ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ ಎಸ್ ಯಡಿಯೂರಪ್ಪ ಅವರು, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯೆಂಬ ಹೆಮ್ಮರದ ಬೀಜವನ್ನು ಬಿತ್ತಿ ಅದನ್ನು ಪೋಷಿಸಿದವರು ಬಿ ಎಸ್ ವೈ.
1985ರ ಸಮಯದಲ್ಲಿ ಕರ್ನಾಟಕದಲ್ಲಿ ಇದ್ದಿದ್ದು ಕೇವಲ ಇಬ್ಬರೇ ಬಿಜೆಪಿ ಶಾಸಕರು. ಒಬ್ಬರು ಯಡಿಯೂರಪ್ಪ ಮತ್ತೊಬ್ಬರು ಕರಾವಳಿಯ ವಸಂತ ಬಂಗೇರ (Vasant Bangera). ಯಡಿಯೂರಪ್ಪನವರ ಹೋರಾಟದ ಆರಂಭಿಕ ಕ್ಷಣಗಳನ್ನು ಅರಿತಿರುವ ಬಂಗೇರ ಅವರು ‘ಪ್ರತಿಧ್ವನಿ’ಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರೊಂದಿಗಿನ ಸಂವಾದದ ಸಂಕ್ಷಿಪ್ತ ರೂಪ ಇಲ್ಲಿದೆ.
1985ರಲ್ಲಿ ಕರ್ನಾಟಕದಲ್ಲಿ ಕೇವಲ ಇಬ್ಬರೇ ಬಿಜೆಪಿ ಶಾಸಕರಿದ್ದೆವು. ಆಗಲೇ ಯಡಿಯೂರಪ್ಪ ಅವರಲ್ಲಿ ಹೋರಾಟವೆಂಬುದು ರಕ್ತಗತವಾಗಿತ್ತು. ಅವರು ಹುಟ್ಟು ಹೋರಾಟಗಾರ, ಛಲವಾದಿ. ಸದನದಲ್ಲಿ ಪ್ರತೀ ವಿಚಾರಕ್ಕೂ ಹೋರಾಟ ನಡೆಸುತ್ತಿದ್ದರು. ಚರ್ಚೆ ನಡೆಸುತ್ತಿದ್ದರು.
ಆಗ ನಾವಿಬ್ಬರೇ ಶಾಸಕರಾಗಿದ್ದೆವು. ನಾವು ಅಧಿಕೃತ ವಿರೋಧ ಪಕ್ಷವಾಗಿರಲಿಲ್ಲ. ಆದರೆ, ಅಧಿಕೃತ ವಿರೋಧ ಪಕ್ಷಕ್ಕಿಂತ ಹೆಚ್ಚಿನ ವಿರೋಧ ಯಡಿಯೂರಪ್ಪನವರು ಮಾಡುತ್ತಿದ್ದರು. ಸರ್ಕಾರದಿಂದ ಸೂಕ್ತ ಉತ್ತರ ಸಿಗದಿದ್ದಲ್ಲಿ, ಸದನದ ಬಾವಿಗಿಳಿದು ಪ್ರತಿಭಟಿಸುತ್ತಿದ್ದರು.
ನೀವು ಯಾಕೆ ಪ್ರತೀ ವಿಚಾರದಲ್ಲಿಯೂ ಹೀಗೆ ಹೊರಾಟ ಮಾಡುತ್ತೀರಿ? ಸುಮ್ಮನಿರಬಹುದಲ್ಲವೇ? ಎಂದು ನಾನು ಅವರಿಗೆ ಹೇಳಿದ್ದೆ, ಅದಕ್ಕೆ ಅವರು “ಇಲ್ಲ ಬಂಗೇರ ಹೋರಾಟ ಮಾಡಬೇಕು. ಇಲ್ಲದಿದ್ರೆ ಗೆಲ್ಲೋದಿಕ್ಕೆ ಆಗುವುದಿಲ್ಲ,” ಎಂದು ಉತ್ತರ ಕೊಟ್ಟಿದ್ದರು.
ಅವರು ಬಹಳ ಬಡತನದಿಂದ ಬೆಳೆದು ಬಂದಂತಹ ನಾಯಕ. ಅವರಿಗೆ ಬೆವರ ಕಷ್ಟ ಗೊತ್ತಿತ್ತು. ಜನರ ಕಷ್ಟಗಳ ಬಗ್ಗೆ ಅರಿವಿತ್ತು. ನಾವು ಇಬ್ಬರು ಮೊದಲ ಬಾರಿಗೆ ಬಿಜೆಪಿಯಿಂದ ಗೆದ್ದಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿಯಿಂದ ಗೆಲ್ಲುವುದು ಸಾಹಸವೇ ಆಗಿತ್ತು. ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವುದು ಬಹುದೊಡ್ಡ ಸವಾಲಾಗಿತ್ತು.
ಕರ್ನಾಟಕದಲ್ಲಿ ಕೇವಲ ಎರಡು ಶಾಸಕರಿದ್ದ ಕಡೆ ಈಗ ಸರ್ಕಾರವೇ ರಚಿಸುವವರೆಗೆ ಯಡಿಯೂರಪ್ಪನವರ ಹೋರಾಟ ಫಲ ನೀಡಿದೆ. ನ್ಯಾಯಯುತವಾಗಿಯೋ ಇಲ್ಲವೋ, ಆದರೆ ಸರ್ಕಾರ ರಚಿಸುವಲ್ಲಿ ಅವರ ಪಾತ್ರ ಮಹತ್ವದ್ದು. ಎರಡರಿಂದ ಇನ್ನೂರರವರೆಗೆ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಅವರಿಗೆ ಇದೆ.
ಇತ್ತೀಚಿನ ದಿನಗಳಲ್ಲಿ ಅವರನ್ನು ನಾನು ಅವರನ್ನು ಒಂದು ಬಾರಿ ಮಾತ್ರ ಭೇಟಿಯಾಗಿದ್ದೆ. ನನ್ನ ಕ್ಷೇತ್ರದ ಈಗಿನ ಶಾಸಕರಾದ ಹರೀಶ್ ಪೂಂಜಾ ಅವರೊಂದಿಗೆ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೇಳಲು ಅವರನ್ನು ಭೇಟಿಯಾಗಿದ್ದೆ. ನಾವು ಹೊಗಿ ಮನವಿ ಮಾಡಿದ ಕ್ಷಣವೇ ರೂ. 50 ಲಕ್ಷ ಅನುದಾನವನ್ನು ಅನುದಾನ ನೀಡಲು ಸೂಚನೆ ಕೊಟ್ಟರು. ಇದಾದ ಬಳಿಕ ಅವರನ್ನು ನಾನು ಭೇಟಿಯಾಗಿಲ್ಲ.
ಅವರು ಪ್ರತಿ ಬಾರಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನನ್ನ ಹೆಸರು ನೆನಪಿಸಿಕೊಂಡಿದ್ದಾರೆ. ಇಂದು ಕೂಡಾ ಅವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ.
ಅವರು ನಾಲ್ಕು ಬಾರಿ ಸಿಎಂ ಆಗಿದ್ದವರು. ಈ ಬಾರಿ ಕರೋನಾ ಸೋಂಕು, ಪ್ರವಾಹ ಸಂಕಷ್ಟದಿಂದ ರಾಜ್ಯವೇ ಆಘಾತಕ್ಕೆ ಒಳಗಾಗಿತ್ತು. ಇಂತಹ ಸಂದರ್ಭದಲ್ಲಿ ಅವರು ಸಮರ್ಥ ಆಡಳಿತ ನಡೆಸಲು ಬಿಜೆಪಿ ಅವರಿಗೆ ಬೆಂಬಲ ಕೊಡಬೇಕಿತ್ತು. ಈಗ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಸರಿಯಲ್ಲ. ಅದರ ಕುರಿತು ನನಗೆ ಬೇಸರವಿದೆ. ಅವರು ಸಿಎಂ ಆಗಿ ಮುಂದುವರೆಯಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯ.