ಧಾರವಾಡ ನಗರದ ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ ಪ್ರಕರಣವನ್ನು ಉಪನಗರ ಠಾಣೆ ಪೊಲೀಸರು ಶೀಘ್ರವೇ ಭೇದಿಸಿದ್ದಾರೆ. ಕೊಲೆ ನಡೆದ 24 ಗಂಟೆಗಳಲ್ಲೇ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಆರೋಪಿಗಳ ಪೈಕಿ 8 ಮಂದಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಕೈಫ್ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ಪೊಲೀಸ್ ತನಿಖೆಯಲ್ಲಿ ಈ ಹತ್ಯೆಗೆ ಹಳೆಯ ವೈಷಮ್ಯ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳೇ ಪ್ರಮುಖ ಕಾರಣವೆಂದು ಬೆಳಕಿಗೆ ಬಂದಿದೆ. ಮುಖ್ಯ ಆರೋಪಿ ಮಹಮ್ಮದ್ ಶಾ ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಈತನೊಂದಿಗೆ ಅರ್ಬಾಜ್ ಹಂಚಿನಮನಿ ಹಾಗೂ ರೌಡಿ ಶೀಟರ್ ಮುಕ್ತುಂ ಸೊಗಲದ್ ಸೇರಿದಂತೆ ಹಲವರು ಕೈಜೋಡಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾದ ಆರೋಪಿಗಳಲ್ಲಿ ಸದ್ದಾಂ, ಗೌಸ್ ಮತ್ತು ಪರ್ವೇಜ್ ಸೇರಿದ್ದಾರೆ. ಕೊಲೆಗಿಂತ ಮುನ್ನ ಎಲ್ಲಾ ಆರೋಪಿಗಳು ಸಭೆ ನಡೆಸಿ ಫೈರೋಜ್ ಪಠಾಣ್ ಹತ್ಯೆಗೆ ಸಂಚು ರೂಪಿಸಿದ್ದರೆಂದು ಮಾಹಿತಿ ಲಭ್ಯವಾಗಿದೆ.

ಘಟನೆಯ ದಿನ ಸಂಜೆ ಫೈರೋಜ್ ಪಠಾಣ್ ತಮ್ಮ ಮನೆಯಲ್ಲಿ ಇದ್ದಾಗ ಆರೋಪಿಗಳು ಮನೆಗೆ ಬಂದು ದಾಳಿ ನಡೆಸಿದ್ದಾರೆ. ಮೊದಲು ಮಹಮ್ಮದ್ ಶಾ ಚಾಕುವಿನಿಂದ ಇರಿದು ದಾಳಿ ನಡೆಸಿದ್ದು, ಬಳಿಕ ಇತರರು ಒಳಗೆ ನುಗ್ಗಿ ಹಲ್ಲೆ ಮುಂದುವರಿಸಿ ಹತ್ಯೆಗೈದಿದ್ದಾರೆ. ನಂತರ ಮೃತರ ಮೊಬೈಲ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಅದನ್ನು ಧಾರವಾಡ ತಾಲೂಕಿನ ವೆಂಕಟಾಪುರ ಸಮೀಪ ಎಸೆದು ಹೋಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಫೈರೋಜ್ ಪಠಾಣ್ ಅವರಿಗೆ ಏಪ್ರಿಲ್ 24 ರಂದು ಮದುವೆ ನಿಶ್ಚಿತವಾಗಿದ್ದ ಹಿನ್ನೆಲೆ, ಇತ್ತೀಚೆಗೆ ಮನೆಗೆ ಬೇಗ ಬರುತ್ತಿದ್ದರೆಂದು ಹೇಳಲಾಗುತ್ತಿದೆ. ಇದೇ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳು ದಾಳಿ ನಡೆಸಿದ್ದರೆಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದು, ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆಯ ಕುರಿತು ಪರಿಶೀಲನೆ ನಡೆಯುತ್ತಿದೆ.






