ಕಳೆದ ಎರಡು ದಿನಗಳಿಂದ ದೆಹಲಿಯಾತ್ರೆಯಲ್ಲಿದ್ದ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವರು, ತಮ್ಮ ವರಿಷ್ಠರನ್ನ ಭೇಟಿ ಮಾಡಿ ಬಂದಿದ್ದಾರೆ. ಇದು ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಿಎಂಗೆ ಹೊಸ ಹುರುಪನ್ನ ತರಿಸಿದೆ. ತಾನು ಅಂದುಕೊಂಡು ಹೋಗಿದ್ದ ಎಲ್ಲಾ ಕೆಲಸಗಳು ನಿರೀಕ್ಷೆಯಂತೆಯೇ ಆಗಿವೆ ಎನ್ನಲಾಗುತ್ತಿದೆ.
ಸತತ ನಾಲ್ಕನೇ ಬಾರಿಗೆ ದೆಹಲಿ ದಂಡಯಾತ್ರೆ ಮುಗಿಸಿ ಸಿಎಂ ಬಸವರಾಜ ಬೊಮ್ಮಾಯಿ ವಾಪಸ್ ಆಗಿದ್ದಾರೆ.
ಕಳೆದ 7ನೇ ತಾರೀಖಿನಂದು ಸಿಎಂ ರಾಷ್ಟ್ರ ರಾಜಧಾನಿಗೆ ತೆರಳಿದರು. ಬಳಿಕ ದೆಹಲಿಯಲ್ಲಿ ಎರಡು ದಿನಗಳ ಕಾಲ ಕೇಂದ್ರದ ಹಲವು ಸಚಿವರನ್ನ ಭೇಟಿ ಮಾಡಿ ಈಗ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಇನ್ನು ಸಿಎಂ ಬೊಮ್ಮಾಯಿ ಕಳೆದ 40 ದಿನಗಳಲ್ಲಿ ನಾಲ್ಕು ಬಾರಿ ಹೈ ಕಮಾಂಡ್ ನಾಯಕರನ್ನ ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ ಹೈಕಮಾಂಡ್ ನಾಯಕರ ಜೊತೆ ಸಿಎಂ ನಿಕಟ ಸಂಪರ್ಕ ಸಾಧಿಸಿದ್ದಾರೆ.
ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಬಸವರಾಜ್ ಬೊಮ್ಮಾಯಿ, ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಬಂದಿದ್ದಾರೆ. ವಿಶೇಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರ ಜೊತೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಹಲವು ಕೇಂದ್ರ ಸಚಿವರನ್ನೂ ಭೇಟಿಯಾಗಿ ವಾಪಸ್ ಆಗಿದ್ದಾರೆ.
ಕೇಂದ್ರ ಸಾರಿಗೆ ಸಚಿವರು, ಹಣಕಾಸು ಸಚಿವರು, ಕೃಷಿ ಸಚಿವರು, ವಿವಿಧ ಇಲಾಖೆ ಸಚಿವರು, ಅಧಿಕಾರಿಗಳನ್ನ ಭೇಟಿಯಾಗಿ ಸಿಎಂ ಚರ್ಚೆ ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರವನ್ನೂ ಹೈಕಮಾಂಡ್ ನಾಯಕರ ಮುಂದೆ ಸಿಎಂ ಇಟ್ಟಿದ್ದಾರೆ. ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿರುವುದಾಗಿ ತಿಳಿದು ಬಂದಿದೆ.
ಹೈಕಮಾಂಡ್ ನಾಯಕರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಕಟ ಸಂಪರ್ಕ ಬೆಳೆಸಿದ್ದಾರೆ. ದೆಹಲಿ ನಾಯಕರ ಜೊತೆ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ಅಧಿವೇಶನದಲ್ಲೂ ಭಾಗಿಯಾಗಿದ್ದಾರೆ. ಈ ಹಿನ್ನೆಲೆ ಬೊಮ್ಮಾಯಿಗೆ ಹೈಕಮಾಂಡ್ ನಾಯಕರು ಕೆಲವು ಸಲಹೆಗಳು, ಸೂಚನೆಗಳನ್ನೂ ಕೊಟ್ಟಿದ್ದಾರೆ. ಇದೇ ವೇಳೆ ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳ ಭರ್ತಿಗೆ ಹೈಕಮಾಂಡ್ ನಾಯಕರಿಗೆ ಸಿಎಂ ಬೊಮ್ಮಾಯಿ ಅವಕಾಶ ಕೇಳಿದ್ದು, ಇದಕ್ಕೆ ಹೈಕಮಾಂಡ್ ಓಕೆ ಎಂದಿದೆ.
ಜತೆಗೆ ಸಂಪುಟ ವಿಸ್ತರಣೆಗೆ ಕೆಲವೊಂದು ಅಡೆತಡೆಗಳು ಎದುರಾಗಿದೆ. ಸದ್ಯ ನಾಲ್ಕು ಸ್ಥಾನಗಳಿಗೆ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಸಿ.ಪಿ ಯೋಗೀಶ್ವರ್, ರಾಜೂಗೌಡ, ಎಂ.ಪಿ ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಎಂ.ಪಿ ರೇಣುಕಾಚಾರ್ಯ ಆಕಾಂಕ್ಷಿಯಾಗಿದ್ದಾರೆ. ಜತೆಗೆ ಸಿಎಂ ಸ್ಥಾನ ಕಳೆದಿಕೊಂಡಿರುವ ಬಿಎಸ್ ಯಡಿಯೂರಪ್ಪ ಕೂಡ ತಮ್ಮ ಪುತ್ರ ಬಿವೈ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟದಲ್ಲಿ ಸಿಪಿ ಯೋಗೀಶ್ವರ್ಗೆ ಸಚಿವ ಸ್ಥಾನ ನೀಡಬಾರದು. ಅರವಿಂದ್ ಬೆಲ್ಲದ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡಬಾರದು ಎಂಬುವುದು ಮಾಜಿ ಸಿಎಂ ಬಿಎಸ್ವೈ ಅವರ ಪ್ರಮುಖ ಬೇಡಿಕೆಯಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ಗೊಂದಲ ಮುಂದುವರಿದಿದೆ.
ಇನ್ನೊಂದೆಡೆ ಬಿವೈ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ವರಿಷ್ಠರಲ್ಲೂ ಒಮ್ಮತದ ಅಭಿಪ್ರಾಯವಿಲ್ಲ. ಪಕ್ಷದಲ್ಲೇ ಕೆಲವು ಮುಖಂಡರು ಈ ವಿಚಾರವಾಗಿ ಆಕ್ಷೇಪ ಎತ್ತಿದ್ದಾರೆ. ಸಿಎಂ ಬೊಮ್ಮಾಯಿ ಈ ವಿಚಾರವನ್ನು ವರಿಷ್ಠರ ಜೊತೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲೂ ಸೂಕ್ತ ರೀತಿಯ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ.
ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ( ದಾಬಸ್ ಪೇಟೆಯಿಂದ- ಮೈಸೂರು ರಸ್ತೆವರೆಗೆ) ಎರಡ್ಮೂರು ವರ್ಷಗಳಿಂದ ಬಾಕಿಯಿದೆ. ಅದನ್ನು ಮುಂದುವರಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.
ಬೆಂಗಳೂರು ಮತ್ತು ಕೋಲಾರದ ನಡುವೆ ಹಾರ್ಡ್ ವೇರ್ ಪಾರ್ಕ್ , ನಗರ ಉಪ ರೈಲ್ವೆ ಯೋಜನೆ ಸೇರಿದಂತೆ, ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆಯೂ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಲಾಗಿದೆ. ತುಮಕೂರು- ದಾವಣಗೆರೆ, ಹುಬ್ಬಳ್ಳಿ- ಬೆಳಗಾವಿ, ಬೀದರ್, ಕಲಬುರಗಿ ಎಲ್ಲ ಕಡೆ ಆದಷ್ಟು ಬೇಗ ರೈಲು ಯೋಜನೆಗಳನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆದಿದೆಯಂತೆ.