ಚಿಕ್ಕಮಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಮತದಾರರ ಆಕ್ರೋಶ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಿ.ಟಿ ರವಿ ಮತದಾರರಿಗೆ ಸೀರೆ ಉಡುಗೊರೆ ನೀಡುತ್ತಿದ್ದಾರೆ ಎಂಬ ಆರೋಪ ಎದುರಾಗಿತ್ತು. ಇದೀಗ ಲಿಂಗಾಯತರ ಅಭಿವೃದ್ಧಿಗಾಗಿ ಸಿ.ಟಿ ರವಿ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಕೇಳಿ ಬರ್ತಿದ್ದು ಸಿ.ಟಿ ರವಿಗೆ ಹೊಸ ತಲೆನೋವು ಎದುರಾಗಿದೆ.

ಸಿ.ಟಿ ರವಿ ಇಷ್ಟು ವರ್ಷ ಎಲ್ಲಿ ಹೋಗಿದ್ದರು..? ಈಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿ.ಟಿ ರವಿಗೆ ಗ್ರಾಮಗಳ ನೆನಪಾಗಿದೆ. ನಮ್ಮ ಊರನ್ನು ಅಭಿವೃದ್ಧಿ ಮಾಡೋಕೆ ಸಿ.ಟಿ ರವಿಗೆ 15 ವರ್ಷ ಶಾಸಕರಾಗಿದ್ದದ್ದು ಸಾಕಾಗಿಲ್ವಾ..? ಎಂದು ಶಾಸಕ ಸಿ.ಟಿ ರವಿ ಪರವಾಗಿ ಗ್ರಾಮಗಳಲ್ಲಿ ಪ್ರಚಾರ ಮಾಡಲು ಹೋಗಿದ್ದ ಸಿಟಿ ರವಿ ಭಾಮೈದ ಸುದರ್ಶನ , ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪನಿಗೆ ಉದ್ದೇಬೋರನಹಳ್ಳಿ ಜನತೆ ತರಾಟೆ ತೆಗೆದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿ.ಟಿ ರವಿ ಬಾಮೈದ ಸುದರ್ಶನ ಗ್ರಾಮ ಮಟ್ಟದಲ್ಲಿ ಸಭೆ ನಡೆಸುತ್ತಿದ್ದಾರೆ. ಲಿಂಗಾಯತ ಮತದಾರರ ಆಕ್ರೋಶದಿಂದ ಚಿಕ್ಕಮಗಳೂರು ಬಿಜೆಪಿ ಘಟಕ ತೀವ್ರ ಮುಜುಗರಕ್ಕೆ ಒಳಗಾಗಿದೆ.