• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ದ್ವೇಷ ಬಿಡಿ ದೇಶವನ್ನು ಒಗ್ಗೂಡಿಸಿ !

ನಾ ದಿವಾಕರ by ನಾ ದಿವಾಕರ
August 1, 2022
in ಅಭಿಮತ
0
ದ್ವೇಷ ಬಿಡಿ ದೇಶವನ್ನು ಒಗ್ಗೂಡಿಸಿ !
Share on WhatsAppShare on FacebookShare on Telegram

1946ರ ಡಿಸೆಂಬರ್‌ 13ರಂದು ಸಂವಿಧಾನ ರಚಕ ಸಭೆಯಲ್ಲಿ ಜವಹರಲಾಲ್‌ ನೆಹರೂ ಒಂದು ವಸ್ತುನಿಷ್ಠ ನಿರ್ಣಯವನ್ನು ಮಂಡಿಸಿದ್ದರು. ಈ ನಿರ್ಣಯವು ಸಂವಿಧಾನದ ಮೂಲ ಧ್ಯೇಯಗಳನ್ನೊಳಗೊಂಡಿತ್ತು. ಆನಂತರದಲ್ಲಿ ಬಹಳಷ್ಟು ಚರ್ಚೆಗಳ ನಂತರ ಸಂವಿಧಾನದ ಪೀಠಿಕೆಯಾಗಿ ಸ್ವೀಕರಿಸಲಾಯಿತು. ಮೂಲಭೂತ ಪ್ರಜಾಸತ್ತಾತ್ಮಕ ಮೌಲ್ಯಗಳಾದ  ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪ್ರತಿಪಾದಿಸಲಾಗಿತ್ತು. ತದನಂತರ 1948ರ ಫೆಬ್ರವರಿ 21ರಂದು ಡಾ ಬಿ ಆರ್‌ ಅಂಬೇಡ್ಕರ್‌ ಸೋದರತ್ವವನ್ನು ಮೂಲ ಮೌಲ್ಯವಾಗಿ ಸೇರ್ಪಡೆ ಮಾಡಿದ್ದರು. ಸಂವಿಧಾನವು ಪ್ರಜೆಗಳ ನಡುವೆ ಐಕ್ಯತೆಯನ್ನು ಉಂಟುಮಾಡುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ಆಗ್ರಹಿಸಿದ್ದ ಡಾ ಬಿ ಆರ್‌ ಅಂಬೇಡ್ಕರ್‌, ವಿಭಿನ್ನ ಜಾತಿಗಳ ನಡುವೆ ಮತ್ತು ಮತಧಾರ್ಮಿಕ ಸಮುದಾಯಗಳ ನಡುವೆ ಸಂಬಂಧಗಳನ್ನು ಸುಧಾರಿಸಲು ಶ್ರಮಿಸುವಂತೆ ಕರೆ ನೀಡಿದ್ದರು. ಈ ದೃಷ್ಟಿಯಿಂದಲೇ ಸೋದರತ್ವವನ್ನು ಸಂವಿಧಾನದಲ್ಲಿ ಅಳವಡಿಸಲಾಗಿತ್ತು. ಸಂವಿಧಾನದ ಪೀಠಿಕೆಯಲ್ಲಿ ಪ್ರಧಾನವಾಗಿ ಕಾಣುವ ಸೋದರತ್ವವೇ “ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುವುದೇ ಅಲ್ಲದೆ ದೇಶದ ಏಕತೆ ಮತ್ತು ಅಖಂಡತೆಯನ್ನೂ ಕಾಪಾಡುತ್ತದೆ ” ಎಂದು ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ಇವುಗಳನ್ನು ಪ್ರಜೆಗಳಿಗೆ ಪ್ರಭುತ್ವ ಒದಗಿಸಬೇಕಾಗುತ್ತದೆ, ಇದು ಪ್ರಜೆಗಳ ಆಗ್ರಹವೂ ಆಗಬಹುದು. ಆದರೆ ಸೋದರತ್ವವನ್ನು ಪ್ರಭುತ್ವ ಪ್ರೋತ್ಸಾಹಿಸುತ್ತದೆ, ಇದು ಪ್ರಜೆಗಳ ಮೂಲಭೂತ ಕರ್ತವ್ಯವಾಗಿರುತ್ತದೆ.

ADVERTISEMENT

ಸಂವಿಧಾನದ ಪರಿಚ್ಛೇದ 51-ಎ(ಇ) ಮೂಲಭೂತ ಕರ್ತವ್ಯವನ್ನು ಹೀಗೆ ವಿಷದೀಕರಿಸುತ್ತದೆ :

“ ಭಾರತದ ಸಮಸ್ತ ಜನತೆಯ ನಡುವೆ ಸೌಹಾರ್ದತೆಯನ್ನು ಬೆಳೆಸುವುದು, ಪ್ರೋತ್ಸಾಹಿಸುವುದು ಮತ್ತು ಸೋದರತ್ವದ ಸ್ಪೂರ್ತಿಯನ್ನು ಬೆಳೆಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಆಗಿದ್ದು, ಮತ, ಧರ್ಮ, ಭಾಷೆ, ಪ್ರಾದೇಶಿಕ ಅಥವಾ ಕ್ಷೇತ್ರೀಯ ವೈವಿಧ್ಯತೆಗಳನ್ನು ಮೀರಿ ಈ ಪ್ರಯತ್ನವನ್ನು ಮಾಡಬೇಕಾಗಿದೆ. ಮಹಿಳೆಯರ ಘನತೆಗೆ ಚ್ಯುತಿ ಬರುವಂತಹ ಯಾವುದೇ ಆಚರಣೆಗಳನ್ನು ತೊಡೆದುಹಾಕಬೇಕಿದೆ ”. ಇದು ಸೋದರತ್ವದ ಮೂಲ ತತ್ವ.

ಚುನಾಯಿತ ಜನಪ್ರತಿನಿಧಿಗಳೂ ಸಹ ಪ್ರಜೆಗಳೇ ಎನ್ನುವ ನಿಸ್ಸಂಶಯವಾದ ಸತ್ಯವನ್ನು ಇಲ್ಲಿ ಒತ್ತಿ ಹೇಳಬೇಕಿದೆ. ಆದರೆ ಅವರು ವಿಶೇಷ ವರ್ಗಕ್ಕೆ ಸೇರಿದ ಪ್ರಜೆಗಳು, ಏಕೆಂದರೆ ಅವರ ಕ್ಷೇತ್ರಗಳಲ್ಲಿನ ಪ್ರಜೆಗಳು ಅವರಿಗೆ ರಾಜಕೀಯ ಅಧಿಕಾರವನ್ನು ವಹಿಸಿರುತ್ತಾರೆ. ಹಾಗಾಗಿ ಪ್ರತಿಯೊಬ್ಬ ಶಾಸಕ/ಸಂಸದರೂ ಸಂವಿಧಾನಕ್ಕೆ ಬದ್ಧವಾಗಿರುವುದಾಗಿ ಪ್ರಮಾಣ ಮಾಡುತ್ತಾರೆ. ತತ್ಪರಿಣಾಮ ಈ ಜನಪ್ರತಿನಿಧಿಗಳು ಸಂವಿಧಾನದ ಪರಿಚ್ಛೇದ 51-ಎ(ಇ) ಅನ್ವಯ ಸೋದರತ್ವವನ್ನು ಪ್ರೋತ್ಸಾಹಿಸಿ, ಬೆಳೆಸುವುದು ವಿಶೇಷ ಜವಾಬ್ದಾರಿಯಾಗಿರುತ್ತದೆ. ಪ್ರತಿಯೊಬ್ಬ ಪ್ರಜೆಯ ವ್ಯಕ್ತಿಗತ ಘನತೆಯನ್ನು ರಕ್ಷಿಸುವ ಹಾಗೂ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಜವಾಬ್ದಾರಿಯೂ ಆಗಿರುತ್ತದೆ.

ಸಂವಿಧಾನದ ಪೀಠಿಕಾರೂಪದ ಮೌಲ್ಯಗಳು, ಮತಧರ್ಮ , ಭಾಷೆ, ಪ್ರದೇಶ ಮತ್ತು ಲಿಂಗತ್ವವನ್ನು ಮೀರಿ ದೋಷರಾಹಿತ್ಯವಾದವು. ಆದರೆ ಸೋದರತ್ವವನ್ನು ಸಕ್ರಿಯವಾಗಿ ಆಚರಣೆಗೊಳಪಡಿಸಿ, ಪ್ರೋತ್ಸಾಹಿಸದೆ ಹೋದರೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ಎನ್ನುವುದು ಮರೀಚಿಕೆಗಳಾಗಿಬಿಡುತ್ತವೆ. ಸೋದರತ್ವವು ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಅಲ್ಲದೆ ವ್ಯಕ್ತಿಗೆ ಇತರರ ಶ್ರೇಯಸ್ಸಿನಲ್ಲಿ ವೈಯಕ್ತಿಕ ಆಸಕ್ತಿಯನ್ನು ಪ್ರೇರೇಪಿಸುತ್ತದೆ. ಸಾಮಾಜಿಕ ಭಾವನೆಗಳಿಲ್ಲದ ಅಥವಾ ಸಾಮಾಜಿಕ ಸಂವೇದನೆಯಿಲ್ಲದ ವ್ಯಕ್ತಿಯು ತನ್ನ ಸಾಮಾಜಿಕ ಮತ್ತು ಸೋದರತ್ವದ ಮೌಲ್ಯಗಳನ್ನು ತನ್ನ ಕುಟುಂಬ, ಸಮುದಾಯ ಅಥವಾ ಮತಧರ್ಮಗಳಿಗಷ್ಟೇ ಸೀಮಿತಗೊಳಿಸುತ್ತಾನೆ. ಅಂತಹ ವ್ಯಕ್ತಿ ಶ್ರೇಯಸ್ಸನ್ನು ಸೀಮಿತ ಚೌಕಟ್ಟಿನೊಳಗೆ ಯೋಚಿಸುತ್ತಾನೆ. ಈ ಆಲೋಚನೆಯು ಇಡೀ ಮಾನವ ಸಮಾಜ ಇರಲಿ, ರಾಷ್ಟ್ರಕ್ಕೂ ವ್ಯಾಪಿಸುವುದಿಲ್ಲ.

ಪ್ರತಿಯೊಬ್ಬ ವ್ಯಕ್ತಿಯೂ ಇತರರೊಡನೆ ಹೊಂದಿರುವಂತಹ ಭಾವನಾತ್ಮಕ ಸಂಬಂಧಗಳು, ಕುಟುಂಬ, ಸಮುದಾಯ ಮತ್ತು ಮತಧರ್ಮ ಇವೆಲ್ಲವೂ ಅತ್ಯವಶ್ಯವಾದುದು. ಏಕೆಂದರೆ ಇದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಸಮಾಜದ ಮುಂಚಲನೆಗೆ ನೆರವಾಗುತ್ತದೆ. ಆದರೆ ವ್ಯಕ್ತಿಯ ಭಾವನೆಗಳೇ ಪ್ರಧಾನವಾಗಿ ಪರಿಣಮಿಸಿದಾಗ, ನ್ಯಾಯ ಮತ್ತು ಸತ್ಯ ಅನು಼ಷಂಗಿಕವಾಗಿಬಿಡುತ್ತವೆ. ಇಂತಹ ವ್ಯಕ್ತಿಗಳು ಸಂಕುಚಿತ ಭಾವನೆಗಳನ್ನು ದಾಟಿ ಆಲೋಚನೆ ಮಾಡಲಾಗುವುದಿಲ್ಲ. ಇಂತಹ ವ್ಯಕ್ತಿಗಳಿಗೆ, ಸೋದರತ್ವ ಎನ್ನುವುದು ಸಮಾಜದಲ್ಲಿನ ಇತರ ಮಾನವರಿಗೂ ಸಂಬಂಧಿಸಿರುತ್ತದೆ, ತಾನೂ ಆ ಸಮಾಜದ ಒಂದು ಭಾಗ ಎಂಬ ಭಾವನೆಯೇ ಮೂಡುವುದಿಲ್ಲ. ವಿಭಿನ್ನ ಧೋರಣೆ ಮತ್ತು ಮಾರ್ಗಗಳನ್ನು ಅನುಸರಿಸುವ ಬಹಳಷ್ಟು ರಾಜಕಾರಣಿಗಳು ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ.

ಈ ದೃಷ್ಟಿಯಿಂದ ಡಾ ಬಿ ಆರ್‌ ಅಂಬೇಡ್ಕರ್‌ ಅವರ ಈ ಮಾತುಗಳು ಗಮನಾರ್ಹವಾದದ್ದು : “ಸಾಮಾಜಿಕ ಭಾವನೆಗಳನ್ನು ರೂಢಿಸಿಕೊಳ್ಳದ ಒಬ್ಬ ವ್ಯಕ್ತಿಯು, ತನ್ನ ಇತರ ಸಹಮಾನವರನ್ನು ಬದುಕಿನ ಸಂತೋಷವನ್ನು ಗಳಿಸಲು ಇರುವ ಪ್ರತಿಸ್ಪರ್ಧಿಗಳು ಎಂದೇ ಭಾವಿಸುತ್ತಾನೆ, ಅವರನ್ನು ಸೋಲಿಸುವುದೇ ತನ್ನ ಧ್ಯೇಯ ಎಂದು ಭಾವಿಸುತ್ತಾನೆ ತನ್ಮೂಲಕ ತಾನೇ ಜಯಶಾಲಿಯಾಗಲು ಬಯಸುತ್ತಾನೆ.”

ಸೋದರತ್ವದ ಭಾವನೆ ಇಲ್ಲದ ಯಾವುದೇ ವ್ಯಕ್ತಿಯೂ ತನ್ನ ಸುತ್ತಲಿನ ಸೀಮಿತ ಜನರಿಂದಾಚೆಗಿನ ಇತರರ ಹಕ್ಕುಗಳ ಬಗ್ಗೆ, ಅವಶ್ಯಕತೆಗಳ ಬಗ್ಗೆ ಮತ್ತು ಆಕಾಂಕ್ಷೆಗಳ ಬಗ್ಗೆ ಯೋಚಿಸುವುದೇ ಇಲ್ಲ. ಹಾಗಾಗಿ ಅಂತಹ ವ್ಯಕ್ತಿ ಸುಲಭವಾಗಿ ಇತರರಿಗೆ ಸಂಬಂಧಿಸಿದಂತೆ ನ್ಯಾಯ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ನಿರಾಕರಿಸುತ್ತಾನೆ. ಪ್ರಜೆಗಳ ನಡುವೆ ಸೋದರತ್ವದ ಭಾವನೆ ಇಲ್ಲದಿರುವುದು  ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ಉಂಟುಮಾಡುವುದಷ್ಟೇ ಅಲ್ಲದೆ, ವಿಭಿನ್ನ ವಿಷಯಗಳಿಗಾಗಿ ಸಂಘರ್ಷಗಳನ್ನೂ ತೀವ್ರಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಘರ್ಷಗಳಿಗೆ ಸಾಮಾನ್ಯವಾಗಿ ಕಾರಣವಾಗುತ್ತಿರುವುದು ಮತಧರ್ಮ ಮತ್ತು ಧಾರ್ಮಿಕ ಪಾರಮ್ಯದ ಹಪಹಪಿ. ಹಾಗಾಗಿ ಒಂದು ಧರ್ಮದ ಅನುಯಾಯಿಗಳು ಮತ್ತೊಂದು ಧರ್ಮದ ಅನುಯಾಯಿಗಳನ್ನು ಹೀನವಾಗಿ ಕಾಣುವುದೇ ಅಲ್ಲದೆ, ಪ್ರತಿಸ್ಪರ್ಧಿಗಳಂತೆ ಶತ್ರುಗಳಂತೆ ಕಾಣುತ್ತಾರೆ. ಈ ಭಾವನೆಗಳನ್ನು ಆಕ್ರಮಣಕಾರಿಯಾಗಿ ಮಾತು ಮತ್ತು ಕೃತಿಯಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ. ಪ್ರತಿಯೊಂದು ಧರ್ಮದ ಅನುಯಾಯಿಗಳೂ ತಮ್ಮ ಧಾರ್ಮಿಕ ನಾಯಕರ ಮೂಲಕ ಪಡೆಯುವ ಧಾರ್ಮಿಕ ಬೋಧನೆಗಳನ್ನು, ವ್ಯಾಖ್ಯಾನಗಳನ್ನು ಪ್ರಶ್ನಾತೀತವಾಗಿ ಸ್ವೀಕರಿಸುತ್ತಾರೆ, ಈ ಧಾರ್ಮಿಕ ನಾಯಕರು ಬಹುತೇಕ ಸಂದರ್ಭಗಳಲ್ಲಿ ವಿಭಿನ್ನ ಧರ್ಮಗಳ ನಡುವೆ ಅಪನಂಬಿಕೆಗಳನ್ನು, ದುರಭಿಪ್ರಾಯಗಳನ್ನು ಹುಟ್ಟುಹಾಕುತ್ತಾರೆ. ಏಕೆಂದರೆ ಈ ಧಾರ್ಮಿಕ ನಾಯಕರು ತಮ್ಮದೇ ಆದ ಧಾರ್ಮಿಕ ತತ್ವಗಳಿಗೆ ಬದ್ಧರಾಗಿರುತ್ತಾರೆ. ಇತರ ಧರ್ಮಗಳು ಕೀಳು ದರ್ಜೆಯವು ಎಂದು ಮುಕ್ತವಾಗಿಯೇ ಬೋಧಿಸುವುದಲ್ಲದೆ, ತಮ್ಮ ಧರ್ಮಗಳನ್ನು ರಕ್ಷಿಸಿಕೊಳ್ಳಲು  ಇತರ ಧರ್ಮಗಳ ಅನುಯಾಯಿಗಳನ್ನು ದ್ವೇಷಿಸುವಂತೆ, ಪರಾಭವಗೊಳಿಸುವಂತೆ, ಹತ್ಯೆ ಮಾಡುವಂತೆ ಪ್ರೇರೇಪಿಸಲು ಮುಂದಾಗುತ್ತಾರೆ.

2001ರಲ್ಲಿ ಜಾನ್‌ ಹಿಕ್ಸ್‌ ಇಂಗ್ಲೆಂಡಿನ ಮತಧರ್ಮಶಾಸ್ತ್ರ ಸೊಸೈಟಿಯಲ್ಲಿ ಮಾತನಾಡುತ್ತಾ ಹೀಗೆ ಹೇಳುತ್ತಾರೆ “ ನಾವು ಇತರ ಧರ್ಮಗಳನ್ನು ಪ್ರತಿಸ್ಪರ್ಧಿಯಂತೆ ಅಥವಾ ಶತ್ರುವಿನಂತೆ ಕಾಣಬಾರದು. ಅಥವಾ ಅವುಗಳನ್ನು ಕೀಳೆಂದು ಭಾವಿಸಬಾರದು. ಅವುಗಳನ್ನೂ ಸಹ ದೈವೀಕ ವಾಸ್ತವತೆಗೆ, ಮಾನವ ಇತಿಹಾಸ ಮತ್ತು ಸಂಸ್ಕೃತಿಯ ವಿಭಿನ್ನ ಸ್ತರಗಳಲ್ಲಿ ರೂಪುಗೊಂಡಿರಬಹುದಾದ ಮನುಕುಲದ ವಿಭಿನ್ನ ರೀತಿಯ ಪ್ರತಿಕ್ರಿಯೆ ಎಂದೇ  ಭಾವಿಸಬೇಕು. ಇತರ ಮತಶ್ರದ್ಧೆಗಳ ಜನರೊಡನೆ ನಾವು ಸ್ನೇಹವನ್ನು ಅಪೇಕ್ಷಿಸಬೇಕು. ಇದು ಅಪಾಯಕಾರಿಯಾದ ಧಾರ್ಮಿಕ ಪಾರಮ್ಯ ಸಿದ್ಧಾಂತವನ್ನು ಹಿಮ್ಮೆಟ್ಟಿಸಲು ನೆರವಾಗುತ್ತದೆ. ಈ ಪಾರಮ್ಯ ಸಿದ್ಧಾಂತವನ್ನೇ ಇಂದು ವಿಶ್ವದಾದ್ಯಂತ ಕಾಣಲಾಗುತ್ತಿರುವ ಸಂಘರ್ಷಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಧಾರ್ಮಿಕ ಪಾರಮ್ಯವನ್ನು ಪ್ರೋತ್ಸಾಹಿಸುವುದೆಂದರೆ ಇಂದು ಮಾನವ ಸಮಾಜವನ್ನು ಬಾಧಿಸುತ್ತಿರುವ ಸಮಸ್ಯೆಗಳ ಒಂದು ಭಾಗವಾದಂತೆಯೇ ಸರಿ. ಆದರೆ ಈ ಪಾರಮ್ಯದ ಭಾವನೆಯನ್ನು ಮೀರಿ ನಡೆಯುವ ಮೂಲಕ ನಾವಯ ಈ ಸಮಸ್ಯೆಗಳ ಪರಿಹಾರದ ಒಂದು ಭಾಗವಾಗಬಹುದು ”.

ಹಿಕ್‌ ಅವರ ಉಪನ್ಯಾಸದ ಶೀರ್ಷಿಕೆ “ ಕ್ರೈಸ್ತ ಧರ್ಮವೊಂದೇ ನೈಜವೇ ಅಥವಾ ಇತರ ಧರ್ಮಗಳಲ್ಲೊಂದೇ ”  ಎಂದಿದ್ದರೂ, ಪಾರಮ್ಯವನ್ನು ಕುರಿತಾದ ಅವರ ಆತ್ಮಾವಲೋಕನದ ಮಾತುಗಳು ನೇರವಾಗಿ ಎಲ್ಲ ಧರ್ಮಗಳಿಗೂ ಅನ್ವಯಿಸುವಂತಿದೆ. ಹಿಕ್ಸ್‌ ಅವರು ಪ್ರಸ್ತಾಪಿಸುವ ಸ್ನೇಹ,  ವಾಸ್ತವದಲ್ಲಿ ಸೋದರತ್ವವೇ ಆಗಿದೆ. ಆಚರಣೆಯ ನೆಲೆಯಲ್ಲಿ ಧಾರ್ಮಿಕ ಪಾರಮ್ಯವನ್ನೇ ಬಳಸಿಕೊಳ್ಳುವ ಮೂಲಕ ಧಾರ್ಮಿಕ ನೇತಾರರು ಅಧಿಕಾರಕ್ಕಾಗಿ ರಾಜಕಾರಣದಲ್ಲಿ ತೊಡಗಿ ಭಕ್ತಾದಿಗಳ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಹಾಗೆಯೇ ರಾಜಕಾರಣಿಗಳು ಧರ್ಮವನ್ನು ರಾಜಕೀಯ ಅಧಿಕಾರಕ್ಕಾಗಿ ಬಳಸಿಕೊಂಡು ಜನತೆಯ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಎರಡೂ ಖಂಡನಾರ್ಹವೇ. ಮುಖ್ಯವಾದ ಅಂಶವೆಂದರೆ, ಸೋದರತ್ವದ ಕೊರತೆಯಿಂದ. ಉಂಟಾಗುವ ಸಾಮಾಜಿಕ ಸಂಘರ್ಷಗಳು ಮತ್ತು ಕ್ಷೋಭೆ  ನೇರವಾಗಿ ದೇಶದ ಏಕತೆ ಮತ್ತು ಅಖಂಡತೆಯನ್ನು ಭಂಗಗೊಳಿಸುತ್ತದೆ.

ಕೇಂದ್ರ ಹಾಗೂ ರಾಜ್ಯ ಶಾಸಕಾಂಗ ಸಭೆಗಳ ಚುನಾಯಿತ ಪ್ರತಿನಿಧಿಗಳು ಸದಾ ಕಾಲವೂ, ಪ್ರಜೆಗಳಾಗಿ ತಮ್ಮ ಮೂಲಭೂತ ಕರ್ತವ್ಯವನ್ನು ನಿಭಾಯಿಸುವುದರಲ್ಲಿ ವಿಫಲರಾಗಿರುವುದೇ ಅಲ್ಲದೆ ಅಧಿಕಾರ ಗ್ರಹಣದ ಸಂಧರ್ಭದಲ್ಲಿನ ತಮ್ಮ ಪ್ರಮಾಣವಚನವನ್ನೂ ಉಲ್ಲಂಘಿಸಿದ್ದಾರೆ. ವರ್ತಮಾನದ ಸಂದರ್ಭದಲ್ಲಿ ತಮ್ಮ ಕರ್ತವ್ಯದಿಂದ ವಿಮುಖವಾಗಿರುವುದೇ ಅಲ್ಲದೆ, ಕೇಂದ್ರ ಹಾಗೂ ರಾಜ್ಯಗಳ ಸರ್ಕಾರದಲ್ಲಿರುವ ಮತ್ತು ವಿರೋಧ ಪಕ್ಷದಲ್ಲಿರುವ ಅನೇಕ ಶಾಸಕರು ಮತ್ತು ಸಂಸದರು, ತಮ್ಮ ಮಾತುಗಳ ಮೂಲಕ, ಬರಹಗಳ ಮೂಲಕ ಮತ್ತು ಚಟುವಟಿಕೆಗಳ ಮೂಲಕ ಸೋದರತ್ವವು ಗಟ್ಟಿಯಾಗದಂತೆ ಮಾಡುತ್ತಿದ್ದಾರೆ. ಇದ ನಮ್ಮ ದೇಶಕ್ಕೆ ಹಾನಿ ಉಂಟುಮಾಡುತ್ತಿರುವುದು ದುರಾದೃಷ್ಟಕರ.

ಅಷ್ಟೇ ದುರಾದೃಷ್ಟಕರ ಸಂಗತಿ ಎಂದರೆ, ರಾಜಕಾರಣಿಗಳು, ಜನಸಾಮಾನ್ಯರ ನಡುವೆ ಅವರ ಧರ್ಮ ಮತ್ತೊಂದು ಧರ್ಮದಿಂದ ಅಪಾಯಕ್ಕೊಳಗಾಗಿದೆ ಎಂದು ಪ್ರಚೋದಿಸುವುದರಲ್ಲಿ ತೊಡಗಿದ್ದಾರೆ. ಹಾಗೆಯೇ  ʼ ಅನ್ಯರ ʼ ವಿರುದ್ಧ ಮತಿಹೀನರಂತೆ ಹಿಂಸಾತ್ಮಕ ದಾಳಿ ನಡೆಸುವಂತೆ ನೇರವಾಗಿಯೇ ಪ್ರೇರೇಪಿಸುತ್ತಿದ್ದಾರೆ. ಬಹುಶಃ ನಾವು ಸಾಮಾಜಿಕ ಪತನದ ಅಂಚಿಗೆ ತಲುಪಿದ್ದೇವೆ. ದೇಶದ ಆಂತರಿಕ ದೌರ್ಬಲ್ಯಗಳು ಹೆಚ್ಚಾದಷ್ಟೂ ಅದು ಬಾಹ್ಯ ಶಕ್ತಿಗಳಿಂದ ಅಪಾಯಗಳಿಗೆ ತುತ್ತಾಗುವ ಸಂಭವ ಹೆಚ್ಚಾಗುತ್ತದೆ ಎನ್ನುವ ವಾಸ್ತವವನ್ನು ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಬಾಹ್ಯ ಶಕ್ತಿಗಳಿಂದ ಅಪಾಯ ಹೆಚ್ಚಾಗುತ್ತಲೂ ಇದೆ.

ಎಲ್ಲ ರಾಜಕೀಯ ಪಕ್ಷಗಳ ವರ್ಚಸ್ಸುಳ್ಳ, ನಿಷ್ಕ್ರೃಷ್ಟವಾಗಿರುವ, ಸಂಭಾವಿತ ರಾಜಕೀಯ ನಾಯಕರುಗಳು ಮತ್ತು ಎಲ್ಲ ಮತಧರ್ಮಗಳ ಧಾರ್ಮಿಕ ನೇತಾರರು ಮಾತ್ರ ಈ ಧರ್ಮಾಧಾರಿತ ದ್ವೇಷ ಮತ್ತು ಹಿಂಸೆಯನ್ನು ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಈ ನೇತಾರರು ಈ ಮಹಾನ್‌ ದೇಶದ ಪ್ರಜೆಗಳಾಗಿ ಸಂವಿಧಾನದ ಪರಿಚ್ಛೇದ 51ಎ ಹೇಳಿರುವಂತೆ ಮೂಲಭೂತ ಕರ್ತವ್ಯವನ್ನು ನಿಭಾಯಿಸಬೇಕಿದೆ. ಆಗ ಮಾತ್ರವೇ ಮತಿಹೀನ, ದೇಶವಿನಾಶಕ ಹಿಂಸಾತ್ಮಕ ಮಾತುಗಳು ಮತ್ತು ಕೃತ್ಯಗಳು ಕೊನೆಗಾಣುತ್ತವೆ. ಇಲ್ಲವಾದರೆ, ಭಾರತ ತನ್ನ ನೆರೆ ರಾಷ್ಟ್ರಗಳಂತೆಯೇ ದುರ್ಭಾಗ್ಯ ಪೂರ್ಣ ವಿಫಲ ರಾಷ್ಟ್ರವಾಗುತ್ತದೆ.

ಈಗ ನಮ್ಮ ಘೋಷಣೆ “ ದ್ವೇಷ ಬಿಡಿ ! ದೇಶವನ್ನು ಒಗ್ಗೂಡಿಸಿ ! ದೇಶವನ್ನು ಒಗ್ಗೂಡಿಸಿ ! ” ಎಂದಾಗಬೇಕಿದೆ.  ಈ ಜಾಗೃತಿಯ ಘೋಷಣೆ ಎಲ್ಲ ರಾಜ್ಯಗಳ ಮತ್ತು ಕೇಂದ್ರದಲ್ಲಿರುವ ಸಮಸ್ತ ಜನಪ್ರತಿನಿಧಿಗಳಿಗೂ ಅನ್ವಯಿಸುತ್ತದೆ. ತಡವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ.

ಮೇಜರ್‌ ಜನರಲ್‌ (ನಿವೃತ್ತ) ಎಸ್‌ ಜಿ ಒಂಬತ್ಕೆರೆ–

ಅನುವಾದ : ನಾ ದಿವಾಕರ

( ನಿವೃತ್ತ ಮೇಜರ್‌ ಜನರಲ್‌ ಎಸ್‌ ಜಿ ಒಂಬತ್ಕೆರೆ 1961ರಲ್ಲಿ ಭಾರತೀಯ ಸೇನೆಯನ್ನು ಪ್ರವೇಶಿಸಿ 1996ರಲ್ಲಿ ನಿವೃತ್ತರಾಗಿದ್ದಾರೆ )

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಕೊಲಾರದ ಶಾಲೆಯಲ್ಲಿ ವಿಕ್ರಾಂತ್ ರೋಣ ಪೈರಸಿ

Next Post

ಆದಾಯ ಹೆಚ್ಚಿಸಲು ಕರೆತಂದ ಮಾರ್ಷಲ್ಸ್‌ಗಳೇ ಈಗ ಬಿಬಿಎಂಪಿಗೆ ಹೊರೆ !

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಆದಾಯ ಹೆಚ್ಚಿಸಲು ಕರೆತಂದ ಮಾರ್ಷಲ್ಸ್‌ಗಳೇ ಈಗ ಬಿಬಿಎಂಪಿಗೆ ಹೊರೆ !

ಆದಾಯ ಹೆಚ್ಚಿಸಲು ಕರೆತಂದ ಮಾರ್ಷಲ್ಸ್‌ಗಳೇ ಈಗ ಬಿಬಿಎಂಪಿಗೆ ಹೊರೆ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada