ರಾಜ್ಯದಲ್ಲಿ ಉಪಚುನಾವಣೆಗಳ ಭರಾಟೆಯ ನಡುವೆಯೇ ಅಂತರಾಷ್ಟ್ರೀಯ ಮಟ್ಟದ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡುತ್ತಿದೆ. ಆಡಳಿತರೂಢ ಬಿಜೆಪಿಗೆ ಬಿಟ್ ಕಾಯಿನ್ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎನ್ನಲಾಗಿದ್ದು, ಇದೇ ಪ್ರಕರಣವನ್ನು ಮುಂದಿಟ್ಟು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸುತ್ತಿದೆ.
ಬಿಟ್ ಕಾಯಿನ್ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ಪ್ರಕರಣದ ಸತ್ಯಾಂಶ ಹೊರ ಬಂದರೆ ಬಹುತೇಕ ಈ ನಾಯಕರ ರಾಜಕೀಯ ಜೀವನಕ್ಕೇ ಅಂತ್ಯ ಕಾಣಬಹುದು ಎಂಬ ಮಾತುಗಳು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸದ್ಯ ಪ್ರಕರಣದಲ್ಲಿ ರಾಜ್ಯ ಮಾಜಿ ಸಚಿವರೊಬ್ಬರ ಹಾಗೂ ಮಂಗಳೂರು ಮೂಲದ ಪ್ರಭಾವಿ ರಾಜಕೀಯ ನಾಯಕರೊಬ್ಬರು ಸೇರಿದಂತೆ ಉತ್ತರ ಕರ್ನಾಟಕ ಮೂಲದ ಓರ್ವ ಶಾಸಕನ ಹೆಸರು ಕೇಳಿ ಬರುತ್ತಿವೆ. ಅಲ್ಲದೆ, ಎಬಿವಿಪಿ ಸಂಘಟನೆಯ ಪ್ರಮುಖ ವಿದ್ಯಾರ್ಥಿ ನಾಯಕನೂ ಇದರಲ್ಲಿ ಭಾಗಿಯಾಗಿರುವುದಾಗಿ ಮಾತುಗಳು ಕೇಳಿ ಬರುತ್ತಿದೆ.
ಕಾಂಗ್ರೆಸ್ಗೆ ಸಿಕ್ಕ ಪ್ರಬಲ ಅಸ್ತ್ರ.!
ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ಬಿಟ್ ಕಾಯಿನ್ ಹಗರಣ ಕಾಂಗ್ರೆಸ್ ಪಾಲಿಗೆ ವರದಂತೆ ಬಂದೊದಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ ಮೊದಲಾದ ಕಾಂಗ್ರೆಸ್ ಪ್ರಮುಖ ನಾಯಕರು ಈಗಾಗಲೇ ಈ ಪ್ರಕರಣ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ.
ಈ ಪ್ರಕರಣದಲ್ಲಿ ಶಾಮೀಲಾಗಿರುವ ಪ್ರಭಾವಿ ನಾಯಕರ ಹೆಸರು ಕೇಳಿ ಶಾಕ್ ಆಯಿತು ಎಂದು ಡಿಕೆ ಶಿವಕುಮಾರ್ ಹೇಳಿದರೆ, ಪ್ರಭಾವಿ ರಾಜಕಾರಣಿಗಳನ್ನು ಉಳಿಸುವ ಸಲುವಾಗಿ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿರುವುದು ಗೊತ್ತಿದ್ದರೆ ಹೆಸರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಸರ್ಕಾರ ಯಾವುದೇ ಪ್ರಭಾವಿಗಳ ರಕ್ಷಣೆಗೆ ನಿಲ್ಲುವುದಿಲ್ಲ, ತಪ್ಪಿತಸ್ಥರ ವಿರುದ್ಧ ನಿಸ್ಪಕ್ಷವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸರ್ಕಾರಕ್ಕೆ ಈ ಪ್ರಕರಣವು ತನ್ನ ಕಾಲು ಸುತ್ತುವ ಬಳ್ಳಿಯಂತಾಗುವುದು ಎಂದು ಅರಿವಿಗೆ ಬಂದಂತೆ ಇಡಿ, ಸಿಬಿಐಗೆ ಹೆಚ್ಚಿನ ತನಿಖೆಗಾಗಿ ಹಸ್ತಾಂತರಿಸಿದೆ. ಹಾಗೂ ಕೇಂದ್ರ ತನಿಖಾ ತಂಡಕ್ಕೆ ಪ್ರಕರಣ ಹಸ್ತಾಂತರಿಸುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ತಂತ್ರ ಹೂಡಿದೆ. ಅದಾಗ್ಯೂ, ಕಾಂಗ್ರೆಸ್ ಈ ಪ್ರಕರಣವನ್ನು ಸರಿಯಾಗಿ ಹಿಡಿದುಕೊಂಡು ಸರ್ಕಾರವನ್ನು ಝಾಡಿಸಲು ಹೊರಟಿದೆ.
ಏನಿದು ಹಗರಣ?
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್ 17ರಂದು ಬೆಂಗಳೂರಿನ ಜಯನಗರ ನಿವಾಸಿ ಶ್ರೀಕೃಷ್ಣನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ಇನ್ನಿತರ ಸೈಬರ್ ಅಪರಾಧ ಹಾಗೂ ಬಿಟ್ ಕಾಯಿನ್ ಅಕ್ರಮವನ್ನು ಪತ್ತೆ ಮಾಡಿದ್ದರು. ಆತನ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 2021ರ ಫೆಬ್ರವರಿ 22ರಂದು 757 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆತನ ಹಿನ್ನೆಲೆ ಹಾಗೂ ಕೋಟಿಗಟ್ಟಲೇ ಮೌಲ್ಯದ ಬಿಟ್ ಕಾಯಿನ್ ಸಂಪಾದನೆ ಬಗೆಗಿನ ಮಾಹಿತಿಯನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಡ್ರಗ್ಸ್ ತರಿಸಿಕೊಳ್ಳಲು ಈ ಬಿಟ್ ಕಾಯಿನ್ ಬಳಕೆಯಾಗುತ್ತಿತ್ತು ಎನ್ನಲಾಗಿದ್ದು, ಒಂದು ಬಿಟ್ ಕಾಯಿನ್ ಮೌಲ್ಯ ಸುಮಾರು 45.71 ಲಕ್ಷವಿದೆ ಎನ್ನಲಾಗಿದೆ. ಡಾರ್ಕ್ ವೆಬ್ ಮೂಲಕ ಈ ಎಲ್ಲಾ ವ್ಯವಹಾರ ನಡೆಸಲಾಗುತ್ತಿತ್ತು. ಡ್ರಗ್ಸ್ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರಿಗೆ ಬಿಟ್ ಕಾಯಿನ್ ಹಗರಣ ಪತ್ತೆಯಾಗಿತ್ತು.
ಎರಡು ಜಾಲತಾಣಗಳನ್ನು ಹ್ಯಾಕ್ ಮಾಡಿದ್ದ ಆರೋಪಿ ಶ್ರೀಕಿ, 5000 ಬಿಟ್ ಕಾಯಿನ್ಗಳನ್ನು ಆ ಮೂಲಕ ದೋಚಿದ್ದ, ಇದರ ಒಟ್ಟು ಮೌಲ್ಯ 2283 ಕೋಟಿ ರುಪಾಯಿ.!
ಅಮೆರಿಕದ ಹಣ ವಿನಿಮಯ ಏಜೆನ್ಸಿ ‘ಬಿಟಿಸಿ ಇ ಡಾಟ್ ಕಾಮ್’ ಜಾಲತಾಣ ಹ್ಯಾಕ್ ಮಾಡಿ ಅದರಿಂದ 3,000 ಬಿಟ್ ಕಾಯಿನ್ (₹1,370 ಕೋಟಿ) ಗಳಿಸಿದ್ದ. ಹಾಗೂ ‘ಬಿಟ್ ಫಿನಿಕ್ಸ್’ ಎಂಬ ಜಾಲತಾಣ ಹ್ಯಾಕ್ ಮಾಡಿ ಸರ್ವರ್ ತನ್ನದಾಗಿಸಿಕೊಂಡಿದ್ದ. ಇದಕ್ಕೆ ಇಬ್ಬರು ಇಸ್ರೇಲ್ ಹ್ಯಾಕರ್ಸ್ಗಳ ಸಹಾಯ ಪಡೆದಿದ್ದ. ಇದರಿಂದ 2,000 ಬಿಟಿಸಿ (₹ 913.33 ಕೋಟಿ) ಕಾಯಿನ್ ಸಂಪಾದಿಸಿದ್ದ’ ಎಂದು ಈತನ ವಿರುದ್ಧ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಬಿಟ್ ಕಾಯಿನ್?
ಬಿಟ್ ಕಾಯಿನ್ ಎಂದರೆ ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋ ಕರೆನ್ಸಿ. ಇಂದು ಸುಮಾರು 800 ಕ್ಕೂ ಹೆಚ್ಚು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ಕರೆನ್ಸಿಗಳಿಗೆ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ವಿಧಾನದ ಮೂಲಕ ರಕ್ಷಣೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ, ಮುಖ್ಯವಾಗಿ ಅಂತರ್ಜಾಲ ಮೂಲಕ ನಡೆಯುವ ವ್ಯವಹಾರಗಳಿಗೆ ಈ ಕರೆನ್ಸಿ ಬಳಸಲಾಗುತ್ತದೆ. ಅದರಲ್ಲೂ ಶಸ್ತ್ರಾಸ್ತ್ರ, ಮಾದಕ ದ್ರವ್ಯ ಮೊದಲಾದ ವ್ಯವಹಾರಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ.
ಅದಾಗ್ಯೂ, ಕ್ರಿಪ್ಟೋಕರೆನ್ಸಿಯನ್ನು ಬಳಸಿ ಹಣದ ವ್ಯವಹಾರ ನಡೆಸುವ ವೀಸಾ, ಮಾಸ್ಟರ್ ಕಾರ್ಡ್ ಮೊದಲಾದ ವ್ಯವಸ್ಥೆಗಳು ಈಗಾಗಲೇ ಇವೆ. ಆದರೆ ಇವು ಒಂದು ದೇಶದಿಂದ ಇನ್ನೊಂದು ದೇಶದ ನಡುವಣ ವ್ಯವಹಾರದಲ್ಲಿ ಮೊದಲು ಈ ದೇಶದ ಹಣವನ್ನು ಡಾಲರುಗಳಿಗೂ, ಬಳಿಕ ಡಾಲರುಗಳಿಂದ ಆ ದೇಶದ ಹಣಕ್ಕೂ ಪರಿವರ್ತಿಸಿ ವಹಿವಾಟು ನಡೆಸುತ್ತವೆ. ಆದರೆ ಈ ಎರಡೂ ಪರಿವರ್ತನೆಗಳಲ್ಲಿ ಸಂಸ್ಥೆಗಳು ಅಪಾರವಾದ ಕಮೀಶನ್ ಅಥವಾ ದಲ್ಲಾಳಿ ಹಣವನ್ನು ಪಡೆಯುತ್ತವೆ.







