದ್ದೇ ಇರುತ್ತದೆ” ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ತಮ್ಮ ಮಾತಿನ ವೇಳೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹಳೆಯ ಪ್ರಸಂಗವನ್ನೂ ಸ್ವಾಮೀಜಿ ಉಲ್ಲೇಖಿಸಿದರು. 1971ರಲ್ಲಿ ದೇವರಾಜ ಅರಸು ಅವರು ಮುಕ್ತಿ ಮಂದಿರಕ್ಕೆ ಬಂದಿದ್ದ ಸಂದರ್ಭದಲ್ಲಿ ಅಜ್ಜನವರು ಅವರಿಗೆ ಬಂಗಾರದ ರುದ್ರಾಕ್ಷಿ, ವಿಭೂತಿ ಹಾಗೂ ರೇಣುಕಾ ಮೂರ್ತಿಯನ್ನು ನೀಡಿದ್ದರು ಎಂದು ತಿಳಿಸಿದರು.
ರೇಣುಕಾ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವಂತೆ ಹಾಗೂ ಕೊರಳಿಗೆ ಹಾಕಿದ್ದ ಮಾಲೆಯನ್ನು ತೆಗೆಯದಂತೆ ಅಜ್ಜನವರು ಅರಸು ಅವರಿಗೆ ಹೇಳಿದ್ದರು ಎಂದು ಸ್ವಾಮೀಜಿ ವಿವರಿಸಿದರು. ಬಳಿಕ ಅರಸು ಅವರು ಮಾಲೆಯನ್ನು ತೆಗೆದಿಟ್ಟರು. “ಮುಂದೆ ಏನಾಯಿತು?” ಎಂದು ಸ್ವಾಮೀಜಿ ಹಳೆಯ ಘಟನೆಯನ್ನು ನೆನಪಿಸಿದರು.






