ಕರೋನಾ ಸೋಂಕಿನ ಎರಡನೇ ಅಲೆಯ ತೀವೃತೆಗೆ ಭಾರತ ತತ್ತರಿಸುತ್ತಿದೆ. ಕಳೆದ ವರ್ಷ ರಾಹುಲ್ ಗಾಂಧಿ ಎಚ್ಚರಿಸಿದ ʼಕರೋನಾ ಸುನಾಮಿʼ ನಿಜವಾಗಲೂ ಈ ಬಾರಿ ಅಪ್ಪಳಿಸಿದೆ. ದಿನವೊಂದಕ್ಕೆ 3.5 ಲಕ್ಷಗಳಷ್ಟು ಪ್ರಕರಣಗಳು ಕಂಡು ಬರುತ್ತಿವೆ. ಮೇ ತಿಂಗಳ ಮಧ್ಯಾವಧಿಯಲ್ಲಿ ಈ ದಿನವೊಂದಕ್ಕೆ 8 ರಿಂದ 10 ಲಕ್ಷ ಪ್ರಕರಣಗಳು ಕಂಡು ಬರಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಈ ನಡುವೆ, ಆಕ್ಸಿಜನ್ ಕೊರತೆಯಿಂದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕ ಮುಖ್ಯಮಂತ್ರಿಯಂತೂ, ಕೇಂದ್ರದಿಂದ ಆಕ್ಸಿಜನ್ ಬಾರದಿದ್ದರೆ ಆರೋಗ್ಯ ಸೇವಾ ಕೇಂದ್ರಗಳನ್ನು ಮುಚ್ಚಬೇಕಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ಚಿತಾಗಾರದ ಮುಂದೆ ಶವಗಳು ಸರತಿ ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿವೆ.
ಕೋವಿಡ್ ಎರಡನೇ ಅಲೆ ಬರುವ ಸೂಚನೆ ಇದ್ದಿದ್ದರೂ ಆಡಳಿತ ಎಚ್ಚರಗೊಳ್ಳದೆ, ಚುನಾವಣೆಯ ಪ್ರಚಾರದಲ್ಲಿ ನಿರತರಾದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾಗರಿಕರ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಂತೂ ಮೋದಿ ವಿರೋಧಿ ಅಭಿಪ್ರಾಯಗಳು ತೀವ್ರವಾಗಿ ವ್ಯಕ್ತವಾಗಿದ್ದು, #NoVoteTo_EvilModi ಎಂದು ಟ್ವಿಟರಿನಲ್ಲಿ ವ್ಯಾಪಕ ಟ್ರೆಂಡ್ ಆಗುತ್ತಿದೆ. ಇದುವರೆಗೂ #NoVoteTo_EvilModi ಎಂಬ ಹ್ಯಾಷ್ಟ್ಯಾಗ್ ಲಕ್ಷಾಂತರ ಬಾರಿ ಬಳಕೆಯಾಗಿವೆ. ಇದರ ಜೊತೆಗೆ #ModiDisasterForIndia #ModiHaiTohMumkinHai ಹ್ಯಾಷ್ಟ್ಯಾಗ್ಗಳೂ ಟ್ರೆಂಡ್ ಆಗಿವೆ.
ಕೆಲವು ನೆಟ್ಟಿಗರಂತೂ 2016 ರ ನೋಟ್ಬ್ಯಾನ್ ಸಂಧರ್ಭದಲ್ಲಿ ಉಂಟಾದ ಸರತಿ ಸಾಲು ಹಾಗೂ ಶವಗಳ ಸರತಿ ಸಾಲನ್ನು ಸಮೀಕರಿಸಿದ್ದಾರೆ. ಹಾಗೂ ಈ ದುರಂತಗಳಿಗೆ ನರೇಂದ್ರ ಮೋದಿಯೇ ನೇರ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.