ಭಾರತದ ಸಂವಿಧಾನ ರಚಿಸಿದ ದಿನವನ್ನು ಸ್ಮರಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ದಿನ ಆಚರಿಸುತ್ತಿದ್ದೇವೆ. ಇವತ್ತಿಗೆ ಸರಿಯಾಗಿ 71 ವರ್ಷಗಳ ಹಿಂದೆ, ಎಂದರೆ 1949ರ ನವೆಂಬರ್ 26ರಂದು ಭಾರತದ ಸಂಸತ್ ಭವನವು ಐತಿಹಾಸಿಕ ದಿನಕ್ಕೆ
ಸಾಕ್ಷಿಯಾಗುವ ಸಂಭ್ರಮದದಲ್ಲಿತ್ತು ಸಂವಿಧಾನ ರಚನಾ ಸಭೆಯ 2 ವರ್ಷ 11 ತಿಂಗಳು 18 ದಿನಗಳ ಕಠಿಣ ಪರಿಶ್ರಮದ ಸಾರ್ಥಕ ದಿನವಾಗಿ ಅಂದು ಭಾರತವು ತನ್ನದೇ ಆದ ಒಂದು ಸಂವಿಧಾನವನ್ನು ಪಡೆದಿತ್ತು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್ ಈ ಸಂವಿಧಾನದ ಮೂಲ ಕರಡನ್ನು ಸಭಾಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರ ಕೈಗೆ ಹಿಂದಿನ ದಿನವಷ್ಟೇ ಒಪ್ಪಿಸಿದ್ದರು. ಭಾರತದ ಮೊದಲ ಸಂಸತ್ತೂ ಆಗಿದ್ದ ಸಭೆಯ ಎಲ್ಲ ಸದಸ್ಯರು ಇದಕ್ಕೆ ಸಹಿ ಹಾಕುವ ಮೂಲಕ ನವೆಂಬರ್ 26ರಂದು ಇದನ್ನು ‘ಭಾರತ ಸಂವಿಧಾನ’ ಎಂಬುದಾಗಿ ಅಂಗೀಕರಿಸಿದರು.ಮುಂದೆ ಸರಿಯಾದ ಒಂದು ವರ್ಷದ ಬಳಿಕ ಎಂದರೆ 1950, ಜನವರಿ 26ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಭಾರತವು ಪ್ರತಿವರ್ಷ ಜನವರಿ 26ನ್ನು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಿದೆ. ಆದರೆ ಮೋದಿ ಸರಕಾರವು 2015ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನವಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಆರಂಭಿಸಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸೇರಿದಂತೆ ನಮ್ಮದೇ ಸ್ವಾತಂತ್ರ್ಯ ಆಚರಿಸಲು ಕಾರನವಾದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಮಹಾತ್ಮ ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ನಾವಿಂದು ಜ್ಞಾಪಿಸಿಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನಮಗೆ ಸಂವಿಧಾನ ರಚನೆ ಮಾಡುವುದಾಗಿದ್ದರೆ ಹೇಗಿರುತ್ತಿತ್ತು ಎಂದು ಎಲ್ಲರೂ ಆಲೋಚಿಸಬೇಕಿದೆ. ಎಲ್ಲರ ಹೃದಯದಲ್ಲಿ ಒಂದೇ ಮಂತ್ರವಾಗಿತ್ತು. ವಿವಿಧತೆಯಿಂದ ತುಂಬಿದ ದೇಶ ಇದಾಗಿತ್ತು, ಇದರ ನಡುವೆ ಸಂವಿಧಾನ ಎಂಬ ಮಾಧ್ಯಮದಿಂದ ಎಲ್ಲರನ್ನೂ ಒಂದು ಬಂಧನದಲ್ಲಿ ಇಟ್ಟುಕೊಂಡು ಸಾಗುವುದು ಸುಲಭದ ಮಾತಾಗಿರಲಿಲ್ಲ ಎಂದು ಮೋದಿ ಹೇಳಿದರು. ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಧಕ್ಕೆ ಬಂದಾಗ ಸಂವಿಧಾನಕ್ಕೂ ಧಕ್ಕೆಯಾಗುತ್ತದೆ ಎಂದೂ ಅವರು ಹೇಳಿದರು.

ಇಂದಿನ ಸಂವಿಧಾನ ದಿನಾಚರಣೆಗೆ ಪ್ರತಿಪಕ್ಷಗಳು ಹಾಜರಾಗಲಿಲ್ಲ. ಸಂವಿಧಾನವನ್ನು ಸ್ಮರಿಸಲು ನವಂಬರ್ 26ರ ಗಣರಾಜ್ಯ ದಿನವಿರುವಾಗ ಸಂವಿಧಾಬಕ್ಕೆ ಅಪಚಾರ ಮಾಡುವ, ಸಂವಿಧಾನವನ್ನು ಆಂತರಿಕವಾಗಿ ಒಪ್ಪದ ಸಂಘಪರಿವಾರದ ಮೋದಿಯವರು ಹೊಸ ಸಂವಿಧಾನ ದಿನಾಚರಣೆಯು ಬೂಟಾಟಿಕೆ ಎಂಬ ಕಾರಣಕ್ಕಾಗಿ ಪ್ರತಿಪಕ್ಷಗಳು ಹೀಗೆ ಮನಾಡಿದೆಯೋ ಗೋತ್ತಿಲ್ಲ.
ಆದರೆ ನಮಗೆ ಗೊತ್ತಿರುವುದು ಬಿಜೆಪಿ ಸರಕಾರದಲ್ಲಿ ಸಂವಿಧಾನಕ್ಕೆ ಅಪಚಾರವಾಗುತ್ತಲೇ ಇದೆಯೆಂಬುದು. ಅದು ಇತ್ತೀಚೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಯಾರಿಸುವ ಸರಕಾರಕ ನಡೆಯಲ್ಲೂ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರ ಗಳೊಂದಿಗೆ ಸಮಾಲೋಚಿಸದೇ ಏಕಾಏಕಿ ಕೇಂದ್ರ ಸರ್ಕಾರ ಶಿಕ್ಷಣ ನೀತಿ ರೂಪಿಸಿರು ವುದು ಸಂವಿಧಾನದ ಆಶಯಗಳಿಗೆ ವಿರುದ್ಧ ವಾಗಿದೆ.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಬಿಜೆಪಿ ಸರಕಾರ ಮೀಸಲಾತಿ ಕೊಟ್ಟಿರುವುದೂ ಸಂವಿಧಾನ ವಿರೋಧಿಯಾಗಿದೆ. ಇದು ಸಂವಿಧಾನದ ಆರ್ಟಿಕಲ್ 14,15.16 ಉಲ್ಲಂಘನೆಯಾಗಿದೆ.
ಸರಕಾರದ ನೀತಿಗಳನ್ನು ಒಪ್ಪದ, ಬಹುಪರಾಕು ಹೇಳದ, ಪ್ರಶ್ನಿಸಿದ ಚಿಂತಕರ ಮತ್ತು ಪತ್ರಕರ್ತರ ಮೇಲೆ ಮೇಲೆ ಕಳೆದ ಎರಡುವರೆ ವರ್ಷಗಳಲ್ಲಿ ತೀವ್ರ ದಾಳಿಗಳು ಆರಂಭವಾಗಿವೆ. ಐ.ಸಿ.ಎಚ್.ಆರ್. ಮುಂತಾದ ಅಕಾಡೆಮಿಕ್ ಸಂಸ್ಥೆಗಳಿಂದ ಸ್ವತಂತ್ರ ವಿಚಾರಗಳ ಪರಿಣತರನ್ನು ಕೈಬಿಟ್ಟಿರುವುದು; ಎಫ್.ಟಿ.ಐ.ಐ, ಸೆನ್ಸಾರ್ ಬೋರ್ಡಿಗೆ ಆಳುವ ಪಕ್ಷಗಳ ಭಟ್ಟಂಗಿಗಳನ್ನು ನೇಮಿಸಿರುವುದು; ಹಲವು ಐಐಟಿಗಳಲ್ಲಿ ಅನಗತ್ಯ ಹಸ್ತಕ್ಷೇಪಗಳ ಮೂಲಕ ಡೈರೆಕ್ಟರುಗಳು ರಾಜಿನಾಮೆ ಕೊಡುವ ಸನ್ನಿವೇಶ ಸೃಷ್ಟಿಸಿರುವುದು ಎಲ್ಲವೂ ಸಂವಿಧಾನ ವಿರೋಧಿ ನಡೆಗಳಾಗಿವೆ. ಇತ್ತೀಚಿನ 500 ಮತ್ತು1000 ರೂ. ನೋಟು ನಿಷೇಧ ಪ್ರಜಾಸತ್ತೆಯ ಮೇಲೆ ಇನ್ನೊಂದು ಬಲವಾದ ದಾಳಿ. ಭ್ರಷ್ಟಾಚಾರ/ಕಪ್ಪು ಹಣದ ನಿಗ್ರಹದ ಬಗ್ಗೆ ಚುನಾವಣಾ ಭರವಸೆಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ನವ-ಉದಾರವಾದಿ ನಗದು-ರಹಿತ ವ್ಯವಸ್ಥೆಯನ್ನು ಜನತೆಯ ಮೇಲೆ ಹೇರಲು ಬೇಕಾಗಿ ಇದನ್ನು ಮಾಡಲಾಗಿದೆ. ಜನತೆಯಿಂದ ತಾವು ದುಡಿದು ಸಂಪಾದಿಸಿದ ಹಣವನ್ನು ಪಡೆಯುವ, ಖರ್ಚು ಮಾಡುವ ಪ್ರಾಥಮಿಕ ಹಕ್ಕನ್ನು ಕಸಿದುಕೊಳ್ಳಲಾಗಿತ್ತು.

ಸಂವಿಧಾನದ ಜೀವಾಳವಾದ ಪ್ರಜಾಪ್ರಭುತ್ವ ಈಗ ಕಾರ್ಪೊರೇಟ್ ಪ್ರಭುತ್ವವಾಗಿ ಬದಲಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದಕವನ್ನು ಮತ್ತಷ್ಟು ಆಳಗೊಳಿಸುವ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ, ಕರುಣಾಜನಕ ಸ್ಥಿತಿಯಲ್ಲಿರುವ ಅಸಹಾಯಕ ವರ್ಗದ ಕಣ್ಣೀರು ಒರೆಸುವ ನಮ್ಮ ಬದ್ಧತೆ ದುರ್ಬಲವಾಗುತ್ತಿದೆ. ಸರಕಾರ ಉಳ್ಳವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅವರು ಕ್ಷಿಪ್ರವಾಗಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಸಂವಿಧಾನದ ಜಾತ್ಯತೀತ, ಬಹುತ್ವ ಸಿದ್ಧಾಂತಗಳಿಗೆ ಮೋದಿ ಸರಕಾರದ ಸಹಮತವಿಲ್ಲ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ನಿರಂತರವಾಗಿ ನಡೆದ ಅಭಿವ್ಯಕ್ತಿ ಸ್ವಾತಂತ್ರದ ದಮನ, ಕೋಮು ಗಲಭೆಗಳು, ಅನ್ಯ ಧರ್ಮೀಯರ ಮೇಲಿನ ಹಲ್ಲೆಗಳು, ಪಠ್ಯ ಪುಸ್ತಕಗಳ ಮತೀಯವಾದಿಕರಣ, ಇತಿಹಾಸವನ್ನು ಪುನ ರಚನೆಗಳಂತಹ ಸಂಗತಿಗಳನ್ನು ಅವಲೋಕಿಸಿದಾಗ ಸಂವಿಧಾನದ ಕಲಮು 15(1) ಅನುಸಾರ ಜಾತಿ, ಧರ್ಮ, ಬಣ್ಣ, ಲಿಂಗ ಆಧಾರದ ಮೇಲೆ ತಾರತಮ್ಯ ನೀತಿಯನ್ನು ನಿಷೇಧಿಸಲಾಗಿದೆ ಎನ್ನುವ ತತ್ವಕ್ಕೆ ಇನ್ನಿಲ್ಲದಂತೆ ಅಪಚಾರ ಮಾಡಲಾಗಿದೆ.
ಆದ್ದರಿಂದ ಬಿಜೆಪಿ ಸರಕಾರದ ಸಂವಿಧಾನ ದಿನಾಚರಣೆಯು ಬೂಟಾಟಿಕೆಯಲ್ಲದೆ ಬೇರೇನು? ಮಹಾತ್ಮಾ ಗಾಂಧಿಯ ಹಂತಕನನ್ನು ವೈಭವೀಕರಿಸಿ ಮೂರ್ತಿ ಪ್ರತಿಷ್ಟಾಪಿಸುವ ಹೇಳಿಕೆ ಬಿಜೆಪಿ ನಾಯಕರಿಂದ ಅಧಿಕೃತವಾಗಿಯೇ ಹೊರಬರುತ್ತಿರವಾಗ ಇಂದು ಮೋದಿ ಸ್ಮರಿಸಿ ಗೌರವಿಸಿದ ಮಹಾತ್ಮಾಗಾಂಧಿ ಬೇರ್ಯಾರೋ ಆಗಿರಬಹುದೇ? ಒಟ್ಟಿನಲ್ಲಿ ಭಾಷಣ, ನಾಟಕಗಳಿಗಿಂತ ದೇಶವನ್ನಾಳುವವರು ದೇಶದ ಸಂವಿಧಾನವನ್ನು ಅಭ್ಯಸಿಸಿ ಗೌರವಿಸಬೇಕಾಗಿದೆ. ಸಂವಿಧಾನಕ್ಕೆ ಅಪಚಾರವಾಗದಂತೆ ನೋಡಿಕೊಳ್ಳಬೇಕಾಗಿದೆ.






