ಕಾಂಗ್ರೆಸ್ (Congress ) ಶಾಸಕರಲ್ಲಿ (MLAs) ಅಸಮಾಧಾನ ಹೊಗೆ ಆಡ್ತಿದೆ ಅನ್ನೋದು ಕಳೆದೊಂದು ವಾರದಿಂದ ( weeks) ಭಾರೀ ಸದ್ದು ಮಾಡಿತ್ತು. ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದ್ರು. ಈ ವೇಳೆ ಸಾಕಷ್ಟು ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ನೇರಾನೇರವಾಗಿಯೇ ಬೇಸರ ಹೊರ ಹಾಕಿದ್ರು ಎನ್ನಲಾಗಿದೆ. ಅನುದಾನ ವಿಚಾರದಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ, ವರ್ಗಾವಣೆ ( Transfer ) ವಿಚಾರದಲ್ಲೂ ನಮ್ಮ ಪತ್ರಗಳಿಗೆ ( letters) ಬೆಲೆ ( value ) ಕೊಡ್ತಿಲ್ಲ ಎಂದು ಸಿಎಂ ಹಾಗು ಡಿಸಿಎಂ ಎದುರು ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಪಕ್ಷದ ಸಭೆ ಮುಗಿಸಿ ಹೊರ ಬಂದ ಯಾವ ಶಾಸಕರು ಮಾಧ್ಯಮಗಳ ಜೊತೆಗೆ ಮಾತನಾಡಲಿಲ್ಲ. ಸಿಎಂ, ಡಿಸಿಎಂ, ಸಚಿವರು ಮಾತ್ರ ಏನೂ ಬೇಸರ ಇಲ್ಲ ಅಂತಾನೇ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.

CLP ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ರು..?
ವಿರೋಧ ಪಕ್ಷದವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಯ್ತಿದ್ದಾರೆ. ವಿಪಕ್ಷದವರು ವಾಮಮಾರ್ಗ ಹಿಡಿಯುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ. ಬಹಿರಂಗವಾಗಿ ಸರ್ಕಾರದ ಬಗ್ಗೆ ಯಾರೂ ಮಾತನಾಡಬೇಡಿ, ಇದರಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ. ಏನೇ ಅನುಮಾನಗಳು ಇದ್ದರೂ ಪಕ್ಷದ ವೇದಿಕೆಯಲ್ಲೇ ಎಲ್ಲರೂ ಮಾತನಾಡಿ. ಸ್ವಲ್ಪ ದಿನ ಎಲ್ಲರೂ ತಾಳ್ಮೆಯಿಂದ ಇರಿ, ಎಲ್ಲವನ್ನೂ ಸರಿಮಾಡೋಣ ಎಂದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆ ಅನುದಾನ ಸಿಗ್ತಿಲ್ಲ. ವೋಟು ಹಾಕಿದವ್ರು ನಮ್ಮ ಬಳಿ ಪ್ರಶ್ನೆ ಮಾಡ್ತಿದ್ದಾರೆ. ನಾವು ಜನರಿಗೆ ಏನ್ ಹೇಳ್ಬೇಕು..? ನಮಗೂ ತಾಳ್ಮೆ ಇರುತ್ತದೆ. ಎಷ್ಟು ದಿನ ಸಹಿಸಿಕೊಳ್ಳೋದು..? ಎಂದು ಪ್ರಶ್ನಿಸಿದ್ದಾರೆ.
ವರ್ಗಾವಣೆ ಪತ್ರಕ್ಕೂ ಬೆಲೆ ಕೊಡ್ತಿಲ್ಲ ಸಚಿವರು..!!

ಕೆಲವು ಮಂತ್ರಿಗಳ ಹತ್ತಿರ ವರ್ಗಾವಣೆಗಾಗಿ ಪತ್ರ ಬರೆದರೂ ಕ್ಯಾರೇ ಅನ್ನಲ್ಲ. ಒಬ್ಬ FDA ವರ್ಗಾವಣೆಗೂ ಸಚಿವರುಗಳು ನಮಗೆ ಸ್ಪಂದಿಸುತ್ತಿಲ್ಲ. ಸೌಜನ್ಯಕ್ಕೂ ಶಾಸಕರು ಫೋನ್ ಮಾಡಿದಾಗ ರಿಸೀವ್ ಮಾಡಿ ಮಾತಾಡಲ್ಲ. ಕೆಲವು ಸಚಿವರು ಬ್ರೋಕರ್ಗಳನ್ನ ನೇಮಿಸಿಕೊಂಡಿದ್ಧಾರೆ. ನಾವುಗಳು ಕ್ಷೇತ್ರದ ಜನರಿಗೆ ಸ್ಪಂದಿಸುವುದಾದರೂ ಹೇಗೆ..? ನಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲ್ಲ, ಕೆಲವು ಮಂತ್ರಿಗಳಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಎಂದು ಎಚ್ಚರಿಸಿದ್ದಾರೆ. ಸಂಪುಟ ಸಭೆಯಲ್ಲಿ ವೈಲೆಂಟ್ ಆಗಿದ್ದ ಸಚಿವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಸೈಲೆಂಟ್ ಆಗಿದ್ದರು ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಮುಂದೆ ಕೆಲ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಆಕ್ರೋಶ ಹೊರ ಹಾಕಿದ್ದರು. ಅನುದಾನ ಸದ್ಯಕ್ಕಿಲ್ಲ ಅಂತ ನೀವೇ ಹೇಳಿದ್ದೀರಿ, ಇಲಾಖೆಯಲ್ಲಿ ನಮಗೆ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಬಿಡಬೇಕು. ಶಾಸಕರಿಗೆ ನೀವೇ ಬುದ್ಧಿ ಹೇಳಿ ಅಂತ ಸಿಎಂಗೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಾಂಸ್ಕೃತಿಕ ಪ್ರಶಸ್ತಿಗಳೂ ಮುಕ್ತ ಮಾರುಕಟ್ಟೆ ನೀತಿಯೂ- ಭಾಗ 2

ದೆಹಲಿಗೆ ಬುಲಾವ್ ಕೊಟ್ಟ ಕಾಂಗ್ರೆಸ್ ಹೈಕಮಾಂಡ್..!
ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಮುನಿಸು ಬಗ್ಗೆ ಚರ್ಚೆ ಆಗಿದ್ದು, 2 ತಿಂಗಳ ಗ್ಯಾರಂಟಿ ಸರ್ಕಾರದಲ್ಲಿ ಅಸಮಾಧಾನದ ಕಿಡಿ ಹೊಗೆ ಆಡುತ್ತಿದೆ. ದೆಹಲಿಗೆ ಬನ್ನಿ ಮಾತಾಡೋಣ ಎಂದು ಕಾಂಗ್ರೆಸ್ ಹೈಕಮಾಂಡ್ ಆಹ್ವಾನ ನೀಡಿದೆ. ಆಗಸ್ಟ್ 2ಕ್ಕೆ ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ನೀಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಪಕ್ಷದ ಕಾರ್ಯಾಧ್ಯಕ್ಷರು, ಹಿರಿಯ ನಾಯಕರು ದೆಹಲಿಗೆ ತೆರಳಿದ್ದಾರೆ. ರಾಷ್ಟ್ರಮಟ್ಟದಲ್ಲಿ INDIA ಒಕ್ಕೂಟ ಮಾಡಿಕೊಂಡು ಲೋಕಸಭೆಗೆ ಸಜ್ಜಾಗುತ್ತಿರುವಾಗ ರಾಜ್ಯ ಕಾಂಗ್ರೆಸ್ ಭಿನ್ನಮತ ರಾಷ್ಟ್ರಮಟ್ಟದಲ್ಲಿ ಮುಜುಗರ ತಂದೊಡ್ಡದಂತೆ ಎಚ್ಚರಿಕೆ ವಹಿಸಲು ಸಭೆ ಕರೆಯಲಾಗಿದೆ ಎನ್ನಲಾಗಿದೆ. ಆದರೂ ಡಿಕೆಶಿ ಮಾಡುತ್ತಿರುವ ಡ್ಯಾಮೇಜ್ ಕಂಟ್ರೋಲ್ಗೆ ದೆಹಲಿಯಲ್ಲಿ ಮದ್ದು ಅರೆಯುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಕೃಷ್ಣಮಣಿ






