ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೀಗ ರಾಜ್ಯದ ಮುಂದಿನ ಸಿಎಂ ಯಾರು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸಿಎಂ ಪಟ್ಟಾಕ್ಕಾಗಿ ರಾಜ್ಯದ ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಾಯಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಬ್ರಾಹ್ಮಣ ಮತ್ತು ದಲಿತ ಸಮುದಾಯದ ನಾಯಕರಿಗೂ ಸಿಎಂ ಪಟ್ಟ ನೀಡಬಹುದು ಎಂಬ ಮಾತುಗಳು ಜೋರಾಗಿವೆ.
ಸಿಎಂ ರೇಸ್ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ್ ಬೆಲ್ಲದ್, ಡಿಸಿಎಂ ಅಶ್ವಥ್ ನಾರಾಯಣ್, ಸಿ.ಟಿ ರವಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿವೆ. ಹೀಗಿರುವಾಗಲೇ ಬಿಜೆಪಿ ಹೈಕಮಾಂಡ್ ಅಚ್ಚರಿ ಅಭ್ಯರ್ಥಿಯನ್ನು ಸಿಎಂ ಮಾಡಲು ನಿರ್ಧಾರ ತೆಗೆದುಕೊಂಡಿದೆಯಂತೆ. ಸದ್ಯ ಸಿಎಂ ರೇಸ್ಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರ್ಪಡೆಯಾಗಿದ್ದಾರೆ.
ಮುಂದಿನ ಸಿಎಂ ಯಾರು ಎಂಬ ವಿಚಾರಕ್ಕೀಗ ಬಿಜೆಪಿಯಲ್ಲಿ ನಾಲ್ಕು ಬಣಗಳಾಗಿವೆ. ಇಂದು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವ ವೇಳೆ ಯಡಿಯೂರಪ್ಪ ತಮ್ಮ ರಾಜೀನಾಮೆಯನ್ನು ಘೋಷಣೆ ಮಾಡಿದ ಕೂಡಲೇ ಮುಂದಿನ ಸಿಎಂ ಕೂಡ ಲಿಂಗಾಯಿತ ಸಮುದಾಯದವರನ್ನೇ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಯಡಿಯೂರಪ್ಪ ಆಪ್ತರಾದ ಬಸವರಾಜ್ ಬೊಮ್ಮಾಯಿ ಹೆಸರು ಮುನ್ನಲೆಗೆ ಬಂದಿದೆ. ಹೀಗಿರುವಾಗಲೇ ವಿಧಾನಸಭಾ ಸ್ಪೀಕರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಹೈಕಮಾಂಡ್ ಬಳಿ ರಾಜಕೀಯ ಲಾಬಿಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಸಿ.ಟಿ ರವಿ ಮತ್ತು ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಸಿಎಂ ಪಟ್ಟಕ್ಕಾಗಿ ಬೆನ್ನ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.
ಹೀಗೆ ಸಿಎಂ ಗಾದಿಗಾಗಿ ಹಲವರು ಪೈಪೋಟಿ ನಡೆಸುತ್ತಿರುವ ಹೊತ್ತಲ್ಲೇ ಹೈಕಮಾಂಡ್ ದೇಶಾದ್ಯಂತ ಬಿಜೆಪಿ ಪಕ್ಷ ಸಂಘಟನೆ ಮಾಡುತ್ತಿರುವ ಪ್ರಭಾವಿ ನಾಯಕ ಬಿ.ಎಲ್.ಸಂತೋಷ್ ಹೆಸರು ಫೈನಲ್ ಮಾಡಿದೆಯಂತೆ. ಬಿ.ಎಲ್ ಸಂತೋಷ್ ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ಪ್ರಭಾವಿ ನಾಯಕರು. ಬಿಜೆಪಿ ಸಂಘಟನೆ ಜವಾಬ್ದಾರಿ ಹೊತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಬ್ರಾಹ್ಮಣ ಜಾತಿಗೆ ಸೇರಿದ ಇವರೇ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದಿದೆ ಎನ್ನುತ್ತಿವೆ ದೆಹಲಿ ಮೂಲಗಳು.
ಬಿ.ಎಲ್ ಸಂತೋಷ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಇವರೊಂದಿಗೆ ಲಿಂಗಾಯತ, ಒಕ್ಕಲಿಗ, ದಲಿತ ಮತ್ತು ಇತರೆ ಇನ್ನೆರಡು ಸಮುದಾಯಗಳಿಂದ ಒಟ್ಟು ಐವರು ನಾಯಕರಿಗೆ ಡಿಸಿಎಂ ಪೋಸ್ಟ್ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ vs ಬಿಜೆಪಿ ಟ್ವಿಟರ್ ವಾರ್ಗೆ ಕಾರಣವಾದ ಸಿಎಂ ರಾಜಿನಾಮೆ!
ಬಿಜೆಪಿಯಲ್ಲಿ ಬ್ರಾಹ್ಮಣರ ಹಿಡಿತ ಜೋರಾಗಿಯೇ ಇದೆ. ಕರ್ನಾಟಕದ ರಾಜ್ಯದ ಜನಸಂಖ್ಯೆಯ ಶೇ. 2ರಷ್ಟಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದರೂ ಇವರಿಗೆ ವಿರೋಧ ವ್ಯಕ್ತಪಡಿಸುವ ಯಾವುದೇ ನಾಯಕರು ಬಿಜೆಪಿಯಲ್ಲಿ ಇಲ್ಲ ಎನ್ನಲಾಗುತ್ತಿದೆ. ಬ್ರಾಹ್ಮಣರಿಗೆ ಇಲ್ಲದ ಜಾತಿ ಸಮೀಕರಣ ಲಿಂಗಾಯತ ಮತ್ತು ಒಕ್ಕಲಿಗೆ ಸೇರಿದಂತೆ ಇತರೆ ಸಮುದಾಯಗಳಿಗೆ ಬಿಜೆಪಿಯಲ್ಲಿ ಅನ್ವಯವಾಗಲಿದೆ. ಹೀಗಾಗಿ ಜಾತಿ ಸಮೀಕರಣದ ಆಧಾರದ ಮೇರೆಗೆ ಐವರು ಡಿಸಿಎಂ ನೇಮಕ ಮಾಡಲಿದ್ದಾರೆ.
ʼನಾನು ರಾಜ್ಯದಲ್ಲೇ ಇರುತ್ತೇನೆ, ರಾಜ್ಯಪಾಲ ಹುದ್ದೆ ಬೇಡʼ – ಬಿ.ಎಸ್ ಯಡಿಯೂರಪ್ಪ ಸ್ಪಷ್ಟ ನಿಲುವು!
ಲಿಂಗಾಯತ, ಒಕ್ಕಲಿಗ, ಒಬಿಸಿ, ಎಸ್ಸಿ ಮತ್ತು ಎಸ್ಟಿಗೆ ಸೇರಿದ ಪ್ರಮುಖ ನಾಯಕರುಗಳಿಗೆ ಡಿಸಿಎಂ ಪೋಸ್ಟ್ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಪ್ರಮುಖ ಸಮುದಾಯಗಳನ್ನು ಸಮಾಧಾನಪಡಿಸಲು ಇಂತಹುದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಉನ್ನತ ಮೂಲಗಳು ಹೇಳಿವೆ.
ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ, ಒಕ್ಕಲಿಗ ಸಮುದಾಯದ ಮಾಜಿ ಕೇಂದ್ರ ಸಚಿವ ಸದಾನಂದಗೌಡ, ಒಬಿಸಿ ಮರಾಠಾ ಸಮುದಾಯದ ರೂಪಾಲಿ ನಾಯಕ್, ನಾಯಕ ಸಮುದಾಯದ ಶ್ರೀರಾಮುಲುಗೆ ಡಿಸಿಎಂ ಪೋಸ್ಟ್ ಸಿಗಲಿದೆಯಂತೆ.