ನಾ ದಿವಾಕರ
ಭಾಗ 1
ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಮುಂದಿನ ಐದು ವರ್ಷಗಳಲ್ಲಿ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದು ದೇಶದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗುತ್ತದೆ. ಬದಲಾವಣೆಯನ್ನು ಬಯಸುತ್ತಿರುವ ಜನಸಾಮಾನ್ಯರು ಇನ್ನು ಒಂದು ವರ್ಷದಲ್ಲೇ ಲೋಕಸಭಾ ಚುನಾವಣೆಗಳನ್ನು ಎದುರಿಸಲಿದ್ದಾರೆ. ತನ್ನ ಆಳ್ವಿಕೆಯ ಮೊದಲ ವರ್ಷದಲ್ಲಿ ರಾಜ್ಯ ಸರ್ಕಾರ ಅನುಸರಿಸಲಿರುವ ಹಾದಿ, ಜಾರಿಗೊಳಿಸಲಿರುವ ಆಡಳಿತ ನೀತಿಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ತೋರಲಿರುವ ಧೋರಣೆ ರಾಷ್ಟ್ರ ರಾಜಕಾರಣದಲ್ಲೂ ಸಹ ಪ್ರಭಾವ ಬೀರುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಪ್ರಮುಖ ಉಚಿತ ಸೌಲಭ್ಯಗಳನ್ನು ಈಡೇರಿಸುವುದೇ ಅಲ್ಲದೆ, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸರಿಪಡಿಸಬೇಕಾದ ಹಲವು ಗಂಭೀರ ಸಮಸ್ಯೆಗಳೂ ಇವೆ. ಕರ್ನಾಟಕದ ಜನತೆ ಬದಲಾವಣೆಯನ್ನು ಬಯಸಿ ಹೊಸ ಸರ್ಕಾರವನ್ನು ಚುನಾಯಿಸಿದ್ದಾರೆ, ಹಾಗಾಗಿ ಈ ಸರ್ಕಾರದ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಲೇ ಇರುತ್ತಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ನೆರವಾದ ನಾಗರಿಕ ಸಮಾಜದ ನೂರಾರು ಸಂಘಟನೆಗಳೂ ಸಹ ಸರ್ಕಾರದ ಹೊಸ ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರಬೇಕಾಗುತ್ತದೆ.
ಹೊಸ ಸರ್ಕಾರದ ಮುಂದಿರುವ ಸವಾಲುಗಳನ್ನು ನಾಲ್ಕು ನೆಲೆಗಳಲ್ಲಿ ಗುರುತಿಸಬಹುದು. ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಕರ್ನಾಟಕದ ಪಾರಂಪರಿಕ ಸಮನ್ವಯತೆ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರಥಮ ಆದ್ಯತೆಯಾಗಬೇಕಿದೆ. ಎರಡನೆಯದಾಗಿ ಆರ್ಥಿಕ ನೆಲೆಯಲ್ಲಿ ಏರುತ್ತಿರುವ ದಿನಬಳಕೆ ವಸ್ತುಗಳ ಬೆಲೆಗಳು ಮತ್ತು ಜನಸಾಮಾನ್ಯರ ಜೀವನೋಪಾಯದ ದುರ್ಗಮ ಮಾರ್ಗಗಳನ್ನು ಹಸನುಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮೂರನೆಯದಾಗಿ ಗ್ರಾಮ ಮಟ್ಟದಿಂದ ವಿಧಾನಸೌಧದವರೆಗೆ ವ್ಯಾಪಿಸಿರುವ ಭ್ರಷ್ಟಾಚಾರದ ಬೇರುಗಳನ್ನು ತಳಮಟ್ಟದಿಂದಲೇ ಸರಿಪಡಿಸುವ ಗುರುತರ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಅಧಿಕಾರಶಾಹಿಯಲ್ಲಿ ವ್ಯಾಪಿಸಿರುವ ಈ ಭ್ರಷ್ಟತೆಯ ವಿರಾಟ್ ಸ್ವರೂಪವನ್ನು ಇತ್ತೀಚಿನ ಲೋಕಾಯುಕ್ತ ದಾಳಿ ತೆರೆದಿಟ್ಟಿದೆ. ನಾಲ್ಕನೆಯದಾಗಿ ಕೋಮುವಾದ-ಮತಾಂಧತೆ ಮತ್ತು ಮತದ್ವೇಷದ ವಾತಾವರಣವನ್ನು ತಿಳಿಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಸಾಮಾಜಿಕ ಸಾಮರಸ್ಯ-ಸಮನ್ವಯತೆ
ಕರಾವಳಿಯಲ್ಲಿ ಸೃಷ್ಟಿಯಾಗಿರುವ ಮತಾಂಧತೆಯ ನೆರಳು ನಿರ್ವಾತದಲ್ಲಿ ಉದ್ಭವಿಸಿಲ್ಲ ಎನ್ನುವ ಎಚ್ಚರ ಸರ್ಕಾರಕ್ಕೆ ಇರಬೇಕಾಗುತ್ತದೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟದಂತೆ ಕಾಪಾಡಬೇಕಾದರೆ, ಎಲ್ಲ ಜನಾಂಗಗಳ, ಜನಸಮುದಾಯಗಳ ನಡುವೆ ಸೌಹಾರ್ದಯುತ ಬಾಂಧವ್ಯ ಏರ್ಪಡುವ ರೀತಿಯಲ್ಲಿ ಸರ್ಕಾರ ತನ್ನ ಆಡಳಿತ ನೀತಿಗಳನ್ನು ರೂಪಿಸಬೇಕಾಗುತ್ತದೆ. ಸಮಾಜದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುವ ಯಾವುದೇ ಮತೀಯ ಶಕ್ತಿಗಳನ್ನು ಮಟ್ಟ ಹಾಕುವುದು ಕಾನೂನು ಸುವ್ಯವಸ್ಥೆಯ ಒಂದು ಭಾಗವಾಗುತ್ತದೆ. ಆದರೆ ಇದನ್ನೂ ಮೀರಿದ ಪ್ರಯತ್ನಗಳು ಸರ್ಕಾರದಿಂದ ನಡೆಯಬೇಕಿದೆ. ಆಳವಾಗಿ ಬೇರೂರಿರುವ ಮತೀಯ ಭಾವನೆಗಳನ್ನು, ದ್ವೇಷದ ಬೀಜಗಳನ್ನು ಒಮ್ಮಿಂದೊಮ್ಮೆಲೆ ಕಿತ್ತುಹಾಕುವುದು ದುಸ್ಸಾಧ್ಯ. ಕರಾವಳಿಯಿಂದ ರಾಜಧಾನಿಯವರೆಗೂ ಹಬ್ಬಿರುವ ಮತೀಯ ದ್ವೇಷದ ಛಾಯೆ ಮುಖ್ಯವಾಗಿ ಯುವ ಪೀಳಿಗೆಗೆ ಮಾರಕವಾಗಿ ಪರಿಣಮಿಸಿದೆ. ಕಾಲೇಜು ಹುಡುಗರೂ ಸಹ ಇಂದು ಶಸ್ತ್ರಧಾರಿಗಳಾಗಿದ್ದಾರೆ. ವಿದ್ಯಾರ್ಥಿಗಳ ನಡುವೆ ನಡೆಯುವ ಕಲಹಗಳಲ್ಲೂ ಚಾಕು-ಚೂರಿಯಿಂದ ಇರಿಯುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದು ಏನನ್ನು ಸೂಚಿಸುತ್ತದೆ ? ಈ ಯುವ ಪೀಳಿಗೆಯನ್ನು ಶಸ್ತ್ರಧಾರಿಗಳನ್ನಾಗಿ ಮಾಡುವುದರಿಂದ ಅವರಲ್ಲಿ ಹಿಂಸಾತ್ಮಕ ಮನೋಭಾವ ಸಹಜವಾಗಿಯೇ ಮೂಡುತ್ತದೆ. ಈ ಹಿಂಸಾತ್ಮಕತೆಯನ್ನು ಮೂಡಿಸಲು ಯತ್ನಿಸುವ ಯಾವುದೇ ಸಂಘಟನೆಗಳು, ಗುಂಪುಗಳು ಸೌಹಾರ್ದ ಸಮಾಜಕ್ಕೆ ಮಾರಕವಾಗಿಯೇ ಪರಿಣಮಿಸುತ್ತವೆ. ಇಂತಹ ಗುಂಪುಗಳನ್ನು, ವ್ಯಕ್ತಿಗಳನ್ನು ಕಾನೂನಿನ ವ್ಯಾಪ್ತಿಯಲ್ಲೇ ಗುರುತಿಸಿ ಸರಿಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಶಸ್ತ್ರಧಾರಿಯಾಗಿರುವ ಯುವ ಪೀಳಿಗೆಯನ್ನು ನಿಶ್ಶಸ್ತ್ರೀಕರಣಗೊಳಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಈ ನಿಟ್ಟಿನಲ್ಲಿ ನಿರ್ದಿಷ್ಟ ಮತಧರ್ಮಗಳ ಚೌಕಟ್ಟನ್ನು ದಾಟಿ, ಎಲ್ಲ ಮತಧರ್ಮಗಳಲ್ಲೂ ಮತಾಂಧ ಶಕ್ತಿಗಳು ಪೋಷಿಸುತ್ತಿರುವ ಮತೀಯ ದ್ವೇಷ ಮತ್ತು ಮತದ್ವೇಷದ ಕಾಲಾಳುಪಡೆಗಳನ್ನು ನಿಯಂತ್ರಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಕರಾವಳಿಯಲ್ಲಾಗಲೀ, ರಾಜ್ಯದ ಇತರೆಡೆಗಳಲ್ಲಾಗಲೀ ಢಾಳಾಗಿ ಗೋಚರಿಸುವ ಒಂದು ವಿದ್ಯಮಾನ ಎಂದರೆ ಯುವಸಮೂಹ ದಿಕ್ಕುತಪ್ಪುತ್ತಿದೆ. ಸ್ನೇಹ ಬಾಂಧವ್ಯಗಳನ್ನೂ ಮತೀಯ ನೆಲೆಯಲ್ಲಿ ನಿರ್ವಚಿಸುವ ಹಂತಕ್ಕೆ ಕೋಮುವಾದ ತನ್ನ ಬೇರುಗಳನ್ನು ವ್ಯಾಪಿಸಿದೆ. ಈ ಸಮಸ್ಯೆಯನ್ನು ಕೇವಲ ಕಾನೂನು ಸುವ್ಯವಸ್ಥೆಯ ಚೌಕಟ್ಟಿನಲ್ಲಿ ಅಥವಾ ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಮತಧರ್ಮದ ಚೌಕಟ್ಟಿನಲ್ಲಿಟ್ಟು ನೋಡುವುದಕ್ಕಿಂತಲೂ ವಿಶಾಲ ಸಮಾಜದಲ್ಲಿ ಉಲ್ಬಣಿಸುತ್ತಿರುವ ಮತಭೇದಗಳ ಎಳೆಗಳನ್ನು ಗುರುತಿಸುವುದು ಮುಖ್ಯವಾಗುತ್ತದೆ. ಸಾಮಾಜಿಕ ಸೌಹಾರ್ದತೆಯನ್ನು ಏಕಮುಖಿ ದೃಷ್ಟಿಕೋನದಿಂದ ನೋಡಲಾಗುವುದಿಲ್ಲ ಎಂಬ ಸುಡು ವಾಸ್ತವವನ್ನೂ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಕೌಟುಂಬಿಕ ಹಾಗೂ ವಾಣಿಜ್ಯ ಕಲಹಗಳಲ್ಲೂ ಹತ್ಯೆಗಳು ಸಂಭವಿಸುತ್ತಿರುವುದು ಸಮಾಜದಲ್ಲಿ ತಳಮಟ್ಟದಲ್ಲೇ ಹಿಂಸಾತ್ಮಕ ಧೋರಣೆ ಹೆಚ್ಚಾಗುತ್ತಿರುವುದರ ಸೂಚನೆಯಾಗಿ ಕಾಣುತ್ತದೆ.
ಸಾಮಾಜಿಕ ಸಾಮರಸ್ಯವನ್ನು ಸಂಕುಚಿತವಾದ ಮತಧಾರ್ಮಿಕ ದೃಷ್ಟಿಕೋನದಿಂದ ನೋಡದೆ, ಸಮಾಜದಲ್ಲಿ ಎಲ್ಲ ಕೋಮಿನ ಜನರೂ ಸ್ನೇಹ ಬಾಂಧವ್ಯದೊಂದಿಗೆ ಬದುಕುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ. ಕಳೆದ ಹಲವು ವರ್ಷಗಳಲ್ಲಿ ಕರ್ನಾಟಕ ಈ ಸುಂದರ ವಾತಾವರಣವನ್ನು ಕಳೆದುಕೊಂಡಿದೆ. ದೆಹಲಿಯ ಶ್ರದ್ಧಾವಾಲ್ಕರ್ ಘಟನೆಯನ್ನೇ ಹೋಲುವಂತಹ ಹಲವು ಘಟನೆಗಳು ರಾಜ್ಯದಲ್ಲೂ ಸಂಭವಿಸಿದೆ. ಶಾಲಾ ಕಾಲೇಜು ಮಕ್ಕಳೂ ಸಹ ಆಕ್ರೋಶಕ್ಕೆ ಬಲಿಯಾಗಿ ಶಸ್ತ್ರಗಳನ್ನು ಬಳಸುವ ಮಟ್ಟಕ್ಕೆ ಪ್ರಕ್ಷುಬ್ಧರಾಗಿದ್ದಾರೆ. ಈ ಜಟಿಲ ಸಮಸ್ಯೆಯನ್ನು ಸಮಾಜಶಾಸ್ತ್ರೀಯ ದೃಷ್ಟಿಯಿಂದ ನೋಡಿದಾಗ ಈ ಬೆಳವಣಿಗೆಗೆ ಕೇವಲ ಮತೀಯವಾದ ಅಥವಾ ಮತಾಂಧತೆ ಒಂದೇ ಕಾರಣ ಎನಿಸುವುದಿಲ್ಲ. ಜಾತಿ ಭೇದ, ಸ್ತ್ರೀ ದ್ವೇಷ, ಪರಕೀಯತೆಯ ಭಾವನೆ, ಊಳಿಗಮಾನ್ಯ ಧೋರಣೆ, ಪುರುಷಾಧಿಪತ್ಯ ಹಾಗೂ ಶ್ರೇಷ್ಠತೆಯ ಅಹಮಿಕೆಗಳು ಕೌಟುಂಬಿಕ ನೆಲೆಯಿಂದ ವಿಶಾಲದ ಸಮಾಜದವರೆಗೂ ವಿಸ್ತರಿಸುವುದನ್ನು ಗಮನಿಸಬಹುದು. ಮಕ್ಕಳಲ್ಲಿ, ಯುವ ಪೀಳಿಗೆಯಲ್ಲಿ ಈ ತಾರತಮ್ಯದ ಧೋರಣೆಗಳು ಬೇರೂರದಂತೆ ಮಾಡುವ ನೈತಿಕ ಹೊಣೆಗಾರಿಕೆ ಇಡೀ ಸಮಾಜದ ಮೇಲಿರುತ್ತದೆ. ಇಂತಹ ಸಮಾಜಕ್ಕೆ ಪೂರಕವಾದ ಸಾಂಸ್ಕೃತಿಕ-ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಸಾಂವಿಧಾನಿಕ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಯುವ ಪೀಳಿಗೆಯನ್ನು ಕಾಡುವ ಆರ್ಥಿಕ ಅಭದ್ರತೆ ಮತ್ತು ಅನಿಶ್ಚಿತ ಭವಿಷ್ಯದ ಆತಂಕಗಳೂ ಇಂತಹ ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಆದರ್ಶಪ್ರಾಯ ನಾಯಕತ್ವವೇ ಇಲ್ಲದ ಒಂದು ಸಮಾಜದಲ್ಲಿ ಈ ಸಿಕ್ಕುಗಳನ್ನು ಬಿಡಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿರುವಷ್ಟೇ ಸರ್ಕಾರದ ಮೇಲೂ ಇರುತ್ತದೆ.
ಸಮಾಜಮುಖಿ ಶಿಕ್ಷಣದ ಅಗತ್ಯತೆ
ರಾಜ್ಯ ಸರ್ಕಾರ ಪಠ್ಯಕ್ರಮ ಪರಿಷ್ಕರಣೆಯ ಸಂದರ್ಭದಲ್ಲಿ ಈ ಸೂಕ್ಷ್ಮಗಳತ್ತ ಗಮನಹರಿಸಬೇಕಿದೆ. ಹತ್ತನೆ ತರಗತಿಯವರೆಗೆ ಶಾಲಾ ಮಕ್ಕಳಿಗೆ ಪಠ್ಯಕ್ರಮದ ಮೂಲಕ ತತ್ವ-ಸಿದ್ಧಾಂತಗಳನ್ನು ಬೋಧಿಸುವುದಿಲ್ಲ. ಬದಲಾಗಿ ಎಲ್ಲ ತಾತ್ವಿಕ-ಸೈದ್ಧಾಂತಿಕ ನೆಲೆಗಳನ್ನು ಪರಿಚಯಿಸುವ ಮೂಲಕ ಆದರ್ಶಗಳನ್ನು ಬೋಧಿಸಲಾಗುತ್ತದೆ. ಸಮಾಜಶಾಸ್ತ್ರೀಯ ಅಧ್ಯಯನದ ಮೂಲಕ ಒಂದು ಸಮಾಜ ರೂಢಿಸಿಕೊಂಡು ಬರುವ ಸಾಮಾಜಿಕ ಸಾಮರಸ್ಯ ಮತ್ತು ಸಮನ್ವಯದ ಜೀವನಾದರ್ಶಗಳನ್ನು ಮಕ್ಕಳಿಗೆ ಪರಿಚಯಿಸುವುದು ಸರ್ಕಾರಗಳ ಆದ್ಯತೆಯಾಗಬೇಕಾಗುತ್ತದೆ. ಇತಿಹಾಸದಿಂದ ಹೆಕ್ಕಿ ತೆಗೆದ ಯಾವ ಮಹನೀಯರನ್ನು ಪರಿಚಯಿಸುತ್ತೇವೆ ಎನ್ನುವುದಕ್ಕಿಂತಲೂ ಅಂತಹ ವ್ಯಕ್ತಿಗಳ ಯಾವ ಚಿಂತನೆಗಳನ್ನು ಪರಿಚಯಿಸುತ್ತೇವೆ ಎನ್ನುವುದು ಮಕ್ಕಳ ಜ್ಞಾನ ವಿಕಸನವನ್ನು ನಿರ್ಧರಿಸುತ್ತದೆ. ಯಾವ ಚರಿತ್ರೆಯನ್ನು ಮಕ್ಕಳಿಗೆ ಬೋಧಿಸಿದರೆ ಅವರು ಭಾರತದ ಬಹುತ್ವ-ಸಮನ್ವಯ ಸಂಸ್ಕೃತಿಯ ಬೌದ್ಧಿಕ ಕಾಲಾಳುಗಳಾಗಿ ಮುನ್ನಡೆಯಲು ಸಾಧ್ಯ ಎನ್ನುವ ಪ್ರಶ್ನೆ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮುಖ್ಯವಾಗಿ ಕಾಡಬೇಕಿದೆ.
ಸಂಸ್ಕೃತಿ ಅಥವಾ ಧರ್ಮ ಎನ್ನುವ ವಿಶಾಲಾರ್ಥದ ಪದಗಳನ್ನು ನಿರ್ದಿಷ್ಟ ಸಾಮುದಾಯಿಕ ಬೇಲಿಗಳಲ್ಲಿ ಬಂಧಿಸುವ ಮೂಲಕ ಮಕ್ಕಳ ಜ್ಞಾನ ವಿಕಸನದ ಹಾದಿಗಳಲ್ಲಿ ಸಾಕಷ್ಟು ಕಂದರಗಳನ್ನು ಸೃಷ್ಟಿಸಲಾಗುತ್ತಿದೆ. ಮನುಷ್ಯನ ಸಾಮಾಜಿಕ ಬದುಕಿನಲ್ಲಿ ಸಂಸ್ಕೃತಿಯ ಪಾತ್ರವನ್ನು ನಿರ್ವಚಿಸುವಾಗ, ಪ್ರತಿ ವ್ಯಕ್ತಿಯ ಆರ್ಥಿಕ ಸ್ಥಾನಮಾನ, ಜೀವನಮಟ್ಟ ಮತ್ತು ಜೀವನಶೈಲಿ, ಆರೋಗ್ಯಕರ ವಾತಾವರಣ, ಕೂಡಿಬಾಳುವಂತಹ ಸಾಮರಸ್ಯದ ನೆರೆಹೊರೆ ಹಾಗೂ ಪರಸ್ಪರ ಹೆಗಲುಕೊಟ್ಟು ಕೈಜೋಡಿಸುವ ಸೋದರತ್ವದ ಭಾವ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ. ಇಂತಹ ಒಂದು ಸಮಾಜದ ನಿರ್ಮಾಣಕ್ಕೆ ಪೂರಕವಾದ ಚರಿತ್ರೆಯನ್ನೇ ಶಾಲಾ ಪಠ್ಯಕ್ರಮದಲ್ಲೂ ಅಳವಡಿಸಬೇಕಾಗುತ್ತದೆ. ಹಾಗಾಗಿಯೇ ಚರಿತ್ರೆಯನ್ನು ಬೋಧಿಸುವ ಸಂದರ್ಭದಲ್ಲೂ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉದ್ಧೀಪನಗೊಳಿಸುವಂತಹ ಚಾರಿತ್ರಿಕ ಘಟನೆಗಳನ್ನು, ವ್ಯಕ್ತಿಗಳನ್ನು ಮತ್ತು ಐತಿಹಾಸಿಕ ಮಾಹಿತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾಗುತ್ತದೆ. ಇದರೊಟ್ಟಿಗೆ ಆಧುನಿಕ ತಂತ್ರಜ್ಞಾನ ಯುಗದ ಮುನ್ನಡೆಗೆ ಪೂರಕವಾಗಿ, ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆಗಳನ್ನು, ಪಿತೃಪ್ರಧಾನತೆಯ ಚಿಂತನೆಗಳನ್ನು, ಮಹಿಳಾ ತಾರತಮ್ಯದ ಧೋರಣೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸುಧಾರಣೆಗೆ ಮುಂದಾಗಬೇಕಿದೆ.
ಹಿಂದಿನ ಸರ್ಕಾರದ ಪಠ್ಯಕ್ರಮ ಪರಿಷ್ಕರಣೆಯನ್ನು ಪುನರ್ ಪರಿಶೀಲಿಸುವ ಸಂದರ್ಭದಲ್ಲಿ ಹೊಸ ಸರ್ಕಾರ ಉನ್ನತ ಮಟ್ಟದ ವಿದ್ವಾಂಸರ-ತಜ್ಞರ ಸಮಿತಿಯೊಂದನ್ನು ನೇಮಿಸಿ, ಎಡ-ಬಲ-ಮಧ್ಯ ಪಂಥೀಯ ಭಾವನೆಗಳಿಂದ ಹೊರತಾದ ಒಂದು ಸಮಾಜಮುಖೀ ಶಾಲಾ ಪಠ್ಯಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಮಕ್ಕಳ ಬುದ್ಧಿ ವಿಕಾಸಕ್ಕೆ, ಜ್ಞಾನ ವಿಕಾಸಕ್ಕೆ ಪೂರಕವಾಗುವಂತಹ ಪಠ್ಯಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ತನ್ಮೂಲಕ ಉದಾತ್ತ ಚಿಂತನೆಗಳಿಂದ ಕೂಡಿದ, ಸಾಮರಸ್ಯ ಹಾಗೂ ಸಮನ್ವಯತೆಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವಂತಹ ಒಂದು ಯುವ ಪೀಳಿಗೆಗೆ ಬುನಾದಿ ಹಾಕುವುದು ಸಾಧ್ಯವಾಗುತ್ತದೆ. ಇದು ರಾಜಕೀಯ ಲೆಕ್ಕಾಚಾರಗಳೊಂದಿಗೆ ಅವಸರದಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳೂ ಆಗಿರಬೇಕಿಲ್ಲ. ಕರ್ನಾಟಕದ ಬೌದ್ಧಿಕ ವಿದ್ವತ್ ವಲಯ ವಿಶಾಲವಾಗಿದೆ. ಶತಮಾನಗಳ ಇತಿಹಾಸದ ತಳಹದಿಯ ಮೇಲೆ ನಿಂತಿರುವ ಸಾಹಿತ್ಯಕ-ಸಾಂಸ್ಕೃತಿಕ ವಲಯ ಹಾಗೂ ಚಿಂತನಾ ವಾಹಿನಿ ಇಂದಿಗೂ ಸಮೃದ್ಧವಾಗಿದೆ. ಈ ಬೌದ್ಧಿಕ ವಾಹಿನಿಗಳನ್ನು ಬಳಸಿಕೊಳ್ಳುವ ಜಾಣ್ಮೆ, ಸಂಯಮ ಹಾಗೂ ಬದ್ಧತೆ ಸರ್ಕಾರಗಳಲ್ಲಿ ಇರಬೇಕಾಗುತ್ತದೆ. ರಾಜ್ಯದ ಸಾಹಿತ್ಯ-ಕಲೆ-ರಂಗಭೂಮಿ ಹಾಗೂ ಭಾಷಾ ವಲಯಗಳಲ್ಲಿ ರಾಜ್ಯದ ವಿದ್ವತ್ ವಲಯದ ಶ್ರೀಮಂತಿಕೆಯನ್ನು ಬಳಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕಿದೆ.
ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ಮುನ್ನ ರಾಜ್ಯದ ಸಾಂಸ್ಕೃತಿಕ ವಲಯದಲ್ಲಿ ಬೇರೂರಿರುವ ಮೇಲರಿಮೆಯ ಬೇರುಗಳನ್ನು ಕಿತ್ತೊಗೆಯುವುದು ನಮ್ಮ ಜವಾಬ್ದಾರಿಯಾಗಿದೆ. ಅಕಾಡೆಮಿಗಳು, ಪರಿಷತ್ತುಗಳು, ಪ್ರಾಧಿಕಾರಗಳು ಮತ್ತು ರಂಗಾಯಣದಂತಹ ರಂಗಭೂಮಿಯ ಕೇಂದ್ರಗಳನ್ನು ಅಧಿಕಾರ ರಾಜಕಾರಣದಿಂದ ದೂರ ಇರಿಸುವ ಮೂಲಕ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಪಾಡುವುದು ಇವತ್ತಿನ ತುರ್ತು. ಆಳುವವರಿಗೆ ಪರಾಕು ಹೇಳುವವರಿಗಿಂತಲೂ, ಈ ನಾಡಿನ ಶ್ರೀಮಂತ ಪರಂಪರೆಯನ್ನು ಕಾಪಾಡಿಕೊಂಡು ಮುನ್ನಡೆಸುವಂತಹ ವಿದ್ವತ್ ವಲಯವನ್ನು ಗುರುತಿಸಿ, ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆಯೇ ಸ್ವತಂತ್ರವಾಗಿ ನಿರ್ವಹಣೆ ಮಾಡುವ ವಾತಾವರಣವನ್ನು ಸೃಷ್ಟಿಸುವುದು ಹೊಸ ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ. ಈ ನೆಲೆಯಲ್ಲಿ ನಾವು ಸಾಧಿಸಲು ಸಾಧ್ಯವಾಗುವ ಸೌಹಾರ್ದತೆ ಮತ್ತು ಸೋದರತ್ವದ ಭಾವನೆಗಳೇ ಶಾಲಾ ಕಾಲೇಜುಗಳಿಂದ ವಿದ್ಯಾರ್ಜನೆಯನ್ನು ಪೂರೈಸಿ ಹೊರಬರುವ ಯುವ ಪೀಳಿಗೆಯನ್ನೂ ಪ್ರಭಾವಿಸುತ್ತವೆ ಎಂಬ ವಾಸ್ತವವನ್ನು ಸರ್ಕಾರಗಳು, ಸಮಾಜ ಅರ್ಥಮಾಡಿಕೊಳ್ಳಬೇಕಿದೆ.
ಇಂತಹ ಒಂದು ಸೌಹಾರ್ದ ವಾತಾವರಣವನ್ನು ನಿರ್ಮಿಸದೆ ಹೋದರೆ ಇಂದು ನಮಗೆ ಎದುರಾಗುತ್ತಿರುವ ಅಸ್ಪೃಶ್ಯತೆ, ಅತ್ಯಾಚಾರ, ಮಹಿಳಾ ದೌರ್ಜನ್ಯ, ಸ್ತ್ರೀ ದ್ವೇಷ, ಜಾತಿ ವೈಷಮ್ಯ ಮತ್ತು ಮತೀಯ ವೈಷಮ್ಯದ ಬೇರುಗಳನ್ನು ಸಡಿಲಿಸಿ ನಿರ್ಮೂಲ ಮಾಡಲು ಸಾಧ್ಯವಾಗುವುದಿಲ್ಲ. ಈ ಯಾವುದೇ ಧೋರಣೆಗಳೂ ಸರ್ಕಾರದ ಬದಲಾವಣೆಯನ್ನು ಅವಲಂಬಿಸುವುದಿಲ್ಲ. ಬದಲಾಗಿ ಸರ್ಕಾರಗಳು ತಮ್ಮ ಆಡಳಿತ ನೀತಿಗಳ ಮೂಲಕ, ಶೈಕ್ಷಣಿಕ ಸುಧಾರಣೆಗಳ ಮೂಲಕ, ಸಾಂಸ್ಕೃತಿಕ ಪರಿಷ್ಕರಣೆಯ ಮೂಲಕ ಕೈಗೊಳ್ಳುವ ಸಕಾರಾತ್ಮಕ-ಪ್ರಜಾಸತ್ತಾತ್ಮಕ-ಜನಪರ ಆಡಳಿತ ಕ್ರಮಗಳನ್ನು ಅವಲಂಬಿಸುತ್ತವೆ. ಇಂದಿನ ಮಕ್ಕಳಿಗೆ ಅಥವಾ ಯುವ ಪೀಳಿಗೆಗೂ ಸಹ ಸಮಕಾಲೀನ ಸಮಾಜದಿಂದ ತೋರಿಸಬಹುದಾದ ಆದರ್ಶ ವ್ಯಕ್ತಿತ್ವಗಳೇ ನಮ್ಮ ನಡುವೆ ಇಲ್ಲದಿರುವುದರಿಂದ, ಆದರ್ಶ ಸಮಾಜದ ಉದಾತ್ತ ಗುಣಗಳನ್ನು ರೂಢಿಸಿಕೊಳ್ಳಲು ಮಕ್ಕಳಿಗೆ ಇತಿಹಾಸದಿಂದ ಹೆಕ್ಕಿತೆಗೆದ ವ್ಯಕ್ತಿಗಳನ್ನೇ ತೋರಿಸಬೇಕಾಗಿದೆ.
ಅಧಿಕಾರ ವಹಿಸಿಕೊಂಡಿರುವ ಹೊಸ ಸರ್ಕಾರ ತನ್ನ ಗ್ಯಾರಂಟಿಗಳನ್ನು ಪೂರೈಸುವುದರೊಂದಿಗೇ ಈ ಸಮಾಜ ಸುಧಾರಕ ಅಂಶಗಳನ್ನು ಸಹ ತನ್ನ ಆಡಳಿತ ನೀತಿಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ರಾಜ್ಯವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೌದ್ಧಿಕ-ನೈತಿಕ ಹಾಗೂ ಭೌತಿಕ ನೆರವು ನೀಡುವ ನಾಗರಿಕ ಸಮಾಜ ರಾಜ್ಯದಲ್ಲಿ ಇನ್ನೂ ಚಲನಶೀಲವಾಗಿದೆ. ಆಡಳಿತ ನಿರ್ವಹಣೆಯಲ್ಲಿ ನಾಗರಿಕ ಸಮಾಜವನ್ನು ಒಳಗೊಳ್ಳುವ ಮೂಲಕ, ಈ ಬೌದ್ಧಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಜಾಣ್ಮೆ, ವ್ಯವಧಾನ ಹಾಗೂ ಸಂಯಮ ಸರ್ಕಾರಕ್ಕೆ ಇರಬೇಕಾಗುತ್ತದೆ. ಇತಿಹಾಸದಿಂದ ಪಾಠ ಕಲಿತಿರುವುದೇ ಆದರೆ ಈ ಸಂಯಮವನ್ನೂ ರೂಢಿಸಿಕೊಂಡಿರಬೇಕು. ಇದು ಹೊಸ ಸರ್ಕಾರದ ಮುಂದಿರುವ ಪ್ರಥಮ ಆದ್ಯತೆಯಾಗಲಿ ಎಂದೇ ಆಶಿಸೋಣ.
( ಮುಂದುವರೆಯುತ್ತದೆ )