ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಗಮನ ಸೆಳೆದಿದ್ದ ವರ್ತೂರು ಸಂತೋಷ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಇದೀಗ ತೆರೆ ಬಿದ್ದಿದೆ. ನಟಿ ತನಿಷಾ ಕುಪ್ಪಂಡ ಅವರೊಂದಿಗೆ ಸಂತೋಷ್ ಅವರ ಹೆಸರು ಜೋಡಣೆಯಾಗಿದ್ದು, ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಇಬ್ಬರೂ ತಾವು ಕೇವಲ ಉತ್ತಮ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದರು.

ಇದೀಗ ತಮ್ಮ ಮದುವೆ ವಿಚಾರದ ಬಗ್ಗೆ ಸ್ವತಃ ವರ್ತೂರು ಸಂತೋಷ್ ಮಾತನಾಡಿದ್ದು, ತಾವು ಎರಡನೇ ಮದುವೆಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ ಸಂತೋಷ್, ಇದು ತಮ್ಮ ಎರಡನೇ ಮದುವೆಯಾಗಿದ್ದು, ಪ್ರೀತಿಸಿ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆ ಹಾಗೂ ಆಶೀರ್ವಾದದೊಂದಿಗೆ ಶಾಸ್ತ್ರೋಕ್ತವಾಗಿ ವಿವಾಹವಾಗಿರುವುದಾಗಿ ಹೇಳಿದ್ದಾರೆ.
ತಮ್ಮ ಮದುವೆಯ ನಿರ್ಧಾರದ ಹಿಂದಿನ ಕಾರಣವನ್ನೂ ವಿವರಿಸಿರುವ ಅವರು, ವಯಸ್ಸಾದ ತಾಯಿಗೆ ಮನೆಯ ಜವಾಬ್ದಾರಿಗಳಲ್ಲಿ ನೆರವಾಗಲು ಹಾಗೂ ಕುಟುಂಬಕ್ಕೆ ಆಸರೆಯಾಗಲು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.“ಹೌದು, ಇದು ನನ್ನ ಎರಡನೇ ಮದುವೆ. ನಾನು ಪ್ರೀತಿಸಿಯೇ ಮದುವೆಯಾಗಿದ್ದೇನೆ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡೂ ಕುಟುಂಬದ ಹಿರಿಯರನ್ನು ಒಪ್ಪಿಸಿ, ಅವರ ಆಶೀರ್ವಾದದೊಂದಿಗೆ ಮದುವೆಯಾಗಿದ್ದೇನೆ” ಎಂದು ಸಂತೋಷ್ ಹೇಳಿದ್ದಾರೆ.

ತಮ್ಮ ಎರಡನೇ ಮದುವೆ ಬಿಗ್ಬಾಸ್ ಕಾರ್ಯಕ್ರಮ ಮುಗಿದ ಬಳಿಕವೇ ನಡೆದಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಮದುವೆ ವಿಚಾರವನ್ನು ಇಷ್ಟು ದಿನ ಬಹಿರಂಗಪಡಿಸದೇ ಇದ್ದುದಕ್ಕೆ ಕಾರಣವನ್ನೂ ಸಂತೋಷ್ ತಿಳಿಸಿದ್ದಾರೆ. ಕುಟುಂಬದ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ತರುವುದು ತಮ್ಮ ಇಷ್ಟವಲ್ಲ. ವೈಯಕ್ತಿಕ ಬದುಕನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮದುವೆ ವಿಚಾರವನ್ನು ಖಾಸಗಿಯಾಗಿಟ್ಟುಕೊಂಡಿದ್ದಾಗಿ ಹೇಳಿದ್ದಾರೆ.ಆದರೆ ಇದೀಗ ನೇರವಾಗಿ ಪ್ರಶ್ನೆ ಕೇಳಿದ್ದರಿಂದ ಸತ್ಯವನ್ನು ಬಹಿರಂಗಪಡಿಸಿರುವುದಾಗಿ ತಿಳಿಸಿರುವ ಸಂತೋಷ್, ಮುಂದಿನ ದಿನಗಳಲ್ಲಿ ತಮ್ಮ ಕುಟುಂಬದ ಶುಭ ಸಮಾರಂಭಗಳಲ್ಲಿ ಪತ್ನಿಯನ್ನು ಅಭಿಮಾನಿಗಳು ನೋಡಬಹುದು ಎಂದು ಹೇಳಿದ್ದಾರೆ.
ಬಿಗ್ಬಾಸ್ ಬಳಿಕ ತಮ್ಮ ನೇರ ಮಾತು, ಹಳ್ಳಿಕಾರ್ ಜಾನುವಾರುಗಳ ಮೇಲಿನ ಪ್ರೀತಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದ ವರ್ತೂರು ಸಂತೋಷ್, ಇದೀಗ ತಮ್ಮ ವೈಯಕ್ತಿಕ ಬದುಕಿನ ಹೊಸ ಅಧ್ಯಾಯದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅವರ ಅಭಿಮಾನಿಗಳು ಸಂತೋಷ್ ದಂಪತಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.





