
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕೆಎಚ್ಐಆರ್ ಸಿಟಿ ಯೋಜನೆಯ ಸಲಹಾ ಮಂಡಳಿಯ ಪ್ರಥಮ ಸಭೆ ಮಂಗಳವಾರ ಇಲ್ಲಿನ ಖನಿಜ ಭವನದಲ್ಲಿ ನಡೆಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಭೆಯ ನೇತೃತ್ವ ವಹಿಸಿದ್ದರು.

ಸಭೆಯಲ್ಲಿ ವರ್ಚುಯಲ್ ಆಗಿ ಭಾಗವಹಿಸಿದ್ದ ಸಮಿತಿಯ ಸದಸ್ಯರು, ದೊಡ್ಡಬಳ್ಳಾಪುರ- ದಾಬಸ್ ಪೇಟೆ ಮಧ್ಯದಲ್ಲಿ ಬರುವ ಕೆಎಚ್ಐಆರ್ ಸಿಟಿಯ ಪರಿಕಲ್ಪನೆ ಅತ್ಯದ್ಭುತವಾಗಿದ್ದು ಬೆಂಗಳೂರಿನ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೆಎಚ್ಐಆರ್ ಸಿಟಿ ಈಗ 2,000 ಎಕರೆ ಜಾಗದಲ್ಲಿ ತಲೆ ಎತ್ತಲಿದೆ. ಇದರಲ್ಲಿ 500 ಎಕರೆಯ ಮೊದಲ ಹಂತದ ಯೋಜನೆಗೆ ಸದ್ಯದಲ್ಲೇ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಕೆಎಚ್ಐಆರ್ ಸಿಟಿ ಯೋಜನೆ ವಿಸ್ತರಣೆ ಆಗಲಿದೆ. ಇದಕ್ಕೆ ಸಲಹಾ ಸಮಿತಿಯ ಸದಸ್ಯರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಿದೆ ಎಂದು ನುಡಿದರು.

ಇದೊಂದು ಅಸಾಂಪ್ರದಾಯಿಕ ಯೋಜನೆಯಾಗಿದೆ. ಇದು ಬೆಂಗಳೂರು ನಗರದ ಆರ್ಥಿಕತೆಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಲಿದೆ. ಸಲಹಾ ಸಮಿತಿಯ ಸದಸ್ಯರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದರು.
ಸಲಹಾ ಮಂಡಳಿ ಸದಸ್ಯರಾದ ನಾರಾಯಣ ಹೃದ್ರೋಗ ಸಂಸ್ಥೆ ಅಧ್ಯಕ್ಷ ಡಾ.ದೇವಿಶೆಟ್ಟಿ, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಆಡಳಿತ ಮಂಡಳಿ ಸದಸ್ಯ ಮೋಹನದಾಸ್ ಪೈ, ಹ್ರದ್ರೋಗ ತಜ್ಞ ಡಾ.ವಿವೇಕ್ ಜವಳಿ, ಆ್ಯಕ್ಸಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಅಮೆರಿಕಾದ ಬೋಸ್ಟನ್ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಟ್ರಸ್ಟಿ ರಾಂಚ್ ಕಿಂಬಾಲ್, ವೆಕ್ಸ್ ಫೋರ್ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಥಾಮಸ್ ಓಶ ಮತ್ತು ಆಸ್ಟೀನ್ ನ ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಭಾಗದ ಡೀನ್ ಸ್ಟೀಫನ್ ಎಕ್ಕರ್ ಅವರು ವರ್ಚುಯಲ್ ಆಗಿ ಸಭೆಯಲ್ಲಿ.ಜೊತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್.ಆಯುಕ್ತೆ ಗುಂಜನ್ ಕೃಷ್ಣ ಭಾಗವಹಿಸಿದ್ದರು.





