ಬೆಂಳೂರು: ರಂಗಸ್ಥಳ ಇದು ಅಘೋರ್ ಮೋಷನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಡಾ. ರೇವಣ್ಣ ಹಾಗೂ ಮೋಹನ್ ಕುಮಾರ ಎಮ್ ಎಲ್ ನಿರ್ಮಾಣದ ಚಿತ್ರ. ಈ ಸಿನಿಮಾಗೆ ನಿತಿನ್ ಭಾರದ್ವಾಜ್ ನಿರ್ದೇಶಕರು. ಇನ್ನು, “ಗಿರ್ಕಿ” ಖ್ಯಾತಿಯ ವಿಲೋಕ್ ರಾಜ್ ಹೀರೋ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುವುದರ ಜೊತೆಗೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಸದ್ಯ, ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

“ರಂಗಸ್ಥಳ” ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಅಡ್ಕತೋಡಿ ಗ್ರಾಮಕ್ಕೆ ಒಬ್ಬ ಅಪರಿಚಿತ ವ್ಯಕ್ತಿಯ ಆಗಮನವಾಗುತ್ತದೆ. ಆತನ ನಿಗೂಢ ಹಾಗೂ ಅಶುಭಕರ ಉಪಸ್ಥಿತಿಯು, ಗ್ರಾಮದ ಇತಿಹಾಸದ ಮೇಲ್ಮೈಯಡಿ ವರ್ಷಗಳಿಂದ ಹುದುಗಿದ್ದ ಕರಾಳ ರಹಸ್ಯವೊಂದನ್ನು ನಿಧಾನವಾಗಿ ಬಯಲಿಗೆಳೆಯುತ್ತದೆ. ಈ ಅಪರಿಚಿತನ ಸುತ್ತಲಿನ ನಿಗೂಢತೆ ಗ್ರಾಮದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಂತೆ ನಾಯಕ ಹಾಗೂ ಸ್ನೇಹಿತರು ಆತನ ವಿರುದ್ಧ ತಿರುಗಿಬೀಳುತ್ತಾರೆ. ಇದೇ ಚಿತ್ರದ ಕಥೆಯ ಪ್ರಮುಖ ಸಾರಾಂಶ ಎಂದು ತಿಳಿಸಿರುವ ನಿರ್ದೇಶಕ ನಿತಿನ್ ಭಾರದ್ವಾಜ್ ಮುಂದೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುತ್ತಾರೆ.
ಮೂಲತಃ ಪುತ್ತೂರಿನವರಾದ ನಿರ್ದೇಶಕ ನಿತಿನ್ ಭಾರದ್ವಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಂಗೀತ, ಯಕ್ಷಗಾನ ಮತ್ತು ಕಲೆಯ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದಿರುವ ಇವರು ಚಿತ್ರರಂಗದ ಮೇಲಿನ ತಮ್ಮ ಆಸಕ್ತಿಗಾಗಿ ವೈದ್ಯಕೀಯ ಪದವಿಯ ವಿದ್ಯಾಭ್ಯಾಸವನ್ನು ತೊರೆದು, ಚೆನ್ನೈನ ಎಲ್.ವಿ. ಪ್ರಸಾದ್ ಫಿಲ್ಮ್ ಅಂಡ್ ಟಿವಿ ಅಕಾಡೆಮಿಯಲ್ಲಿ ಚಲನಚಿತ್ರ ಶಿಕ್ಷಣ ಪಡೆದಿದ್ದಾರೆ. ಬಳಿಕ ಕಿರುಚಿತ್ರಗಳು ಹಾಗೂ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ‘ರಂಗಸ್ಥಳ’ ಚಿತ್ರದ ಮೂಲಕ ನಿರ್ದೇಶಕನಾಗಿ ಹಿರಿತೆರೆಗೆ ಪ್ರವೇಶ ಮಾಡಿದ್ದಾರೆ.

“ಗಿರ್ಕಿ”, “ಡಾಟರ್ ಆಫ್ ಪಾರ್ವತಮ್ಮ” ಮುಂತಾದ ಚಿತ್ರಗಳಲ್ಲಿ ನಟಿಸಿರುವ ವಿಲೋಕ್ ರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮಲಯಾಳಂ ನ ಜನಪ್ರಿಯ ನಟ ಮನೋಜ್ ಕೆ ಜಯನ್ ಖಳನಟನ ಪಾತ್ರ ನಿರ್ವಹಿಸಿದ್ದಾರೆ. ಕಣ್ಣೂರಿನ ಮೂಲದ ಉದ್ಯಮಿ ಪಾತ್ರ ಮನೋಜ್ ಕೆ ಜಯನ್ ಅವರದು. ಹೊರನೋಟಕ್ಕೆ ಹಾಸ್ಯಮಯನಾಗಿ ಕಾಣಿಸಿಕೊಂಡರೂ, ಒಳಗಿನಿಂದ ಅತ್ಯಂತ ದುಷ್ಟ ಸ್ವಭಾವದವನು. ಒಂದು ಗುಪ್ತ ಉದ್ದೇಶದೊಂದಿಗೆ ಕರ್ನಾಟಕದ ಪುಟ್ಟ ಹಳ್ಳಿಯೊಂದಕ್ಕೆ ಬಂದು ನೆಲೆಸುವ ಆತನ ಸುತ್ತ ಚಿತ್ರದ ಕಥೆ ಸಾಗುತ್ತದೆ. ಶಿಲ್ಪಾ ಕಾಮತ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದು, ಬಿ. ಸುರೇಶ್, ಸಂಧ್ಯಾ ಅರೆಕೆರೆ, ಹರಿಣಿ ಶ್ರೀಕಾಂತ್, ಕುಶಾಲ್ ಬಿ.ಕೆ., ಸೌಮ್ಯ ಪೂಜಾರಿ ಹಾಗೂ ರಾಧೇಶ್ ಶೆಣೈ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಎನೋಶ್ ಒಲಿವೆರ ಹಾಗೂ ಮನಯ್ ಕೆ ಮಾರುತಿ ಛಾಯಾಗ್ರಹಣ ಹಾಗೂ ಜ್ಯೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ “ರಂಗಸ್ಥಳ” ಚಿತ್ರಕ್ಕಿದೆ.





