ದೇಶದಲ್ಲಿ ಕರೋನಾ ಪ್ರಕರಣ ಏರುತ್ತಿದ್ದಂತೆ ಮಹಿಳಾ ದೌರ್ಜನ್ಯದ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲೂ ಏರಿಕೆ ಕಂಡಿತ್ತು. ಸರ್ಕಾರಿ, ಅರೆ ಸರ್ಕಾರಿ, NGO ಪ್ರಾಯೋಜಿತ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ.
ಅದರಲ್ಲೂ ಲಾಕ್ಡೌನ್ನಲ್ಲಿ ಬಲವಂತದ ಸಾಮೀಪ್ಯದಿಂದಾಗಿ ಕೌಟುಂಬಿಕ ದೌರ್ಜನ್ಯವು ಉತ್ತುಂಗಕ್ಕೇರಿತ್ತು. ಬೆಂಗಳೂರು ಒಂದರಲ್ಲೇ ಕೌಟುಂಬಿಕ ದೌರ್ಜನ್ಯದ ಕರೆಗಳು ದಿನಕ್ಕೆ 10 ರಿಂದ ದಿನಕ್ಕೆ 25 ಕ್ಕೆ ಏರಿಕೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಇದು ಉಳಿದ ಸಾಮಾನ್ಯ ದಿನಗಳಿಗೆ ಹೋಲಿಸಿದರೆ 150% ಹೆಚ್ಚಳ.
ಆದರೆ ಸರ್ಕಾರವು ಈಗ ತಾನು ನಡೆಸುತ್ತಿರುವ ‘ಸಾಂತ್ವನ ಕೇಂದ್ರಗಳನ್ನು ಮುಚ್ಚಲು ಹೊರಟಿದ್ದು ಈ ಬಗ್ಗೆ ಸುತ್ತೋಲೆಯನ್ನೂ ಹೊರಡಿಸಿದೆ. ಸರ್ಕಾರದ ಈ ಕ್ರಮಕ್ಕೆ ರಾಜಾದ್ಯಂತ ವಿರೋಧ ವ್ಯಕ್ತವವಾಗಿದ್ದು ಸೆಪ್ಟೆಂಬರ್ 6 ರಂದು, ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಎನ್ಜಿಒ ಕೆಲಸಗಾರರು, ಸಂಬಂಧಪಟ್ಟ ಮಹಿಳೆಯರು ಮತ್ತು ಕಾರ್ಯಕರ್ತರು ಸೇರಿದಂತೆ ಸುಮಾರು 100 ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ, ತಾಲ್ಲೂಕು ಮತ್ತು ಪಟ್ಟಣಗಳು ಸೇರಿದಂತೆ 194 ಸ್ಥಳಗಳಲ್ಲಿ ಸಾಂತ್ವನ ಕೇಂದ್ರಗಳು ಇವೆ, ಮತ್ತು ಹಿಂಸಾತ್ಮಕ ಅಥವಾ ದೌರ್ಜನ್ಯಕಾರಿ ಪರಿಸ್ಥಿತಿಯಿಂದ ಬಿಡುಗಡೆ ಅಗತ್ಯವಿರುವ ಮಹಿಳೆಯರಿಗೆ ಸಲಹಾ ಸೇವೆಗಳು ಮತ್ತು ಬೆಂಬಲವನ್ನು ನೀಡುವ ಮೂಲಕ ಮಹಿಳೆಯರಿಗೆ ಮೊದಲ ಸಾಂತ್ವನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. 2001 ರಲ್ಲಿ ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಯಿತು ಮತ್ತು ಆ ಸಮಯದಲ್ಲಿ, ಸಾಮಾಜಿಕ ಕಾರ್ಯಕರ್ತರಿಗೆ ಕೇವಲ 2,000 ರೂ.ಗಳನ್ನು ಸಂಬಳವಾಗಿ ನೀಡಲಾಗುತ್ತಿತ್ತು. ಈ ಮೊತ್ತವು ಈಗ ಹೆಚ್ಚಾಗಿದೆ. ಈ ಕೇಂದ್ರಗಳ ಸಾಧಾರಣ ವಾರ್ಷಿಕ ಬಜೆಟ್ 6 ಲಕ್ಷ ರೂ.
ಈ ಕೇಂದ್ರಗಳು ‘ಸ್ವಾಧಾರ್’ ಕೇಂದ್ರಗಳಿಗಿಂತ ಭಿನ್ನವಾಗಿದ್ದು ಇವುಗಳನ್ನು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಎನ್ಜಿಒಗಳು ನಡೆಸುತ್ತಿವೆ. ಸ್ವಾಧಾರ್ ಕೇಂದ್ರವು ಮಹಿಳೆಯರಿಗೆ ಆರು ತಿಂಗಳಿನಿಂದ ಆರು ವರ್ಷಗಳವರೆಗೆ ಕೇಂದ್ರದಲ್ಲಿ ಇರಲು ಅವಕಾಶ ನೀಡುತ್ತವೆ. ಉದ್ಯೋಗ-ಆಧಾರಿತ ವೃತ್ತಿಪರ ತರಬೇತಿಯನ್ನು ಸಹ ನೀಡುತ್ತವೆ. ಇವು ಮಹಿಳೆಯರಿಗೆ ಬಿಕ್ಕಟ್ಟಿನ ಸಮಯದಲ್ಲಿ ಸಲಹೆ ನೀಡುವ ಕೇಂದ್ರವಾಗಿರುವ ಸಾಂತ್ವನ ಕೇಂದ್ರಗಳಿಂದ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ.
ಕರ್ನಾಟಕ ಸರ್ಕಾರವು ಹಣದ ಕೊರತೆಯಿಂದಾಗಿ ರಾಜ್ಯದ 187 ಸಂತ್ವನ ಕೇಂದ್ರಗಳನ್ನು ಮುಚ್ಚುವ ಸಾಧ್ಯತೆಯಿದೆ ಎಂದು ಅಕ್ಟೋಬರ್ 2020 ರಲ್ಲಿ TNIE ವರದಿ ಮಾಡಿತ್ತು. ಈ ವರ್ಷ ಏಪ್ರಿಲ್ನಲ್ಲಿ ಸರ್ಕಾರವು 71 ಸಾಂತ್ವನ ಕೇಂದ್ರಗಳನ್ನು ಮುಚ್ಚುವ ಸುತ್ತೋಲೆಯನ್ನು ಹೊರಡಿಸಿದೆ, ಅವುಗಳಲ್ಲಿ ಹೆಚ್ಚಿನವು ಬೀದರ್, ಬೆಳಗಾವಿ, ಹಾಸನ ಮತ್ತು ಕೋಲಾರದಂತಹ ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವ ಸ್ಥಳಗಳಲ್ಲಿವೆ. ಬೆಂಗಳೂರು ನಗರದಲ್ಲಿರುವ ಹಲವಾರು ಕೇಂದ್ರಗಳನ್ನೂ ಮುಚ್ಚಲು ಆದೇಶಿಸಲಾಗಿದೆ. ಇದರಿಂದಾಗಿ ಸಂತ್ರಸ್ತ ಮಹಿಳೆಯರು ಹಾಗೂ ಸರ್ಕಾರೇತರ ಸಂಸ್ಥೆಗಳು ಮತ್ತು ಈ ಕೇಂದ್ರಗಳಲ್ಲಿ ನೇಮಕಗೊಂಡಿರುವ 300 ಸಿಬ್ಬಂದಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಆದೇಶವನ್ನು ಹಿಂಪಡೆಯುವಂತೆ ಈ ವರ್ಷದ ಮೇ ತಿಂಗಳಿನಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಧನ ಸಹಾಯದೊಂದಿಗೆ ನಡೆಯುವ ‘ಸಖಿ’ ಯೋಜನೆಯು ‘ಸಾಂತ್ವನ’ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಸಾಂತ್ವನ ಕೇಂದ್ರಗಳನ್ನು ಮುಚ್ಚುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಿದೆ ಸರ್ಕಾರ. ಆದರೆ ಸಖಿಯು ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದ್ದು, ಗ್ರಾಮಗಳಲ್ಲಿನ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳುವುದು ಕಷ್ಟ.
ನಿರ್ಭಯಾ ನಿಧಿಯನ್ನು ಬಳಸಿಕೊಂಡು ಸ್ಥಾಪಿಸಲಾದ ಸಖಿ ಕೇಂದ್ರಗಳು ಜಿಲ್ಲಾ ಆಸ್ಪತ್ರೆಗಳಲ್ಲಿವೆ ಮತ್ತು ದೈಹಿಕ ಹಿಂಸೆ ಮತ್ತು ಅತ್ಯಾಚಾರಗಳಂತಹ ಪ್ರಕರಣಗಳಲ್ಲಿ ಮಹಿಳೆಯರ ಸಹಾಯಕ್ಕೆ ನಿಲ್ಲುತ್ತದೆ. ಇವು ವೈದ್ಯಕೀಯ, ಕಾನೂನು, ಕ್ರಿಮಿನಲ್ ಪ್ರಕರಣಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. “ಸಾಂತ್ವನ ಕೇಂದ್ರಗಳು ಪೋಷಕರಿಗೆ, ದಂಪತಿಗಳಿಗೆ ಸಲಹೆ ನೀಡುವ ಮೂಲಕ ಮುರಿದ ಕುಟುಂಬ ಸಂಬಂಧಗಳನ್ನು ಸರಿಪಡಿಸಲು, ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತದೆ. ಈ ಮಹತ್ವದ ಕೆಲಸವನ್ನು ಯಾರು ವಹಿಸಿಕೊಳ್ಳುತ್ತಾರೆ?” ಎಂದು ಕೇಳುತ್ತಾರೆ ಹೋರಾಟದ ಮುಂದಾಳತ್ವ ವಹಿಸಿರುವ ಧಾರವಾಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಮಾನವ ಹಕ್ಕುಗಳ ಸಾಧನಾ ಸೊಸೈಟಿಯ ಸಂಸ್ಥಾಪಕ ಇಸಾಬೆಲ್ಲಾ ಕ್ಸೇವಿಯರ್.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಅನುರಾಧಾ ಸೆಪ್ಟೆಂಬರ್ 6 ರ ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದರು. “ಮೇಡಂ, ಸರ್ಕಾರವು ನಮ್ಮ ಬೇಡಿಕೆಯನ್ನು ಹೇಗೆ ತಿರಸ್ಕರಿಸುತ್ತಿದೆ? ಮತ್ತು ‘ಸಖಿ’ಯಂತಹುದೇ ಯೋಜನೆ ಎಂದು ಹೇಳಿ 4 ಕೋಟಿ ವ್ಯರ್ಥವಾಗುತ್ತಿದೆ ಎಂದು ಹೇಗೆ ಹೇಳುತ್ತದೆ?” ಎಂದು ಪ್ರತಿಭಟನಾಕಾರರು ಅವರನ್ನು ಕೇಳಿದರು.
“ಈ ಕೇಂದ್ರದ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಆಯುಕ್ತರು ಪತ್ರ ಬರೆದರೆ ಅದನ್ನು ಪುನರುಜ್ಜೀವನಗೊಳಿಸಲಾಗುವುದು” ಎಂದು ಅವರು ಪ್ರತಿಭಟನಾಕಾರರಿಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಸುತ್ತೋಲೆ ಬಂದ ತಕ್ಷಣ ಆಯುಕ್ತರು ಕೇಂದ್ರವನ್ನು ಮುಚ್ಚುವಂತೆ ಹೇಳಿದ್ದಾರೆ ಎಂದು ಕಾರ್ಮಿಕರು ದೂರು ಸಲ್ಲಿಸಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ ಮಾತನಾಡಿದ ಅನುರಾಧಾ ಅವರು ಹಣಕಾಸು ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗಿರುವ ಕಾರಣ ಆಯುಕ್ತರು ಮುಚ್ಚಲು ಆದೇಶಿಸಿರಬಹುದು. ಈ ಬಗ್ಗೆ ಇಲಾಖೆಯ ಕಾರ್ಯದರ್ಶಿ ಮತ್ತು ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದ್ದಾರೆ.